ಮಂಗಳವಾರ, ಅಕ್ಟೋಬರ್ 14, 2008



























ಗುಳೇ ಹೊರಟ ರೈತನ ಗೋಳಿನ ಕತೆ!

Inhuman environment

ಬೆಂಗ­ಳೂರು ರೈಲು­ನಿ­ಲ್ದಾಣ ಪ್ಲಾಟ್‌­ಫಾರಂ ಸಂಖ್ಯೆ ಎಂಟು.
ಪಕೀ­ರಪ್ಪ, ರಾಜಣ್ಣ, ಲಿಂಗಪ್ಪ ಮತ್ತು ದುರ್ಗವ್ವ ಮುಂತಾ­ದ­ವರು `ರಾಣಿ ಚೆನ್ನಮ್ಮ ಎಕ್ಸ್‌­ಪ್ರೆಸ್‌' ರೈಲು­ಗಾ­ಡಿಗೆ ಕಾಯುತ್ತಾ ನಿಂತಿ­ದ್ದರು. ಯಾರ ಕಣ್ಣಲ್ಲೂ ಕಳೆ ಇರ­ಲಿಲ್ಲ. ಈ ಮಾಯಾ ನಗರಿ ಬೆಂಗ­ಳೂ­ರಿ­ನಲ್ಲಿ ನಮ್ಮ ಬದು­ಕಿಗೆ ಆಸ­ರೆ­ಯಾ­ಗ­ಬಲ್ಲ ಒಂದು ಚಾಕರಿ ದೊರೆ­ತೀತು ಎಂಬ ಉತ್ಸಾ­ಹ­ದಿಂದ ಮಕ್ಕಳು ಮರಿ­ಯನ್ನು ಕಟ್ಟಿ­ಕೊಂಡು ಬಂದ ನಿರೀಕ್ಷೆ ಬೊಗೆ­ಯಷ್ಟೂ ಈಡೇ­ರಿ­ರ­ಲಿಲ್ಲ. ಕೆಲ­ಸ­ಕ್ಕಾಗಿ ಕಾದು ಬೆಂಡಾಗಿ ಹೈರಾ­ಣಾಗಿ ಬಂದ ಹಾದಿಗೆ ಸುಂಖ­ವಿಲ್ಲ ಎಂಬಂತೆ ತಮ್ಮೂ­ರಿಗೆ ಹೊರಟು ನಿಂತಿ­ದ್ದರು.
ರಸ­ಗೊ­ಬ್ಬ­ರದ ಫ್ಲಾಸ್ಟಿಕ್‌ ಚೀಲ­ದಲ್ಲಿ ತುಂಬಿದ್ದ ಪಾತ್ರೆ­ಪ­ಗ­ಡೆ­ಗಳ ಗಂಟು­ಮೂ­ಟೆ­ಗ­ಳನ್ನು ಪಕ್ಕ­ದ­ಲ್ಲಿ­ಟ್ಟು­ಕೊಂಡು ಕುಳಿ­ತಿದ್ದ ಹೆಂಗ­ಸರು ತನ್ನೂ­ರಿನ ಹಾದಿ­ಯ­ನ್ನೆ­ಣಿ­ಸು­ತ್ತಿ­ದ್ದರು. ಯಾವು­ದರ ಪರಿವೇ ಇಲ್ಲದೆ ಬಂದು ಹೋಗು­ತ್ತಿದ್ದ ರೈಲಿನ ಜುಕ್‌­ಜುಕ್‌ ಶಬ್ದಕ್ಕೆ ಸ್ಪಂಧಿ­ಸು­ತ್ತಿದ್ದ ಮಕ್ಕಳು, ನಿಲ್ದಾ­ಣದ ಕಪ್ಪು­ಕೋಟು ಮಾಸ್ಟ­ರನ ಘರ್ಜ­ನೆಗೆ ಬೆದ­ರಿ­ದ್ದವು. ಅಕ್ಕ­ಪ­ಕ್ಕ­ದಲ್ಲಿ ಸಾಗು­ತ್ತಿದ್ದ ಸೂಟು­ಬೂ­ಟು­ಧಾ­ರಿ­ಗಳ ತಾತ್ಸಾ­ರದ ನೋಟ, ಪಾಪ! ಇವರ ಅರಿ­ವಿಗೆ ಬಂದಿ­ರ­ಲಿಲ್ಲ.
ಪ್ಲಾಟ್‌­ಫಾರಂ ತುಂಬಿ ತುಳು­ಕು­ತ್ತಿತ್ತು. ರೈಲು ಬಂದೊ­ಡನೆ ಪ್ಯಾಸೆಂ­ಜರ್‌ ಬೋಗಿಯ ಕಡೆಗೆ ಆಕ್ರ­ಮ­ಣ­ಕಾ­ರ­ರಂತೆ ನುಗ್ಗಿ­ದರು. ಕ್ಷಣ­ಮಾ­ತ್ರ­ದಲ್ಲಿ ರೈಲು ತನ್ನ ಸಾಮ­ರ್ಥ್ಯ­ವನ್ನು ಮೀರಿ ತುಂಬಿ­ಸಿ­ಕೊಂಡು ಹೊರ­ಟಿತು.
`ಈ ನಗ­ರಕ್ಕೆ ನಾವು ಯೋಗ್ಯ­ರಲ್ಲ' ಎಂಬಂತೆ ಹಿಂದೆ ಸಾಗು­ತ್ತಿದ್ದ ಬೆಂಗ­ಳೂರು ಮಹಾ­ನ­ಗ­ರಕ್ಕೆ ಕಡೆಯ ನಮ­ಸ್ಕಾರ ತಿಳಿ­ಸಿ­ದರು.

ಇವ­ರೆಲ್ಲಾ ಯಾರು?:

`ಬ್ಯಾರೆ­ಯ­ವರ ಹೊಲ­ದಾಗೆ ದಿನ­ಗೂಲಿ ಮಾಡ್ಕೊಂಡ್‌ ಚಲೋ­ಗಿ­ದ್ದಿನ್ರೀ. ಒಪ್ಪತ್ತು ಊಟಕ್ಕೆ ಕಷ್ಟ ಆಗ್ತಿ­ದ್ದಿಲ್ಲ. ಯಾರದೋ ಮಾತ್‌ ಕೇಳ್ಕಂಡು, ಚಿಲ್ಲರೆ ಕಾಸಿನ ಹುಚ್ಚು ಹತ್ತಿ­ಸ್ಕಂಡ್‌ ಇಲ್ಲಿಗೆ ಬಂದೆನ್ರಿ. ಈ ಮಂದಿ ಕೆಲಸ ಕೊಡ್ತಾ­ರೇನು? ನಮ್ಮ ರಕ್ತ ಹೀರ್ತಾರೆ. ಆದಕ್ಕಾ ನಾ ನಮ್ಮೂ­ರಿಗೆ ಹೊರಟು ನಿಂತನ್ರಿ' ಎಂದು ನಿರಾ­ಶೆ­ಯಿಂದ ನುಡಿ­ಯು­ತ್ತಾರೆ ದಾರ­ವಾಢ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ ಪಕೀ­ರಪ್ಟ.
ರಾಯ­ಚೂ­ರಿನ ಯಲ್ಲ­ಪ್ಪ­ರಿಗೆ ಎರಡು ಎಕರೆ ಭೂಮಿ ಇದೆ, ತನ್ನ ಅವಿ­ಭಕ್ತ ಕುಟುಂ­ಬಕ್ಕೆ ಸಾಕಾ­ಗು­ವಷ್ಟು ಬೆಳೆ ಬರದು. ಮಳೆ ಬಿದ್ದರೆ ಮಾತ್ರ ಬೆಳೆ. ಕೆಲ­ಸ­ಕ್ಕಾಗಿ ಸಾಲ ಮಾಡಿ­ಕೊಂಡು ಬೆಂಗ­ಳೂ­ರಿಗೆ ಬಂದು ತಿಂಗ­ಳು­ಗ­ಟ್ಟಲೇ ತಡ­ಕಿ­ದರೂ ಕೆಲಸ ಸಿಕ್ಕಿಲ್ಲ. ಕಡೆಗೆ ಸಾಲದ ದುಡ್ಡು ಖಾಲಿ­ಯಾ­ದಾಗ ವಿದಿ­ಯಿ­ಲ್ಲದೆ ತಮ್ಮೂ­ರಿಗೆ ಹೊರಟು ನಿಂತಿ­ದ್ದಾರೆ.
ಇವ­ರೆಲ್ಲಾ ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ­ಬಂದ ಜನ. ಕೆಲ­ಸ­ಕ್ಕಾಗಿ ಮಕ್ಕಳು ಮರಿ ಕಟ್ಟಿ­ಕೊಂಡು ದಿನ­ನಿತ್ಯ ನಗ­ರ­ಗ­ಳಿಗೆ ಬಂದಿ­ಳಿ­ಯು­ತ್ತಾರೆ. ಅದೆಷ್ಟು ಜನ­ರನ್ನು ತುಂಬಿ­ಕೊ­ಳ್ಳಲು ಸಾಧ್ಯ?

ಅಳಿ­ಯದ ಸಣ್ಣ ರೈತನ ಗೋಳು: ಇದು ಬರೀ ಪಕೀ­ರಪ್ಪ, ಯಲ್ಲ­ಪ್ಪರ ಕತೆ­ಯಲ್ಲ. ಕೆಲ­ಸ­ಕ್ಕಾಗಿ ಪಟ್ಟ­ಣ­ಗ­ಳಿಗೆ ಗುಳೇ ಹೊರಟ ಗ್ರಾಮೀಣ ಭಾರ­ತೀ­ಯರ ಗೋಳಿನ ಕತೆ. ಉತ್ತರ ಕರ್ನಾ­ಟ­ಕದ ಹಳ್ಳಿ­ಗ­ಳಿಂದ ಬೆಂಗ­ಳೂ­ರಿಗೆ ಗುಳೇ ಹೊರಟು ತಂಡೋಪ ತಂಡ­ವಾಗಿ ಬರು­ತ್ತಿದ್ದು, ಕೆಲಸ ಸಿಗದೇ ಹಾಗೆಯೇ ಹಿಂತಿ­ರು­ಗು­ತ್ತಿ­ದ್ದಾರೆ.
ಶೇ. 70ರಷ್ಟು ಭಾರ­ತೀ­ಯರು ತಮ್ಮ ಜೀವ­ನೋ­ಪಾ­ಯಕ್ಕೆ ವ್ಯವ­ಸಾ­ಯ­ವನ್ನೇ ಅವ­ಲಂ­ಭಿ­ಸಿ­ದ್ದರೂ, ಅವರ ಜೀವನ ನಡೆ­ಯು­ತ್ತಿಲ್ಲ. ಇವ­ರಲ್ಲಿ ಶೇ. 90ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ರೈತ­ರಾ­ಗಿ­ದ್ದಾರೆ. ಎಲ್ಲ­ದಕ್ಕೂ ಸಾಲ, ಸಾಲ­ವಿ­ಲ್ಲದೆ ಮಣ್ಣಿನ ಮಗನ ಬದು­ಕಿಲ್ಲ. ಸಾಲ­ದ­ಲ್ಲಿಯೇ ಹುಟ್ಟಿ, ಸಾಲ­ದ­ಲ್ಲಿಯೇ ಬದುಕಿ, ಸಾಲ­ದ­ಲ್ಲಿಯೇ ಕಡೆ­ಯಾ­ಗು­ತ್ತಿ­ದ್ದಾನೆ.
ಇಂತಹ ವಿಷಮ ಪರಿ­ಸ್ಥಿ­ತಿ­ಯಲ್ಲಿ ಮಣ್ಣಿನ ಮಕ್ಕಳು ಮಣ್ಣಿನ ಮೇಲೆ ನಂಬಿಕೆ ಕಳ­ಕೊಂ­ಡ­ವ­ರಂತೆ ಹಳ್ಳಿ­ಬಿಟ್ಟು ನಗ­ರ­ಗ­ಳಿಗೆ ಕೆಲಸ ಅರ­ಸಿ­ಕೊಂಡು ಬರು­ತ್ತಿ­ದ್ದಾರೆ.

ಮಕ್ಕ­ಳನ್ನು ಬಿಕ್ಷೆಗೆ ಬಿಟ್ಟರು: ಅಪ್ಪ­ನಿಗೆ ಕೆಲ­ಸ­ವಿಲ್ಲ, ಅವ್ವ­ನಿಗೆ ಗಂಜಿ ಕಾಸಲು ಕಾಳಿಲ್ಲ, ಉಪ್ಪಿಲ್ಲ. ಇರು­ವುದು ಒಂದೇ ಒಂದು ದಾರಿ. ತಮ್ಮ ಮಗು­ವನ್ನು ಬಿಕ್ಷೆಗೆ ಬಿಡು­ವುದು. ಬೆಳ­ಗ್ಗೆ­ಯಿಂದ ಸಂಜೆ­ಯ­ವ­ರೆಗೆ ಬಿಕ್ಷೆ ಬೇಡಿ ತರುವ ಪುಡಿ­ಗಾ­ಸಿ­ನಿಂದ ಒಪ್ಪೊ­ತ್ತಿನ ಊಟ.
ಟ್ರಾಫಿಕ್‌ ಸಿಗ್ನ­ಲ್‌­ಗ­ಳಲ್ಲಿ ದೇವ­ಸ್ಥಾ­ನದ ಬಾಗಿ­ಲು­ಗ­ಳಲ್ಲಿ, ಮಾರು­ಕ­ಟ್ಟೆ­ಗ­ಳಲ್ಲಿ ಬಿಕ್ಷೆ ಬೇಡುವ ಮಕ್ಕ­ಳನ್ನು ಯಾವ ಊರು ಎಂದು ಕೇಳಿ­ದರೆ ಉತ್ತರ ಕರ್ನಾ­ಟ­ಕದ ಊರು­ಗಳ ಹೆಸ­ರು­ಗ­ಳ­ನ್ನೇ­ಳು­ತ್ತಾರೆ. ದಿಕ್ಕು­ದೆ­ಸೆ­ಯಿ­ಲ್ಲದೆ ನಗ­ರ­ಗ­ಳಿಗೆ ಬರು­ತ್ತಾರೆ. ಸಿಕ್ಕ­ಸಿ­ಕ್ಕ­ವ­ರಲ್ಲಿ ಕೆಲಸ ಕೊಡಿ ಎಂದು ಗೋಗ­ರಿ­ಯು­ತ್ತಾರೆ. ಸಿಗ­ದಿ­ದ್ದಾಗ ಕೆಲ­ವರು ಹಿಂತಿ­ರುಗಿ ಹೋದರೆ, ಮತ್ತೆ ಕೆಲ­ವರು ಕಳ್ಳ­ತ­ನ­ಗ­ಳಂ­ತಹ ಕೆಲ­ಸಕ್ಕೂ ಕೈ ಹಾಕು­ತ್ತಾರೆ. ಇತ್ತೀ­ಚೆಗೆ ಬೆಂಗ­ಳೂ­ರಿ­ನಲ್ಲಿ ಬಂಧಿ­ತ­ರಾ­ಗು­ತ್ತಿ­ರುವ ವಿಚಾ­ರ­ಣಾ­ಧೀನ ಕೈದಿ­ಗ­ಳಲ್ಲಿ ಗುಳೇ ಬಂದ ವಲ­ಸಿ­ಗರೇ ಹೆಚ್ಚು ಎನ್ನ­ಲಾ­ಗಿದೆ.

ವಲ­ಸಿ­ಗರ `ಯೋಗ್ಯತೆ'ಯ ಸಮಸ್ಯೆ: ಇನ್ನೊಂದು ಮುಖ್ಯ­ವಾದ ಸಮ­ಸ್ಯೆ­ಯೆಂ­ದರೆ `ಗುಳೇ ಬಂದ­ವರ ಯೋಗ್ಯತೆ'ಯ ಸಮಸ್ಯೆ. ಗುಳೇ ಬಂದ ಗ್ರಾಮೀಣ ಭಾರ­ತೀ­ಯ­ರಿಗೆ ಇನ್ಫೋ­ಸಿ­ಸ್‌­ನಲ್ಲಿ ಕೆಲಸ ಸಿಗು­ವು­ದಿಲ್ಲ. ಅವರು ಕಟ್ಟ­ಡದ ಕೆಲ­ಸಕ್ಕೆ ಸೇರ­ಬೇಕು ಇಲ್ಲವೇ ಹೋಟೆಲ್‌ ಮಾಣಿ­ಗ­ಳಾ­ಗ­ಬೇಕು. ಇಷ್ಟು ಬಿಟ್ಟರೆ ಮತ್ತ್ಯಾವ ಕೆಲ­ಸವೂ ಸಿಕ್ಕು­ವು­ದಿಲ್ಲ.
ವಲ­ಸಿ­ಗ­ರಲ್ಲಿ ಹೆಚ್ಚಿ­ನ­ವರು ಅವಿ­ದ್ಯಾ­ವಂ­ತರೇ ಆಗಿ­ರು­ರು­ವು­ದ­ರಿಂದ ಬೇರೆ ಆಯ್ಕೆ­ಗಳೇ ಇರು­ವು­ದಿಲ್ಲ. ಕಟ್ಟಡ ಮತ್ತು ರಸ್ತೆ ಕಾಮ­ಗಾ­ರಿ­ಗ­ಳಲ್ಲೂ ಕೆಲಸ ಸಿಗು­ವುದು ಕಷ್ಟ. ಸಿಕ್ಕರೂ ಶ್ರಮಕ್ಕೆ ತಕ್ಕ ಪ್ರತಿ­ಫ­ಲ­ವಿಲ್ಲ. ಕೂಲಿ ವಸೂಲಿ ಮಾಡು­ವ­ಷ್ಟ­ರಲ್ಲಿ ಪ್ರಾಣ ಹೋಗಿ­ರು­ತ್ತದೆ.

ಮಹಿ­ಳೆಯ ಕತೆ ಶೋಚ­ನೀಯ: ಗುಳೇ ಬಂದ ಮಹಿ­ಳೆಯ ಸ್ಥಿತಿ ಹೇಳ­ತೀ­ರದು. ಆಕೆ ಎಲ್ಲಾ ಹಂತ­ದಲ್ಲೂ ಶೋಷ­ಣೆಯ ಬಲಿ­ಪಶು. ಕೆಲಸ ಅರಸಿ ಬಂದ ಅದೆಷ್ಟೋ ಮಹಿ­ಳೆ­ಯರು ಲೈಂಗಿಕ ಕಾರ್ಯ­ಕ­ರ್ತ­ರಾಗಿ ಬದ­ಲಾದ ಹಲವು ಉದಾ­ಹ­ರ­ಣೆ­ಗ­ಳಿವೆ. ಒಂದು ಅಂದಾ­ಜಿನ ಪ್ರಕಾರ ವಲ­ಸಿ­ಗ­ರಲ್ಲಿ ಹೆಚ್ಚಿನ ಜನಕ್ಕೆ ಏಡ್ಸ್‌ ರೋಗ­ವಿದೆ.
ವಲ­ಸಿ­ಗ­ರಿಗೆ ಭದ್ರ­ತೆ­ಯಿ­ದೆಯೇ? ವಸತಿ, ಆರೋಗ್ಯ, ಶಿಕ್ಷಣ ಎಲ್ಲವೂ ಶೂನ್ಯ. ಕೊಳಚೆ ಪ್ರದೇ­ಶ­ಗಳೇ ಅವರ ವಾಸ­ಸ್ಥಾನ. ಬೆಂಗ­ಳೂ­ರಿನ ಹೊರ­ವ­ಲ­ಯದ ಕೆ.ಆರ್‌. ಪುರಂ, ಕೆಂಗೇರಿ, ನಾಯಂ­ಡ­ಹಳ್ಳಿ, ಕಮಲಾ ನಗರ, ಕುರು­ಬ­ರ­ಹಳ್ಳಿ ಮುಂತಾದ ಬಡಾ­ವ­ಣೆ­ಗಳ ಕೊಳಚೆ ಪ್ರದೇ­ಶ­ಗ­ಳಲ್ಲಿ ಹೆಚ್ಚಾಗಿ ವಲ­ಸಿ­ಗರು ಕಾಣ­ಸಿ­ಗು­ತ್ತಾರೆ. ಇವ­ರಿಗೆ ಬೇರೆ ಆಯ್ಕೆ­ಗಳೇ ಇಲ್ಲ­ದಿ­ರು­ವು­ದ­ರಿಂದ ಸಮ­ಸ್ಯೆ­ಗ­ಳೆಗೆ ಅಂಟಿ­ಕೊಂಡು ಬದು­ಕು­ವಂ­ತಾ­ಗಿದೆ.

ವಲಯ ಬದ­ಲಾ­ವಣೆ ಪ್ರಯೋಗ: ಭಾರ­ತಕ್ಕೆ ಅಂಟಿದ ಬಲು­ದೊಡ್ಡ ತಲೆ­ನೋವು ವಲಸೆ. ಇದಕ್ಕೆ ದೊಡ್ಡ ಇತಿ­ಹಾ­ಸವೇ ಇದೆ. ಆದರೂ, ವಲಸೆ ಬಗೆ­ಹ­ರಿ­ಯದ ಸಮ­ಸ್ಯೆ­ಯೇನೂ ಅಲ್ಲ. ಭಾರ­ತೀಯ ಕಾರ್ಪೊ­ರೇಟ್‌ ವಲಯ ಇತ್ತೀ­ಚೆಗೆ ಒಂದು ನಿಲು­ವನ್ನು ಪ್ರತಿ­ಪಾ­ದಿ­ಸಿದೆ. `ಕೃಷಿ­ಕ­ರನ್ನು ಕೃಷಿ ವಲ­ಯ­ದಿಂದ ಉತ್ಪನ್ನ ಮತ್ತು ತಂತ್ರ­ಜ್ಞಾನ ವಲ­ಯಕ್ಕೆ ಕೊಂಡೊ­ಯ್ಯು­ವು­ದ­ರಿಂದ ಕೆಲಸ ಅರೆ­ಸುತ್ತಾ ಪಟ್ಟಣ ಸೇರು­ವು­ದನ್ನು ತಪ್ಪಿ­ಸ­ಬ­ಹುದು' ಎನ್ನ­ಲಾ­ಗಿದೆ. ಇದು ಚೀನಾದ ಯಶಸ್ವಿ ಪ್ರಯೋಗ. ಚೀನಾ­ದಲ್ಲಿ ಕಳೆದ ಒಂದು ದಶ­ಕ­ದಲ್ಲಿ 150 ಮಿಲಿ­ಯನ್‌ ಜನರು ಕೃಷಿ ವಲ­ಯ­ದಿಂದ ಉತ್ಪನ್ನ ವಲ­ಯಕ್ಕೆ ಜಿಗಿ­ದಿ­ದ್ದಾರೆ.
ಈ ಪ್ರಯೋಗ ಭಾರ­ತ­ದಲ್ಲೂ ಸಾಧ್ಯ­ವಿದೆ. ಆದರೆ ಇದು ಫಲ­ಪ್ರ­ದ­ವಾ­ಗ­ಬೇ­ಕಾ­ದರೆ ಶತ­ಕ­ಗಳೇ ಬೇಕು. ಅದಕ್ಕೂ ಮುಂಚೆ ಕೆಲ ಪೂರ್ವ­ಸಿ­ದ್ದ­ತೆ­ಗಳು ಜರೂ­ರಾಗಿ ನಡೆ­ಯ­ಬೇ­ಕಿದೆ. ಅವಿ­ದ್ಯಾ­ವಂತ ಗ್ರಾಮೀಣ ಭಾರ­ತೀ­ಯರು ಕೃಷಿ­ಯ­ಲ್ಲದ ವೃತ್ತಿ­ಪರ ಚಟಿ­ವ­ಟಿ­ಕೆ­ಗ­ಳಲ್ಲಿ ತೊಡ­ಗ­ಬೇಕು. ಎಲ್ಲ­ಕ್ಕಿಂತ ಮಿಗಿ­ಲಾಗಿ ಭಾರ­ತದ `ಅಪ್ರ­ಸ್ತುತ ಶೈಕ್ಷ­ಣಿಕ ವ್ಯವಸ್ಥೆ' ಬದ­ಲಾ­ಗ­ಬೇಕು. ತಮ್ಮ ಮಕ್ಕ­ಳಿಗೆ ವೃತ್ತಿ­ಪರ ಶಿಕ್ಷಣ ಪಡೆ­ಯು­ವಂತೆ ಪ್ರೇರೇ­ಪಿ­ಸ­ಬೇಕು. ಆನಂ­ತರ ಈ ಪ್ರಯೋ­ಗ­ದಂತೆ ವ್ಯಕ್ತಿ ಉತ್ಪನ್ನ ವಲ­ಯದ ಅಂಗ­ವಾ­ಗ­ಬೇಕು. ಯಾವ ಪೂರ್ವ ತಯಾ­ರಿಯೂ ಇಲ್ಲದೆ ಇದನ್ನು ಪ್ರಯೋ­ಗಿ­ಸಿ­ದರೆ ಮತ್ತೊಂದು ಸಮಸ್ಯೆ ಉದ್ಬ­ವಿ­ಸುವ ಅಪಾ­ಯ­ವಿದೆ.

ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ: ಸಂಘ ಜೀವಿ ಮನು­ಷ್ಯ­ನಿಗೆ ತನ್ನ ಬದು­ಕಿಗೆ ಆಧಾ­ರ­ವಾ­ಗಿ­ರುವ ಮೂಲ ಅವ­ಶ್ಯ­ಕ­ತೆ­ಗಳು ಅತೀ­ಮುಖ್ಯ. ಗೌರ­ವಾ­ನ್ವಿತ ಬದುಕು ಅವನ ಪ್ರಧಾನ ಗುರಿ. ಅದ­ಕ್ಕಾಗಿ ಆಹಾರ ಭದ್ರತೆ, ವಸತಿ, ಶಿಕ್ಷಣ ಆರೋಗ್ಯ ಎಲ್ಲವೂ ಬೇಕು. ಹಾಗಾ­ದರೆ, ಹಳ್ಳಿ­ಗ­ಳಲ್ಲಿ ಇವೆ­ಲ್ಲವೂ ಸಿಗು­ವು­ದಿ­ಲ್ಲವೆ? ಕೃಷಿ­ಯಲ್ಲಿ ಬದುಕೇ ಇಲ್ಲವೆ?.....ಹಳ್ಳಿ­ಗ­ಳಲ್ಲಿ ಇವೆ­ಲ್ಲ­ವನ್ನು ಸೃಷ್ಟಿ­ಸ­ಬೇ­ಕಾದ ಅವ­ಶ್ಯ­ವಿದೆ.
ಕೃಷಿ­ಯಲ್ಲಿ ಬದು­ಕಿದೆ. ರಾಷ್ಟ್ರದ ರಾಷ್ಟ್ರೀಯ ಆದಾ­ಯ­ದಲ್ಲಿ ಕೃಷಿಯ ಪಾಲು ಗಣ­ನೀಯ. ಆದರೆ ಕೃಷಿ ಅವ­ಬಂ­ಬಿತ ಜನ­ಸಂ­ಖ್ಯೆಗೆ ಆದಾ­ಯ­ವನ್ನು ಹೋಲಿಕೆ ಮಾಡಿ­ದರೆ ಅತೀ ಕಡಿಮೆ. ಆದ್ದ­ರಿಂದ ಇಡೀ ಕೃಷಿ ವ್ಯವಸ್ಥೆ ಬದ­ಲಾ­ಗ­ಬೇ­ಕಿದೆ. ಹಳ್ಳಿ­ಗ­ಳಲ್ಲಿ ಉದ್ಯೋಗ ಸೃಷ್ಟಿ­ಯ­ಗುವ ಅವ­ಶ್ಯ­ಕ­ತೆ­ಯಿದೆ. ಪ್ರಾಚೀನ ಕಾಲದ ಕೃಷಿ ಅಭ್ಯಾ­ಸ­ಗ­ಳನ್ನು ಮೊದಲು ಕೈಬಿ­ಡ­ಬೇಕು. ಮಾರು­ಕಟ್ಟೆ ಅರಿತು ಮಾರು­ಕಟ್ಟೆ ಆಧಾ­ರಿತ ಬೇಸಾ­ಯದ ಅಗ­ತ್ಯ­ವಿದ್ದು, ಸಣ್ಣ ರೈತ­ನಿಗೆ ಬಹು­ಕಾಲ ನಿಲ್ಲುವ ರಚ­ನಾ­ತ್ಮಕ ಕೃಷಿ­ಯನ್ನು ಕಟ್ಟುವ `ಕೈ'ಗಳು ಬೇಕಾ­ಗಿವೆ.
ಗ್ರೀನ್‌ ಪೌಂಡೇ­ಶನ್‌(ಬೆಂಗ­ಳೂರು ಮೂಲದ ಎನ್‌­ಜಿಒ) ನಿರ್ದೇ­ಶಕಿ ಹೇಳು­ವಂತೆ `ಸಣ್ಣ ರೈತರು ತಮ್ಮ ಸಣ್ಣ ಹಿಡು­ವ­ಳಿ­ಯಲ್ಲಿ ಬಹು­ಬೆ­ಳೆಯ(ಅಂತರ ಬೆಳೆ) ಬೇಸಾಯ ಪದ್ಧತಿ ಅನು­ಸ­ರಿ­ಸ­ಬೇಕು. ತಮ್ಮ ಆಹಾರ ಭದ್ರ­ತೆ­ಯನ್ನು ಕಾಯ್ದು­ಕೊ­ಳ್ಳ­ಬೇ­ಕಾ­ದರೆ ಏಕ­ಬೆಳೆ ಬೇಸಾ­ಯ­ದಿಂದ ಬಹು­ಬೆಳೆ ಬೇಸಾಯ ಪದ್ಧ­ತಿ­ಯನ್ನು ಅನು­ಸ­ರಿ­ಸ­ಬೇಕು, ಇದ­ರಿಂದ ಮಾತ್ರ ವಲ­ಸೆ­ಯನ್ನು ತಪ್ಪಿ­ಸ­ಬ­ಹುದು' ಎನ್ನು­ತ್ತಾರೆ.
ಕೃಷಿ ಮತ್ತು ಗ್ರಾಮೀ­ಣಾ­ಭಿ­ವೃದ್ಧಿ ಸಂಸ್ಥೆಯ ಮುಖ್ಯಸ್ಥ ದೇಶ­ಪಾಂ­ಡೆ­ಯ­ವರು ಹೇಳು­ವಂತೆ `ರಾಷ್ಟ್ರದ ಒಟ್ಟು ಕೃಷಿ ಆದಾಯ ಕ್ಷೀಣಿ­ಸು­ತ್ತಿದ್ದು, ಬಳೆ­ಕೆ­ದಾ­ರರ ಸೂಚ್ಯಾಂಕ ದರ(ಕನ್ಸೂ­ಮರ್ಸ್‌ ಪ್ರೈಸ್‌ ಇಂಡೆಕ್ಸ್‌) ಏರು­ಗ­ತಿ­ಯ­ಲ್ಲಿದೆ. ಆದರೆ ರೈತ ಇವೆ­ರ­ಡಕ್ಕೂ ಸ್ಪಂದಿ­ಸ­ಲಾ­ರದ ಸ್ಥಿತಿ­ಯ­ಲ್ಲಿ­ದ್ದಾನೆ. ಅಂದರೆ ಆಹಾ­ರದ ಬೇಡಿ­ಕೆಗೆ ತಕ್ಕ ಪೂರೈಕೆ ರೈತ­ನಿಗೆ ಸಾಧ್ಯ­ವಾ­ಗಿಲ್ಲ' ಎನ್ನು­ತ್ತಾರೆ.

