

ಗುಳೇ ಹೊರಟ ರೈತನ ಗೋಳಿನ ಕತೆ!
Inhuman environment
ಬೆಂಗಳೂರು ರೈಲುನಿಲ್ದಾಣ ಪ್ಲಾಟ್ಫಾರಂ ಸಂಖ್ಯೆ ಎಂಟು.
ಪಕೀರಪ್ಪ, ರಾಜಣ್ಣ, ಲಿಂಗಪ್ಪ ಮತ್ತು ದುರ್ಗವ್ವ ಮುಂತಾದವರು `ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್' ರೈಲುಗಾಡಿಗೆ ಕಾಯುತ್ತಾ ನಿಂತಿದ್ದರು. ಯಾರ ಕಣ್ಣಲ್ಲೂ ಕಳೆ ಇರಲಿಲ್ಲ. ಈ ಮಾಯಾ ನಗರಿ ಬೆಂಗಳೂರಿನಲ್ಲಿ ನಮ್ಮ ಬದುಕಿಗೆ ಆಸರೆಯಾಗಬಲ್ಲ ಒಂದು ಚಾಕರಿ ದೊರೆತೀತು ಎಂಬ ಉತ್ಸಾಹದಿಂದ ಮಕ್ಕಳು ಮರಿಯನ್ನು ಕಟ್ಟಿಕೊಂಡು ಬಂದ ನಿರೀಕ್ಷೆ ಬೊಗೆಯಷ್ಟೂ ಈಡೇರಿರಲಿಲ್ಲ. ಕೆಲಸಕ್ಕಾಗಿ ಕಾದು ಬೆಂಡಾಗಿ ಹೈರಾಣಾಗಿ ಬಂದ ಹಾದಿಗೆ ಸುಂಖವಿಲ್ಲ ಎಂಬಂತೆ ತಮ್ಮೂರಿಗೆ ಹೊರಟು ನಿಂತಿದ್ದರು.
ರಸಗೊಬ್ಬರದ ಫ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಪಾತ್ರೆಪಗಡೆಗಳ ಗಂಟುಮೂಟೆಗಳನ್ನು ಪಕ್ಕದಲ್ಲಿಟ್ಟುಕೊಂಡು ಕುಳಿತಿದ್ದ ಹೆಂಗಸರು ತನ್ನೂರಿನ ಹಾದಿಯನ್ನೆಣಿಸುತ್ತಿದ್ದರು. ಯಾವುದರ ಪರಿವೇ ಇಲ್ಲದೆ ಬಂದು ಹೋಗುತ್ತಿದ್ದ ರೈಲಿನ ಜುಕ್ಜುಕ್ ಶಬ್ದಕ್ಕೆ ಸ್ಪಂಧಿಸುತ್ತಿದ್ದ ಮಕ್ಕಳು, ನಿಲ್ದಾಣದ ಕಪ್ಪುಕೋಟು ಮಾಸ್ಟರನ ಘರ್ಜನೆಗೆ ಬೆದರಿದ್ದವು. ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ಸೂಟುಬೂಟುಧಾರಿಗಳ ತಾತ್ಸಾರದ ನೋಟ, ಪಾಪ! ಇವರ ಅರಿವಿಗೆ ಬಂದಿರಲಿಲ್ಲ.
ಪ್ಲಾಟ್ಫಾರಂ ತುಂಬಿ ತುಳುಕುತ್ತಿತ್ತು. ರೈಲು ಬಂದೊಡನೆ ಪ್ಯಾಸೆಂಜರ್ ಬೋಗಿಯ ಕಡೆಗೆ ಆಕ್ರಮಣಕಾರರಂತೆ ನುಗ್ಗಿದರು. ಕ್ಷಣಮಾತ್ರದಲ್ಲಿ ರೈಲು ತನ್ನ ಸಾಮರ್ಥ್ಯವನ್ನು ಮೀರಿ ತುಂಬಿಸಿಕೊಂಡು ಹೊರಟಿತು.
`ಈ ನಗರಕ್ಕೆ ನಾವು ಯೋಗ್ಯರಲ್ಲ' ಎಂಬಂತೆ ಹಿಂದೆ ಸಾಗುತ್ತಿದ್ದ ಬೆಂಗಳೂರು ಮಹಾನಗರಕ್ಕೆ ಕಡೆಯ ನಮಸ್ಕಾರ ತಿಳಿಸಿದರು.