PURA ಪರಿ­ಕ­ಲ್ಪನೆ: ಗ್ರಾಮೀಣ ಭಾರ­ತೀ­ಯರು ಗುಳೇ ಹೋಗು­ವು­ದುನ್ನು ತಡೆ­ಯಲು `ಪುರ'(Providing urban fecilities in rural aria) ಎಂಬ ನೂತನ ಪರಿ­ಕ­ಲ್ಪನೆ ಇತ್ತೀ­ಚೆಗೆ ಕಾಣಿ­ಸಿ­ಕೊಂ­ಡಿದೆ. ಇದು ರಾಷ್ಟ್ರ­ಪತಿ ಡಾ. ಅಬ್ದುಲ್‌ ಕಲಾಂ ಅವರ ಕನ­ಸಿನ ಕೂಸು. ಗ್ರಾಮ­ಗ­ಳಲ್ಲೆ ನಗರ ಸೌಲ­ಭ್ಯ­ವನ್ನು ಸೃಷ್ಟಿ­ಸು­ವುದು ಈ ಪರಿ­ಕ­ಲ್ಪ­ನೆಯ ಉದ್ದೇಶ. ಕಲಾಂ ಅವರು ಹೇಳು­ವಂತೆ `ಗ್ರಾಮ ಮತ್ತು ನಗರ ಎಂಬ ಎರಡು ನದಿ­ಗ­ಳಿಗೆ ತಾಂತ್ರಿಕ ಜ್ಞಾನ ಮಾತ್ರ ಸೂಕ್ತ ಸೇತು­ವೆ­ಯಾ­ಗ­ಬ­ಲ್ಲದು. ತಾಂತ್ರಿಕ ಜ್ಞಾನ­ದಿಂದ ಮಾತ್ರ ಗ್ರಾಮ-ನಗ­ರ­ಗಳ ಭಾವೈ­ಕ್ಯ­ತೆ­ಯನ್ನು ಸೃಷ್ಟಿಸಿ ರಚ­ನಾ­ತ್ಮಕ ಅಭಿ­ವೃ­ದ್ಧಿ­ಯತ್ತ ಸಾಗ­ಬ­ಹುದು' ಎನ್ನು­ತ್ತಾರೆ.
ಈಗಾ­ಗಲೇ ಭಾರತ ಎಚ್ಚೆ­ತ್ತು­ಕೊಂ­ಡಿದ್ದು, ಹಳ್ಳಿ­ಗ­ಳಿಗೆ ಮೂಲ ಅವ­ಶ್ಯ­ಕ­ತೆ­ಗ­ಳನ್ನು ಒದ­ಗಿ­ಸುವ ನಿಟ್ಟಿ­ನಲ್ಲಿ ಗಂಭೀರ ಚಿಂತನೆ ನಡೆ­ಸಿದೆ. ಪಂಚ­ವಾ­ರ್ಷಿಕ ಯೋಜ­ನೆ­ಗ­ಳಲ್ಲಿ ಇದನ್ನು ಪ್ರಮು­ಖ­ವೆಂದು ಪರಿ­ಗ­ಣಿ­ಸ­ಲಾ­ಗಿದೆ.
1951ರಲ್ಲಿ ರಾಷ್ಟ್ರಾ­ದ್ಯಂತ 725 ಪ್ರಾಥ­ಮಿಕ ಆರೋಗ್ಯ ಘಟ­ಕ­ಗ­ಳಿ­ದ್ದವು. ಅವು­ಗಳ ಸಂಖ್ಯೆ 2004ರ ವೇಳೆಗೆ 1,68,986ಕ್ಕೆ ಏರಿವೆ. ಅದೇ­ರೀತಿ 2000ನೇ ಇಸ್ವಿ­ಯಲ್ಲಿ ಪ್ರತಿ ಕಿ.ಮಿ.ಗೆ ಶೇ. 94ರಷ್ಟು ಗ್ರಾಮೀಣ ಭಾರ­ತೀ­ಯರು ಕಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿದ್ದು, ಪ್ರತಿ 3 ಕಿ.ಮಿ.ಗೆ ಶೇ. 85ರಷ್ಟು ಗ್ರಾಮೀ­ಣರು ಹಿರಿಯ ಪ್ರಾಥ­ಮಿಕ ಶಾಲೆ­ಗ­ಳನ್ನು ಹೊಂದಿ­ದ್ದಾರೆ. ಇವು­ಗಳ ಸಂಖ್ಯೆ ಇತ್ತೀ­ಚೆಗೆ ಹೆಚ್ಚು­ತ್ತಿದ್ದು, ಗ್ರಾಮೀ­ಣರು ತಮ್ಮ ಹಳ್ಳಿ­ಗ­ಳಲ್ಲೆ ಉಳಿ­ಯು­ವಂತೆ ಪ್ರೋತ್ಸಾ­ಹಿ­ಸು­ತ್ತಿವೆ.
`ಧಾರ­ವಾಡ ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದಾಗ ಅದು ಸಾಹಿ­ತಿ­ಯೊ­ಬ್ಬರ ಮನೆಯ ಮೇಲೆ ಬೀಳು­ವು­ದಂತೆ. ಆದರೆ ಬೆಂಗ­ಳೂರು ನಗ­ರ­ದಲ್ಲಿ ನಿಂತು ಕಲ್ಲೊಂ­ದನ್ನು ಮೇಲಕ್ಕೆ ಬೀಸಿ­ದರೆ ಅದು ಸಾಫ್ಟ್‌­ವೇರ್‌ ಇಂಜಿ­ನಿ­ಯರ್‌ ತಲೆ ಮೇಲೆ ಬೀಳು­ತ್ತದೆ.' ಇದು ಇತ್ತೀ­ಚಿಗೆ ಹುಟ್ಟಿ­ಕೊಂಡ ಗಾದೆ ಮಾತು. ನಮ್ಮ ನಗ­ರ­ಗಳ ಸ್ಥಿತಿ ಬದ­ಲಾ­ಗಿದ್ದು, ಅವು ಗುಳೇ ಬಂದ ಗ್ರಾಮೀಣ ವಲ­ಸಿ­ಗ­ನಿಗೆ ಮುಳ್ಳಿನ ಹಾಸಿ­ಗೆ­ಯಾ­ಗಿವೆ. ಮುಳ್ಳಿನ ಮೇಲೆ ದೇಹ­ವೊ­ಡ್ಡಿದ ಆತ ಪ್ರತಿ­ನಿತ್ಯ ಗೋಳಿ­ಡು­ತ್ತಿ­ದ್ದಾನೆ.
(ಭಾರತಿ ಘನಶ್ಯಾಂ ಅವರ ಲೇಖನದಿಂದ ಪ್ರೇರಣೆ)

ಶನಿವಾರ, ಅಕ್ಟೋಬರ್ 11, 2008




ಹುಲಿರಾಯ ಮಂಗಮಾಯ....!



ಕಾಡಿನ ರಾಜ ಹುಲಿರಾಯನ ಸಂಖ್ಯೆ ದಿನೇ ದಿನೇ ಕುಗ್ಗುತ್ತಿದೆ. ಇಡೀ ಭಾರತ ದೇಶವನ್ನು ತಡಕಾಡಿದರೆ 1400ಕ್ಕಿಂತ ಹೆಚ್ಚು ಹುಲಿಗಳು ಸಿಗಲಾರವು. ಈ ದೇಶದ ರಾಷ್ಟ್ರೀಯ ಪ್ರಾಣಿ ಹುಲಿ ಇಲ್ಲವಾಗುತ್ತಿರುವುದು ಈ ದೇಶದ ಶೇಮ್‌ ಶೇಮ್‌!
ಅತಿ ಹೆಚ್ಚು ಅಂದರೆ ಉತ್ತರ ಪ್ರದೇಶ ರಾಜ್ಯದಲ್ಲಿ 920 ಹುಲಿಗಳಿವೆ. ಅತಿ ಕಡಿಮೆ ಅಂದರೆ ಗುಜರಾತ್‌ನಲ್ಲಿ ಒಂದು ಹುಲಿ ಮಾತ್ರ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಹುಲಿಯೂ ಇಲ್ಲ.
ಹುಲಿ ಸಂರಕ್ಷಣೆ ಕುರಿತಂತೆ ಕರ್ನಾಟಕ ರಾಜ್ಯದ ಪರಿಸ್ಥಿತಿ ಪರವಾಗಿಲ್ಲ ಅನ್ನಬಹುದು. ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ವನ್ಯಜೀವಿ ಘಟಕ ಹುಲಿ ಸಂರಕ್ಷಣೆಗೆ ಹಲವು ಕಾರ್ಯಕ್ರಮ ರೂಪಿಸಿದೆ. ಒಟ್ಟು 350 ಹುಲಿಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ. ಇಲ್ಲಿ ನಾಲ್ಕು ರಾಷ್ಟ್ರೀಯ ಉದ್ಯಾನ ವನಗಳಿವೆ. ಇವುಗಳಲ್ಲಿ ನಾಗರಹೊಳೆ ಉದ್ಯಾನವನದಲ್ಲಿ 14 ಹುಲಿಗಳಿದ್ದರೆ, ಬಂಡೀಪುರ ಉದ್ಯಾನ ವನದಲ್ಲಿ 24 ಹುಲಿಗಳಿವೆ.
ಹುಲಿ ಸಂಖ್ಯೆ ಕಡಿಮೆಯಾಗುತ್ತಿರುವುದು ಇಡೀ ದೇಶವನ್ನು ಆತಂಕಕ್ಕೆ ಈಡು ಮಾಡಿದೆ. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಗಂಭೀರವಾದ ಚರ್ಚೆ ನಡೆಯುತ್ತಿದೆ.
ಮುಖ್ಯವಾಗಿ ಹುಲಿ ಸಂಖ್ಯೆ ಕ್ಷೀಣಿಸಲು ಅಕ್ರಮ ಬೇಟೆಯೇ ಕಾರಣ. ವಿದೇಶದಲ್ಲಿ ಹುಲಿಯ ಅಂಗಗಳಿಗೆ ಬಹಳ ಬೇಡಿಕೆ ಇದೆ. ಔಷಧ ತಯಾರಿಕೆಯಲ್ಲಿ ಹುಲಿ ಅಂಗಗಳನ್ನು ಮುಖ್ಯವಾಗಿ ಬಳಸಲಾಗುತ್ತದೆ. ಚೈನಾಕ್ಕೆ ಭಾರತೀಯ ಹುಲಿಗಳ ಅಂಗಗಳು ಅಕ್ರಮವಾಗಿ ರವಾನೆಯಾಗುತ್ತಿವೆ ಎಂಬ ವರದಿಯಿದೆ.
ಪ್ರಕೃತಿ ಕೂಡ ಹುಲಿ ರಕ್ಷಣೆಗೆ ಮಾರಕವಾಗಿದೆ. ಒಂದು ಪ್ರಾಣಿಯ ಆಹಾರವಾಗಿ ಇನ್ನೊಂದು ಪ್ರಾಣಿಯನ್ನು ಬಲಿಕೊಡಬೇಕು ಎಂದು ಫುಡ್‌ ಚೈನ್‌ ಹೇಳುತ್ತದೆ. ದೊಡ್ಡ ಮೀನು ಸಣ್ಣ ಮೀನನ್ನು ತಿಂದು ಬದುಕುವಂತೆ. ದೊಡ್ಡ ಹುಲಿ ಸಣ್ಣ ಹುಲಿಯನ್ನು ತನ್ನ ಹೊಟ್ಟೆಗಾಗಿ ಬಲಿಕೊಡುತ್ತಿದೆ.

ಮಂಗಳವಾರ, ಅಕ್ಟೋಬರ್ 7, 2008


ಒಡೆಯರ್‌ ಮನೆಯಲ್ಲಿ ಹುಲಿಚರ್ಮ!



ಅಂದಿನ ನಮ್ಮ ರಾಜ ಮಹಾರಾಜರು ಮೋಜಿಗಾಗಿ ಬೇಟೆ ಆಡುತ್ತಿದ್ದರು. ಮುಗ್ದ ಕಾಡು ಪ್ರಾಣಿಗಳನ್ನು ಕೊಂದು ಮನರಂಜನೆ ಪಡೆಯುತ್ತಿದ್ದರು. ಇಂದು ರಾಜರಿಲ್ಲ. ರಾಜ ವಂಶಸ್ಥರಿದ್ದಾರೆ. ಅವರಿಗೆ ಇನ್ನೂ ಪ್ರಾಣಿ ಬೇಟೆಯ ಮೇಲಿನ ಮಮಕಾರ ಕಡಿಮೆಯಾದಂತಿಲ್ಲ.
ಈ ಮೇಲಿನ ಚಿತ್ರ ನೋಡಿ. ಇದು ಮೈಸೂರು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಅವರ ಅರ`ಮನೆ'. ಮನೆಯ ನೆಲ ನೋಡಿ. ಹುಲಿ ಮತ್ತು ಚಿರತೆ ಚರ್ಮದ ಟೈಲ್ಸ್‌ ಅಥವಾ ಇನ್ನೇನೋ...ಹಾಕಿಸಿದ್ದಾರೆ. ಈ ಮಹಾರಾ`ಜ'ಯರಿಗೆ ಬೇರೆ ಇನ್ನೇನೂ ಸಿಗಲಿಲ್ಲವೆ? ಪ್ರಾಣಿ ಚರ್ಮವೇ ಬೇಕಿತ್ತಾ? ಈಗ ಪ್ರಾಣಿ ನಿಷೇಧ ಕಾನೂನು ಇಲ್ಲದಿದ್ದರೆ ಬಂದೂಕು ಹಿಡಿದು ಬೇಟೆಗಾಗಿ ಕಾಡಿಗೆ ಹೊರಟುಬಿಡುತ್ತಿದ್ದರೇನೋ.
ಪ್ರಾಣಿಗಳ ಚರ್ಮ ಇರೋ ಹಾಸಿನ ಮೇಲೆ ನಡೆದಾಡುವುದು ತರವೇ? ಸುಸಂಸ್ಕೃತ ವಂಶಸ್ತರಾಗಿ, ದೊಡ್ಡ ಮನುಷ್ಯರಾಗಿ ಸಣ್ಣ ವಿಷಯಗಳ ಮೇಲೆ ಸಣ್ಣತನ ತೋರುವುದು ಅವರ ಅವಲಕ್ಷಣ. ಇವರ ಕ್ರೇಜ್‌ಗಳನ್ನು ನೋಡಿದರೆ ಎಂಥವರಿಗೂ ದೊಡ್ಡಹೊಟ್ಟೆ ರಾಜನಿಗೆ ಬುದ್ಧಿ ಕಡಿಮೆ ಅನ್ಸುತ್ತೆ. ಮನೆಯಲ್ಲಿ 20ಕ್ಕೂ ಹೆಚ್ಚು ಬಿಎಂಡಬ್ಲ್ಯು ಕಾರ್‌ಗಳಿವೆಯಂತೆ. ಕುದುರೆ ಪಂದ್ಯ ಅಂದರೆ ಪ್ರಾಣವಂತೆ. ಚೆಲ್‌ ಚೆಲ್‌ ಹುಡುಗಿಯರ ಪ್ಯಾಷನ್‌ ಪಾರ್ಟಿಗಳಲ್ಲಿ ಗುಂಡು ಹಾಕೋದರಲ್ಲಿ ಇವ ಮೊದಲಿಗರಂತೆ!
ಆ ಮಲ್ಯ ಹೇಗಾದರೂ ಮಾಡಿಕೊಳ್ಳಲಿ ಸ್ವಾಮಿ. ಇವರೇನು? ಇವರ ಗೈರತ್ತುಗಳೇನು?...ಇದು ಥರವಲ್ಲ.

ಶನಿವಾರ, ಅಕ್ಟೋಬರ್ 4, 2008




























ಸುರಸುಂದರ ಬಿಳಿಸಿಂಹ!

RARE SPECIES ON THIS PLANET





ಮನುಷ್ಯ ಪ್ರಾಣಿಯ ತಲೆಯೊಳಗೆ ಬುದ್ಧಿ ಬಿಟ್ಟರೆ ಇನ್ನೇನೂ ಇಲ್ಲ! ಆದರೆ ತನ್ನನ್ನು ತಾನು ಸುರ ಸುಂದರಾಂಗ ಅಂದುಕೊಂಡಿದ್ದಾನೆ. ಇವ ನವಿಲಿಗಿಂತ ಸುಂದರನೆ? ಕತ್ರಿನಾಳಿಗಿಂತ ಕೋತಿ ಸೊಂಟವೇ ಮೇಲು!
ಅಪರೂಪ ಎನಿಸುವ ಪ್ರಾಣಿ ಜೀವಗಳು ಈ ಭೂ ಮಂಡಲದ ಮೇಲಿವೆ. ಕೆಲ ಪ್ರಾಣಿಗಳನ್ನು ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಈ ಬಿಳಿ ಸಿಂಹಗಳನ್ನು (ಚಿತ್ರ) ನೋಡಿ ಎಷ್ಟು ಸುಂದರವಾಗಿವೆ.
ಬಿಳಿ ಸಿಂಹಗಳು ಇಂಗ್ಲೆಂಡಿನಲ್ಲಿವೆ. ಇವುಗಳಿಗಾಗಿ ಇಡೀ ಜಗತ್ತನ್ನು ಜಾಲಾಡಿದರೆ 130 ಕ್ಕಿಂತ ಜಾಸ್ತಿ ಸಿಗಲಾರವು. ಇವು ಬಹಳ ಅಪರೂಪದ ಪ್ರಾಣಿಗಳು. ಇಂಗ್ಲೆಂಡ್‌ ಇವುಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದೆ. ಇಂಗ್ಲೆಂಡಿನ ಜನ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.
ಚಿತ್ರದಲ್ಲಿರುವ ಎರಡು ಬಿಳಿಸಿಂಹಗಳು ಜನವರಿಯಲ್ಲಿ ಜನಿಸಿದವು. ಅವುಗಳಿಗೆ ತಾರಾ ಮತ್ತು ಜಾರಾ ಎಂದು ಹೆಸರಿಸಲಾಯಿತು.



ಇಷ್ಟರಲ್ಲೇ ಇ- ವೇಸ್ಟ್‌ ಲಾ!



ನಮ್ಮ ಕೆಲಸ ಕಿತ್ತುಕೊಳ್ಳಲು ಕಂಪ್ಯೂಟರ್‌ ಬೇಕೆ ಬೇಕು. ಕೆಟ್ಟರೆ ಅದು ಇ- ವೇಸ್ಟ್‌. ಬರೀ ಕಂಪ್ಯೂಟರ್‌ ಮಾತ್ರವಲ್ಲ, ಮೊಬೈಲ್‌: ಇದು ಇದಿಲ್ಲದಿದ್ದರೆ ಜೀವನ ಮುಂದಕ್ಕೇ ಹೋಗುವುದಿಲ್ಲ. ಕರೆನ್ಸಿ ಇಲ್ಲದಿದ್ದರೂ ಪರವಾಗಿಲ್ಲ! ಚೈನಾ ಮೊಬೈಲ್‌ಗಳದ್ದು ಇನ್ನೊಂದು ಕತೆ. ನೋ ರಿಪೇರಿ. ಯೂಸ್‌ ಅಂಡ್‌ ಥ್ರೋ! ಟಿವಿ, ರೆಫ್ರಿಜರೇಟರ್‌, ವಾಷಿಂಗ್‌ಮಷೀನು ಇಂತಹ ವಿದ್ಯುತ್‌ ಉಪಕರಣಗಳು ಮಾನವ ಬದುಕಿನ ಒಂದು ಅಂಗವೇ ಆಗಿಬಿಟ್ಟಿವೆ. ಕಡೆಗೆ ಅವು ಇ-ಕಸ. ಇದನ್ನು ಸಾಗ ಹಾಕುವುದಾದರೂ ಎಲ್ಲಿಗೆ? ಇ- ತ್ಯಾಜ್ಯಕ್ಕೆ ತಿಪ್ಪೆಗುಂಡಿ ಎಲ್ಲಿದೆ?
ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಯೇ ಒಂದು ಸವಾಲಾಗಿರುವಾಗ ಮಟ್ರೋ ನಗರಗಳಿಗೆ ಇ- ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಭಾರತದಲ್ಲಿ ವರ್ಷಕ್ಕೆ 3.3 ಲಕ್ಷ ಟನ್‌ ಇ- ತ್ಯಾಜ್ಯ ಉತ್ಪತ್ತಿಯಾಗುತ್ತದೆ. 2011ರ ವೇಳಗೆ ಇದರ ಪ್ರಮಾಣ 4.7 ಲಕ್ಷ ಟನ್‌ ಹೆಚ್ಚಾಗುವುದಾಗಿ ಊಹಿಸಲಾಗಿದೆ. ಶೆ. 50ರಷ್ಟು ಇ-ತ್ಯಾಜ್ಯ ಲೆಕ್ಕಕ್ಕೇ ಸಿಗುತ್ತಿಲ್ಲ.
ಇ- ಕಸ ಬಹಳ ಹಾನಿಕಾರಕವಾದುದು. ಪರಿಸರದ ಅಪಾಯಕರ ಪರಿಣಾಮ ಬೀರುತ್ತದೆ. ವಿದ್ಯುತ್‌ ಉಪಕರಣಗಳನ್ನು ಸಂಸ್ಕರಿಸುವ ಕಾರ್ಮಿಕರಿಗೆ ವಿವಿಧ ಬಗೆಯ ವ್ಯಾಧಿಗಳು ಕಾಣಿಸಿಕೊಳ್ಳಲಿವೆ.
ಇ- ತ್ಯಾಜ್ಯಕ್ಕೆ ಕಾನೂನಿಲ್ಲ: ಗೃಹೋತ್ಪತ್ತಿ ತ್ಯಾಜ್ಯ ನಿರ್ವಹಣೆಗೆ ಕಾನೂನುಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಸೆಲ್‌ ಮಾತುಕತೆ ( Bessel convention) ಇದೆ. ಭಾರತದಲ್ಲಿ 1986 ಪರಿಸರ (ಸಂರಕ್ಷಣೆ) ಕಾನೂನಿದೆ. 1989ರ ತ್ಯಾಜ್ಯನಿರ್ವಹಣಾ ನಿಯಮಗಳಿವೆ. ಆದರೆ ಇ- ತ್ಯಾಜ್ಯ ನಿರ್ವಹಣೆಗೆ ಕಾನೂನಿಲ್ಲ. ಇ-ತ್ಯಾಜ್ಯ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಒಂದು ದಶಕದಿಂದೀಚೆಗೆ.
ಇ-ತ್ಯಾಜ್ಯ ಕಾನೂನಿಗೆ ಇದು ಸಕಾಲ: ಬೆಂಗಳೂರಿನಲ್ಲಿ ಸೆ. 25ರಂದು ನಡೆದ `ಪರಿಸರ ಸ್ನೇಹಿ ಇ- ತ್ಯಾಜ್ಯ ನಿರ್ವಹಣೆ ಮಾರ್ಗಸೂಚಿಗಳು' ಎಂಬ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಇ- ತ್ಯಾಜ್ಯ ನಿರ್ವಹಣಗೆ ಜರೂರಾಗಿ ಕಾನೂನಿನ ಅವಶ್ಯಕತೆ ಇದೆ. ಈ ತ್ಯಾಜ್ಯದ ಪರಿಣಾಮ ಪರಿಣಾಮ ಈಗ ಎಲ್ಲರ ಗಮನಕ್ಕೆ ಬರುತ್ತಿದೆ. ಆದ್ದರಿಂದ ಅದರೆ ನಿರ್ವಹಣೆಗೆ ಕಾನೂನು ಜಾರಿಗೊಳಿಸಲು ಇದು ಸಕಾಲ ಎಂಬ ಅಭಿಪ್ರಾಯ ಕೇಳಿಬಂತು.
ಈ ಕಾರ್ಯಗಾರವನ್ನು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕೆಲ ಪರಿಸರ ಎನ್‌ಜಿ ಒಗಳು ಹಾಗೂ ತಯಾರಿಕ ಸಂಘ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಇಲಾಖೆಗಳ, ಕಂಪನಿಗಳ, ಎನ್‌ಜಿ ಒಗಳ ತಜ್ಞರುಗಳು ಇ- ತ್ಯಾಜ್ಯದಿಂದ ಉತ್ಪತ್ತಿಯಾಗಿರುವ ಸಮಸ್ಯೆಗಳ ಬಗ್ಗೆ ತಮ್ಮ ವಿಷಯ ಮಂಡಿಸಿದರು. ಎಲ್ಲರೂ ಒಮ್ಮತದಿಂದ ಇ- ತ್ಯಾಜ್ಯ ಸಮಸ್ಯೆ ನಿವಾರಣೆಗೆ ಕಾನೂನು ರೂಪಿಸುವುದು ಅಂತಿಮ ಪರಿಹಾರ ಎಂದು ಒಪ್ಪಿಕೊಂಡರು.
ಇ- ತ್ಯಾಜ್ಯ ಸಂಸ್ಕರಣೆಗೆ ವೈಜ್ಞಾನಿಕ ಕ್ರಮ ಅಗತ್ಯವಾಗಿದ್ದು, ವಿದ್ಯುತ್‌ ಉಪಕರಣಗಳ ಬಳಕೆದಾರರು ಮತ್ತು ಗ್ರಾಹಕರು ಎತ್ತೆಚ್ಚುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಉಪಕರಣಗಳ ಬಳಕೆಯ ಮೇಲೆ ಕೆಲ ನಿಷೇಧ ಹಾಗೂ ಹೊಣೆಗಾರಿಕೆಗಳನ್ನು ಹೇರುವ ಪರಿಪೂರ್ಣ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂಬ ತೀರ್ಮಾನ ಕೈಗೊಳ್ಳಲಾಯಿತು.
ನಿರ್ವಹಣಾ ನಿರ್ದೇಶನಗಳು: ಇ- ತ್ಯಾಜ್ಯ ನಿರ್ವಹಣೆಗೆ ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಕೆಲವು ನಿರ್ದೇಶನಗಳನ್ನು ಒಳಗೊಂಡ ಒಂದು ಕಿರು ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ತ್ಯಾಜ್ಯದಿಂದ ಉಂಟಾಗಬಹುದಾದ ಪರಿಣಾಮ ಅವುಗಳ ನಿರ್ವಹಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಇದು ನಿಯಮಗಳ ಆವೃತ್ತಿ ಆಗಿಲ್ಲದ ಕಾರಣ ಇದರಿಂದ ಇ- ತ್ಯಾಜ್ಯ ನಿರ್ವಹಣೆ ಕಷ್ಟ ಆದ್ದರಿಂದ ಕಟ್ಟುನಿಟ್ಟಿನ ಕಾನೂನಿನ ಅವಶ್ಯಕತೆ ಇದೆ.
ರಪ್ತು ರೋಗ: ಇ- ತ್ಯಾಜ್ಯವನ್ನು ಬೇರೆ ಬೇರೆ ರಾಜ್ಯಗಳಿಗೆ, ದೇಶಗಳಿಗೆ ರಪ್ತು ಮಾಡಲಾಗುತ್ತದೆ. ಇದು ಬಲುದೊಡ್ಡ ರೋಗ. ಅಕ್ರಮವೂ ಆಗಿದೆ. ಬೆಂಗಳೂರಿನ ಹೊರವಲಯದ ಕೆಲ ಕೆರೆಗಳಲ್ಲಿ ಹೊರ ರಾಜ್ಯಗಳು ತಮ್ಮ ತಮ್ಮ ಇ- ತ್ಯಾಜ್ಯವನ್ನು ಅಕ್ರಮವಾಗಿ ಸುರಿದಿರುವುದು ಬೆಳಕಿಗೆ ಬಂದಿದೆ.
ಇದು ಜಾಗತಿಕ ರೋಗವೂ ಹೌದು. ಪಾಶ್ಚಾತ್ಯ ರಾಷ್ಟ್ರಗಳು ಆಫ್ರಿಕನ್‌ ರಾಷ್ಟ್ರಗಳನ್ನು ತಮ್ಮ ತ್ಯಾಜ್ಯ ಬಿಸಾಡುವ ಡಸ್ಟ್‌ಬಿನ್‌ ಅಂದುಕೊಂಡಿವೆ. ಭಾರತವೂ ಕೂಡ ಪಾಶ್ಚಾತ್ಯ ರಾಷ್ಟ್ರಗಳ ಇ-ತ್ಯಾಜ್ಯದ ಒಂದು ಡಸ್ಟ್‌ಬಿನ್‌.
ಈಗೆಲ್ಲಾ ನಗರಗಳು ಎಲೆಕ್ಟ್ರಾನಿಕ್‌ ಸಿಟಿಗಳಾಗುತ್ತಿವೆ. ಗ್ರೀನ್‌ಸಿಟಿ ಯಾರಿಗೂ ಬೇಡ. ಎಲೆಕ್ಟ್ರಾನಿಕ್‌ ಸಿಟಿ ಅಂದಮೇಲೆ ಎಲೆಕ್ಟ್ರಾನಿಕ್‌ ವೇಸ್ಟ್‌ ಇರಲೇಬೇಕು. ವ್ಯಕ್ತಿ ಇದ್ದ ಮೇಲೆ ವ್ಯರ್ಥ ಇರಲ್ವೆ?

ಶುಕ್ರವಾರ, ಅಕ್ಟೋಬರ್ 3, 2008




A story of ಗ್ರೀನ್ citizen!
ಕಡುಕಪ್ಪು ಆಫ್ರಿಕನ್ನರ ಹಸಿರು ಸೌಂದರ್ಯ!

ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಡಾ. ಶಿವರಾಮ ಕಾರಂತರ `ನಾ ಕಂಡ ಆಫ್ರಿಕಾ’ ಕೃತಿ ಸಿಕ್ಕರೆ ಒಮ್ಮೆ ಓದಿ. ಆಫ್ರಿಕಾ ದೇಶಗಳ ಮಹತ್ವವನ್ನು ಆ ಕೃತಿಯೊಳಗೆ ಬಿಂಬಿಸಿದ್ದಾರೆ.
ಸ್ವಿಜರ್‌ಲ್ಯಾಂಡ್‌, ಅಮೆರಿಕಾ, ಇಂಗ್ಲೆಂಡ್‌, ಆಸ್ಟ್ರೇಲಿಯಾ ದೇಶಗಳ ಮೇಲೆ ನಮಗೇನೋ ಒಂಥರಾ ಕ್ರೇಜ್‌. ಆಫ್ರಿಕಾ ಅಂದೊಡನೆ ಓ.. ಬ್ಲ್ಯಾಕ್‌ ಪೀಪಲ್‌ ಕಂಟ್ರೀಸ್‌….. ಎಂದು ಮೂಗು ಮುರಿದು ಬಿಡುತ್ತೇವೆ. ಆದರೆ ಆ ಕಡುಕಪ್ಪು ಚರ್ಮದ ಜನರ ದೇಶಗಳ ಹಸಿರು ಸೌಂದರ್ಯವನ್ನು ನಾವು ಎಂದಾದರೂ ನೋಡಬೇಕು ಅಂದುಕೊಂಡಿದ್ದೀವಾ?
ಆಫ್ರಿಕಾ ಖಂಡ ಪ್ರಾಕೃತಿಕ ಸಂಪನ್ಮೂಲದ ಖಣಿ. ಅಲ್ಲಿರುವ ಹಸಿರು ಸಂಪತ್ತು ಬೇರಾವ ದೇಶಗಳಲ್ಲೂ ಇಲ್ಲ. ಆ ಜನರೆಲ್ಲರೂ ಹಸಿರಿನೊಂದಿಗೆ ಬೆಳೆದಿದ್ದಾರೆ. ಹಸಿರು ಆವರ ಜೀವ ಎನ್ನಬಹುದು. ಅವರನ್ನು ನಾವು ಒಂದೇ ಮಾತಿನಲ್ಲಿ `ಬುಡಕಟ್ಟು ಜನರು’ ಎಂದು ಬಿಡುತ್ತೇವೆ. ಪಾಶ್ಚಾತ್ಯ ರಾಷ್ಟ್ರಗಳೂ ಸೇರಿದಂತೆ ಬೇರೆ ದೇಶಗಳ ಜನರು ಆಫ್ರಿಕವನ್ನು ಕಡುಬಡವರ ದೇಶ ಎನ್ನುತ್ತವೆ. ಆ ಖಂಡದ ಹಸಿರು ಶ್ರೀಮಂತಿಕೆ ಬಗ್ಗೆ ಯಾರೂ ಮಾತನಾಡುವುದಿಲ್ಲ.
ಜಗತ್ತಿನ ಒಟ್ಟು ಭೂ ಭಾಗದಲ್ಲಿ ಆಫ್ರಿಕಾದ ಪಾಲು ಶೇ. 6ರಷ್ಟು. ಕೀನ್ಯಾ, ತಾನ್ಸಾನಿಯಾ, ಜಿಂಬಾಬ್ವೆ, ಯುಗಸ್ಲೊವೋಕಿಯಾ, ಉಗಾಂಡ, ನೈರೋಬಿ, ಮಡಗಾಸ್ಕರ್‌ ಐಸ್‌ ಲ್ಯಾಂಡ್‌ ಸೇರಿದಂತೆ 53 ದೇಶಗಳಲ್ಲಿ 922 ಮಿಲಯನ್‌ ಮಂದಿ ಜೀವನ ನಡೆಸುತ್ತಿದ್ದಾರೆ. ಸೂಡಾನ್‌ ಆಫ್ರಿಕಾದ ಅತಿದೊಡ್ಡ ದೇಶ. ಸಿಯಚಿಲೀಸ್‌ ಅತಿ ಚಿಕ್ಕದು.
ಆಫ್ರಿಕಾ ಜೀವ ವೈವಿಧ್ಯತೆಗೆ ಹೆಸರುವಾಸಿ. ಅಸಂಖ್ಯಾತ ಪ್ರಾಣಿಗಳ ಪ್ರಬೇಧಗಳನ್ನು ಇಲ್ಲಿ ಕಾಣಬಹುದು. ಆಫ್ರಿಕಾ ಆನೆ, ಎಮ್ಮೆ, ಜಿಂಕಿ, ಒಂಟೆಗಳು ವಿಶ್ವದೆಲ್ಲೆಡೆ ಹೆಸರಾಗಿವೆ. ಅಂತೆಯೇ ಆಫ್ರಿಕಾ ಕ್ರೂರ ಪ್ರಾಣಿಗಳಿಗೂ ಹೆಸರಾಗಿದೆ. ಅಲ್ಲಿಯ ಬ್ಲ್ಯಾಕ್‌ ಮೊಯಿಂಬಾ ಹಾವು ಮನುಷ್ಯನನ್ನು ನುಂಗಬಲ್ಲದು. ಅದು ಬಿಡುವ ಉಸಿರು ಸೋಕಿದರೂ ಮನುಷ್ಯನ ಪ್ರಾಣ ಉಳಿಯುವುದಿಲ್ಲ. ಮನುಷ್ಯನ ಇತಿಹಾಸವೂ ಕೂಡ ಆಫ್ರಿಕಾದಲ್ಲೇ ಇದೆ. ಮನುಷ್ಯ ಜೀವಿಯ ಉಗಮದ ಇತಿಹಾಸದ ಬಗ್ಗೆ ಕೆದಕಿದಾಗ ಆಫ್ರಿಕಾಗೆ ಹೋಗಲೇಬೇಕು.
ಇಲ್ಲಿಯ ಬಹುತೇಕ ಜನರು ಬುಡಕಟ್ಟು ಜನರು. ನಮ್ಮ ಕಣ್ಣಿಗೆ ಅವರು ಅನಾಗರಿಕರಂತೆ ಕಾಣುತ್ತಾರೆ. ಇನ್ನೂ ಗೆಡ್ಡೆ ಗೆಣಸು ತಿಂದುಕೊಂಡು, ಬಟ್ಟೆ ಹಾಕದೆ ಬದುಕುವ ಜನರೂ ಅಲ್ಲಿದ್ದಾರೆ. ಬಹುತೇಕ ದೇಶಗಳು ಮಂಜುಗಡ್ಡೆಯ ಜತೆಯಲ್ಲಿವೆ.
ಆಫ್ರಿಕಾ ದೇಶಗಳ ರಾಜಕೀಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಹಲವು ದೇಶಗಳಲ್ಲಿ ಅಧ್ಯಕ್ಷೀಯ ಸರ್ಕಾರವಿದ್ದರೆ ಕೆಲ ದೇಶಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದೆ. ಹಸಿವೆಯಿಂದ ಸಾಯುವ ಜನರೂ ಅಲ್ಲಿದ್ದಾರೆ. ಹಿಂಸೆ ಇದೆ. ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ.
ಸರ್ಕಾರದ ಕಟ್ಟುಪಾಡುಗಳಿಗೆ ಹೊರತಾದ ಮಂದಿ ಅಲ್ಲಿ ಬಹಳಷ್ಟಿದ್ದಾರೆ. ಅವರು ಹಸಿರು ಮನುಷ್ಯರು. ಹಸಿನೊಂದಿಗೆ ಹುಟ್ಟಿ ಹಸಿರಿನೊಂದಿಗೆ ಕೊನೆಯಾಗುತ್ತಾರೆ. ಅವರೆಲ್ಲರೂ ಹಸಿರು ಪ್ರಜೆಗಳು. ಅವರನ್ನೊಮ್ಮೆ ನೋಡಿಕೊಂಡು ಬರಬೇಕು.



ಓಜೋನ್‌ ದಿನಾಚರಣೆ



ಭೂ ಮಂಡಲವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವ ಒಂದು ಹೊದಿಕೆ ಓಜೋನ್‌ ಪದರ. ಸೂರ್ಯನಿಂದ ಹೊರಹೊಮ್ಮುವ ವಿಷಾಯುಕ್ತ ಕಿರಣಗಳನ್ನು ಸಂಸ್ಕರಿಸುವ ಕೆಲಸ ಈ ಹೊದಿಕೆಯದ್ದು.
ಇಂದು ಓಜೋನ್‌ ಪದರಕ್ಕೆ ಗಂಡಾಂತರ ಒದಗಿದೆ. ಭೂಮಿಯ ಮೇಲೆ ಉತ್ಪತ್ತಿಯಾಗುತ್ತಿರುವ ಹಸಿರು ಮನೆ ಅನಿಲಗಳು ಓಜೋನ್‌ ಹೊದಿಕೆಯನ್ನು ಉಸಿರುಗಟ್ಟಿಸುತ್ತಿವೆ. ಅಂಟಾರ್ಟಿಕಾ ಓಜೋನ್‌ ಗುಂಡಿ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ.
ಓಜೋನ್‌ ಪದರ ರಕ್ಷಣೆಗೆ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿ 1987, ಸೆ. 16ರಂದು ವಿವಿಧ ರಾಷ್ಟ್ರಗಳ ನಡುವೆ `ಮಾಂಟ್ರಿಯಲ್‌ ಪ್ರೊಟೊಕಾಲ್‌’ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲಾಯಿತು. ಓಜೋನ್‌ ಪದರಕ್ಕೆ ಧಕ್ಕೆಯಾಗುವಂತಹ ಯಾವುದೇ ಚಟುವಟಿಕೆಗಳನ್ನು ಸದಸ್ಯ ರಾಷ್ಟ್ರಗಳು ಕೈಗೊಳ್ಳಕೂಡದು ಎಂಬ ಬಹುಮತದ ನಿರ್ಣಯವನ್ನು ಅಂದು ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಇದರ ನೆನಪಿಗಾಗಿ ವರ್ಷಂಪ್ರತಿ ಸೆ. 16ರಂದು ಅಂತಾರಾಷ್ಟ್ರೀಯ ಓಜೋನ್‌ ದಿನಾಚರಣೆ ಆಚರಿಸಲಾಗುವುದು.



ಕಸದಿಂದ ರಸ, ರಸದಿಂದ ವಿದ್ಯುತ್‌!



ಬೆಂಗಳೂರಿನ ತಿಪ್ಪೆಗಳು ಬಹುಬೇಗನೆ ಖಾಲಿಯಾಗಲಿವೆ! ನಗರದ ಹೊರವಲಯದಲ್ಲಿರುವ ಕೆರೆಗಳು ಗಬ್ಬುನಾಥ ಮುಕ್ತವಾಗಲಿವೆ. ರಸ್ತೆಗಳ ಇಕ್ಕೆಲೆಗಳು ಸ್ವಚ್ಛವಾಗಲಿವೆ. ಪೌರಕಾರ್ಮಿಕ ಮಂದಿ ನಿಮ್ಮ ಮನೆ ಮುಂದೆ ಬಂದು ಕಸ ಇದ್ರೆ ಕೊಡಿಯಮ್ಮ! ಎಂದು ಕೇಳುವ ಕಾಲ ಬರಲಿದೆ.
ಹೌದು. ಈಗ ಕಸಕ್ಕೆ ಭಾರಿ ಬೇಡಿಕೆ ಬಂದಿದೆ. ಕಸದಿಂದ ರಸ ಉತ್ಪತ್ತಿ ಮಾಡುವ ಎಲ್ಲಾ ಚಿಂತನೆಗಳು ನಡೆಯುತ್ತಿವೆ. ಅಂದುಕೊಂಡಿರುವುದೆಲ್ಲಾ ಸರಿಯಾಗಿ ನಡೆದರೆ ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ `ತ್ಯಾಜ್ಯದಿಂದ ವಿದ್ಯುತ್‌’ ಘಟಕ ನಿರ್ಮಾಣಗೊಳ್ಳಲಿದೆ. ಈಗಾಗಲೆ ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯದ(ಎಂಎನ್‌ಆರ್‌ಐ) ಹಸಿರು ನಿಶಾನೆ ದೊರೆತಿದೆ. ಇಷ್ಟರಲ್ಲೇ ನಿಮ್ಮ ಕಸ ನಿಮ್ಮ ಮನೆಯನ್ನು ಬೆಳಗಲಿದೆ.
ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯವಿಲೇವಾರಿ ಸಮಸ್ಯೆ ಒಂದು ಗಂಭೀರ ಸಮಸ್ಯೆ. ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಮಸ್ಯೆ ಇದು. ದಿನಂಪ್ರತಿ ಈ ಊರಲ್ಲಿ ಉತ್ಪತ್ತಿಯಾಗುವ 30.000 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಚೆಲ್ಲುತ್ತಿದೆ. ಖಾಸಗೀ ಗುತ್ತಿಗೆದಾರರ ಸಹಾಯದೊಂದಿಗೆ ಅದೇನೇನೋ ಸರ್ಕಸ್‌ ಮಾಡುತ್ತಿದೆ.
`ಸ್ವಚ್ಛ ಬೆಂಗಳೂರು’ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳ 2500 ಟನ್‌ ತ್ಯಾಜ್ಯ ವಿಲೇವಾರಿಗೆ 5.40 ಕೋಟಿ ರೂ. ಹಣ ವೆಚ್ಚ ಮಾಡುತ್ತಿದೆ. 1999ರಲ್ಲಿ ರಚಿಸಲಾಗಿರುವ `ಬೆಂಗಳೂರು ಟಾಸ್ಕ್‌ ಫೋರ್ಸ್‌’ ಕಸ ವಿಲೆವಾರಿಗೆ ಅವಿರತವಾಗಿ ಪ್ರಯತ್ನಿಸುತ್ತಿದೆ. ಇಡೀ ದೇಶದ ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಕಸ ವಿಲೇವಾರಿ ಕ್ರಮದಲ್ಲಿ ಬೆಂಗಳೂರು ನಗರ ಉತ್ತಮ ಸ್ಥಾನದಲ್ಲಿದೆ ಆದರೂ ಕಸದ ಕಿರಿಕಿರಿ ಇದ್ದೇ ಇದೆ.
ಈ ಪರಿ ತ್ಯಾಜ್ಯವನ್ನು ಬಿಸಾಡುವುದಾದರೂ ಎಲ್ಲಿಗೆ? ಬೇರೆ ರಾಜ್ಯಗಳ ಕಡೆಗೂ ಕಳಿಸುವ ಹಾಗಿಲ್ಲ. ಅದೊಂದು ದೊಡ್ಡ ಕಾನೂನಿನ ಸಮಸ್ಯೆ. ಕಸದ ಪರ್ಯಾಯ ಬಳಕೆಗೆ ಒಂದು ಮೂಲ ಬೇಕೇ ಬೇಕಿತ್ತು. ಅದರ ಹುಡುಕಾಟದಲ್ಲಿ ದೊರೆತ ಒ0ದು ವ್ಯವಸ್ಥೆಯೇ `ತ್ಯಾಜ್ಯದಿಂದ ವಿದ್ಯುತ್‌’ ಘಟಕ ನಿರ್ಮಾಣ ಯೋಜನೆ.
ಪೌರಕಾರ್ಮಿಕರು ಪ್ರತಿ ಮನೆಯ ಮನೆ ಬಾಗಿಲಿಗೂ ಬಂದು ಕಸ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕಸದ ಆರೋಗ್ಯಗರ ಬಳಕೆಗೆ ಚಿಂತನೆ ನಡೆದಿದೆ. ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಕ್ರಮ ಇತರೆ ವಿದ್ಯುತ್‌ ತಯಾರಿಕಾ ಮಾದರಿಯಲ್ಲಿಯೇ ಇರುತ್ತದೆ. ಉದ್ದೇಶಿಸಲಾಗಿರುವ ಈ ಯೋಜನೆಯಿಂದ ಎಂಟರಿಂದ ಹತ್ತು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ವಿದ್ಯುತ್‌ ಘಟಕವು ರಾಜ್ಯಲ್ಲೇ ಅತಿದೊಡ್ಡ ವಿದ್ಯುತ್‌ ತಯಾರಿಕಾ ಘಟಕವಾಗಲಿದೆ. ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಬಿಬಿಎಂಪಿ ಈ ಘಟನ ನಿರ್ಮಾಣ ಕಾಮಗಾರಿ ಆರಂಭಿಸಲಿದೆ. ಪೂರೈಸಬೇಕಾಗಿರುವ ಕಾನೂನು ಅವಶ್ಯಕತೆಗಳನ್ನು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮ(ಕೆಆರ್‌ಇಡಿಸಿ) ನಿರ್ವಹಿಸಲಿದೆ.
ಖರ್ಚುವೆಚ್ಚ: ಉದ್ದೇಶಿತ ತ್ಯಾಜ್ಯದಿಂದ ವಿದ್ಯುತ್‌ ಘಟಕ ನಿರ್ಮಾಣಕ್ಕೆ 65 ಕೋಟಿ ರೂ. ಹಣ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡರಿಂದ ಮೂರು ವರ್ಷಗಳಲ್ಲಿ ಘಟಕ ನಿರ್ಮಾಣ ಪೂರ್ಣಗೊಳ್ಳಲಿದೆ. ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯವು 10 ಕೋಟಿ ರೂ ಸಬ್ಸಿಡಿ ನೀಡಲು ಒಪ್ಪಿದೆ.
ಸೈಡ್‌ ಎಫೆಕ್ಟ್‌: ಏನೇ ಕೆಲಸ ಮಾಡಿದರೂ ಅದರಿಂದ ಅವಗುಣಗಳು ಇದ್ದೇ ಇರುತ್ತವೆ. ತ್ಯಾಜ್ಯದಿಂದ ವಿದ್ಯುತ್‌ ಯೋಜನೆ ಜಾರಿಯಿಂದ ಉದ್ಭವವಾಗಿರುವ ಸೈಡ್‌ ಎಫೆಕ್ಟ್‌ ಅಂದರೆ ಪರಿಸರ ನಾಶ ಸಮಸ್ಯೆ. ತ್ಯಾಜ್ಯವನ್ನು ಉರುವಲಾಗಿ ಬಳಸಿದಾಗ ಅದರ ಶಾಖ ಇಂಧನ ಮೂಲವಾಗುತ್ತದೆ. ತ್ಯಾಜ್ಯವನ್ನು ಸುಡುವಾಗ ಹೊರಹೊಮ್ಮುವ ಹೊಗೆ ಗಾಳಿಯನ್ನು ಮಲಿನಗೊಳಿಸಿದೆ. ಆದ್ದರಿಂದ ಈ ಯೋಜನೆಯ ಮೇಲೆ ಪರಿಸರ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಯೋಜನೆಯ ಮೇಲೆ ವೆಚ್ಚ ಮಾಡಲಾಗುತ್ತಿರುವ ಹಣವನ್ನೇ ತ್ಯಾಜ್ಯ ನಿರ್ವಹಣೆಗೆ ಬಳಸಿದರೆ ಪರಿಸರ ನಾಶ ತಡೆಯಬಹುದು ಎಂಬುದು ಅವರ ವಾದವಾಗಿದೆ.
ಮುಖ್ಯವಾಗಿ ವಾಯುಮಾಲಿನ್ಯ ಘಟಕ ನಿರ್ಮಾಣದಿಂದ ಸುತ್ತಮುತ್ತಲಿನ ಪರಿಸರ ಹಾಳಾಗಲಿದ್ದು ಹೊರ ಹೊಮ್ಮುವ ಹೊಗೆ ಸೇವಿಸುವ ಜನರಿಗೆ ವಿವಿಧ ರೋಗಗಳು ಹರಡುವ ಭೀತಿ ಇದೆ.
ಏನೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಾಗಲೂ ಈ ಪರಿಸರ ಸಮಸ್ಯೆ ಎದುರಾಗುತ್ತದೆ. ಸಹಜವಾಗಿಯೇ ತ್ಯಾಜ್ಯದಿಂದ ವಿದ್ಯುತ್‌ ಘಟಕ ನಿರ್ಮಾಣ ಯೋಜನೆಯಲ್ಲೂ ಪರಿಸರ ನಾಶ ಸಮಸ್ಯೆ ಎದುರಾಗಿದೆ. ಈ ಘಟಕ ನಿರ್ಮಾಣ ಮಾಡುವುದರಿಂದ ಎರಡು ಲಾಭಗಳಿವೆ. ಒಂದು: ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ. ಎರಡು: ವಿದ್ಯುತ್‌ ಉತ್ಪಾದನೆ. ಆದ್ದರಿಂದ ಈ ಯೋಜನೆ ಜಾರಿಯಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಘಟಕದ ಚಿಮಣಿಯನ್ನು ಎತ್ತರಕ್ಕೆ ನಿರ್ಮಾಣ ಮಾಡುವುದರಿಂದ ಪರಿಸರ ನಾಶ ಸಮಸ್ಯೆಗೆ ತಡೆಗೋಡೆ ಹಾಕಬಹುದು. ಈಗ ಮೊದಲು ಮಾಡಬೇಕಾದ ಕೆಲಸವೆಂದರೆ ಪರಿಸರ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಚಾಲನೆ ನೀಡುವುದು




30,000 ಮರಗಳಿಗೆ ಗಂಡಾಂತರ!?





ಬೆಂಗಳೂರು ಬರಿದಾಗಲಿದೆ..!
ಉದ್ಯಾನ ನಗರ ನಮ್ಮೂರು ಎಂದು ಹೇಳಿಕೊಳ್ಳುವ ಕಾಲ ಮುಗಿಯುತ್ತಾ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ 30 ಸಾವಿರ ಮರಗಳು ನೆಲಕ್ಕುರುಳಲಿವೆ. ನಗರದ 120 ರಸ್ತೆಗಳ ಅಗಲೀಕರಣಕ್ಕೆ ಬಿಬಿಎಂಪಿ ಚಾಲನೆ ನೀಡಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಮರ ಕಡಿಯುವ ಕಾರ್ಯಾಚರಣೆಯನ್ನು ಪ್ಯಾಲೆಸ್‌ ರಸ್ತೆಯಿಂದ ಆರಂಭಿಸಿದೆ. ಶೇಷಾದ್ರಿ, ಅವೆನ್ಯೂ, ಕೆಆರ್‌, ರಿಚ್ಮಂಡ್‌ ಮುಂತಾದ ರಸ್ತೆಗಳು ಈ ಪಟ್ಟಿಯಲ್ಲಿ ಸೇರಿವೆ.
ಅಮಾಯಕ ಮರಗಳು ಅನ್ಯಾಯವಾಗಿ ಬಿಬಿಎಂಪಿ ಬಾಯಿಗೆ ಬಲಿಯಾಗಲಿವೆ.
ಇದು ನಿಜವೇ!?
30 ಸಾವಿರ ಮರ ಕಡಿಯುವುದು ಅಂದರೆ ಹುಡುಗಾಟವೇ?
ಯಾರನ್ನು ಕೇಳಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ?
ಸರ್ಕಾರ ಏನು ಕಡ್ಲೆಕಾಳು ತಿನ್ನುತ್ತಿದಿಯೇ?
ಈ ಪ್ರಶ್ನೆ ಬರಲೇಬೇಕು!
ಇದು ಎಷ್ಟು ನಿಜ, ಎಷ್ಟು ಸುಳ್ಳು ಅಂತಾ ಗೊತ್ತಿಲ್ಲ. ಆದರೆ `ಹಸಿರು ಉಸಿರು’ ಎನ್ನುವ ಸಂಸ್ಥೆಯೊಂದು ಇದು ನಿಜ! ಎನ್ನುತ್ತಿದೆ. ಈ ಮೇಲಿನ ಎಲ್ಲಾ ಅಂಕಿ-ಅಂಶಗಳ ವರದಿಯನ್ನು ಬಿಡುಗಡೆ ಮಾಡಿರುವುದೂ ಕೂಡ ಈ ಸಂಸ್ಥೆಯೇ. ಈ ಸಂಸ್ಥೆಯ ಅಧ್ಯಯನದ ಪ್ರಕಾರ ನಾಗರಿಕರು ಬಿಬಿಎಂಪಿ ಕ್ರಮದ ವಿರುದ್ಧ ಬಂಡೇಳದಿದ್ದರೆ ಇನ್ನು ಕೇವಲ ನಾಲ್ಕೈದು ತಿಂಗಳೊಳಗೆ ಅಷ್ಟೂ ಮರಗಳು ನೆಲಕ್ಕುರಳಲಿವೆಯಂತೆ. ಇದರಿಂದ ಮರ ಮಾತ್ರ ಬೀಳುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ವಾಸಿಸುತ್ತಿರುವ ಕುಟುಂಬಗಳೂ ಕೂಡ ಬೀದಿಗೆ ಬೀಳಲಿವೆ.
ಇನ್ನೂ ಒಂದು ಹೆಜ್ಚೆ ಮುಂದೆ ಸಾಗಿರುವ ಹಸಿರು ಉಸಿರು ರಾಜ್ಯ ಹೈ ಕೊರ್ಟ್‌ ಬಾಗಿಲು ಬಡಿದಿದೆ. ಮರ ಕಡಿದು ರಸ್ತೆ ಅಗಲೀಕರಣ ಮಾಡುವುದನ್ನು ಸ್ಥಗಿತಗೊಳಿಸುವಂತೆ ರಿಟ್‌ಅರ್ಜಿ ಸಲ್ಲಿಸಿದೆ.
ಇದ್ದಕ್ಕಿದ್ದಂತೆ ಇತ್ತೀಚೆಗೆ (ಜೂ.25) ಬಿಬಿಎಂಪಿ ಪ್ಯಾಲೇಸ್‌ ರಸ್ತೆ ಅಗಲೀಕರಣ ಪ್ರಕ್ರಿಯೆಯನ್ನು ಆರಂಭಿಸಿಯೇ ಬಿಟ್ಟಿತು. ಹಸಿರು ಉಸಿರು ಕಾರ್ಯಕರ್ತರ ಕಣ್ಣು ಕೆಂಪೇರಿತು. ಪ್ರತಿಭಟನೆ ಆರಂಭವಾಯಿತು.
ಪ್ರಕರಣ ಕೋರ್ಟ್‌ನಲ್ಲಿದೆ, ಯಾವ ಆಧಾರದ ಮೇಲೆ ಬಿಬಿಎಂಪಿ ಆಯುಕ್ತರು ಯೋಜನೆಗೆ ಚಾಲನೆ ನೀಡಿದರು ಎಂಬುದು ಅವರ ಆರೋಪ. ಆಯುಕ್ತರಿಗೆ ಕಾನೂನು ಗೊತ್ತಿಲ್ಲವೇ? ಡೌನ್‌ ಡೌನ್‌ ಸುಬ್ರಮಣ್ಯ ಅಂದರು. ಅವರ ಇನ್ನೊಂದು ಆರೋಪ ಏನು ಅಂದರೆ `ನಾವು ಪರಿಸರ ಪ್ರೇಮಿಗಳು ಮಹಾರಾಣಿ ಕಾಲೇಜಿನಿಂದ ಬಿಸಿಲಿನಲ್ಲಿ ಪ್ರತಿಭಟಿಸುತ್ತಾ ಬಿಬಿಎಂಪಿ ಕಚೇರಿಗೆ ಬಂದರೆ ಆಯುಕ್ತ ಸುಬ್ರಮಣ್ಯ ನಮ್ಮ ಮನವಿಯನ್ನು ಆಲಿಸುವುದಿರಲಿ ನಮ್ಮ ಬಳಿಗೆ ಬರುವ ಸೌಜನ್ಯ ತೋರಬಾರದೇ? ಸಭೆಯಿಂದ ಎದ್ದು ಹೋಗುವುದೇ?’ ಎಂಬುದು. ಸುಬ್ರಮಣ್ಯ ಕ್ಷಮೆಯಾಚಿಸಬೇಕು ಎಂಬುದು ಕೂಡ ಅವರ ಒತ್ತಾಯ.
ಹೀಗೆ ಮಾಡಿದ್ದು ಸರಿಯೇ ಆಯುಕ್ತರೇ ಎಂದು ಬಿಬಿಎಂಪಿ ಆಯುಕ್ತ ಸುಬ್ರಮಣ್ಯ ಅವರನ್ನು ಕೇಳಿದಾಗ….`ಅವರು ಯಾರು ಅಂತ ನನಗೆ ಗೊತ್ತೇ ಇಲ್ಲ. ಬಾಯಿಗೆ ಬಂದತೆ ಏನೇನೋ ಮಾತನಾಡುತ್ತಿದ್ದರು. ಅವರಿಗೆ ಹೇಗೆ ಬಿಹೇವ್‌ ಮಾಡಬೇಕು ಅನ್ನೋದೇ ಗೊತ್ತಿಲ್ಲ. ಕಚೇರಿಗೆ ನುಗ್ಗಲು ಯತ್ನಿಸುತ್ತಿದ್ದರು. ನಾನು ಸಾರಾಸಗಟಾಗಿ ತಿರಸ್ಕರಿಸಿ ಎದ್ದುಹೋದೆ.’ ಎಂದರು.
ಎರಡು ಲಕ್ಷ ಗಿಡ ನೆಡ್ತೀವಿ: ಹಸಿರು ಉಸಿರು ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಬಗ್ಗೆ ಕೇಳಿದಾಗ ಆಯುಕ್ತರು ಹೇಳಿದ್ದಿಷ್ಟು: `ಅವರ ವರದಿಯ ಪ್ರಕಾರ ನಗರದ 120 ರಸ್ತೆ ಅಗಲೀಕರಣಕ್ಕೆ 1, 500 ಕೋಟಿ ಹಣ ಬೇಕು. ಅಷ್ಟೊಂದು ಹಣ ಸರ್ಕಾರದ ಬೊಕ್ಕಸದಲ್ಲಿ ಎಲ್ಲಿದೆ? ರಸ್ತೆ ಅಗಲೀಕರಣ ಪ್ರಕ್ರಿಯೆ ಎಲ್ಲಾ ಕಾಲದಲ್ಲಿ ನಡೆಯುತ್ತದೆ. ನಗರ ಬೆಳೆದಂತೆ ರಸ್ತೆಯೂ ಬೆಳೆಯಬೇಕು. ರಸ್ತೆ ಅಗಲ ಮಾಡಲು ಮರ ಕಡಿಬೇಕು ನಿಜ. ಆದರೆ ಆ ಜಾಗದಲ್ಲಿ ಗಿಡ ಹಾಕ್ತೀವಿ. ಅಗಲೀಕರಣ ಯೋಜನೆ ರೂಪಿಸಿರುವುದು ನಿಜ. ಪರಿಸರವಾದಿಗಳೂ ಸೇರಿದಂತೆ ಎಲ್ಲರ ಒಪ್ಪಿಗೆ ಮೇರೆಗೆ ಯೋಜನೆಯನ್ನು ಅಂಗೀಕರಿಸಲಾಗಿದೆ. ಹೆಚ್ಚೆಂದರೆ 800 ಮರ ಕಡಿಯಬೇಕಾಗುತ್ತದೆ. ಅದರಂತೆ 2 ಲಕ್ಷ ಗಿಡ ನೆಡುವ ಕಾರ್ಯ ಯೋಜನೆಯ ಅಂಗವಾಗಿದೆ.’ ಎಂದರು.
ಹಸಿರು ಉಸಿರು ಸಲ್ಲಿಸಿರುವ ರಿಟ್‌ಅರ್ಜಿ ಬಗ್ಗೆ ಕೇಳಿದಾಗ ಆಯುಕ್ತರು ಹೇಳಿದ್ದು ಬೇರೆನೆ! `ಹೋಗಿಲಿ ಬಿಡ್ರಿ. ಕೋರ್ಟ್‌ ಯೋಜನೆಯನ್ನು ನಿಲ್ಲಿಸಿ ಅಂದ್ರೆ. ನಿಲ್ಲಿಸ್ತೀವಿ. ಅವರುಂಟು, ಕೋರ್ಟುಂಟು, ಸರ್ಕಾರವುಂಟು. ನಮಗೇನು’ ಎಂದು ಪ್ರಶ್ನಿಸಿದರು.
ಇಲ್ಲಿ ಎರಡೂ ಪಕ್ಷ(ಆಯುಕ್ತರು ವಿರುದ್ಧ ಹಸಿರು ಉಸಿರು)ಗಳನ್ನು ಗಮನಿಸಿದಾಗ ಪರಿಸರವಾದಿಗಳ ವರ್ತನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆ ಸ್ಪಷ್ಟವಾಗುತ್ತದೆ. ಯಾವುದೇ ಒಂದು ಸಂಸ್ಥೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದಾಗ ಅಧಿಕಾರಿಯಾದವನು ಅದಕ್ಕೆ ಸೋಗು ಹಾಕದೆ ಲಕ್ಷ್ಯ ಕೊಡಬೇಕು. ಅಷ್ಟಕ್ಕೂ ಆ ವರದಿ ಒಂದು ಅಂದಾಜು. ಅದೇ ಅಂತಿಮವಲ್ಲ.
ಸದ್ಯಕ್ಕೆ ರಸ್ತೆ ಅಗಲೀಕರಣ ಪ್ರಕರಣ ಕೋರ್ಟ್‌ನಲ್ಲಿದೆ. ಆದೇಶ ಬರುವ ತನಕ ಕಾಯಲೇಬೇಕು. ನ್ಯಾಯಾಲಯ ಯೋಜನೆಗೆ ಹಸಿರು ನಿಶಾನೆ ತೋರಿದರೆ ಬೆಂಗಳೂರು ತನ್ನ ಹಸಿರು ಸೌಂದರ್ಯ ಕಳೆದುಕೊಳ್ಳುವುಂತೂ ನಿಜ.