ಇವರೆಲ್ಲಾ ಯಾರು?:
`ಬ್ಯಾರೆಯವರ ಹೊಲದಾಗೆ ದಿನಗೂಲಿ ಮಾಡ್ಕೊಂಡ್ ಚಲೋಗಿದ್ದಿನ್ರೀ. ಒಪ್ಪತ್ತು ಊಟಕ್ಕೆ ಕಷ್ಟ ಆಗ್ತಿದ್ದಿಲ್ಲ. ಯಾರದೋ ಮಾತ್ ಕೇಳ್ಕಂಡು, ಚಿಲ್ಲರೆ ಕಾಸಿನ ಹುಚ್ಚು ಹತ್ತಿಸ್ಕಂಡ್ ಇಲ್ಲಿಗೆ ಬಂದೆನ್ರಿ. ಈ ಮಂದಿ ಕೆಲಸ ಕೊಡ್ತಾರೇನು? ನಮ್ಮ ರಕ್ತ ಹೀರ್ತಾರೆ. ಆದಕ್ಕಾ ನಾ ನಮ್ಮೂರಿಗೆ ಹೊರಟು ನಿಂತನ್ರಿ' ಎಂದು ನಿರಾಶೆಯಿಂದ ನುಡಿಯುತ್ತಾರೆ ದಾರವಾಢ ಜಿಲ್ಲೆಯ ಭೂ ರಹಿತ ಕೃಷಿ ಕಾರ್ಮಿಕ ಪಕೀರಪ್ಟ.
ರಾಯಚೂರಿನ ಯಲ್ಲಪ್ಪರಿಗೆ ಎರಡು ಎಕರೆ ಭೂಮಿ ಇದೆ, ತನ್ನ ಅವಿಭಕ್ತ ಕುಟುಂಬಕ್ಕೆ ಸಾಕಾಗುವಷ್ಟು ಬೆಳೆ ಬರದು. ಮಳೆ ಬಿದ್ದರೆ ಮಾತ್ರ ಬೆಳೆ. ಕೆಲಸಕ್ಕಾಗಿ ಸಾಲ ಮಾಡಿಕೊಂಡು ಬೆಂಗಳೂರಿಗೆ ಬಂದು ತಿಂಗಳುಗಟ್ಟಲೇ ತಡಕಿದರೂ ಕೆಲಸ ಸಿಕ್ಕಿಲ್ಲ. ಕಡೆಗೆ ಸಾಲದ ದುಡ್ಡು ಖಾಲಿಯಾದಾಗ ವಿದಿಯಿಲ್ಲದೆ ತಮ್ಮೂರಿಗೆ ಹೊರಟು ನಿಂತಿದ್ದಾರೆ.
ಇವರೆಲ್ಲಾ ಉತ್ತರ ಕರ್ನಾಟಕದ ಹಳ್ಳಿಗಳಿಂದ ಬೆಂಗಳೂರಿಗೆ ಗುಳೇಬಂದ ಜನ. ಕೆಲಸಕ್ಕಾಗಿ ಮಕ್ಕಳು ಮರಿ ಕಟ್ಟಿಕೊಂಡು ದಿನನಿತ್ಯ ನಗರಗಳಿಗೆ ಬಂದಿಳಿಯುತ್ತಾರೆ. ಅದೆಷ್ಟು ಜನರನ್ನು ತುಂಬಿಕೊಳ್ಳಲು ಸಾಧ್ಯ?
ಅಳಿಯದ ಸಣ್ಣ ರೈತನ ಗೋಳು: ಇದು ಬರೀ ಪಕೀರಪ್ಪ, ಯಲ್ಲಪ್ಪರ ಕತೆಯಲ್ಲ. ಕೆಲಸಕ್ಕಾಗಿ ಪಟ್ಟಣಗಳಿಗೆ ಗುಳೇ ಹೊರಟ ಗ್ರಾಮೀಣ ಭಾರತೀಯರ ಗೋಳಿನ ಕತೆ. ಉತ್ತರ ಕರ್ನಾಟಕದ ಹಳ್ಳಿಗಳಿಂದ ಬೆಂಗಳೂರಿಗೆ ಗುಳೇ ಹೊರಟು ತಂಡೋಪ ತಂಡವಾಗಿ ಬರುತ್ತಿದ್ದು, ಕೆಲಸ ಸಿಗದೇ ಹಾಗೆಯೇ ಹಿಂತಿರುಗುತ್ತಿದ್ದಾರೆ.
ಶೇ. 70ರಷ್ಟು ಭಾರತೀಯರು ತಮ್ಮ ಜೀವನೋಪಾಯಕ್ಕೆ ವ್ಯವಸಾಯವನ್ನೇ ಅವಲಂಭಿಸಿದ್ದರೂ, ಅವರ ಜೀವನ ನಡೆಯುತ್ತಿಲ್ಲ. ಇವರಲ್ಲಿ ಶೇ. 90ರಷ್ಟು ಮಂದಿ ಸಣ್ಣ ಮತ್ತು ಅತೀ ಸಣ್ಣ ರೈತರಾಗಿದ್ದಾರೆ. ಎಲ್ಲದಕ್ಕೂ ಸಾಲ, ಸಾಲವಿಲ್ಲದೆ ಮಣ್ಣಿನ ಮಗನ ಬದುಕಿಲ್ಲ. ಸಾಲದಲ್ಲಿಯೇ ಹುಟ್ಟಿ, ಸಾಲದಲ್ಲಿಯೇ ಬದುಕಿ, ಸಾಲದಲ್ಲಿಯೇ ಕಡೆಯಾಗುತ್ತಿದ್ದಾನೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಮಣ್ಣಿನ ಮಕ್ಕಳು ಮಣ್ಣಿನ ಮೇಲೆ ನಂಬಿಕೆ ಕಳಕೊಂಡವರಂತೆ ಹಳ್ಳಿಬಿಟ್ಟು ನಗರಗಳಿಗೆ ಕೆಲಸ ಅರಸಿಕೊಂಡು ಬರುತ್ತಿದ್ದಾರೆ.