ನಾವು ನೀರಿನ ಅಜ್ಞಾನಿಗಳು!


ನೀರಿನ ಅಜ್ಞಾನ ಕಾಡುತ್ತಿದೆ…..!
ಮಳೆ ಬಂದು ನಿಂತಾಗ ಬೆಂಗಳೂರನ್ನು ಒಮ್ಮೆ ಗಮನಿಸಿ. ನಗರದ ಎಲ್ಲಾ ಮೋರಿಗಳು ಮಳೆ ನಿಂತ ಅರ್ಧ ಗಂಟೆ ಕಾಲ ಧೋ ಎಂದು ತುಂಬಿ ಹರಿಯುತ್ತವೆ. ರಸ್ತೆಗಳೂ ಮೋರಿಗಳಾಗುತ್ತವೆ. ಮನೆಗಳಿಗೆ ನೀರು ನುಗ್ಗುತ್ತದೆ. ಗೊತ್ತುಗುರಿ ಇಲ್ಲದೆ ಹರಿದು ಹಳ್ಳಸೇರುತ್ತದೆ. ಸಿಂಪ್ಲಿ ವೇಸ್ಟ್‌ ಆಫ್‌ ವಾಟರ್‌!
ಇದು ನೀರಿನ ಅಜ್ಞಾನ (ವಾಟರ್‌ ಇಲ್ಲಿಟೆರೆಸಿ) ಅಲ್ಲದೆ ಮತ್ತಿನ್ನೇನು? ನೀರಿನ ಮಹತ್ವ ಅರಿತ್ತಿದ್ದರೆ ಜೀವಜಲ ಈ ಪರಿ ವ್ಯರ್ಥವಾಗುತ್ತಿತ್ತೆ? ಮನೆ ಮೇಲೆ ಮನೆ ಕಟ್ಟುತ್ತಾರೆ. ಇಷ್ಟಗಲ `ಮಳೆ ನೀರು ಸಂಗ್ರಾಹಕ’ ಕಟ್ಟಿಸಿಕೊಳ್ಳಲು ಮುಖ ನೋಡುತ್ತಾರೆ. ಇದು ನಿಜಕ್ಕೂ ಅಜ್ಞಾನವೇ ಸರಿ.
ನಾಗಾಲೋಟದ ಚಲನೆಯಲ್ಲಿರುವ ಬೆಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಲು ಮುಖ್ಯವಾದುದು. ಇಲ್ಲಿ ಪ್ರತಿನಿತ್ಯ 64 ಮಿಲಿಯನ್‌ ಲೀಟರ್‌ ಶುದ್ಧ ನೀರನ್ನು ಕಾರ್‌ ತೊಳೆದು, ತಮ್ಮ ಮನೆಯ ನಾಯಿತೊಳೆದು ವ್ಯರ್ಥಮಾಡಲಾತ್ತಿದೆ. ನೀರಿನ ಬೇಕಾಬಿಟ್ಟಿ ಬಳೆಕೆಯಿಂದಾಗಿ ನರಗದ ನೀರಿನ ಬೇಡಿಕೆ ಪೂರೈಕೆಯಾಗುತ್ತಿಲ್ಲ. ಅರ್ಕಾವತಿ ನದಿ ನೀರು ಬರುತ್ತೆ. ಕಾವೇರಿ ನೀರು ಬರುತ್ತೆ. ಯಾವ ನೀರು ಬಂದರೂ ಅಷ್ಟೆ. ಕೊಡ ನೀರಿಗೆ ರೂಪಾಯಿ ಕೊಟ್ಟು ಕೊಳ್ಳುವ ಸ್ಥಿತಿ ಸಾಗುತ್ತಲೇ ಇದೆ!
ಮಂಡಳಿ ಏನು ಮಾಡುತ್ತಿದೆ: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮಳೆ ನೀರು ಸಂಗ್ರಹಣೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಬರೀ ಅದರ ಮಹತ್ವದ ಬಗ್ಗೆ ಮಾತನಾಡುತ್ತದೆಯೋ ಹೊರತು ಅದರ ಕಾರ್ಯರೂಪದ ಬಗ್ಗೆ ಮಾತಿಲ್ಲ.
ಹೊಸ ಕಟ್ಟಡಗಳಿಗೆ `ಮಳೆನೀರು ಸಂಗ್ರಾಹಕ’ ನಿರ್ಮಾಣ ಕಡ್ಡಾಯವಾದರೆ ಸಮಸ್ಯೆಗೆ ಬಹುತೇಕ ಪರಿಹಾರ ಕಂಡುಕೊಳ್ಳಬಹುದು. ಬಹಳ ವರ್ಷಗಳಿಂದ ಇದನ್ನು ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಬಗ್ಗೆ ಮಾತುಕತೆ ನಡೆಯುತ್ತಲೇ ಇದೆ. ಆದರೆ ಮಂಡಳಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ನಗರದ ಶೇ. 90ರಷ್ಟು ಕಟ್ಟಡ ಮಾಲೀಕರಿಗೆ ಮಳೆನೀರು ಸಂಗ್ರಹಣೆಯ ಅರಿವಿಲ್ಲ. ಸರ್ಕಾರದ ಈ ಯೋಜನೆ ಮಂಡಳಿಯಿಂದ ಕಡೆಗಣಿಸ್ಪಟ್ಟಿದೆ.
ಕೈಗಾರಿಕೆಗಳ ನಿರ್ಲಕ್ಷ್ಯ: ನಗರದ ಹೊರ ವಲಯವನ್ನು ಸುತ್ತುವರಿದಿರುವ ಕೈಗಾರಿಕೆಗಳು ನೀರನ್ನು ಅಳತೆ ಇಲ್ಲದೆ ಫೋಲು ಮಾಡುತ್ತಿವೆ. ಅವರಿಗೆ ನೀರು ಬೇಕಷ್ಟೆ. ಬೇಕಾದ ನೀರನ್ನು ಸಂಗ್ರಹಿಸಿಕೊಳ್ಳುವ ವ್ಯವಧಾನ ಇಲ್ಲವಾಗಿದೆ. ಮಳೆನೀರು ಸಂಗ್ರಾಹಕ ನಿರ್ಮಿಸಿಕೊಳ್ಳಲು ಹಿಂದುಮುಂದು ನೋಡುವ ಉದ್ಯಮಿಗಳು ಸರ್ಕಾರದ ಮುಂದೆ ನೀರಿಗಾಗಿ ಕೈಚಾಚಿ ನಿಂತಿದ್ದಾರೆ. ನದಿ ನೀರು ನೇರವಾಗಿ ಅವರ ಪ್ಯಾಕ್ಟರಿಯೊಳಗೆ ಬಂದು ಬಿಡಬೇಕು!
ಸಬ್ಸಿಡಿ ಇದೆ: ಮಳೆನೀರು ಸಂಗ್ರಾಹಕ ನಿರ್ಮಿಸಲು ಮುಂದಾದವರಿಗೆ ನೀರು ಸರಬರಾಜು ಮಂಡಳಿ ತೆರಿಗೆ ಸಬ್ಸಿಡಿ ನೀಡುತ್ತದೆ. ಸಾಲ ಸೌಲಭ್ಯವೂ ಸಿಗುತ್ತದೆ. ಒಮ್ಮೆ ನಿರ್ಮಾಣವಾದ ನಂತರ ಅದರ ಕಾರ್ಯಾಚರಣೆಯ ಬಗ್ಗೆ ಹೆಲ್ಪ್‌ಲೈನ್‌ ವ್ಯವಸ್ಥೆಯೂ ಇದೆ. ನಾಲ್ಕು ರೀತಿಯ ಸಂಗ್ರಹಕ ಮಾದರಿಗಳಿವೆ. ವಾಸದ ಮನೆಗಳಿಗೆ, ಕೈಗಾರಿಕೆಗಳಿಗೆ, ಇನ್ನಿತರ ಕಟ್ಟಡಗಳಿಗೆ ಬೇರೆ ಬೇರೆ ರೀತಿಯ ಸಂಗ್ರಹಕಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಳೆನೀರನ್ನು ಅಮೂಲ್ಯವೆಂದು ಪರಿಗಣಿಸಿದೆ. ಮಳೆ ನೀರು ಸಂಗ್ರಹಕ ನಿರ್ಮಾಣ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ರಾಜ್ಯ ಮಂಡಳಿಗಳಿಗೆ ಸೂಚಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ನೀರಿನ ಬೇಡಿಕೆ ಪೂರೈಸಲು ಈ ಯೋಜನೆ ಅತ್ಯಾವಶ್ಯ ಎಂದು ಹೇಳಿದೆ.
ಬದಲಾಗುತ್ತಿರುವ ವೈಪರಿತ್ಯ ಪರಿಸರದೊಳಗೆ ಮಳೆರಾಯ ಬರುವುದೇ ಅಪರೂಪವಾಗಿರುವ ಇಂದಿನ ದಿನಗಳಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ನೀರು ನಿರ್ವಹಣೆ ಬೆಂಗಳೂರು ನಗರಕ್ಕೆ ಒಂದು ದೊಡ್ಡ ಚಾಲೆಂಜ್‌. ಮಳೆನೀರಿನ ಅಮೂಲ್ಯತೆಯ ಅರಿವು ಮೊದಲು ಮೂಡಬೇಕು. ರಸ್ತೆಯಲ್ಲಿ ಹರಿಯುವ ಮಳೆನೀರಿನೋಳಗೆ ಮಕ್ಕಳಾಟ ನೋಡಿದ್ದೇವೆ. ಪ್ರವಾಹ ಬಂದು ಮನೆಗಳು ಕೊಚ್ಚಿ ಹೋಗುವುದನ್ನು ನೋಡಿದ್ದೇವೆ. ಇಷ್ಟೊಂದು ನೀರು ಮಳೆ ಇಲ್ಲದೆ ಬರಲಾರದು. ಬಂದಾಗ ಬಿಡದೆ ಹಿಡಿಯಬೇಕು. ಬಿಟ್ಟರೆ ನಿಜಕ್ಕೂ ಗ್ರೇಟ್‌ ಲಾಸ್‌!



ಬೆಂಗ­ಳೂ­ರಿ­ನಲ್ಲಿ ರವಿ ಮರೆ­ಯಾ­ದಾಗ….!



ಮೊನ್ನೆರಾಜ­ರಾ­ಜೇ­ಶ್ವರಿ ನಗ­ರ­ದಲ್ಲಿ ಸರಿ­ಸು­ಮಾರು 5 ಗಂಟೆ ಕಾಲ ಕರೆಂಟ್‌ ಇರ­ಲಿಲ್ಲ. ಬೆಳಿಗ್ಗೆ 7 ಗಂಟೆಗೆ ಕರೆಂಟ್‌ ಮಾಯ­ವಾ­ಯಿತು. ಆಗ­ತಾನೆ ಹಾಸಿ­ಗೆ­ಯಿಂದ ಮೇಲೆದ್ದ ಮಂದಿ ಬೆಸ್ಕಾಂ ಅಧಿ­ಕಾ­ರಿ­ಗ­ಳಿಗೆ ಹಿಡಿ­ಶಾಪ ಹಾಕಿ­ದರು.
ಬೆಸ್ಕಾಂ ಕಚೇ­ರಿ­ಯಲ್ಲಿ ಟೆಲಿ­ಫೋ­ನ್‌­ಗಳು ರಿಂಗ­ಣಿ­ಸಿ­ದವು. ಜನರ ಮೇಲೆ ಬೆಸ್ಕಾಂ ಅಧಿ­ಕಾ­ರಿ­ಗಳ ಅವಾಜ್‌…..
`ಏನ್ರೀ! ಪೇಪರ್‌ ನೋಡ­ಲ್ವೆನ್ರೀ. ಯಾವ ಯಾವ ಏರಿ­ಯಾ­ಗ­ಳಲ್ಲಿ ಲೋಡ್‌ ಶೆಡ್ಡಿಂಗ್‌ ಇದೆ ಅಂತ ಎಲ್ಲಾ ರಿಪೋರ್ಟ್‌ ಬಂದಿದೆ. ಮಾತೆ­ತ್ತಿ­ದರೆ ಇಲ್ಲಿಗೆ ಫೋನ್‌ ಮಾಡ್ತೀರಾ. ಕರೆಂಟ್‌ ಏನು ನಮ್ಮ­ಪ್ಪನ ಮನೆ ಆಸ್ತೀನಾ.’ ಫೋನ್‌ ಕುಕ್ಕಿದ ಆತ.
ಇದೊಂದು ಥರಾ ಫುಡ್‌­ಚೈನ್‌ ಇದ್ದ­ಹಾಗೆ. ಒಂದ­ರಿಂದ ಇನ್ನೊಂ­ದಕ್ಕೆ ನಂಟು. ಕರೆಂಟ್‌ ಇಲ್ಲ ಅಂದ್ರೆ ನೀರು ಬರಲ್ಲ. ನೀರಿಲ್ಲ ಅಂದ್ರೆ ಸ್ನಾನ ಇಲ್ಲ. ಸ್ನಾನ ಇಲ್ಲದೆ ಆಫೀ­ಸ್‌ಗೆ ಹೋಗೋ ಹಾಗಿಲ್ಲ. ಕೆಲ­ವರು ಸೆಂಟ್‌ ಹೊಡ­ಕೊಂಡು ಹೋಗ್ತಾರೆ ಬಿಡಿ! ಬೆಳಗೆ ಎದ್ದು ಬಟ್ಟೆ ಎಲ್ಲಾ ಒಗಿ­ಯೋಣ ಎಂದು ಮಲ­ಗಿದ ನಾರಿ­ಮ­ಣಿ­ಯ­ರಿಗೆ ದಿನ­ಪೂರ್ತಿ ಮೂಡ್‌ ಆಫ್‌. ಛಾರ್ಜ್‌ ಮಾಡ­ದ­ವರ ಸೆಲ್‌­ಫೋನ್‌ ಸ್ವಿಚ್ಡ್‌ ಆಫ್‌. ಹಾಲು ಹಣ್ಣು ತಣ್ಣಗೆ ಮಾಡುವ ರೆಫ್ರೀ­ಜ­ರೇ­ಟರ್‌ ಬೆಚ್ಚಗೆ ಕೂತಿದೆ.
ಅಂಗೂ ಹಿಂಗೂ ನ್ಸೂಸ್‌ ಪೇಪರ್‌ ತಿರುವಿ ಹಾಕಿ­ದ­ವರು ಸಮ­ಸ್ಯೆ­ಯಿಂದ ಸೇಫ್‌. ಯಾಕೆಂ­ದರೆ ನಾಳೆ ಕರೆಂಟ್‌ ಇರಲ್ಲ ಅಂತ, ಇರುವ ನೀರನ್ನು ಹಿತ ಮಿತ­ವಾಗಿ ಬಳ­ಸಿ­ಕೊ­ಳ್ಳ­ಬ­ಹುದು. ರೆಫ್ರಿ­ಜ­ರೇ­ಟ­ರ್‌ಗೆ ರಾತ್ರಿ­ಇಡೀ ಚಾರ್ಜ್‌ ಮಾಡಿ­ಕೊ­ಳ್ಳ­ಬ­ಹುದು. ಈ ರೀತಿಯ ಬೇರೆ ಕ್ರಮ ಕೈಗೊ­ಳ್ಳ­ಬ­ಹುದು. ಒಟ್ಟಾರೆ ಕರೆಂಟ್‌ ಇಲ್ಲದೆ ಹೇಗೆ ಜೀವನ ಮಾಡ­ಬ­ಹುದು ಅಂತ ಪ್ಲಾನ್‌ ಮಾಡ­ಬ­ಹುದು.
ಬೆಸ್ಕಾಂ ಅಧಿ­ಕಾ­ರಿ­ಗಳು ಏನಂ­ತಾರೆ?: ಬೆಂಗ­ಳೂರು ವಿದ್ಯುತ್‌ ಸೇವೆ ನಿಗಮ(ಬೆಸ್ಕಾಂ) ಉತ್ತರ ವಿಭಾ­ಗದ ಎಕ್ಸಿ­ಕ್ವೀ­ಟೀವ್‌ ಎಂಜಿ­ನಿ­ಯರ್‌ ಒಬ್ಬರು ಹೇಳೋ ಪ್ರಕಾರ ಬೆಂಗ­ಳೂ­ರಲ್ಲಿ ಲೋಡ್‌ ಶೆಡ್ಡಿಂಗೇ ಇಲ್ಲ­ವಂತೆ. ಆದ್ರೆ ದಿನಾ ಪೂರ್ತಿ ಕರೆಂಟ್‌ ತಗಿ­ತಾ­ರಂತೆ! ಕಾರ­ಣ­ವಿಷ್ಟೆ: ಏನಾ­ದರೂ ಟೆಕ್ನಿ­ಕಲ್‌ ಕಾರಣ ಇದ್ದಾಗ, ಅಂದರೆ ಕಂಬ ಬಿದ್ದು ಹೋದಾಗ, ಲೈನ್‌ ತೊಂದರೆ ಇದ್ದಾಗ, ಶಾರ್ಟ್‌ ಶರ್ಕಿಟ್‌ ಆದಾಗ, ಲೈನ್‌ ವಿಸ್ತ­ರಣೆ ಮಾಡು­ವಾಗ ಲೈನ್‌ ತಗಿ­ಯಲೇ ಬೇಕು. ಇದನ್ನು ಇಲಾಖೆ ಲೋಡ್‌ ಶೆಡ್ಡಿಂಗ್‌ ಅನ್ನೊ­ದಿಲ್ಲ. ತಾಂತ್ರಿಕ ಕಾರ­ಣದ ಫವರ್‌ ಕಟ್‌ ಅಂತಾರೆ. ಇದಕ್ಕೆ ಸಾರ್ವ­ಜ­ನಿ­ಕರ ಸಹ­ಕಾರ ಬೇಕು ಅಂತಾರೆ ಅವರು.
ತೊಂದರೆ ಮುಕ್ತ ಅಪಾರ್ಟ್‌ ಮೆಂಟ್‌: ವಿದ್ಯುತ್‌ ಇಲಾಖೆ ಅಪಾ­ರ್ಟ್‌­ಮೆಂ­ಟ್‌­ಗ­ಳನ್ನು ಬಹು­ಮ­ಹಡಿ ಕಟ್ಟ­ಡ­ಗಳು ಎಂದು ಕರೆ­ಯು­ತ್ತದೆ. ಸಾಮಾನ್ಯ ಕಟ್ಟ­ಡ­ಗ­ಳಿಗೂ ಇವಕ್ಕೂ ಬಹಳ ವ್ಯತ್ಯಾ­ಸ­ವಿದೆ. ಇದ­ರಲ್ಲಿ 500 ಸ್ಕ್ವೇರ್‌ ಮೀಟ­ರ್‌­ಗಿಂತ ಹೆಚ್ಚು ವಿಸ್ತೀರ್ಣ, 25 ಕಿಲೋ ವ್ಯಾಟ್ಸ್‌­ತಿಂತ ಹೆಚ್ಚು ವಿದ್ಯುತ್‌ ಬಳ­ಸುವ ಕಟ್ಟ­ಡ­ಗಳು ಸೇರು­ತ್ತವೆ. ಅದು ಅಪಾ­ರ್ಟ್‌­ಮೆಂಟ್‌ ಆಗಿ­ರ­ಬ­ಹುದು ಅಥವಾ ಯಾವುದೇ ಕಟ್ಟಡ ಆಗಿ­ರ­ಬ­ಹುದು. ಇವು­ಗ­ಳಿಗೆ ನೀಡುವ ವಿದ್ಯುತ್‌ ಸಂಪರ್ಕ ಸಾಮಾನ್ಯ ಮನೆಗೆ ನೀಡುವ ಸಂಪ­ರ್ಕ­ಕ್ಕಿಂತ ಭಿನ್ನ. ಮುಖ್ಯ­ವಾಗಿ ಬಹು­ಮ­ಹಡಿ ಕಟ್ಟ­ಡ­ಗ­ಳಿಗೆ ಕಡ್ಡಾ­ಯ­ವಾಗಿ ಸ್ವತಃ ಟ್ರಾನ್ಸ್‌­ಫಾ­ರ್ಮರ್‌ ಹೊಂದಿ­ರ­ಬೇಕು. ಹೀಗಾಗಿ ಸಾಮಾನ್ಯ ಸಂದ­ರ್ಭ­ಗ­ಳಲ್ಲಿ ಅಲ್ಲಿ ಟೆಕ್ನಿ­ಕಲ್‌ ಕಾರಣ ಉದ್ಬವ ಆಗ­ಲಾ­ರದು. ಅಪಾ­ರ್ಟ್‌­ಮೆಂಟ್‌ ನಿವಾ­ಸಿ­ಗಳು ಫವರ್‌ ಕಟ್‌ ಸಮ­ಸ್ಯೆ­ಯಿಂದ ಸ್ವಲ್ಪ ಸೇಫ್‌. ಶಾರ್ಟ್‌ ಶರ್ಕಿ­ಟ್‌­ನಂ­ತಹ ಮೇಜರ್‌ ಅನಾ­ಹು­ತ­ಗ­ಳಾ­ದಾಗ ಅಲ್ಲೂ ಕೂಡ ಸಮಸ್ಯೆ ಇದ್ದದ್ದೇ.
ಮಾಹಿತಿ ಬೇಕು: ಬೆಂಗ­ಳೂ­ರಂಥ ಊರಲ್ಲಿ ಬದು­ಕಲು ಅನ್ನ, ನೀರು, ಗಾಳಿ ಇವಿಷ್ಟು ಮಾತ್ರ ಇದ್ರೆ ಸಾಕಾ­ಗಲ್ಲ. ಇನ್ನೊಂದು ಮುಖ್ಯ­ವಾದ ಅಂಶ ಅಂದರೆ ಮಾಹಿತಿ. ಮಾಹಿ­ತಿಯ ಅರಿವು ಬೇಕೇ ಬೇಕು. ಈ ಊರ ಜೀವನ ಬಲು ಕಷ್ಟ­ಕರ. ಮುಳ್ಳಿನ ಮೇಲಿನ ಜೀವನ. ಯಾವಾಗ ಅದೇನು ಅಪಾಯ ಬರುತ್ತೆ ಅಂತ ಹೇಳ­ಲಿಕ್ಕೆ ಬರೊಲ್ಲ. ಒಂದು ದಿನ ಕರೆಂಟ್‌ ಇಲ್ಲ ಅಂದರೆ ಏನೇ­ನೆಲ್ಲಾ ಆಗಿ ಹೋಗುತ್ತೆ. ವಿದ್ಯುತ್‌ ಮೇಲಿನ ಅವ­ಲಂ­ಬನೆ ಇಲ್ಲಿ ತಾರಕ ಸ್ಥಿತಿ­ಯ­ಲ್ಲಿದೆ. ಬೇರೊಂದು ಶಕ್ತಿಯ ಮೂಲ ಇವ­ರಿಗೆ ಬೇಕಿಲ್ಲ! ಹಳ್ಳಿ­ಗ­ಳಲ್ಲಿ ದಿನಕ್ಕೆ 12 ಗಂಟೆ ಕರೆಂಟ್‌ ಮಾತ್ರ. ಪಾಪ! ಅವರು ವಿದ್ಯುತ್‌ ಬಗ್ಗೆ ತಲೆ­ಕೆ­ಡಿ­ಸಿ­ಕೊ­ಳ್ಳು­ವು­ದಿಲ್ಲ. ಸೀಮೆ­ಎಣ್ಣೆ ದೀಪ ಹಳ್ಳಿ­ಗ­ಳಲ್ಲಿ ಎಂದೆ­ದಿಗೂ `ನಂ­ದದ ದೀಪ.’
`ಮಾ­ಹಿತಿ ಇಂದು ಜಗ­ತ್ತನ್ನು ಆಳು­ತ್ತಿದೆ.’ ವಿದ್ಯುತ್‌ ಮಾಹಿತಿ ಮಾತ್ರ­ವಲ್ಲ. ಹವಾ­ಮಾನ ವರದಿ, ಕ್ರೈಮ್‌ ರಿಪೋರ್ಟ್‌, ಪ್ರಮುಖ ರಾಜ­ಕೀಯ ಆಗು­ಹೋ­ಗು­ಗಳು ಇವೆ­ಲ್ಲ­ದರ ಮಾಹಿತಿ ಬೇಕು. ಎಲ್ಲೋ ನಡೆ­ಯುವ ಒಂದು ಘಟನೆ ಅಲ್ಲಿಗೆ ಮಾತ್ರ ಸೀಮಿ­ತ­ವಲ್ಲ. ನಾಳೆ ಇಲ್ಲೇ ಸಂಭ­ವಿ­ಸಿ­ಬಿ­ಡ­ಬ­ಹುದು. ಇಲ್ಲಿಯ ಅದೆಷ್ಟೋ ಕಟ್ಟ­ಡ­ಗಳು ಭಯೋ­ತ್ಪಾ­ದಕ ಸ್ಫೋಟನಾ ಪಟ್ಟಿ­ಯ­ಲ್ಲಿವೆ. ಇದೆ­ಲ್ಲ­ದರ ಮಾಹಿತಿ ಇದ್ದರೆ ಒಳ್ಳೆ­ಯದು.



‘ಭೂಮಿ’ ಹುಡು­ಗರ ಸಾಹ­ಸ­ಗಾಥೆ



ದಿನಂ­ಪ್ರತಿ ಕೆಲಸ ಮಾಡ್ತೀವಿ. ಅದೇ ರೋಡು, ಅದೇ ಟ್ರ್ಯಾಫಿಕ್ಕು. ಅದೇ ಆಫೀಸು, ಅದೇ ಕಂಪ್ಯೂ­ಟರು. ಅದೇ ಬಾಸು, ಅದೇ ಕೊಲೀಗು. ಅದೇ ಊರು….ವಾ­ರ­ದೊ­ಳ­ಗೊಂದು ವೀಕ್ಲಿ ಆಫು. ಅದೇ ಫೋರಂ. ಅದೇ ಟಾಕೀಸು. ಅಂಥದ್ದೇ ಫಿಲ್ಮು. ನೋ ನೋ ನೋ ವೀಕ್ಲಿ ಆಫ್‌ ಬೇಡ್ವೇ ಬೇಡಾ ಓಟಿ ಮಾಡೋಣ!
ಇಷ್ಟೆಲ್ಲಾ ಮಾಡಿ, ಜೀವ­ನ­ದೊ­ಳಗೆ ಒಂದಷ್ಟು ಥ್ರಿಲ್‌ ಬೇಡ್ವಾ? ಜೋಶ್‌ ಬೇಡ್ವಾ? ಕುತೂ­ಹಲ ಬೇಡ್ವಾ? ಬೇಕಾ­ಗಿ­ರೋದು, ಬ್ಯಾಡ­ದಿ­ರೋದು ಎಲ್ಲಾನು ತುಂಬ್ಕೊಳ್ಳೋ ನೂರ್ಮಡಿ ಮೆಮೋರಿ ಹೊಂದಿರೊ ಈ ಬ್ರೈನಿಗೆ ಒಂಚೂರು ರೆಸ್ಟ್‌ ಬೇಡ್ವಾ? ಅಷ್ಟಕ್ಕೂ ಆ ಬಡ­ಪಾಯಿ ಬ್ರೈನು ಹಣ ಕೇಳತ್ತಾ ವಡವೆ ಕೇಳುತ್ತಾ ವಸ್ತ್ರ ಕೇಳುತ್ತಾ?
ಹೌದು. ಎಲ್ಲಾ ಬೇಕು ನಿಜ. ಆದ್ರೆ….ಈ ಥ್ರಿಲ್ಲು, ಜೋಶು ಇವು­ಗಳ ಅರ್ಥನೇ ತಿಳೀ­ತಿಲ್ಲ! ಪೋರಂ­ನಲ್ಲಿ ಫಿಲ್ಮ್‌ ನೋಡೋ­ದ­ಕ್ಕಿಂತ ಥ್ರಿಲ್‌ ಬೇಕಾ? ಕಾಫಿ ಡೇನಲ್ಲಿ ಅವರ್ಸ್‌ ಅವರ್ಸ್‌ ಕೂರೋ­ದ­ಕ್ಕಿಂತ ಕುತೂ­ಹಲ ಬೇಕಾ? ರಾತ್ರಿ ಹನ್ನೆ­ರಡು ಹತ್ತು­ತ್ತಲೇ ಎಂ.ಜಿ. ರೋಡಲ್ಲಿ ಹಂಡ್ರೆಡ್‌ ಸ್ಪಿಡ್‌­ನಲ್ಲಿ ರೋಡ್‌ ರೇಸ್‌ ಮಾಡೋ­ದ­ಕ್ಕಿಂತ ಜೋಶ್‌ ಬೇಕಾ? …..ತಲೆ ಚಿಟ್ಟು ಹಿಡಿದು ಹೋಯ್ತು. ವಾಟ್‌ ಈಸ್‌ ಮೀನ್‌ ಬೈ ಜೋಶ್‌!?
ಬೆಟ್ಟ ಹತ್ತೊಣ: ಆ ಹುಡು­ಗ­ರಿಗೆ ಬೆಟ್ಟ ಹತ್ತೊ­ದ್ರಲ್ಲಿ ಅದೆಂ­ಥದೋ ಜೋಶ್‌. ಮೆಟ್ಟ­ಲಿವೆ ಹತ್ಕೊಂ­ಡೋ­ಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಬಸ್‌ ಹೋಗ್ತವೆ ಹೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಒಂದ­ಥಸ್ತು ಮಹಡಿ ಹತ್ತೋಕೆ ಮುಖ ನೋಡುವ ಇವ್ರು ಸಮುದ್ರ ಮಟ್ಟ­ದಿಂದ ಹತ್ತು ಸಾವಿರ ಅಡಿ ಎತ್ತ­ರದ ಬೆಟ್ಟ ಹತ್ತುಲು ಮೂಖ ಮೂತಿ ನೋಡಲ್ಲ! ಎಂಥ ಹುಚ್ಚು­ತನ! ಇಲ್ಲ ಇಲ್ಲ… ಇದೇ ಜೋಶ್‌! ದಿಸ್‌ ಈಸ್‌ ವಾಟ್‌ ಮೀನ್‌ ಬೈ ಥ್ರಿಲ್‌.
ಅದು ಟ್ರೆಕ್ಕಿಂಗ್‌. ಅವರ ತಂಡದ ಹೆಸರು: `ಭೂಮಿ…ಸು­ತ್ತು­ವೆವು ನಾವು’ ಅದೆಂಥಾ ದುರ್ಗಮ ಬೆಟ್ಟ­ವಾದ್ರೂ ಸೈ. ಪಟ್ಟಿ­ಯೊ­ಳ­ಗಿ­ರುವ ಬೆಟ್ಟ­ಗಳು: ಕೊಡ­ಚಾದ್ರಿ ಪರ್ವತ, ಕುಮಾರ ಪರ್ವತ, ರಾಮ­ನ­ಗರ ಬೆಟ್ಟ, ಮಧು­ಗಿರಿ ಪರ್ವತ ಹಾಗೂ ಮೊನ್ನೆ ತಾನೆ ಹೋಗಿ ಬಂದ ಕರ್ನಾ­ಟ­ಕದ ಅತಿ ಎತ್ತ­ರದ ಮುಳ್ಳ­ಯ್ಯನ ಗಿರಿ ಶಿಖರ.
ಟ್ರೆಕ್ಕಿಂಗ್‌ ಮಾಡೋ­ದ್ರಲ್ಲಿ ಇವರು ಅದೆಷ್ಟು ಥ್ರಿಲ್‌ ಆಗ್ತಾರೆ ಅಂದ್ರೆ. ಅದನ್ನು ಹೇಳೋಕೆ ಸಾಧ್ಯನೇ ಇಲ್ವಂತೆ. ಅದೊಂದು ಘಟ­ನೆ­ಯಾ­ಗಿದ್ರೆ ಪಟ್ಟಂತ ಹೇಳ­ಬ­ಹು­ದಿತ್ತು. ಆದ್ರೆ ಅದೊಂದು ಅನು­ಭವ. ಅನು­ಭ­ವಿ­ಸ­ಬೇ­ಕಷ್ಟೆ ಅಂತಾರೆ.
ಅವರು ಹೇಳಿದ್ದು: ಅದು ಮುಳ್ಳ­ಯ್ಯನ ಗಿರಿ. ನಾವು ಸಹಸ್ರ ಅಡಿ ಎತ್ತ­ರ­ದ­ಲ್ಲಿದ್ವಿ. ಮೋಡ­ದೊ­ಳಗೆ ಮುಚ್ಚಿ ಹೋಗಿದ್ವಿ. ಎತ್ತ ನೋಡಿ­ದ­ರತ್ತ ಮಂಜಿನ ರಾಶಿ. ಒಬ್ಬ­ರಿ­ಗೊ­ಬ್ಬರು ಕಾಣಲ್ಲ. ಹೇ.. ಇದ್ದೀಯ…ಹೀಗೆ ಮಾತಾ­ಡ್ಬೇಕು. ಅವನ ಮೀಸೆ ಮೇಲೊಂದು ಸಣ್ಣ ಮಂಜಿನ ಹನಿ. ಮುಟ್ಟಿ­ದರೆ ಕೆಟ್ಟೋ­ಗುತ್ತೆ. ಬಿಡ­ಕ್ಕಾ­ಗುತ್ತಾ? ಕೆಮರಾ ಕಣ್ಣು ಫುಲ್‌ ಬಿಜಿ. ಉಶ್ಯಪ್ಪಾ! ಸುಸ್ತಾಯ್ತು. ಚಾಕ­ಲೇಟ್‌ ತಿನ್ನೊಣ. ಕವರ್‌ ಎಸ­ದೀರಿ ಜೋಕೆ. ಜೇಬ್ನಲ್‌ ಇಟ್ಕೊಳಿ. ದಿಸ್‌ ಈಸ್‌ ಎನ್ವಿ­ರಾ­ನ್‌­ಮೆಂಟ್‌ ಫ್ರೆಂಡ್ಲಿ ಟ್ರೆಕ್ಕಿಂಗ್‌!
ಅಬ್ಬಾ. ಅಲ್ಲೊಂದು ಎತ್ತ­ರದ ವ್ಯೂ ಪಾಯಿಂಟ್‌. ಕೆಳಗೆ ನೋಡಿದ್ರೆ, ಸ್ವರ್ಗ­ಕ್ಕಿನ್ನು ಮೂರೇ ಗೇಣು. ಛೆ, ಮೊಬೈಲ್‌ ನಟ್‌­ವ­ರ್ಕಿಲ್ಲ. ಈ ಸುಖದ ಅನು­ಭವ ಹಂಚ್ಕೊ­ಳ್ಳೋಣ ಅಂದ್ರೆ. ಸಿಕ್ಕೇ ಬಿಡ್ತು ತುತ್ತ ತುದಿ. ಅಲ್ಲೊಂದು ಪುಟ್ಟ­ಗುಡಿ. ದೇವ­ರಿ­ಗೊಂದು ನಮ­ಸ್ಕಾರ. ತಮಾಷೆ ಏನು ಗೊತ್ತಾ? ನಾವು ಕಷ್ಟ­ಪಟ್ಟು ಟ್ರೆಕ್‌ ಮಾಡ್ಕೊಂಡ್‌ ಬಂದ್ರೆ, ಬಸ್ಸಲ್ಲಿ ಬಂದು ನಾಲ್ಕು ಮೆಟ್ಟಿಲು ಏರಿ ಏದು­ಸಿರು ಬಿಡುವ ಟೂರಿ­ಸ್ಟ್‌­ಗಳ ಸಾಧ­ನೆಯ ಮಾತು­ಗಳು.
ಬೆಟ್ಟದ ತುದಿ­ಯಲ್ಲಿ ಕುವೆಂಪು ನೆನ­ಪಾ­ದರು…
ಹೋಗು­ವೆನು ನಾ ಹೋಗು­ವೆನು ನಾ
ನನ್ನ ಒಲು­ಮೆಯ ಗೂಡಿಗೆ
ಬೇಸರಾಗಿದೆ ಬಯಲು
ವನ ಬನಂ­ಗಳ ಗಿರಿ­ಬ­ನಂ­ಗಳ ಮಲೆ­ನಾ­ಡಿಗೆ
ಹೋಗು­ವೆನು ನಾ…

ನಾವು ಹತ್ತಿದ್ದು ಮುಳ್ಳ­ಯ್ಯ­ನ­ಗಿರಿ, ಇಳಿ­ದಿದ್ದು ಬಾಬಾ ಬುಡನ್‌ ಗಿರಿ. ಇದು ಸುಲ­ಭದ ಚಾರ­ಣ­ವಲ್ಲ. ನಿಜಕ್ಕೂ ಧೈರ್ಯ ಬೇಕು. ಅದು ನಡೆ­ದಾ­ಡುವ ದಾರಿ­ಯಲ್ಲ, ದಾರಿ­ಯಿ­ಲ್ಲದ ಬೆಟ್ಟ. ನಾವೇ ದಾರಿ ಹುಡು­ಕ­ಬೇಕು. ದಾರಿ ತಪ್ಪಿದ ಮಕ್ಕ­ಳಾ­ದರೆ ದೇವ್ರೇ ಗತಿ! ದಿಕ್ಸೂಚಿ ಇಲ್ಲ­ದಿ­ದ್ದರೆ ಚಾರಣ ಕಷ್ಟ. ಗಾಯ ಗ್ಯಾರಂಟಿ. ಫಸ್ಟ್‌ ಏಡ್‌ ಬೇಕೇ ಬೇಕು. ಟ್ರೆಕ್ಕಿಂಗ್‌ ಅಂದ್ರೆ ಬೆನ್ನಿ­ಗೊಂದು ಬ್ಯಾಗು ಇದ್ದೇ ಇರುತ್ತೆ. ಕೆಲ­ವೊಂದು ಹತಾ­ರ­ಗಳೂ ಜತೆ­ಯಲ್ಲಿ ಇಟ್ಕೊಂ­ಡಿ­ರ­ಬೇಕು. ಟ್ರೆಕ್ಕಿಂಗ್‌ ಸಾಮಾ­ಗ್ರಿ­ಗಳು ಅಂಗ­ಡೀಲಿ ಸಿಗ್ತವೆ. ಗುಂಡಾ­ಗಿ­ರುವ ಭೂಮಿನಾ ಒಂದು ಸುತ್ತು ಹಾಕಿ­ದೆ­ವೆಂಬ ಭಾವ ನಮ್ಮದು. ಈ ಅನು­ಭಾವ ಮತ್ತೆ­ಲ್ಲಿಂದ ಸಿಗತ್ತೆ ಹೇಳಿ?
`ಭೂಮಿ’ ಹುಡು­ಗರು ಬೆಟ್ಟ ಹತ್ತಿದ ಕತೆ ಇದು. ಇನ್ನೆಲ್ಲೂ ಈ ಥ್ರಿಲ್‌ ಸಿಕ್ಕೋದೆ ಇಲ್ಲಾ ಅಂತಾರೆ ಇವ್ರು. ದೇಶ ಸುತ್ತ ಬೇಕು ಇಲ್ಲಾ ಓದ­ಬೇಕು ನಿಜ, ಮುಂದಕ್ಕೆ ಸೇರ್ಸೊ­ದಾದ್ರೆ ಬೆಟ್ಟ ಹತ್ಬೇಕು. ಪ್ರಕೃ­ತಿಯ ಅಂಗ­ಳ­ದೊ­ಳಗೆ ಅವಳ ಸೌಂದರ್ಯ ಕಾಣುವ ಸೌಭಾಗ್ಯ ಚಾರಣ. ಕೆಲ­ವರು ಚಾರ­ಣ­ವನ್ನು ಮೋಜು ಅಂದ್ಕೊಂ­ಡಿ­ದಾರೆ. ಚಾರ­ಣ­ಕ್ಕೋ­ದ­ವರು ಪರಿ­ಸ­ರ­ವನ್ನು ಹಾಳು ಮಾಡಿ ಬರ್ತಾರೆ. ಚಾರಣ ಹೊಸ­ದೊಂ­ದನ್ನು ಜಗ­ತ್ತೊಂ­ದನ್ನು ತೋರಿ­ಸು­ತ್ತದೆ. ಇದು ಮೋಜು ಅಲ್ಲವೇ ಅಲ್ಲ. ಇದು ಸಾಹ­ಸ­ಗಾಥೆ.


ಕೆ. ಆರ್‌. ಮಾರುಕಟ್ಟೆ: ಬೆಂಗಳೂರಿನ ನರಕ!

ಬೆಂಗಳೂರಿಗೆ ಬಂದು, ದಾರಿತಪ್ಪಿ ಕೆ ಆರ್‌ ಮಾರುಕಟ್ಟೆ ಕಡೆ ಹೊದವನಿಗೆ ಹೇಗಿದೆ ಬೆಂಗಳೂರು? ಎಂಬ ಪ್ರಶ್ನೆಯನ್ನು ಕೇಳಿನೋಡಿ. `ಇಷ್ಟು ದಿನ ನರಕವನ್ನು ಕೇಳಿ ತಿಳಿದಿಕೊಂಡಿದ್ದೆ ಆದರೆ ಈಗ ಕಣ್ಣಾರೆ ಕಂಡೆ, ಏನು ಗುರು ಇದು ಇಷ್ಟೊಂದು ಕೆಟ್ಟದಾಗಿದೆ? ಇವರೆಲ್ಲಾ ಮನುಷ್ಯರಾ? ಒಂದು ಅಡ್ರೆಸ್‌ ಕೇಳಿದರೆ ಹೇಳುವುದಿಲ್ಲ’ ಎನ್ನುತ್ತಾನವನು. ಬೆಳಗ್ಗೆ ಎದ್ದು ಫ್ರೆಶ್‌ ಆಗಿ ಆಪೀಸ್‌ಗೆ ಹೊರಟು, ಅಕಸ್ಮಾತ್‌ ಮಾರ್ಕೆಟ್‌ನಲ್ಲಿ ಇಳಿದುಕೊಂಡರೆ ಅವತ್ತೆಲ್ಲಾ ಮೂಡ್‌ ಆಪ್‌. ಯಾಕೆಂದರೆ ಮಾರ್ಕೆಟ್‌ ಸ್ಥಿತಿ ಆ ಮಟ್ಟಕ್ಕಿದೆ.


ನಾಲ್ಕು ಕಡೆಯಿಂದಲೂ ಚತುಸ್ಪಥ ರಸ್ತೆ, ಮೇಲ್ಗಡೆ ಫ್ಲೈಓವರ್‌, ಫ್ಲೈಓವರ್‌ಗೆ ಸಂಪರ್ಕ ಕಲ್ಪಿಸುವ ಬೇರೆ ಬೇರೆ ರಸ್ತೆಗಳು, ದಟ್ಟ ಜನಸಂದಣಿ, ಕಿರಿದಾದ ಜಾಗ, ಬಳಕೆಯಾಗದ ಸುರಂಗ ಮಾರ್ಗಗಳು, ರಸ್ತೆಯ ಇಕ್ಕೆಲಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಚಪ್ಪಲಿ ಮಾರಾಟ, ಜನ ಮತ್ತು ವಾಹನಗಳು ತಿರುಗಾಡುವ ಒಂದೇ ಜಾಗ, ಟ್ರಾಫಿಕ್‌ ನಿಯಂತ್ರಕರ ಮಾತಿಗೆ ಕ್ಯಾರೆ ಎನ್ನದ ಮಹಾಶಯರು, ಕೋಟೆಯ ಎದುರಿಗಿರುವ ಒಂದೇ ಒಂದು ಉಚಿತ ಶೌಚಾಲಯ, ಅಲ್ಲಿನ ನೂಕುನುಗ್ಗಲು, ಬಳಕೆಯಾಗದ ಪಾವತಿ ಶೌಚಾಲಯಗಳು, ಉಸಿರು ಕಟ್ಟಿಸುವ `ಸು’ಗಂಧ, ರಸ್ತೆಯಲ್ಲಿ ಹರಿಯವ ಕಾವೇರಿ ನದಿ. ಅಬ್ಬಾ! ಒಂದಾ ಎರೆಡಾ…
ಇಷ್ಟೆಲ್ಲಾ ಸಮಸ್ಯೆಗಳು ಒಂದೇ ಕಡೆ ಎದುರಾದಾಗ ಯಾರಿಗೆ ತಾನೆ ಮೂಡ್‌ ಆಪ್‌ ಆಗುವುದಿಲ್ಲ ಹೇಳಿ. ಹೆಸರೇ ಸೂಚಿಸುವಂತೆ ಅದು ಮಾರ್ಕೆಟ್‌, ಮಾರುಕಟ್ಟೆ ಅಂದ ಮೇಲೆ ಮಾರುವವರು ಕೊಳ್ಳುವವರು ಇದ್ದೇ ಇರುತ್ತಾರೆ. ಆದರೆ ಕೆ ಆರ್‌ ಮಾರ್ಕೆಟ್‌ ಮಾತ್ರ ವಿಶೇಷವಾದುದು. ನಿಮಿಷಕ್ಕೊಂದು ಹೊಡೆದಾಟ, ಜಗಳಗಳು ಅಸಂಖ್ಯಾತ. ಜೋಕೆ ! ಏನಾದರು ಕೊಳ್ಳಲು ಹೋಗಿ ಜಾಸ್ತಿ ಚೌಕಾಶಿ ಮಾಡಿಬಿಟ್ಟೀರಿ, ನಿಮ್ಮ ಜೊತೆ ಯಾರು ಇಲ್ಲ ಅಂದ್ರೆ ನಿಮಗೆ ಏಟು ಬೀಳುವುದಂತು ಗ್ಯಾರಂಟಿ.
ಬಸ್‌ ಹಿಡಿಯುವುದುಕ್ಕಾಗುತ್ತದೆಯೇ ಅಲ್ಲಿ? ಹೋಗಲಿ ಬಸ್‌ ಕಂಡಕ್ಟರ್‌ಗಳಾಗಲಿ ಅಥವಾ ಬೇರೆ ಜನರಾಗಲಿ ಅಡ್ರಸ್‌ ಕೇಳಿದರೆ ಹೇಳುತ್ತಾರೆಯೆ? ಅದೂ ಇಲ್ಲ. ಕೈಯ್ಯಲ್ಲಿ ಚೀಟಿ ಇಡ್ಕೊಂಡು, ಸರ್‌ ಈ ಬಸ್‌ ಇಲ್ಲಿಗೆ ಹೋಗುತ್ತದೆ? ಎಂದು ಕೇಳಿ ನೋಡಿ. ಸುಮ್ಮನೆ ಕತ್ತು ಅಲ್ಲಾಡಿಸುತ್ತಾರಷ್ಟೆ. ಅದರರ್ಥ ಹೋಗುತ್ತದೆ ಅಂತಲು ಅಲ್ಲ ಅಥವಾ ನನಗೆ ಗೊತ್ತಿಲ್ಲ ಎಂತಲೂ ಅಲ್ಲ. ಕತ್ತು ಅಲ್ಲಾಡಿಸಿದರೆ ಏನಂತ ಅರ್ಥ ಮಾಡ್ಕೊಬೇಕು ಸರ್‌? ಅಂತ ಇನ್ನೊಮ್ಮೆ ಕೇಳಿಬಿಟ್ಟರಿ ಅಂತ ಇಟ್ಕೊಳಿ. `ಏನಪ್ಪಾ ಮೈಗೆ ಉಷಾರಿಲ್ವ. ಮನೇಲಿ ಹೇಳಿ ಬಂದಿದ್ದೀಯ ತಾನೆ’ ಎನ್ನುತ್ತಾ ತಳ್ಳಿಯೇಬಿಡುತ್ತಾರೆ.
ಪಾಪ! ಕೆಲಸ ಹುಡುಕಿಕೊಂಡು ನೂರಾರು ಯುವಕರು ಪ್ರತಿನಿತ್ಯ ಬೆಂಗಳೂರಿಗೆ ಬರುತ್ತಾರೆ. ಅವರ ಅನುಭವ ಕೇಳದರೆ, ಒಬ್ಬೊಬ್ಬರದು ರೋಚಕ. ಅಪ್ಪಾ! ಕೆಲಸವೂ ಬೇಡ ಈ ಮಾನಸಿಕ ಹಿಂಸೆಯೂ ಬೇಡ ಎಂದು ಹೆದರಿ ಓಡಿ ಹೋಡಿಹೋಗುವವರಿಗೆ ಇಲ್ಲಿ ಕೊರತೆ ಇಲ್ಲ. ಸಿಟಿ ಬಸ್‌ ಹತ್ತಿ, ಯಾವುದೇ ಪಾರ್ಕಿಗೆ ಹೋಗಿ. ಕೈಯಲ್ಲೊಂದು ಪೈಲ್‌ ಹಿಡಿದುಕೊಂಡು ತಮ್ಮ ಹಣೆ ಬರಹವನ್ನು ಅದರಲ್ಲಿ ತುಂಬಿಕೊಂಡು ಕೆಲಸಕ್ಕೊಸ್ಕರ ಕಾದು ಬೆಂಡಾಗಿ ಹೈರಾಣಾಗಿ ಕೈಚೆಲ್ಲಿ ಕುಳಿತಿರುತ್ತಾರೆ. ಗೆಳೆಯರ ರೂಮಿನಲ್ಲೋ, ಹಾಸ್ಟೆಲ್ಲುಗಳಲ್ಲೊ ಉಳಿದುಕೊಂಡಿರುತ್ತಾರೆ, ಅಪ್ಪ ಖರ್ಚಿಗೆ ಅಂತ ಕೊಟ್ಟ ದುಡ್ಡು ಖಾಲಿಯಾಗಿರುತ್ತದೆ. ಗಟ್ಟಿಯಾದ, ದೃತಿಗೆಡದ, ಆತ್ಮ ವಿಶ್ವಾಸವಿರುವ ಯವಕ ಒಂದು ಒಳ್ಳೆಯ ಕ್ಷಣಕ್ಕೋಸ್ಕರ ಎಲ್ಲಾ ಟಾರ್ಚರ್‌ ಸಹಿಸಿಕೊಂಡು ಕಾಯುತ್ತಾನೆ. ಆ ಕ್ಷಣ ಬಂದಾಗ, ಬೆಂಗಳೂರಿನ ಕಹಿಸತ್ಯಗಳನ್ನು ಅರ್ಥ ಮಾಡಿಕೊಂಡು ಮರೆಯಲಾಗದ ಅನುಭವಗಳೆಂದು ದಾಖಲಿಸಿಡುತ್ತಾನೆ. ಮುಂದೊಂದು ದಿನ ಅದನ್ನುತೆಗೆದು ನೋಡಿ `ಇದು ನಾನೇನಾ?’ ಎಂದು ಅಚ್ಚರಿ ಪಟ್ಟುಕೊಳ್ಳುತ್ತಾನೆ. ಇನ್ನು ಕಾಯಲಾಗದ, ದೃತಿಗೆಟ್ಟ ಜೊಳ್ಳು ಯುವಕ ಬೆಂಗಳೂರಿನ ಕಹಿಸತ್ಯಗಳಿಗೆ ಬೆದರಿ ಮಾಯವಾಗುತ್ತಾನೆ.
ಹಣ ಉಳ್ಳವನು ಎಂಜಿ ರೋಡ್‌ಗೋಗ್ತಾನೆ ಸ್ವಾಮೀ, ಉಳ್ಳದವ ಎಲ್ಲಿಗೆ ಹೋಗಬೇಕು ಹೇಳಿ, ಮಾರ್ಕೆಟ್‌ಗೇ ಹೋಗಬೇಕು. ಯೂನಿರ್ವಸಿಟಿಯ ಡಿಗ್ರಿ ಗಳನ್ನು ನೆಚ್ಚಿಕೊಂಡು ಬಂದರೆ ಇಲ್ಲಿ ಬದುಕಿಲ್ಲ.
ಯುವತಿಯರ ಪಾಡು: ಇನ್ನು ಯುವತಿಯರ ಪಾಡು ನೆನಸಿಕೊಂಡರೆ ಭಯವಾಗುತ್ತದೆ. ಅವಳು ಮಾರ್ಕೆಟ್‌ನ ರಸ್ತೆಯಲ್ಲಿ ನಡೆಯುವಾಗ ಅದೆಷ್ಟುಜನ ಅವಳ ಸೊಂಟ ಜಿಗುಟಿರುತ್ತಾರೋ ಅವಳಿಗೇ ಗೊತ್ತು. ಎಲ್ಲವನ್ನು ಸಹಿಸಿಕೊಂಡು ನಡೆದರೆ ಬಚಾವ್‌, ಇಲ್ಲವಾದರೆ ಕೊಚ್ಚೆಗೆ ಕಲ್ಲೆಸೆದು ಮಖಕ್ಕೆ ಸಿಡಿಸಿಕೊಂಡಂತೆ! ಕೆಲ ಹೆಣ್ಣು ಮಕ್ಕಳಂತೂ ಮಾರ್ಕೆಟ್‌ ಕಡೆ ಹೋಗುವುದಿರಲಿ ಆ ಕಡೆ ತಲೆ ಹಾಕಿಯೂ ಮಲಗಲು ಹೆದುರುತ್ತಾರೆ.
ಇದು ನಮ್ಮ ಊರಲ್ಲ, ನಮ್ಮ ಭಾಷೆಯಲ್ಲ; ಒಮ್ಮೊಮ್ಮೆ ಅನ್ನಿಸಿ ಬಿಡುತ್ತದೆ `ಇದು ಕರ್ನಾಟಕವೇ ಅಲ್ಲ, ಇಲ್ಲಿ ಕನ್ನಡವೇ ಇಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗೆ ಭವಿಷ್ಯವೇ ಇಲ್ಲ’ ಎಂದು.
ಆ ಮಾರ್ಕೆಟ್‌ನಲ್ಲಿ ಸರಿಯಾಗಿರೋ ಒಂದು ಬಸ್‌ ಸ್ಟಾಂಡಿಲ್ಲ ರೀ. ವಾಣಿ ವಿಲಾಸ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳು ಒಂದೇಕಡೆ ಇವೆ. ಎರಡು ಆಸ್ಪತ್ರೆಗಳಿಗೆ ಒಂದೇ ರಸ್ತೆ. ಕೆಂಗೇರಿ ಕಡೆಯಿಂದ ಬರುವ ಬಸ್ಸು ನಿಲ್ಲುವ ಜಾಗವಂತೂ……ಅದು ಜಾಗವಲ್ಲ ಗೊಜ್ಜೆ ಗುಂಡಿ. ಕಲಾಸಿಪಾಳ್ಯ ಕಡೆಗೆ ಹೋಗುವ ತಿರುವಿನಲ್ಲಿ ಒಂದು ಉಚಿತ ಶೌಚಾಲಯವಿದೆ. ಹೊಸದು, ಇತ್ತೀಚಿಗೆ ಕಟ್ಟಿಸಿದ್ದು. ಅದರೊಳಕ್ಕೊಮ್ಮೆ ಹೋದರೆ ಹೊರಕ್ಕೆ ಬರುವುದು ಸಾಹಸವೇ ಸರಿ. ಗಬ್ಬು ನಾಥ ಛೀ!
ಕಣ್ಣಿನ ವ್ಯವಹಾರ: ಮಾರ್ಕೆಟ್‌ನ ಇನ್ನೊಂದು ಮುಖ್ಯವಾದ ವಿಷಯ. ರಾತ್ರಿ ಹತ್ತು ಗಂಟೆ ಆಯ್ತು ಅಂದ್ರೆ ಬೇರೆ ಬೇರೆ ಏನೇನೋ ವ್ಯವಹಾರಗಳು ನಡೆಯುತ್ತವೆ. ಅದು ಕಣ್ಣಿನ ವ್ಯವಹಾರ. ಹೆಂಗಸರ ಗುಂಪೊಂದು ನಿಂತಿರುತ್ತದೆ, ಯಾವನೋ ಅಲ್ಲಿಗೆ ಹೋಗ್ತಾನೆ. ಕಣ್ಣಿನಲ್ಲೇ ಏನೇನೋ ಮಾತುಕತೆಗಳು ನಡೆಯುತ್ತವೆ, ಅದಕ್ಕೆಂದೇ ಕಾಯುತ್ತಿದ್ದ ಆಟೊವೊಂದು ಸುಯ್ಯನೆ ಬರುತ್ತದೆ, ಇಬ್ಬರನ್ನು ಹತ್ತಿಸಿಕೊಂಡು ಕಣ್ಣಿಗೆ ಕಾಣದೆ ಮಾಯವಾಗುತ್ತದೆ. ಅಲ್ಲಿಗೆ ಮುಗಿಯಿತು, ಚಲುವ ಸುವರ್ಣ ಕನ್ನಡ ನಾಡು!
ಇದು ಬೆಂಗಳೂರು, ಸಿಲಿಕಾನ್‌ ಸಿಟಿ, ವ್ಯಾಲಿ, ಮೆಟ್ರೋ ನಗರ. ನ್ಯೂಯಾರ್ಕ್‌ನಲ್ಲಿ ಕುಳಿತು ಬೆಂಗಳೂರಿನ ಬಗ್ಗೆ ಮಾತನಾಡುವಾಗ ನಿಜವಿರಬಹುದು. ಆದರೆ ಮಾರ್ಕೆಟ್‌ನಲ್ಲಿ ನಿಂತು ಕ್ಷಣಕಾಲ ಯೋಚಿಸಿದರೆ ಇದು ಗಬ್ಬುನಗರ.

ಮಂಗಳವಾರ, ಸೆಪ್ಟೆಂಬರ್ 30, 2008



ತ್ಯಾಜ್ಯ ನಿರ್ವಹಣೆ: ಯಾರು ಹೊಣೆ?


1976ರಲ್ಲಿ ನಡೆದ ಘಟನೆ. ಅಮೆರಿಕಾದ ನಯಾಗರ ನಗರದ ಶಾಲೆಯೊಂದರ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗತೊಡಗಿದರು. ವಿಚಿತ್ರ ಲಕ್ಷಣಗಳುಳ್ಳ ರೋಗಕ್ಕೆ ಅಸಂಖ್ಯಾತ ಮಕ್ಕಳು ತುತ್ತಾದರು. ಕೆಲವರು ಮೃತಪಟ್ಟರು. ಶಾಲೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಕ್ಯಾನ್ಸರ್‌ಗೆ ತುತ್ತಾದರು. ಹುಟ್ಟುವ ಮಕ್ಕಳು ಗರ್ಭದಲ್ಲೇ ಸತ್ತವು, ಅಂಗವಿಕಲರಾಗಿ ಹುಟ್ಟಿದವು. ಕಾರಣ ಹುಡುಕುತ್ತಾ ಹೊರಟಾಗ ಬಹಿರಂಗಗೊಂಡ ವಿಷಯಕ್ಕೆ ಅಮೆರಿಕಾ ಮಾತ್ರವಲ್ಲ, ಇಡೀ ಜಗತ್ತು ನಡುಗಿತು.
ಕಾರಣವಿಷ್ಟೆ. ಆ ಜಾಗ ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿಯ `ತಿಪ್ಪೆಗುಂಡಿ’ಯಾಗಿತ್ತು.
ಹೂಕರ್‌ ಪ್ಲಾಸ್ಟಿಕ್‌ ಮತ್ತು ಕೆಮಿಕಲ್‌ ಕಂಪನಿ ಆ ಜಾಗವನ್ನು ಹಿಂದೆ ತನ್ನ ತ್ಯಾಜ್ಯ ವಿಲೇವಾರಿಗಾಗಿ ಪಡೆದಿತ್ತು. ಹತ್ತು ವರ್ಷಗಳ ನಂತರ ಜಾಗವನ್ನು ಮಾರಾಟ ಮಾಡಿತ್ತು. ಅದೇ ಜಾಗದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು.
ಆಗಬಾರದ್ದು ಆಗಿ ಹೋದ ನಂತರ ಆ ಜಾಗ `ಶುದ್ಧ’ಗೊಳಿಸಲು ಅಮೆರಿಕಾ 100 ಮಿಲಿಯನ್‌ ಡಾಲರ್‌ ಹಣ ವೆಚ್ಚ ಮಾಡಿತು. ಸೌಂದರ್ಯ ನಗರ ಎಂದೇ ಹೆಸರಾಗಿದ್ದ ನಯಾಗರದಲ್ಲಿ ನಡೆದ ಈ ಘಟನೆಯಿಂದ ವೈಟ್‌ಹೌಸ್‌ ನಾಯಕರು ಇರುಸು ಮರುಸಿಗೆ ಒಳಗಾಗಬೇಕಾಯಿತು.
ಈ ಘಟನೆಯ ನಂತರ ವಿಷಯುಕ್ತ ತ್ಯಾಜ್ಯದ ಅಪಾಯದ ಅರಿವು ಜಗತ್ತಿಗೆ ಆಯಿತು. `ವಿಶ್ವ ಪರಿಸರ ವಿಷಯ’ದಲ್ಲಿ ಇದು ಮರೆಯಲಾಗದ ಪ್ರಕರಣವಾಗಿದೆ.
ತ್ಯಾಜ್ಯ ವಿಲೇವಾರಿ ಒಂದು ಜಾಗತಿಕ ಸಮಸ್ಯೆ. ಪಾಶ್ಚಿಮಾತ್ಯ ರಾಷ್ಟ್ರಗಳು ತ್ಯಾಜ್ಯ ನಿರ್ವಹಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ತಮ್ಮ ಡಸ್ಟ್‌ಬಿನ್‌ಗಳೆಂದು ಭಾವಿಸಿರುವುದು ದುರದೃಷ್ಟಕರ. ತಮ್ಮ ರಾಷ್ಟ್ರದ ಅಪಾಯಕಾರಿ ತ್ಯಾಜ್ಯವನ್ನು ಹಡಗುಗಳ ಮೂಲಕ ಸಾಗಿಸಿ ಬಡರಾಷ್ಟ್ರಗಲ್ಲಿ ಚೆಲ್ಲುತ್ತಿವೆ.
1986ರಿಂದ 1988ರ ನಡುವೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೃತೀಯ ಜಗತ್ತಿನ ಬಡ ರಾಷ್ಟ್ರಗಳಿಗೆ 3.656 ಮಿಲಿಯನ್‌ ಟನ್‌ ಅಪಾಯಕಾರಿ ತ್ಯಾಜ್ಯವನ್ನು ಸಾಗಿಸಿವೆ. ಈ ವಿಷಯವನ್ನು ಕೋಲ್ಕತ್ತಾದ ಅಮೃತ ಬಜಾರ್‌ ಪತ್ರಿಕಾ 1989 ನವೆಂಬರ್‌ 25ರಂದು ಪ್ರಕಟಿಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಧೋರಣೆ ಬಗ್ಗೆ ಭಾರತದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಈ ಕುರಿತು ರಾಷ್ಟ್ರಗಳ ನಡುವೆ ಒಡಂಬಡಿಕೆಯಾಗಿತ್ತು ಎಂಬ ವಿಷಯ ಅನಂತರ ಹೊರಬಿತ್ತು.
ಒಸಾಮಾ ಬಿನ್‌ ಲಾಡೆನ್‌ ನೇತೃತ್ವದ ಅಲ್‌ಕೈದಾ ಸಂಘಟನೆಯ ಉಗ್ರಗಾಮಿಗಳು ಕೆಡವಿದ ವಿಶ್ವ ವಾಣಿಜ್ಯ ಕಟ್ಟಡದ ತ್ಯಾಜ್ಯವನ್ನು ಅಮೆರಿಕಾ ಭಾರತಕ್ಕೆ ತಂದು ಸುರಿಯಿತು. ಅಮೆರಿಕಾದ ದೊಡ್ಡಣ್ಣನ ನೀತಿಯ ವಿರುದ್ಧ ಭಾರತೀಯರು ತಿರುಗಿ ಬೀಳಲಿಲ್ಲ.
ಕೆಲರಾಷ್ಟ್ರಗಳು ತಮ್ಮ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯುತ್ತಾ ಬಂದಿವೆ. ಇದು ಸಾಗರ ಜೀವಿಗಳ ಜೀವಕ್ಕೆ ಕುತ್ತಾಗುತ್ತಿದೆ. ಆಗಾಗ ಸಮುದ್ರದಲ್ಲಿ ಲಕ್ಷಾಂತರ ಮೀನುಗಳು ಸಾಯುವುದಕ್ಕೆ ಅಪಾಯಕಾರಿ ತ್ಯಾಜ್ಯವೇ ಕಾರಣ.
ಆಫ್ರಿಕಾ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತ್ಯಾಜ್ಯ ವಿಲೇವಾರಿ ಕ್ರಮವನ್ನು ಬಲವಾಗಿ ವಿರೋಧಿಸಿವೆ. ಕೀನ್ಯಾದ ಮಾಜಿ ಅಧ್ಯಕ್ಷ ಡ್ಯಾನಿಯಲ್‌ ಅರಪ್‌ ಮೊಯಿ ಇದನ್ನು `ವಿಷಬೀಜ ಭಯೋತ್ಪಾದನೆ’ ಎಂದು ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ `ಬೆಸಲ್‌ ಮಾತುಕತೆ’ ಪ್ರಮುಖವಾದುದು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಸರ ಕಾರ್ಯಕ್ರಮದಿಂದ (UNEP) 1989ರಲ್ಲಿ ರೂಪಿಸಲಾಯಿತು. ಈ ಮಾತುಕತೆಯಲ್ಲಿ 150ಕ್ಕೂ ಹೆಚ್ಚುರಾಷ್ಟ್ರಗಳು ಭಾಗವಹಿಸಿದ್ದವು. ತ್ಯಾಜ್ಯ ವಿಲೇವಾರಿ ಕ್ರಮವನ್ನೊಳಗೊಂಡ ಒಂದು ಕರಡನ್ನು ಈ ಸಭೆಯಲ್ಲಿ ಅಂಗೀಕರಿಸಲಾಯಿತು.
ತ್ಯಾಜ್ಯದ ವಿಷಯದಲ್ಲಿ ಭಾರತದ ಸ್ಥಿತಿ ಭಯಂಕರವಾಗಿದೆ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತಿಪ್ಪೆಗುಂಡಿ ಸಮಸ್ಯೆಯೂ ಒಂದು! ಹಲವು ಕಾನೂನುಗಳಿದ್ದರೂ ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದೆ. ಪರಿಸರ (ಸಂರಕ್ಷಣೆ) ಕಾನೂನು- 1986ರ ಹಲವು ಸೆಕ್ಷನ್‌ಗಳಲ್ಲಿ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ತ್ಯಾಜ್ಯ ನಿರ್ವಹಣಾ ನಿಯಮಗಳು- 1989 ಇದರಲ್ಲಿ ಹಲವು ಕ್ರಮವಿಧಾನಗಳನ್ನು ನೀಡಲಾಗಿದೆ. ಈ ಕಾನೂನುಗಳಿರುವುದು ಬಹು ಸಂಖ್ಯಾತ ಭಾರತೀಯರಿಗೆ ಗೊತ್ತಿಲ್ಲ. ಡಸ್ಟ್‌ಬಿನ್‌ ಲಾ ಯಾರಿಗೆ ಬೇಕು?!
ರಾಷ್ಟ್ರದ ಮಲಿನ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಲ್ಲಿ ಪ್ರತಿನಿತ್ಯ 2500 ಟನ್‌ ವಿಷಯುಕ್ತ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ೃಹತ್‌ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಕ್ರಮದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಈ ತ್ಯಾಜ್ಯ ಬಹಳ ಅಪಾಯಕಾರಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಲೇವಾರಿಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕಾರಣ ಗಾಳಿ, ಜಲ, ಅಂತರ್ಜಲ ಮಲಿನಗೊಳ್ಳುತ್ತಿವೆ.
ಬರೀ ಬೆಂಗಳೂರು ಮಾತ್ರವಲ್ಲ. ಎಲ್ಲಾ ಮೆಟ್ರೋಪಾಲಿಟನ್‌ ನಗರಗಳ ಹಣೆಬರಹವೂ ಇದೇ. ನವದೆಹಲಿಯಲ್ಲಿ ದಿನಕ್ಕೆ 4000 ಟನ್‌ ತ್ಯಾಜ್ಯ ಉತ್ಪತ್ತಿಯಾದರೆ ಮುಂಬೈ ನಗರದಲ್ಲಿ 4500 ಟನ್‌ ಉತ್ಪತ್ತಿಯಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಎಲ್ಲಾ ರಾಜ್ಯಗಳಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಇವು ಮಾಲಿನ್ಯದ ಮಟ್ಟವನ್ನು ಅಳೆದು ಸುರಿದು ಅಂಕಿ ಅಂಶ ನೀಡುತ್ತವೆ. ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಾವಳಿಗಳನ್ನು ಜಾರಿ ಮಾಡಿವೆ. ಆದರೆ ಎಲ್ಲಾ ನಿಯಮಗಳು ಕಡತದಲ್ಲಿ ಭದ್ರವಾಗಿವೆ. ಭಾರತ ತ್ಯಾಜ್ಯ ವಿಲೇವಾರಿಯಲ್ಲಿ ಸಂಪೂರ್ಣವಾಗಿ ಸೋತಿದೆ.
ವ್ಯರ್ಥ ತ್ಯಾಜ್ಯಗಳು ಮೂರು ರೀತಿಯಲ್ಲಿರುತ್ತವೆ. ದ್ರವ, ಘನ ಮತ್ತು ರೇಡಿಯೋ ವಿಕಿರಣ ತ್ಯಾಜ್ಯ. ಕೈಗಾರಿಕೆ ಹೊರಸೂಸುವ ವ್ಯರ್ಥ ವಸ್ತು, ಕ್ಲೋರೋಫ್ಲೋರೋ ಕಾರ್ಬನ್‌ (ಸಿಎಫ್‌ಸಿ) ಮುಂತಾದವು ದ್ರವತ್ಯಾಜ್ಯದಲ್ಲಿ ಸೇರುತ್ತವೆ. ಇದು ಬಹಳ ಬೇಗ ಗಾಳಿ, ನೀರಿನೊಡನೆ ಸೇರಿ ವಾತಾವರಣವನ್ನು ಹಾಳುಗೆಡವಬಲ್ಲದು. ದ್ರವತ್ಯಾಜ್ಯದ ಶುದ್ಧೀಕರಣ ಬಹಳ ಕಷ್ಟ. ಇದು ಸದಾ ವಾತಾವರಣದಲ್ಲಿ ಅಸ್ತಿತ್ವದಲ್ಲಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಾನವ ಬಳಸಿ ಬಿಸಾಡಿದ ವಸ್ತುಗಳನ್ನು ಘನತ್ಯಾಜ್ಯ ಎನ್ನಬಹುದು. ಆಸ್ಪತ್ರೆ ತ್ಯಾಜ್ಯ, ಸತ್ತ ಪ್ರಾಣಿ ಪಕ್ಷಿ ಗಿಡಮರಗಳು ಮುಂತಾದವು ಘನ ತ್ಯಾಜ್ಯದಲ್ಲಿ ಸೇರುತ್ತವೆ. ವಿಲೇವಾರಿ ಕ್ರಮಗಳನ್ನು ಅನುಸರಿಸಿದರೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ನಾಗರಿಕ ಪರಮಾಣು ಶಕ್ತಿ ಉತ್ಪಾದನೆಯಲ್ಲಿ `ರೇಡಿಯೋ ವಿಕಿರಣ ತ್ಯಾಜ್ಯ’ ಹೊರಹೊಮ್ಮುತ್ತದೆ. ಈಗ ಎಲ್ಲಾ ರಾಷ್ಟ್ರಗಳು ನಾಗರಿಕ ಪರಮಾಣು ರಾಷ್ಟ್ರಗಳಾಗಿ ಮಾರ್ಪಡುತ್ತಿದ್ದು, ಪರಮಾಣು ಇಂಧನ ಶಕ್ತಿ ಘಟಕಗಳ ನಿರ್ಮಾಣದಲ್ಲಿ ತೊಡಗಿವೆ. ಪರಮಾಣು ಉತ್ಪಾದನೆಗೆ ಮುಖ್ಯವಾಗಿ ಬೇಕಾಗಿರುವುದು ಥೋರಿಯಂ. ಇದು ಬಹಳ ದುಬಾರಿ ಇಂಧನ ಮೂಲ. ಒಂದು ಕೆ.ಜಿ. ಥೋರಿಯಂ ಮೂರು ಸಾವಿರ ಟನ್‌ ಕಲ್ಲಿದ್ದಲಿಗೆ ಸಮ. ರೇಡಿಯೋ ವಿಕಿರಣ ತಾಜ್ಯ ಜೀವಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ.
ವಾಯುಮಾಲಿನ್ಯದಲ್ಲಿ ಬೆಂಗಳೂರು ಹಲವು ವರ್ಷಗಳಿಂದ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇಲ್ಲಿ ಪ್ರತಿ ತಿಂಗಳು 15000 ವಾಹನಗಳು ನೋಂದಾವಣೆಗೊಳ್ಳುತ್ತಿವೆ. ಬೆಂಗಳೂರಿನ ಗಾಳಿ ಮಲಿನವಾಗುವುದಕ್ಕೆ ವಾಹನಗಳೇ ಕಾರಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ.
ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಅಕ್ರಮವಾಗುತ್ತಿದೆ. ತ್ಯಾಜ್ಯ ಸಾಗಣೆದಾರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮ್ಮ ತಾಜ್ಯವನ್ನು ಬೆಂಗಳೂರಿನ ಹೊರವಲಯದ ಖಾಲಿ ಪ್ರದೇಶಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕ ಶರತ್‌ಚಂದ್ರ ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಮಾತ್ರ ಹೊಣೆಯಲ್ಲ. ಸಾರ್ವಜನಿಕರೂ ಹೊಣೆಗಾರರೇ. ತಮ್ಮ ಮನೆಯ ತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಕ್ರಮಗಳನ್ನು ಅನುಸರಿಸಿದರೆ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರೆಯುತ್ತದೆ.




ಅಪ್ಪಿಕೋ 25


1983, ಸೆಪ್ಟಂಬರ್‌ 8…..
ಕೊಡಲಿ ಪೆಟ್ಟಿಗೆ ಸಿಕ್ಕಿ ಬಲಿಯಾಗುತ್ತಿದ್ದ ಮರಗಳ ಉಳಿವಿಗಾಗಿ ಅಂದು ತೆಗೆದುಕೊಂಡ ಮಹತ್ವದ ನಿರ್ಧಾರ ಇಂದು ಐತಿಹಾಸಿಕ ದಿನ. ಮರವನ್ನು ಅಪ್ಪಿ `ಜೀವ ಬೇಕಾದರೂ ಬಿಟ್ಟೇವು ಮರವನ್ನು ಬಿಡೆವು’ ಎಂಬ ಘೋಷಣೆಯೊಂದಿಗೆ ನಡೆಸಿದ ಶಾಂತಿಯುತ ಚಳವಳಿಯೇ ಅಪ್ಪಿಕೋ ಚಳವಳಿ. ಈ ಚಳವಳಿಗೆ ಇಂದು 25 ವಸಂತಗಳು ತುಂಬಿವೆ. ಅದರ ನೆನೆಪು ಮಾತ್ರ ನಳನಳಿಸುವ ಹಸಿರು ಮರದಂತೆ ಇನ್ನೂ ಹಸಿರಾಗಿದೆ.
ಪರಿಸರ ಪ್ರೇಮಿ ಸುಂದರ ಲಾಲ್‌ ಬಹುಗುಣ ಅವರ ಮಾರ್ಗದರ್ಶನದೊಂದಿಗೆ ಮಲೆನಾಡು ಪ್ರದೇಶದಲ್ಲಿ ನಡೆದ ಈ ಆಂದೋಲನ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಿತು. ಅಷ್ಟೊತ್ತಿಗಾಗಲೇ ಹಿಮಾಲಯದಲ್ಲಿ ಚಿಪ್ಕೊ ಚಳವಳಿ ಯಶಸ್ವಿಯಾಗಿತ್ತು. ಶಿರಸಿ ಸಮೀಪದ ಕಳಾಸೆ, ಕುದ್ರಗೋಡು ದುರ್ಗಮ ಅರಣ್ಯ ಪ್ರದೇಶದಲ್ಲಿ ಗುತ್ತಿಗೆದಾರರು ಮರಗಳನ್ನು ಕಡಿಯಲು ಯತ್ನಿಸಿದಾಗ ನಡೆದ ಸಂಘಟಿತ ಹೋರಾಟವಿದು.
ಬಹುಗುಣ(ವಂತ) ಮುಟ್ಟಿದ್ದೆಲ್ಲಾ ಚಿನ್ನ. ಅವರ ಮಾರ್ಗದರ್ಶನದಲ್ಲಿ ಈಶಣ್ಣ, ಮಹಬಲೇಶ್ವರ ಹೆಗಡೆ, ಕೆ.ವಿ. ಸುಬ್ಬಣ್ಣ, ಆರ್‌.ವಿ. ಹೆಗಡೆ, ಎಸ್‌.ಎನ್‌. ಭಟ್ಟ, ಪಾಂಡುರಂಗ ಹೆಗಡೆ ಮುಂತಾದವರು ಅಪ್ಪಿಕೋ ಚಳವಳಿಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.
ಆತ್ಮ ವಿಮರ್ಶಾ ವೇದಿಕೆ: ಈ ಚಳವಳಿಯ 25ನೇ ವರ್ಷಾಚರಣೆ ಬರೀ ಆಚರಣೆಯಲ್ಲ. ಆತ್ಮ ವಿಮರ್ಷೆಗೆ ಒಂದು ಅವಕಾಶ. ಇವತ್ತಿನ ಪರಿಸರ ಹೋರಾಟಗಳು ಯಾವ ಮಟ್ಟ ತಲುಪಿವೆ ಎಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ. ಅದೆಲ್ಲೋ ನಾಲ್ಕು ಗಿಡ ನೆಟ್ಟು ಪ್ರಚಾರ ಪಡೆದು, ಪರಿಸರ ಹೋರಾಟದ ಹೆಸರಿನಲ್ಲಿ ವಿದೇಶಿ ಹಣ ಸುಲಿಯುವ ನಮ್ಮ ಎನ್‌ಜಿಒಗಳ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರೈತ ಹೋರಾಟಗಳು ದಿಕ್ಕುತಪ್ಪಿವೆ. ರೈತ ನಾಯಕರು ರಾಜಕಾರಣಿಗಳ ಚಮಚಾಗಳಾಗಿದ್ದಾರೆ. ಅಧಿಕಾರಕ್ಕೆ ಹಾತೊರೆಯುತ್ತಿದ್ದಾರೆ. ಸಂಘಟಿತ ಹೋರಾಟ ಮಾಯವಾಗಿದೆ. ರೈತರ ಬದುಕು ವಿಷಮಯವಾಗಿದೆ. ರೈತರಿಗೆ ವಿಶ್ವಾಸ ತುಂಬುವ ಒಬ್ಬನೇ ಒಬ್ಬ ನಾಯಕ ಇಲ್ಲ.
ಅಂದು ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣ ಒತ್ತೆ ಇಟ್ಟರು. ಇಂದು ತಮ್ಮ ಜೇಬು ತುಂಬಿಸಿಕೊಳ್ಳಲು ಪಂಚಭೂತಗಳಲ್ಲಿ ಒಂದಾದ ಭೂಮಿಯನ್ನೇ ಒತ್ತೆ ಇಟ್ಟಿದ್ದಾರೆ. ಇದು ನ್ಯಾಯವೆ..?




ಈ ಗಾಳಿ ವಿಷವಾಗಿದೆ!



ಬೆಂಗಳೂರಿನ ಅಸ್ತಮಾ, ಡಯಾಬಿಟಿಸ್‌ ರೋಗಿಗಳು ಆದಷ್ಟು ಬೇಗ ಊರು ಬಿಡುವುದು ಒಳಿತು! ಹೌದು, ಬೇರೆ ದಾರಿಯಿಲ್ಲ. ಬೆಂಗಳೂರಿನಲ್ಲಿ ಬೀಸುತ್ತಿರುವ ಗಾಳಿಯಲ್ಲಿ ಆಮ್ಲಜನಕ ಮಾಯವಾಗಿದೆ. ಅಸಂಖ್ಯಾತ ವಿಷಾನಿಲಗಳು ಬೆಂಗಳೂರನ್ನು ಆಳುತ್ತಿವೆ. ಇವು ಸಾವನ್ನು ಹೊತ್ತು ತರುವ ಅಲೆಗಳಾಗಿವೆ. ಈ ಅನಿಲಗಳನ್ನು ಸೇವಿಸುತ್ತಾ ಇಲ್ಲಿ ಬದುಕಿ ಆಯುಷ್ಯ ಕಳೆದುಕೊಳ್ಳುವುದಕ್ಕಿಂತ ಊರು ಬಿಡುವುದೇ ಸರಿಯಾದ ದಾರಿ.
ವಾಯುಮಾಲಿನ್ಯದಲ್ಲಿ ಬಹಳ ವರ್ಷಗಳಿಂದ ಬೆಂಗಳೂರು ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಪ್ರತಿದಿನ 15, 000 ವಾಹನಗಳು ನೋಂದಣಿಯಾಗುತ್ತಿವೆ. ಈ ವಾಹನಗಳು 3 ಲಕ್ಷ ಮೆಟ್ರಿಕ್‌ ಟನ್‌ ಡೀಸೆಲ್‌, 6 ಲಕ್ಷ ಮೆಟ್ರಿಕ್‌ ಟನ್‌ ಪೆಟ್ರೋಲ್‌ಲನ್ನು ಪ್ರತಿವರ್ಷ ದಹಿಸುತ್ತಿವೆ. ಇಷ್ಟೊಂದು ಇಂಧನ ಕುಡಿದ ವಾಹನಗಳು ಹೊರಸೂಸುವ ವಿಷಯುಕ್ತ ಅನಿಲದಿಂದ ಬೆಂಗಳೂರು ಮಂದಿಯ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. `ಗಾರ್ಡನ್‌ ಸಿಟಿ’ಯಲ್ಲಿ ಪ್ರತಿವರ್ಷ 800 ಮಂದಿ ಗಂಟಲು ಕ್ಯಾನ್ಸರ್‌, ಅಸ್ತಮಾ ಇತ್ಯಾದಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಗಂಟಲು ಬೇನೆ, ಚರ್ಮ ರೋಗಗಳು ಬೆಂಗಳೂರಿಗರನ್ನು ಕಾಡುತ್ತಿವೆ. ಹಿರಿಯ ನಾಗರಿಕರ ಕಷ್ಟವನ್ನು ಹೇಳತೀರದು.
`ಚರ್ಮಕ್ಕೆ ಸಂಬಂಧಿಸಿದಂತಹ ಕೆಲ ಖಾಯಿಲೆ ಕೇಸುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇವು ಎಷ್ಟು ವಿಚಿತ್ರವಾಗಿವೆ ಅಂದರೆ ಆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲು(ಡಯಾಗ್ನೈಸ್‌) ಸಾಧ್ಯವಿಲ್ಲ. ಡಯಾಗ್ನೈಸ್‌ ಮಾಡಲು ಆಗಲಿಲ್ಲ ಅಂದರೆ ಚಿಕಿತ್ಸೆ ನೀಡುವುದು ಹೇಗೆ? ಇದು ಬಹಳ ವಿಚಿತ್ರ.’ ಎನ್ನುತ್ತಾರೆ ಡಾ. ಶೈಲೇಂದ್ರ.
ಇಂಧನಗಳನ್ನು ದಹಿಸಿದಾಗ (ಫಾಸಿಲ್‌ ಪ್ಯೂಯಲ್‌) ಉತ್ಪತ್ತಿಯಾಗುವ ಅನಿಲ(ಕಾರ್ಬನ್‌ ಡೈ ಆಕ್ಸೈಡ್‌, ಕ್ಲೊರೋ ಪ್ಲೋರೋ ಕಾರ್ಬನ್‌) ಬಹಳ ವಿಷಯುಕ್ತವಾಗಿರುತ್ತವೆ. ನಮ್ಮ ಕಾರುಗಳಿಂದ ನೈಟ್ರೋಜನ್‌ ಉತ್ಪತ್ತಿಯಾಗುತ್ತದೆ. ನೈಟ್ರೋಜನ್‌ ಬಹಳ ಕೆಟ್ಟ ಅನಿಲ. ಬೆಂಗಳೂರಿನಲ್ಲಿ ಅದೆಷ್ಟು ಇಂಧನ ಉತ್ಪತ್ತಿಯಾಗುತ್ತಿವೆ ಅಂದರೆ, ಲೆಕ್ಕಕ್ಕೆ ಸಿಗದಷ್ಟು!
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನಲ್ಲೇ ಇದೆ! ಬೆಂಗಳೂರಿನ ವಾಯುಮಾಲಿನ್ಯ ಈ ಮಂಡಳಿಗೆ ಬಿಸಿತುಪ್ಪವಾಗಿದೆ. ಏನೇ ಸರ್ಕಸ್‌ ಮಾಡಿದರೂ ವಾಯುಮಾಲಿನ್ಯದ ಪ್ರಥಮ ಸ್ಥಾನದಿಂದ ಬೆಂಗಳೂರನ್ನು ಕೆಳಗಿಳಿಸಲು ಸಾಧ್ಯವಾಗಿಲ್ಲ. ಮಾಯುಮಾಲಿನ್ಯ ತಪಾಸಣೆಗಾಗಿ ನಗರದ ಮೂರು ಕಡೆಗಳಲ್ಲಿ ಘಟಕಗಳನ್ನು ಹೊಂದಿದೆ. ಆದರೂ ನಗರದ ಗಾಳಿ ಪ್ರತಿನಿತ್ಯ ಹದಗೆಡುತ್ತಿದೆ. ಪ್ರತಿವರ್ಷ ವಾಯುಮಾಲಿನ್ಯದ ಅಂಕಿ ಅಂಶಗಳ ವರದಿಯನ್ನು ತಪ್ಪದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ದೆಹಲಿ)ಗೆ ಸಲ್ಲಿಸುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ `ಟಾಸ್ಕ್‌ ಪೋರ್ಸ್‌’ವೊಂದನ್ನು 2001ರಲ್ಲಿ ರಚಿಸಲಾಗಿದೆ. ಇದರಲ್ಲಿ ಆರು ಮಂದಿ ಉನ್ನತ ಅಧಿಕಾರಿಗಳಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರು. ಪೊಲೀಸ್‌, ಅರಣ್ಯ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿದ್ದಾರೆ. ಬೆಂಗಳೂರಿನ ವಾಯುಸ್ಥಿತಿ ಬಗ್ಗೆ ಮಾತನಾಡಲು ಇವರಿಗ ಬಾಯಿಲ್ಲ!
ಬೆಂಗಳೂರು ಬೆಳೆಯುತ್ತಿದೆ! ಇದೊಂದೇ ಎಲ್ಲಾ ಸಮಸ್ಯೆಗಳ ಮೂಲ. ಕಳೆದ ಐದು ವರ್ಷಗಳಿಂದ ಬೆಂಗಳೂರು 20 ವರ್ಷಗಳಲ್ಲಿ ಬೆಳೆದಷ್ಟು ಬೆಳದಿದೆ. ಭಾರತದ ಭವಿಷ್ಯದ ನಗರ ಎಂದೇ ಈ ನಗರವನ್ನು ಬಣ್ಣಸಲಾಗುತ್ತಿದೆ. ಬೆಂಗಳೂರಿನ ಕೆರೆಗಳು ಒತ್ತುವರಿಯಾಗುತ್ತಿವೆ. ಬೆಂಗಳೂರು ಬೆಂಗಾಡಾಗುತ್ತಿದೆ.
ಗ್ರೀನ್‌ಟಾಕ್ಸ್‌: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ(ವಿಧಾನ ಸೌಧ ವಲಯ) ಗ್ರೀನ್‌ ಟ್ಯಾಕ್ಸ್‌ ವಾಹನ ಬಳಕೆದಾರರ ಮೇಲೆ ಗ್ರೀನ್‌ ಟ್ಯಾಕ್ಸ್‌ ವಿಧಿಸಲು ಒಂದು ಕರಡನ್ನು ಸಿದ್ಧಪಡಿಸಿದೆ. ಅದನ್ನು ಮಂಡಳಿಯ ಅಧ್ಯಕ್ಷ ಡಾ. ಶರತ್‌ಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಲಸ ಮಾಡುವ ನೂರಾರು ಎನ್‌ಜಿಒಗಳಿವೆ. ಅಸಂಖ್ಯಾತ ಪರಿಸರ ತಜ್ಞರಿದ್ದಾರೆ. ಪರಿಸರದ ಮೇಲೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಕರೆದುಕೊಂಡು ಬಂದು ಉಪನ್ಯಾಸ ಕೊಡಿಸುತ್ತಾರೆ. ತಿಂಗಳಿಗೊಂದು ಫಾರಿನ್‌ ಟೂರ್‌ ಮಾಡುತ್ತಾರೆ. ವಿದೇಶಿ ಹಣ ಹರಿದು ಬರುತ್ತದೆ. ಮಾತೆತ್ತಿದರೆ ಯುಎನ್‌ಇಪಿ(ಅಮೆರಿಕಾದ ಪರಿಸರ ಕಾರ್ಯಕ್ರಮ), ಡಬ್ಲ್ಯುಟಿಒ, ಡಬ್ಲ್ಯುಎಚ್‌ಒಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ಥಳೀಯ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲ.
ನ್ಯಾನೋ ಕಾರು ಬರುತ್ತಿದೆ. ಬೆಂಗಳೂರಿನ ಮಂದಿ ಮುಗಿಬಿದ್ದು ಬುಕ್‌ ಮಾಡುತ್ತಿದ್ದಾರೆ. ದ್ವಿಚಕ್ರ ವಾಹಗಳ ಸಂಖ್ಯೆ ಕುಸಿಯುವ ನಿರೀಕ್ಷೆ ಇದೆ. ಬೆದರಿದ ದ್ವಿಚಕ್ರ ವಾಹನ ಕಂಪನಿಗಳು 10 ಸಾವಿರ ಬೆಲೆಯ ಬೈಕ್‌ ಸಿದ್ಧಪಡಿಸಲು ಚಿಂತಿಸಿವೆ. ಒಟ್ಟಿನಲ್ಲಿ ಈ ನಗರ ನರಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ವಾಸ್ತು ಹೆಸ­ರಿ­ನಲ್ಲಿ ವೃಕ್ಷ­ಗ­ಳಿಗೆ ವಿಷ!


ಮುಂದಿನ ಮರ ಮನೆ ಮಾಲಿ­ಕ­ನಿಗೆ ಕಿರಿ­ಕಿರಿ. ಏನಾ­ದರೂ ಮಾಡಿ ಆ ಜಾಗ­ದಲ್ಲಿ ಮರವೇ ಇರ­ಲಿಲ್ಲ ಎನ್ನುವ ರೀತಿ ಮಾಡ­ಬೇಕು. ಕಡಿದು ಬೀಳಿ­ಸುವ ಹಾಗಿಲ್ಲ, ಅದು ಅಕ್ರಮ! ಮರದ ಕಾಟ­ದಿಂದ ತಪ್ಪಿ­ಸಿ­ಕೊ­ಳ್ಳಲು ಒಂದು ಕೆಲಸ ಮಾಡ­ಬ­ಹುದು. ಯಾರಿಗೂ ತಿಳಿ­ಯದ ಹಾಗೆ ಮರಕ್ಕೆ ವಿಷ ಉಣಿಸಿ ಕೊಲ್ಲು­ವುದು! ಅಲ್ಲಿಗೆ ಮರದ ಕಿರಿ­ಕಿ­ರಿ­ಯಿಂದ ಬಚಾವ್‌. ಕಾಂಪೌಂ­ಡ್‌ಗೆ ಸ್ವಲ್ಪ ಜಾಸ್ತಿ ಜಾಗ ಸಿಕ್ಕಿದ ಹಾಗಾ­ಯಿತು.
ಇದು ತಮಾ­ಷೆ­ಯಲ್ಲ. ಇದು ಬೆಂಗ­ಳೂ­ರಿ­ನಲ್ಲಿ ನಡೆ­ಯು­ತ್ತಿ­ರುವ ಸತ್ಯ ಸಂಗತಿ. ಒಂದು­ಕಡೆ ರಸ್ತೆ ಅಗ­ಲೀ­ಕ­ರ­ಣದ ಹೆಸ­ರಲ್ಲಿ ಬಿಬಿ­ಎಂಪಿ ಮರ­ಗ­ಳನ್ನು ನೆಲ­ಕ್ಕು­ರು­ಳಿ­ಸು­ತ್ತಿದೆ. ಇನ್ನೊಂದು ಕಡೆ ಮೆಟ್ರೋ ರೈಲಿಗೆ ಮರ­ಗ­ಳನ್ನು ಬಲಿ­ಕೊ­ಡ­ಲಾ­ಗು­ತ್ತಿದೆ. ಇದು ಎಲ್ಲ­ರಿಗೂ ಗೊತ್ತಿ­ರುವ ಸುದ್ದಿ. ಆದರೆ ಯಾರಿಗೂ ಗೊತ್ತಿ­ರದ ಇನ್ನೊಂದು ಸುದ್ದಿಯೇ `ಮ­ರ­ಗ­ಳಿಗೆ ವಿಷ ಉಣಿಸಿ ಕೊಲೆ.’
ಇತ್ತಿ­ಚೆಗೆ ಮಲ್ಲೇ­ಶ್ವರಂ ಬಡಾ­ವ­ಣೆಯ 15ನೇ ಕ್ರಾಸ್‌­ನಲ್ಲಿ ಮರ­ಬಿದ್ದು ಮಹಿ­ಳೆ­ಯೊ­ಬ್ಬರು ಮೃತ­ಪ­ಟ್ಟರು. ಮಳೆ ಗಾಳಿ ಏನೂ ಇರ­ಲಿಲ್ಲ. ಇದ್ದ­ಕ್ಕಿ­ದ್ದಂತೆ ಬಿದ್ದ ಮರದ ಬುಡ­ವನ್ನು ಪರಿ­ಶೀ­ಲಿ­ಸಿ­ದಾಗ ಬಹಿ­ರಂ­ಗ­ಗೊಂಡ ಸುದ್ದಿಯೇ ಮರ­ಗ­ಳಿಗೆ ವಿಷ­ಪ್ರಾ­ಷನ! ಯಾರೋ ಕಿಡಿ­ಗೇ­ಡಿ­ಗಳು ಮರದ ಬುಡಕ್ಕೆ ಮರ್ಕ್ಯುರಿ ಮಿಶ್ರ­ಣ­ವನ್ನು ಸುರಿದು, ಅದರ ಬೇರು­ಗಳು ಸುಟ್ಟು­ಹೋ­ಗು­ವಂತೆ ಮಾಡಿ­ದ್ದರು. ಅವರು ಬುದ್ದಿ­ವಂತ ಕಿಡಿ­ಗೇ­ಡಿ­ಗಳು. ಬುಡದ ಸುತ್ತಲೂ ಸಗಣಿ ಹಾಕಿದ್ದ ಕಾರಣ ವಿಷ ಬುಡ­ದಲ್ಲಿ ಇರು­ವುದು ಯಾರಿಗೂ ತಿಳಿ­ಯ­ಲಿಲ್ಲ.
ಕಾರ­ಣ­ಗಳು ಏನು ಗೊತ್ತೆ?: ಬಹಳ ಕ್ಷುಲ್ಲ­ಕ­ವಾ­ಗಿವೆ. ವಾಸ್ತು ಹೆಸ­ರಿ­ನಲ್ಲಿ ಮರ­ವನ್ನು ಕೊಲ್ಲ­ಲಾ­ಗು­ತ್ತಿದೆ. ಈ ಜೋತಿ­ಷಿ­ಗ­ಳಿಗೂ ಬುದ್ಧಿ ಇಲ್ಲ. ವಾಸ್ತು ದೋಷ­ವಿ­ದ್ದರೆ `ಮನೆ ಬಿಡಿ’ ಎಂದು ಸಲಹೆ ಮಾಡಲಿ. ಅದು ಬಿಟ್ಟು ಮರ ಕಡಿ­ಯಿರಿ ಅಂತ ಯಾಕೆ ಮಾಡ­ಬೇಕು? ಮರದ ಬೇರು­ಗಳು ಮನೆಯ ಕಾಂಪೌಂ­ಡಿನ ಗೋಡೆ­ಯನ್ನು ಹಾಳು­ಗೆ­ಡ­ವು­ತ್ತವೆ ಎಂದೂ ಕೂಡ ಮರಕ್ಕೆ ವಿಷ ಉಣಿ­ಸ­ಲಾ­ಗು­ತ್ತಿದೆ.
ಸೌದೆ­ಗಾಗಿ ಮರದ ಕೊಲೆ: ಇಟ್ಟಿಗೆ ಸುಡು­ವ­ವರು ಬದು­ಕಿ­ರುವ ಮರ­ಗ­ಳನ್ನು ಕೆಡವಿ ಒಣ­ಗಿಸಿ ಸೌದೆ ಮಾಡಿ­ಕೊ­ಳ್ಳು­ತ್ತಾರೆ. ಬರೀ ಇಟ್ಟಿಗೆ ಸುಡು­ವ­ವರು ಮಾತ್ರ­ವಲ್ಲ ದಿನ­ಬ­ಳ­ಕೆಗೆ ಸೌದೆ­ಯನ್ನು ಬೆಳೆ­ಸು­ವ­ವರು ಕೂಡ ಸಣ್ಣ ಪುಟ್ಟ ಮರ­ಗ­ಳನ್ನು ಕಡಿದು ಸೌದೆಗೆ ಬಳ­ಸು­ತ್ತಾರೆ. ಗ್ರಾಮೀಣ ಭಾಗ­ದಲ್ಲಿ ಸೌದೆ­ಯಿಂದ ಅಡುಗೆ ಮಾಡು­ವ­ವರು ಈ ಕೃತ್ಯ­ವನ್ನು ಹೆಚ್ಚು ಮಾಡು­ತ್ತಾರೆ.
ಭಾರ­ತೀಯ ಅರಣ್ಯ ಕಾನೂ­ನಿನ ಪ್ರಕಾರ ಈ ಎಲ್ಲಾ ಕೃತ್ಯ­ಗಳು ಅಕ್ರಮ. ಅರಣ್ಯ ಉತ್ಪ­ನ್ನ­ಗ­ಳಿಗೆ ಧಕ್ಕೆ ಮಾಡು­ವ­ವ­ರಿಗೆ ಶಿಕ್ಷಿ ವಿಧಿ­ಸುವ ಉಪ­ಬಂ­ಧ­ಗಳು ಈ ಕಾನೂ­ನಿ­ನಲ್ಲಿ ಇದೆ. ಆದರೆ ಬೆಂಗೂ­ಳೂ­ರಿನ ಯಾವೊಂದು ಪೊಲೀಸ್‌ ಠಾಣೆ­ಯಲ್ಲೂ ಮರಕ್ಕೆ ವಿಷ­ಪ್ರಾ­ಷ­ನಕ್ಕೆ ಸಂಬಂ­ಧಿ­ಸಿದ ಯಾವೊಂದು ಪ್ರಕ­ರ­ಣವೂ ದಾಖ­ಲಾ­ಗಿಲ್ಲ.
ಇಲಾ­ಖೆ­ಗ­ಳಿಗೆ ಬಾಯಿ ಇಲ್ಲ: ಅರಣ್ಯ ಇಲಾ­ಖೆಯ ಅಧಿ­ಕಾ­ರಿ­ಗ­ಳನ್ನು ಕೇಳಿ­ದರೆ ಈ ವಿಷಯ ಗೊತ್ತೇ ಇಲ್ಲಾ ಎಂಬಂತೆ ನಾಟಕ ಆಡು­ತ್ತಾರೆ. ಬೀಳುವ ಅಪಾ­ಯ­ವಿ­ರುವ ಕೆಲವು ಹಳೆಯ ಮರ­ಗ­ಳನ್ನು ಕಡಿ­ಯ­ಬೇಕು ನಿಜ. ಆದರೆ ಯಾರಿಗೂ ತಿಳಿ­ಯದ ಹಾಗೆ ಯಾವುದೋ ಅನಿ­ಲ­ವನ್ನು ಇಂಜೆಕ್ಟ್‌ ಮಾಡಿ ಕೆಡ­ವ­ಬೇ­ಕಿಲ್ಲ. ಮರ ಉರುಳಿ ಬಿದ್ದಾಗ ಮಾತ್ರ ಮರಕ್ಕೆ ವಿಷಾ­ನಿಲ ಇಂಜೆಕ್ಟ್‌ ಮಾಡ­ಲಾ­ಗಿದೆ ಎಂದು ತಿಳಿ­ಯು­ತ್ತದೆ. ಆದರೆ ಅದಕ್ಕೂ ಮುಂಚೆ ಮರ­ವನ್ನು ಟೆಸ್ಟ್‌ ಮಾಡಿ ಆ ರೀತಿ ಏನಾ­ದರೂ ಮಾಡ­ಲಾ­ಗಿ­ದೆಯೇ ಎಂಬು­ದನ್ನು ಪತ್ತೆ ಮಾಡುವ ಮಾನ­ದಂಡ ಅಧಿ­ಕಾ­ರಿ­ಗಳ ಬಳಿ ಇಲ್ಲ.
ತಪ್ಪಿ­ಸಿ­ಕೊ­ಳ್ಳು­ವುದು ಸುಲಭ: ಮರ ಹಸಿ­ರಾಗಿ ಆರೋ­ಗ್ಯ­ವಾ­ಗಿಯೇ ಇರು­ತ್ತದೆ. ಇದ್ದ­ಕ್ಕಿಂ­ದಂತೇ ಉರುಳಿ ಬಿದ್ದಾಗ ಯಾರ ಮೇಲೂ ಅನು­ಮಾನ ಪಡ­ಲಿ­ಕ್ಕಾ­ಗು­ವು­ದಿಲ್ಲ.ಗೆ­ದ್ದಲು ತಿಂದು ಸತ್ತಿ­ದ್ದಕ್ಕೆ ಯಾರೇನು ಮಾಡ­ಕ್ಕಾ­ಗುತ್ತೆ ಅಂತ ಸುಲ­ಭ­ವಾಗಿ ಅಪ­ರಾ­ಧಿ­ಗಳು ತಪ್ಪಿ­ಸಿ­ಕೊ­ಳ್ಳ­ಬ­ಹುದು.
ಯಾವ ಕಾರ­ಣ­ಕ್ಕಾಗಿ ಮರ ಉರುಳಿ ಬಿದ್ದಿತು, ನಿಜ­ವಾಗಿ ವಿಷ ಉಣಿಸಿ ಮರ­ವನ್ನು ಕೊಲ್ಲ­ಲಾ­ಯಿತೆ ಎಂದು ಪತ್ತೆ ಮಾಡುವ ಮಾನ­ದಂ­ಡದ ಅವ­ಶ್ಯ­ಕತೆ ಬೇಕಾ­ಗಿದೆ. ಇದ­ರಿಂದ ಅಪ­ರಾ­ಧಿ­ಗ­ಳನ್ನು ಪತ್ತೆ­ಮಾ­ಡ­ಬ­ಹುದು.
ಬೆಂಗ­ಳೂ­ರಿ­ನಲ್ಲಿ ಇಂಚು ಜಾಗಕ್ಕೂ ಚಿನ್ನ­ಕ್ಕಿಂತ ಜಾಸ್ತಿ ಬೆಲೆ. ಗೇಣುದ್ದ ಭೂಮಿ ಪುಕ್ಕಟ್ಟೆ ಸಿಗುತ್ತೆ ಅಂದ್ರೆ, ಮರ ಬೀಳಿ­ಸೋದು ಮಾತ್ರ­ವಲ್ಲ, ಮನು­ಷ್ಯರ ಪ್ರಾಣ ತೆಗೆ­ಯೋಕು ಸಿದ್ಧ­ವಿ­ರುವ ಮಂದಿ ಇದ್ದಾರೆ. ಇದೇ ರಿಯಲ್‌ ಎಸ್ಟೇಟ್‌ ಭೂಮ್‌! ಇವರು ಹೇಗಾ­ದರೂ ಕಿತ್ತಾ­ಡಿ­ಕೊಂಡು ಸಾಯಲಿ. ಆದರೆ ಅಮಾ­ಯಕ ಮರ­ಗಳ ಪ್ರಾಣ ತೆಗೆ­ಯೋದು ಯಾವ ನ್ಯಾಯ?


ಸ್ಕ್ಯಾಂಡಲ್‌ವುಡ್‌ಕತೆ


ಈಗ ನೀವೂ ಕೂಡ ಗಂಧ ಬೆಳೆಯಬಹುದು!
ಆಶ್ಚರ್ಯ ಪಡಬೇಕಾಗಿಲ್ಲ. ಇದು ಹೊಸ ಕಾನೂನಲ್ಲ. ಹಳೇ ಕಾನೂನು! ಕರ್ನಾಟಕ ಅರಣ್ಯ ಕಾಯ್ದೆಗೆ 2001ರಲ್ಲಿ ತಿದ್ದುಪಡಿ ತಂದು ಗಂಧ ಬೆಳೆಯುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಸಾರ್ವಜನಿಕವಾಗಿ ಗಂಧ ಬೆಳೆಯುವ ಧೈರ್ಯ ಯಾರಿಗೂ ಇಲ್ಲ. ದುರಾದೃಷ್ಟವೆಂದರೆ ಈ ವಿಷಯ ಕೆಲವರಿಗೆ ಗೊತ್ತಿಲ್ಲ.
ಬೆಂಗಳೂರು ನಗರ ವಿಭಾಗದ ಅರಣ್ಯ ವಲಯವನ್ನು ತೆಗೆದುಕೊಂಡರೆ ಐಐಟಿ, ಐಐಎಂ, ಐಐಎಸ್‌ಸಿ, ಬೆಂಗಳೂರು ವಿವಿ ಹಾಗೂ ಇನ್ನಿತರ ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರ ಗಂಧದ ಮರಗಳು ಕಂಡುಬರುತ್ತವೆ. ಅರಣ್ಯ ಇಲಾಖೆಗಳ ಬಳಿ ಗಂಧದ ಮರಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ- ಅಂಶಗಳಿಲ್ಲ. ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಇತಿಹಾಸ ಪ್ರಸಿದ್ಧ ಚಂದನವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.
ಹಳ್ಳಿಗರಲ್ಲಿ ಗಂಧದ ಬಗ್ಗೆ ಬೇರೆಯದೇ ನಂಬಿಕೆ ಇದೆ. ಗಂಧ ಬೆಳೆದರೆ ಅದು ನಮ್ಮದಾಗುವುದಿಲ್ಲ. ಗಂಧ ಸರ್ಕಾರದ ಸ್ವತ್ತು. ಅದನ್ನು ಸರ್ಕಾರ ಮಾತ್ರವೇ ಬೆಳೆಯಬೇಕು, ವೈಯಕ್ತಿಕವಾಗಿ ಬೆಳೆಯುವ ಹಕ್ಕು ಯಾರಿಗೂ ಇಲ್ಲ. ಗಂಧವನ್ನು ಮಾರಾಟ ಮಾಡುವ ಹಾಗಿಲ್ಲ. ಗಂಧ ಬೆಳೆದರೆ ಅರಣ್ಯ ಅಧಿಕಾರಿಗಳು ಕಡಿದುಕೊಂಡು ಹೋಗುತ್ತಾರೆ……
ಇಂತಹ ತಪ್ಪು ತಿಳುವಳಿಕೆಗಳು ಜನರಲ್ಲಿವೆ. ಕರ್ನಾಟಕ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅರ್ಧ ದಶಕ ಕಳೆದರೂ ಈ ಕಾನೂನು ನಾಗರಿಕರಿಗೆ ನೀಡಿರುವ ಅಧಿಕಾರದ ಅರಿವನ್ನು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ.
ಗಂಧ ಮಾರಟಕ್ಕೆ ಕೆಲ ನಿಮಮಾವಳಿಗಳಿವೆ. ಸಾರ್ವಜನಿಕರು ಗಂಧ ಬೆಳೆದರೆ ಸರ್ಕಾರ ಮಾರುಕಟ್ಟೆ ನೀಡುತ್ತದೆ. ಗಂಧ ಬೆಳೆದವರಿಗೆ ಬೋನಸ್‌ ಕೂಡ ನೀಡುತ್ತದೆ.
ಗಂಧ ಚೋರರು: ಅರಣ್ಯ ಇಲಾಖೆ ಅಧಿಕಾರಿಗಳು ಗಂಧ ಸಂತತಿ ಕಡಿಮೆಯಾಗಲು ಗಂಧದ ಕಳ್ಳತನವೇ ಕಾರಣ ಎನ್ನುತ್ತಾರೆ. ಅಂತರ ರಾಜ್ಯ ಗಂಧ ಚೋರರು ಗಂಧಕಳ್ಳತನದಲ್ಲಿ ತೊಡಗಿದ್ದಾರೆ. ಈ ಕಾರಣದಿಂದ ಗಂಧವನ್ನು ವೈಯಕ್ತಿಕವಾಗಿ ಬೆಳೆಯಲು ಜನರು ಹೆದರುತ್ತಾರೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದು ನಿಜ ಕೂಡ. ಇತ್ತೀಚೆಗೆ ಬೆಂಗಳೂರಿನ ಐಐಎಂ ಆವರಣದಲ್ಲಿ ಗಂಧ ಕಡಿದು ಇಬ್ಬರು ಅಂತರ ರಾಜ್ಯ ಕಳ್ಳರು ಸಿಕ್ಕಿ ಬಿದ್ದರು. ಬೆಂಗಳೂರು ವಿವಿ(ಜ್ಞಾನಭಾರತಿ) ಆವರಣದಲ್ಲಿ ಪ್ರತಿನಿತ್ಯ ಗಂಧದ ಕಳ್ಳತನ ನಡೆಯುವ ಬಗ್ಗೆ ವರದಿಯಿದೆ. ಸರಿಯಾದ ರಕ್ಷಣೆ ವ್ಯವಸ್ಥೆ ಇಲ್ಲದೆ ಗಂಧದ ಮರಗಳು ಕಳ್ಳರ ಕೊಡಲಿಗೆ ಬಲಿಯಾಗುತ್ತಿವೆ.

ಇತಿಹಾಸ: ಗಂಧದ ಮರಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ಗಂಧದ ಪರಿಮಳದ ಬಗ್ಗೆ ಪುರಾಣ ಸಾಹಿತ್ಯದಲ್ಲಿ ಉಲ್ಲೇಖವಿದೆ. ಗಂಧಕ್ಕೆ ಔಷಧೀಯ ಗುಣವಿದ್ದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಕಾಳಿದಾಸನಿಂದ ಹಿಡಿದು ಟಿಪ್ಪು ಸುಲ್ತಾನನವರೆಗೂ ಗಂಧದ ಪರಿಮಳ ಹರಡಿತ್ತು. ಶ್ರೀರಂಗ ಪಟ್ಟಣ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಈಗ ಅಲ್ಲಿ ಗಂಧ ಕಾಣ ಸಿಗುವುದಿಲ್ಲ. ಒಂದು ಕಾಲದಲ್ಲಿ ಕರ್ನಾಟಕ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಮೈಸೂರು ಸ್ಯಾಂಡಲ್‌ಗೆ ಅಂತಾರಾಷ್ಟ್ರೀಯ ಖ್ಯಾತಿಯಿದೆ. ಇಂದು ಕರ್ನಾಟಕದ ಕಾಡುಗಳಲ್ಲಿ ಗಂಧದ ಮರ ತಡಕಿದರೂ ಸಿಗುವುದಿಲ್ಲ.
ಇಂದಿಗೂ ಗಂಧಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿದೆ. ಗಂಧದ ಕರಕುಶಲ ವಸ್ತುಗಳು, ಗಂಧದ ವಿಗ್ರಹಗಳಿಗೆ ಬಲು ಬೇಡಿಕೆಯಿದೆ. ಗಂಧದ ಎಣ್ಣೆಗೂ ಕೂಡ ಅಪಾರ ಬೇಡಿಕೆಯಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ಗಂಧ ಹೇರಳವಾಗಿ ದೊರೆಯುತ್ತಿತ್ತು. ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶ ಗಂಧಕ್ಕೆ ಹೆಸರುವಾಸಿಯಾಗಿತ್ತು. 1880ರ ವರದಿಯ ಪ್ರಕಾರ ರಾಜ್ಯದ ಒಟ್ಟು ಆದಾಯದಲ್ಲಿ ಶೇ. 30ರಷ್ಟು ಗಂಧದ ಪಾಲಿತ್ತು.

ಗಂಧ ಸಹಾಯವಾಣಿ: ಕರ್ನಾಟಕ ಅರಣ್ಯ ಇಲಾಖೆ ಗಂಧದಮರ ರಕ್ಷಣೆಗೆ ಹೊಸ ಮಾಡಿದೆ. ಗಂಧದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸಹಾಯವಾಣಿಯೊಂದನ್ನು ರಚಿಸಿದ್ದು, ಆ ಮೂಲಕ ಗಂಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆ ಸಹಾಯವಾಣಿ ನೀಡಲಿದೆ.
ಬೆಂಗಳೂರು ನಗರ ಅರಣ್ಯ ವಲಯದ ಡಿಸಿಎಫ್‌ ಶ್ರೀವಾಸ್ತವ್‌ ಸಹಾಯವಾಣಿ ಕುರಿತು ಮಾಹಿಸಿ ನೀಡಿದ್ದಾರೆ. ಈ ಸಹಾಯವಾಣಿಯ ಅನುಕೂಲವನ್ನು ಸಾರ್ವಜನಿಕರೂ ಕೂಡ ಪಡೆಯಬಹುದಾಗಿದೆ. ಸಾರ್ವಜನಿಕರು ಗಂಧಬೆಳೆಯುವ ಎಲ್ಲಾ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರ ಗಂಧ ಗಣತಿಯನ್ನು ಕೈಕೊಂಡಾಗ ಗಂಧ ಬೆಳೆದ ಮಾಲೀಕರು ಈ ಸಹಾಯವಾಣಿಗೆ ತಮ್ಮ ಮಾಹಿತಿಯನ್ನು ನೀಡಬಹುದಾಗಿದೆ.
ಈ ಸಹಾಯವಾಣಿಯ ಮುಖ್ಯವಾದ ಉದ್ದೇಶವೆಂದರೆ ಗಂಧ ಕಳ್ಳತನ ತಡೆಯುವುದು. ಗಂಧ ಕಳ್ಳತನದ ಬಗ್ಗೆ ಈ ಸಹಾಯವಾಣಿಯ ಮೂಲಕ ದೂರನ್ನೂ ಕೂಡ ಸಲ್ಲಿಸಬಹುದು.
ಅರಣ್ಯ ಇಲಾಖೆಯ ಈ ಪ್ರಯತ್ನ ಎಷ್ಟರಮಟ್ಟಿಗೆ ರಾಜ್ಯಕ್ಕೆ ಗಂಧದ ಪರಿಮಳ ತರಬಲ್ಲದು ಎಂಬುದನ್ನು ಕಾದು ನೋಡಬೇಕು. ಗಂಧರಾಜ್ಯ ನಿರ್ಮಾಣ ಆಗದಿದ್ದರೆ ಬೇಡ, ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್‌ ಆಗದಿದ್ದರೆ ಸಾಕು

ಸೋಮವಾರ, ಸೆಪ್ಟೆಂಬರ್ 29, 2008






ಪರಿಸರ ಸ್ನೇಹಿಗಳಾಗೋಣ
ಗಣೇಶನನ್ನು ಆರಾಧಿಸೋಣ

ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ ಮತ್ತೊಮ್ಮೆ ಬಂದಿದೆ. ಕಡ್ಲೆ ಕಾಳು ಗಣಪ, ಧಾನ್ಯ ಗಣಪ, ಸಾಸಿವೆ ಗಣಪ, ನಾಟ್ಯ ಗಣಪ, ಬಾಲ ಗಣಪ, ಬಾದಾಮಿ ಗಣಪ, ಕಮಲದ ಮೇಲೆ ಅರಳಿದ ಗಣಪ, ನಿಂತಿರುವ ಗಣಪ. ಕೂತಿರುವ ಗಣಪ……ಈಗಿನ ಅಭಿನವ್‌ ಬಿಂದ್ರಾ ಗಣಪ ಮುಂತಾದ ಮೂರುತಿ ಕೊಳ್ಳಲು ಭಕ್ತರಿಗೆ ಸಂಭ್ರಮವೋ ಸಂಭ್ರಮ.
ಕೊಳ್ಳಿ. ಬೇಡ ಎನ್ನಲಾಗುವುದಿಲ್ಲ. ಆದರೆ ರಾಸಾಯನಿಕ ಬಣ್ಣ ಬಳಸಿ ಮಾಡಿದ ಗಣಪನನ್ನು ಮಾತ್ರ ಕೊಳ್ಳಬೇಡಿ. ಇತ್ತೀಚೆಗೆ ಗಣಪನ ವಿಗ್ರಹವನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ಮಾಡಲಾಗುತ್ತಿದೆ. ಇಂತಹ ಮೂರ್ತಿಗಳನ್ನು ಮನೆಯಲ್ಲಿ ಇಡುವುದರಿಂದ ಗಂಟಲು ಬೇನೆ, ಚರ್ಮ ತುರಿಕೆ, ಕಣ್ಣು ಉರಿಯುವಿಕೆ, ಮೂಗು ಕಟ್ಟುವಂತಹ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಪರಿಸರ ಸ್ನೇಹಿಗಳಾಗೋಣ: ಗಣೇಶನನ್ನು ಆರಾಧಿಸುವಾಗ ಭಕ್ತರು ಎಚ್ಚರಿಕೆಯಿಂದ ಆಚರಿಸಿದರೆ ಪರಿಸರವನ್ನು ಸಂರಕ್ಷಿಸಬಹುದು. ಗಣೇಶ ಹಬ್ಬ ಬಂದಾಗಾದರೂ ಪರಿಸರ ಸ್ನೇಹಿಗಳಾಗಬೇಕಲ್ಲವೇ?
ಹಿಂದೆ ಗಣೇಶನನ್ನು ಕೆಲವು ಮಂದಿ ಮಾತ್ರ ಮಾಡುತ್ತಿದ್ದರು. ನಿಜವಾಗಿ ಶಿಲ್ಪಕಲೆ ಗೊತ್ತಿದ್ದವರು ಮಾತ್ರ ಮಾಡುತ್ತಿದ್ದರು. ವಂಶ ಪಾರಂಪರ್ಯವಾಗಿ ಬಂದಿದ್ದ ಕಾಯಕವಾಗಿತ್ತು. ವಿಗ್ರಹ ಮಾಡುವುದು ಪರಮಾತ್ಮನ ಆರಾಧನೆ ಎಂದೇ ಭಾವಿಸುತ್ತಿದ್ದರು. ಇವತ್ತು ಅವರು ಮೂಲೆ ಗುಂಪಾಗಿದ್ದಾರೆ. ಈಗ ಗಣೇಶನನ್ನು ಲಾಭ ಗಳಿಕೆ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ. ಜೇಡಿ ಮಣ್ಣಿನ ಗಜಾನನನನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಈಗೆಲ್ಲಾ ಮೌಲ್ಡ್‌ ಗಣಪನನ್ನು ಮಾಡುತ್ತಿದ್ದಾರೆ. ಇದಕ್ಕೆ ಕಲಾವಿದರ ಅವಶ್ಯಕತೆ ಇಲ್ಲಾ. ಮೌಲ್ಡ್‌ ಮೂಲಕ ಯಾರು ಬೇಕಾದರೂ ಮಾಡಬಹುದು.
ಮಣ್ಣಿನಿಂದ ಮಾಡಿದ ಗಣಪನ ವಿಸರ್ಜನೆ ಬಲು ಸುಲಭ. ಎಲ್ಲೇ ವಿಸರ್ಜನೆ ಮಾಡಿದರೂ ಬಲು ಬೇಗನೆ ಕರಗಿ ಹೋಗುತ್ತಾನೆ. ಇದರಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವೂ ಬೀರುವುದಿಲ್ಲ. ಆದರೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ಸಿನಿಂದ ಮಾಡಿದ ಗಣಪಂದಿರು ಅಷ್ಟು ಬೇಗನೆ ಕರಗಲಾರರು. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾರೆ.
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಜೊತೆ ಬಳಸುವ ರಾಸಾಯನಿಕಗಳು ಬಹಳ ಕೆಟ್ಟವು. ಇವು ಕಣ್ಣಿಗೆ ಸೋಕಿದರೆ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಈ ಮೂರ್ತಿಗಳನ್ನು ಮಕ್ಕಳು ಮುಟ್ಟದಂತೆ ನೋಡಿಕೊಳ್ಳುವುದು ಒಳ್ಳೆಯದು.
ಬಿಬಿಎಂಪಿ ಕ್ರಮ: ಗಣೇಶ ಹಬ್ಬ ಬಂದಾಗಲೆಲ್ಲಾ ಪಾಲಿಕೆ ಕ್ರಮಕೈಗೊಳ್ಳುವುದು ಮಾಮೂಲು. ಅದರಂತೆ ಈ ವರ್ಷವೂ ಕೂಡ ಶಾಂತಿಯುತ ಗಣೇಶ ವಿಸರ್ಜನೆಗೆ ಕ್ರಮ ಕೈಗೊಂಡಿದೆ.
ಬಿಬಿಎಂಪಿ ಗಣೇಶ ವಿಸರ್ಜನೆ ಉದ್ದೇಶಕ್ಕಾಗಿಯೇ ಕೆರೆಗಳ ಬದಿಯಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಕಡ್ಡಾಯವಾಗಿ ಅಲ್ಲಿಯೇ ವಿಸರ್ಜಿಸಬೇಕೆಂದು ಆದೇಶ ನೀಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆಗಳಲ್ಲಿ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಕೆರೆ ಬಾಗದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವವರಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಗಣೇಶ ಪೂಜೆಗಾಗಿ ಬಳಸುವ ಪೂಜಾ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅದಕ್ಕಾಗಿಯೇ ಇಡಲಾಗಿರುವ ಡಸ್ಟ್‌ಬಿನ್‌ಗಳಲ್ಲಿ ಹಾಕಬೇಕಾಗಿ ಬಿಬಿಎಂಪಿ ಕೋರಿದೆ. ಕೆರೆಗಳ ಗೇಟ್‌ನಲ್ಲಿ ಈ ಡಸ್ಟ್‌ಬಿನ್‌ಗಳನ್ನು ಆಯಾ ಕೆರೆಗಳ ಮುಖ್ಯ ಗೇಟ್‌ನಲ್ಲಿ ಇಡಲಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ರಾತ್ರಿ 10: 30 ಗಂಟೆಯ ನಂತರ ಗಣೇಶ ವಿಸರ್ಜನೆ ಅವಕಾಶವಿಲ್ಲ.
ಮೊಬೈಲ್‌ ಟ್ಯಾಂಕ್‌: ಬಿಬಿಎಂಪಿ ಈ ಬಾರಿ ಗಣೇಶ ವಿಸರ್ಜನೆಗೆ ವಿಶೇಷವಾಗಿ ಮೊಬೈಲ್‌ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ. ಎರಡು ಅಡಿ ಅಥವಾ ಅದಕ್ಕಿಂತ ಚಿಕ್ಕ ಗಣೇಶ ಮೂರ್ತಿಗಳನ್ನು ಈ ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬಹುದಾಗಿದೆ.
ಪಟಾಕಿ ಹೊಡೆಯುವಾಗ ಎಚ್ಚರ: ಗಣೇಶ ಹಬ್ಬ ಎಂದರೆ ಪಟಾಕಿ ಹಬ್ಬವೂ ಕೂಡ. ದೀಪಾವಳಿ ಹಬ್ಬವಾದರೆ ಎಲ್ಲರೂ ಪಟಾಕಿ ಹೊಡೆಯುತ್ತಾರೆ. ಆದರೆ ಗಣೇಶ ಹಬ್ಬದಲ್ಲಿ ಎಲ್ಲರೂ ಪಟಾಕಿ ಹೊಡೆಯುವುದಿಲ್ಲ. ಆದ್ದರಿಂದ ರಾತ್ರಿವೇಳೆ ಪಟಾಕಿ ಸಿಡಿಸಿದರೆ ಬೇರೆಯವರಿಗೆ ತೊಂದರೆ ಆಗುತ್ತದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಊರೆಲ್ಲಾ ಮೆರವಣಿಗೆ ಒಳ್ಳೆಯದಲ್ಲ. ಸುಮ್ಮನೆ ತೊಂದರೆ ಸೃಷ್ಟಿ. ಗಣೇಶನನ್ನು ಕೂರಿಸಿದ ಜಾಗದಲ್ಲಿ ಪೂಜಿಸಿ, ಸೀದಾ ವಿಸರ್ಜನಾ ಸ್ಥಳಕೆ ತೆಗೆದುಕೊಂಡು ಹೋಗಿ ಅಲ್ಲೊಮ್ಮೆ ಪೂಜಿಸಿ ವಿಸರ್ಜಿಸಿದರೆ ಮುಗಿಯಿತು.
ಮೈಕಾಸುರನ ಹಾವಳಿ ಬೇಡ: ಇದು ಬರೀ ಕಿರಿ ಕಿರಿ. ಮೈಕ್‌ ಹಾಕುವುದರಿಂದ ಶಬ್ದ ಮಾಲಿನ್ಯವೂ ಆಗುತ್ತದೆ. ಮೊದಲೇ ಈ ಊರ ಜನ ವಾಹನ ಶಬ್ದಕ್ಕೇ ಕಿವುಡಾಗುತ್ತಿದ್ದಾರೆ. ಅನಿಯಮಿತವಾಗಿ ಮೈಕ್‌ ಹಾಕುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಅಲ್ಲದೆ ನಿಯಮಿತ ಅವಧಿಗಿಂತ ಹೆಚ್ಚು ಕಾಲ ಮೈಕ್‌ ಹಾಕುವುದಾದರೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಇವಿಷ್ಟು ಗಣೇಶ ಹಬ್ಬದ ಪ್ರಯುಕ್ತ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳು. ಎಲ್ಲರೂ ಸ್ವಯಂ ಸ್ಫೂರ್ತಿಯಿಂದ ಕ್ರಮ ತೆಗೆದುಕೊಂಡರೆ ಅಲ್ಲಿ ಸಮಸ್ಯೆ ಎಂಬುದೇ ಉದ್ಬವವಾಗಲಾರದು. ಯಾರದೋ ಒತ್ತಾಯಕ್ಕಾಗಿ ತೆಗೆದುಕೊಂಡಾಗ ಸಮಸ್ಯೆ ಉಂಟಾಗುತ್ತದೆ.
ನಮ್ಮಗಣೇಶ ಹಬ್ಬದ ಶುಭ ಗಳಿಗೆಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡೋಣ, ಮಾತನಾಡೋಣ, ಯೋಚಿಸೋಣ. ಜೈ ಗಣೇಶ.



ಮಹತ್ವ ಪಡೆಯುತ್ತಿರುವ ಪರಿಸರ ಕಾನೂನು


ಎಂ.ಸಿ. ಮೆಹತಾ ಎಂಬ ಪರಿಸರ ಪ್ರೇಮಿ ಇಲ್ಲದಿದ್ದರೆ ಬಹುಶಃ ಪರಿಸರ ಕಾನೂನುಗಳ ಒಂದು ಸ್ಪಷ್ಟ ಚಿತ್ರಣ ಭಾರತದಲ್ಲಿ ಸಿಗುತ್ತಿರಲಿಲ್ಲ. ಭಾರತೀಯ ಪರಿಸರ ಕಾನೂನು ಉದಯವಾಗುವುದಕ್ಕೆ ಮೆಹತಾ ಕೊಡುಗೆ ಅಪಾರ. ನಿಜವಾಗಿ ಪರಿಸರ ಕಾನೂನು ಕಾನೂನೇ ಅಲ್ಲ, ಅದು ಸರ್ವೋಚ್ಛ ನ್ಯಾಯಾಲಯದ ಕೊಡುಗೆ ಎಂದು ಹೇಳುವುದುಂಟು. ಪರಿಸರ ಸಮಸ್ಯೆಯೊಂದು ಸಾರ್ವಜನಿಕ ಹಿತಾಸಕ್ತಿ ದಾವೆಯ ರೂಪದಲ್ಲಿ ಕೋರ್ಟ್‌ ಮೆಟ್ಟಿಲೇರಿದಾಗ ತೀರ್ಪಿನ ರೂಪದಲ್ಲಿ ಹೊರಬಂದ ಅಭಿಪ್ರಾಯವೇ ಇಂದು ಪರಿಸರ ಕಾನೂನಾಗಿ ರೂಪುಗೊಂಡಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಇದಕ್ಕೆ ಹಲವು ಉದಾಹರಣೆಗಳಿವೆ. ಆ ಪೈಕಿ ಇತ್ತೀಚಿನ ಕೆಲವು…
* ತಾಜ್‌ ಪ್ರಕರಣ: ಆಗ್ರಾ ಸುತ್ತಮುತ್ತಲಿನ ಕೈಗಾರಿಕೆಗಳಿಂದ ವಿಶ್ವ ಪ್ರಸಿದ್ಧ ಸ್ಮಾರಕ ತಾಜ್‌ಮಹಲ್‌ನ ಅಮೃತ ಶಿಲೆಗಳು ಹಸಿರು ಬಣ್ಣಕ್ಕೆ ತಿರುಗಿ ಹೊಳಪು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಎಂ.ಸಿ. ಮೆಹತಾ ಸಾರ್ವಜನಿಕ ಹಿತಾಸಕ್ತಿ ದಾವೆ ಹಿಡಿದು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದರು. ಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿತು. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಭಾರತೀಯ ಪರಿಸರ ಕಾನೂನುಗಳಲ್ಲಿ ಲ್ಯಾಂಡ್‌ಮಾರ್ಕ್‌ ಜಡ್ಜ್‌ಮೆಂಟ್‌.
* ಗಂಗಾನದಿ ಪ್ರಕರಣ: ಭಾರತೀಯರಿಗೆ ಗಂಗಾನದಿ ಬಲು ಪವಿತ್ರವಾದುದು. ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿ ಮಿಂದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಆದರೆ ಗಂಗಾನದಿಯ ಇನ್ನೊಂದು ಮುಖ ಸಾವು! ಕೈಗಾರಿಕೆಗಳು ತಡೆಯಿಲ್ಲದೆ ಬಿಡುತ್ತಿದ್ದ ತ್ಯಾಜ್ಯದಿಂದ ಪವಿತ್ರ ನೀರು ಅಪವಿತ್ರಗೊಂಡಿತ್ತು. ಸಾಧು ಸಂತರ ಹೆಣಗಳು ಇಲ್ಲಿ ತೇಲಾಡುತ್ತಿದ್ದವು. ಇದನ್ನು ಎಂ.ಸಿ. ಮೆಹತಾ ಪ್ರಶ್ನಿಸಿದರು. ಗಂಗಾ ನದಿ ಉಳಿವಿಗಾಗಿ ಕೋರ್ಟ್‌ 30ಕ್ಕೂ ಹೆಚ್ಚು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇವು ಪರಿಸರ ಕಾನೂನಿನ ತತ್ವಗಳಾಗಿ ರೂಪುಗೊಂಡಿವೆ.
* ದೆಹಲಿ ವಾಯುಮಾಲಿನ್ಯ ಪ್ರಕರಣ: ದೆಹಲಿ ನಗರದಲ್ಲಿ ವಾಯುಮಾಲಿನ್ಯ ಮಿತಿ ಮೀರಿತ್ತು. ವಿಶ್ವದ ನಾಲ್ಕನೇ ಅತಿ ಹೆಚ್ಚು ಮಲಿನ ನಗರ ಎಂಬ ಅಗ್ಗಳಿಕೆ ಅದಕ್ಕಿತ್ತು, ಈಗಲೂ ಇದೆ. ಎಲ್ಲೆಂದರಲ್ಲಿ ಕೈಗಾರಿಕೆಗಳು ಅಕ್ರಮವಾಗಿ ತಲೆ ಎತ್ತಿದ್ದವು. ಇವುಗಳ ವಿರುದ್ಧ ಎಂ.ಸಿ. ಮೆಹತಾ ರಿಟ್‌ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ ಈ ರಿಟ್‌ ಅರ್ಜಿಗೆ ಉತ್ತರವಾಗಿ ಕಾನೂನನ್ನು ಕಡೆಗಣಿಸಿದ್ದ 8378 ಕೈಗಾರಿಕೆಗಳಿಗೆ ನೋಟಿಸ್‌ ಜಾರಿ ಮಾಡಿತು. ನಂತರ `ದೆಹಲಿ ಮಾಸ್ಟರ್‌ ಪ್ಲಾನ್‌’ ರಚಿಸಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಯಾಗದ ಹಾಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿತು.
ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳನ್ನು ಎಂ.ಸಿ. ಮೆಹತಾ ಗೆದ್ದಿದ್ದಾರೆ. ಅವರು ಒಬ್ಬಂಟಿ ಹೋರಾಟಗಾರ. ಪರಿಸರ ವಕೀಲ. ಭಾರತ ಸಂವಿಧಾನ ತನ್ನ 21ನೇ ವಿಧಿಯನ್ವಯ ಭಾರತೀಯ ಪ್ರಜೆಗಳಿಗೆ `ಜೀವಿಸುವ ಹಕ್ಕು’ ನೀಡುತ್ತದೆ. ಈ ವಿಧಿಯಲ್ಲಿ `ಸ್ವಾಸ್ಥ್ಯ ಪರಿಸರದಲ್ಲಿ ಜೀವಿಸುವ ಹಕ್ಕು’ ಸೇರಿಸುವಲ್ಲಿ ಮೆಹತಾರ ಪಾತ್ರ ಮಹತ್ವವಾದುದು. ಈ ನಿಟ್ಟಿನಲ್ಲಿ ಮೆಹತಾರನ್ನು ಭಾರತೀಯ ಪರಿಸರ ಕಾನೂನಿನ ನಿರ್ಮಾತೃ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ.
ಜಗತ್ತಿನ ಖ್ಯಾತ ಪರಿಸರವಾದಿಗಳಲ್ಲಿ ಎಂ.ಸಿ. ಮೆಹತಾ ಅತ್ಯಂತ ಪ್ರಭಾವಿ ತಜ್ಞ. ಪರಿಸರದ ಸೇವೆಗಾಗಿ ನೀಡುವ `ಎನ್ವಿರಾನ್‌ಮೆಂಟಲ್‌ ಗೋಲ್ಡ್‌ಮನ್‌ ಪ್ರೈಜ್‌’ ಮೆಹತಾರಿಗೆ ಸಂದಿದೆ.
ಜಾಗತಿಕ ವಿಚಾರ: ಪರಿಸರ ಮಾಲಿನ್ಯದ ವಿಷಯಗಳು ಯಾವುದೇ ಒಂದು ದೇಶಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಲ್ಲ. ಪರಿಸರ ಅಕ್ಷರಶಃ ಜಾಗತಿಕ ವಿಚಾರ. ಈ ಸೃಷ್ಟಿಯನ್ನು ಅನುಭವಿಸಲು ಎಲ್ಲಾ ರಾಜ್ಯಗಳಿಗೂ ಸಮಾನ ಹಕ್ಕಿದೆ. ಭೂಮಿಯ ಯಾವುದೋ ಒಂದು ಜಾಗದಲ್ಲಿ ನಡೆಯುವ ಪರಿಸರ ಹಾನಿ ಚಚುವಟಿಕೆಯ ಪರಿಣಾಮ ಎಲ್ಲಾ ರಾಜ್ಯಗಳ ಮೇಲೆ ಬೀರುತ್ತದೆ. ಆದ್ದರಿಂದಾಗಿ ಪರಿಸರದ ಮೇಲೆ ಏನೇ ಆದರೂ ಅದರ ಝಳಪು ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತದೆ.
ಪಠ್ಯವಾಗಿ ಪರಿಸರ ಕಾನೂನು: ಕಳೆದ ನಾಲ್ಕು ದಶಕಗಳ ಹಿಂದೆ `ಪರಿಸರ’ದ ವಿಷಯ ಸಮಾಜ ವಿಜ್ಞಾನದ ಒಂದು ಭಾಗವಾಗಿತ್ತು. ಆನಂತರ `ಪರಿಸರ ವಿಜ್ಞಾನ’ ಎಂಬ ಸ್ವತಂತ್ರ ವಿಷಯ ಅಸ್ತಿತ್ವಕ್ಕೆ ಬಂತು. ಇಂದು ವಿವಿಗಳು ಇದನ್ನು ಬೋಧಿಸುತ್ತಿವೆ. ಆದರೆ ಇದರ ಜ್ಞಾನ ಸ್ಕ್ರೆನ್ಸ್‌ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುತ್ತಿದೆಯೇ ಹೊರತು ವಿಜ್ಞಾನೇತರ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಇದು ಇದರ ಪ್ರಮುಖ ದೋಷ. ಅಷ್ಟಕ್ಕೂ ವಿಜ್ಞಾನ ಎಂಬುದು ಲ್ಯಾಬೊರೇಟರಿಗಳಲ್ಲಿ ನಡೆಯುವ ಆಪರೇಷನ್‌! ಇದು ಸಾಮಾನ್ಯನ ಕೈಗೆ ಎಟಕುವುದಿಲ್ಲ.
ಪರಿಸರದ ಒಂದು ಭಾಗವಾಗಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಪರಿಸರ ಕಾನೂನು ಅರಿಯುವ ಅವಶ್ಯಕತೆ ಇದೆ. ಪಾರ್ಲಿಮೆಂಟಿನಲ್ಲಿ ಪಾಸಾಗಿ ರಾಷ್ಟ್ರಾಧ್ಯಕ್ಷರಿಂದ ಅಂಕಿತ ಪಡೆದ ಕಾನೂನು ಮಾತ್ರ ಪರಿಸರ ಕಾನೂನಲ್ಲ. ಪರಿಸರ ಕಾನೂನನ್ನು ಅಂತಾರಾಷ್ಟ್ರೀಯ ಮಾತುಕತೆ, ಒಂಬಡಿಕೆಗಳ ಗುಚ್ಛ ಎನ್ನಲಾಗುತ್ತದೆ. (Environmental law is a bunch of international conventions, summits, agreements’) ಯಾಕೆಂದರೆ ಪರಿಸರ ಅಧ್ಯಯನವನ್ನು ಯಾವುದೋ ಒಂದು ರಾಷ್ಟ್ರವನ್ನು ಗಮನದಲ್ಲಿ ಇಟ್ಟುಕೊಂಡು ಅಭ್ಯಸಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬೆಳವಣಿಗೆಗಳನ್ನು ಅರಿಯುವುದು ಅಗತ್ಯ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ೃಹತ್‌ ಪರಿಸರ ಚಳವಳಿಯೇ ಇದೆ. ಭೂಮಿ ಮಾತುಕತೆಗಳು (Earth summits), 21 ಅಂಶಗಳ ಕಾರ್ಯಸೂಚಿ (21 Agenda), ಮುನ್ನೆಚ್ಚರಿಕೆ ತತ್ವ (Precautionery principle), ರಿಯೋ ಘೋಷಣೆ (Rio declaration), ರಚನಾತ್ಮಕ ಅಭಿವೃದ್ಧಿ( sustainable development), ಸ್ಟಾಕ್‌ಹೋಮ್‌ ಮಾತುಕತೆ (Stockholm conference), ಮುಂತಾದ ಹತ್ತು ಹಲವು ನಿಯಮಾವಳಿ ಮಾತುಕತೆಗಳಿವೆ. ಇವುಗಳನ್ನು ಅರಿತಾಗ ಮಾತ್ರ ಪರಿಸರ ಅಧ್ಯಯನ ಪರಿಪೂರ್ಣ.
ವಿದೇಶಗಳಲ್ಲಿ ಪರಿಸರದ ಸಂಪೂರ್ಣ ಅಧ್ಯಯನವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಹಂತದಲ್ಲಿ ಸಾರ್ವತ್ರಿಕ ಪಠ್ಯವಾಗಿ ಸೇರಿಸಲಾಗಿದೆ. ಯಾವುದೇ ಕೋರ್ಸ್‌ ಆಗಿದ್ದರೂ ಪರಿಸರ ಅಧ್ಯಯನ ಕಡ್ಡಾಯ.
ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು: ಭಾರತ ಈಗ ಪರಿಸರ ಅಧ್ಯಯನದ ಮಹತ್ವವನ್ನು ಅರಿತಂತೆ ಕಾಣುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು ಮತ್ತು ಭಾರತೀಯ ಸಂವಿಧಾನವನ್ನು ಪಠ್ಯವಾಗಿ ಅಳವಡಿಸಿದೆ. ಎಂಜಿನಿಯರಿಂಗ್‌ನಲ್ಲಿ ಸಂವಿಧಾನವನ್ನು ಈಗಾಗಲೇ ಬೋಧಿಸಲಾಗುತ್ತಿದೆ. ಪರಿಸರ ಕಾನೂನನ್ನೂ ಅಳವಡಿಸುವ ಚಿಂತನೆ ಇದೆ. ಇವರಿಗೆ ಬೋಧಿಸುವವರು ಯಾರು ಗೊತ್ತೆ? ಪರಿಸರ ವಿಜ್ಞಾನ ಕಲಿತ ವಿಜ್ಞಾನ ಅಧ್ಯಾಪಕರಲ್ಲ. ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (LL.M) ಕಲಿತ ಕಲಾ ಅಧ್ಯಾಪಕರು. ಇದು ನಿಜಕ್ಕೂ ವಿಶೇಷ. ಹೇಳಿಕೊಡುವವರಿಗೂ, ಕಲಿಯುವವರಿಗೂ ಹೊಸ ಅನುಭವ.
ಭಾರತದಲ್ಲಿ ಪರಿಸರ ಕಾನೂನನ್ನು ಸ್ವತಂತ್ರವಾಗಿ ಎರಡು ಕಡೆ ಮಾತ್ರ ಬೋಧಿಸಲಾಗುವುದು. ಬೆಂಗಳೂರು ವಿವಿ ಮತ್ತು ದೆಹಲಿಯ ಜವಹರ್‌ ಲಾಲ್‌ ನೆಹರು ವಿವಿ. ಬೆಂಗಳೂರಿನಲ್ಲಿ ಪರಿಸರ ಕಾನೂನು ಪಠ್ಯವಾಗಿರುವುದು ಕರ್ನಾಟಕದ ಹೆಮ್ಮೆ. ಪರಿಸರ ಕಾನೂನು ಕಲಿಯಲು ಇಲ್ಲಿಗೆ ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪರಿಸರ ಕಾನೂನಿನಲ್ಲಿ ಸಂಶೋಧನೆ ನಡೆಸಿರುವ ಡಾ. ಸುಬ್ರಮಣ್ಯ ಮತ್ತು ಡಾ. ಲತಿಕಾ ನಾಥ್‌ (ಇಬ್ಬರೂ ದೆಹಲಿಯ ಜೆಎನ್‌ಯುವಿನಲ್ಲಿ ಕಲಿತವರು) ಎಂಬ ಇಬ್ಬರು ಹಿರಿಯ ಪ್ರಾಧ್ಯಾಪಕರು ಬೆಂಗಳೂರು ವಿವಿಯಲ್ಲಿದ್ದಾರೆ.
ಪರಿಸರ ಕಾನೂನು ಒಂದು ವಿಶಿಷ್ಟವಾದ ಪಠ್ಯವಿಷಯ. ಇದರಲ್ಲಿ ಕಲೆ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇವೆ. ಕಾನೂನು ಎಂದ ಮೇಲೆ ಅಲ್ಲಿ ಪ್ರಕರಣ ಅಧ್ಯಯನ ಇದ್ದೇ ಇರುತ್ತದೆ. ಇದು ನಿಜವಾಗಿಯೂ ಕುತೂಹಲಕರವಾಗಿರುತ್ತದೆ. ಸಂವಿಧಾನವನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಳವಡಿಸಿರುವಂತೆ ಪರಿಸರ ಕಾನೂನನ್ನು ಅಳವಡಿಸಿದರೆ ಮಕ್ಕಳಿಗೆ ವಿಷಯದ ಮೇಲಿನ ಕುತೂಹಲ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರ ಕಾನೂನು ವಿಜ್ಞಾನ ಸಂಬಂಧೀ ವಿಷಯವಾದರೂ ಕಲಾ ವಿದ್ಯಾರ್ಥಿಗಳಿಗೂ ಕಲಿಯುವ ಅವಕಾಶವಿದೆ. ದುರದೃಷ್ಟವೆಂದರೆ ಪರಿಸರ ಕಾನೂನು ಅಧ್ಯಯನ ಕಾನೂನು ಪದವಿಗೆ ಮಾತ್ರ ಸೀಮಿತವಾಗಿದೆ.


ಬರಹ:
ಯೋಗೇಶ್‌ಮಾರೇನಹಳ್ಳಿ