ಮಕ್ಕಳನ್ನು ಬಿಕ್ಷೆಗೆ ಬಿಟ್ಟರು: ಅಪ್ಪನಿಗೆ ಕೆಲಸವಿಲ್ಲ, ಅವ್ವನಿಗೆ ಗಂಜಿ ಕಾಸಲು ಕಾಳಿಲ್ಲ, ಉಪ್ಪಿಲ್ಲ. ಇರುವುದು ಒಂದೇ ಒಂದು ದಾರಿ. ತಮ್ಮ ಮಗುವನ್ನು ಬಿಕ್ಷೆಗೆ ಬಿಡುವುದು. ಬೆಳಗ್ಗೆಯಿಂದ ಸಂಜೆಯವರೆಗೆ ಬಿಕ್ಷೆ ಬೇಡಿ ತರುವ ಪುಡಿಗಾಸಿನಿಂದ ಒಪ್ಪೊತ್ತಿನ ಊಟ.
ಟ್ರಾಫಿಕ್ ಸಿಗ್ನಲ್ಗಳಲ್ಲಿ ದೇವಸ್ಥಾನದ ಬಾಗಿಲುಗಳಲ್ಲಿ, ಮಾರುಕಟ್ಟೆಗಳಲ್ಲಿ ಬಿಕ್ಷೆ ಬೇಡುವ ಮಕ್ಕಳನ್ನು ಯಾವ ಊರು ಎಂದು ಕೇಳಿದರೆ ಉತ್ತರ ಕರ್ನಾಟಕದ ಊರುಗಳ ಹೆಸರುಗಳನ್ನೇಳುತ್ತಾರೆ. ದಿಕ್ಕುದೆಸೆಯಿಲ್ಲದೆ ನಗರಗಳಿಗೆ ಬರುತ್ತಾರೆ. ಸಿಕ್ಕಸಿಕ್ಕವರಲ್ಲಿ ಕೆಲಸ ಕೊಡಿ ಎಂದು ಗೋಗರಿಯುತ್ತಾರೆ. ಸಿಗದಿದ್ದಾಗ ಕೆಲವರು ಹಿಂತಿರುಗಿ ಹೋದರೆ, ಮತ್ತೆ ಕೆಲವರು ಕಳ್ಳತನಗಳಂತಹ ಕೆಲಸಕ್ಕೂ ಕೈ ಹಾಕುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಂಧಿತರಾಗುತ್ತಿರುವ ವಿಚಾರಣಾಧೀನ ಕೈದಿಗಳಲ್ಲಿ ಗುಳೇ ಬಂದ ವಲಸಿಗರೇ ಹೆಚ್ಚು ಎನ್ನಲಾಗಿದೆ.
ವಲಸಿಗರ `ಯೋಗ್ಯತೆ'ಯ ಸಮಸ್ಯೆ: ಇನ್ನೊಂದು ಮುಖ್ಯವಾದ ಸಮಸ್ಯೆಯೆಂದರೆ `ಗುಳೇ ಬಂದವರ ಯೋಗ್ಯತೆ'ಯ ಸಮಸ್ಯೆ. ಗುಳೇ ಬಂದ ಗ್ರಾಮೀಣ ಭಾರತೀಯರಿಗೆ ಇನ್ಫೋಸಿಸ್ನಲ್ಲಿ ಕೆಲಸ ಸಿಗುವುದಿಲ್ಲ. ಅವರು ಕಟ್ಟಡದ ಕೆಲಸಕ್ಕೆ ಸೇರಬೇಕು ಇಲ್ಲವೇ ಹೋಟೆಲ್ ಮಾಣಿಗಳಾಗಬೇಕು. ಇಷ್ಟು ಬಿಟ್ಟರೆ ಮತ್ತ್ಯಾವ ಕೆಲಸವೂ ಸಿಕ್ಕುವುದಿಲ್ಲ.
ವಲಸಿಗರಲ್ಲಿ ಹೆಚ್ಚಿನವರು ಅವಿದ್ಯಾವಂತರೇ ಆಗಿರುರುವುದರಿಂದ ಬೇರೆ ಆಯ್ಕೆಗಳೇ ಇರುವುದಿಲ್ಲ. ಕಟ್ಟಡ ಮತ್ತು ರಸ್ತೆ ಕಾಮಗಾರಿಗಳಲ್ಲೂ ಕೆಲಸ ಸಿಗುವುದು ಕಷ್ಟ. ಸಿಕ್ಕರೂ ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ. ಕೂಲಿ ವಸೂಲಿ ಮಾಡುವಷ್ಟರಲ್ಲಿ ಪ್ರಾಣ ಹೋಗಿರುತ್ತದೆ.
ಮಹಿಳೆಯ ಕತೆ ಶೋಚನೀಯ: ಗುಳೇ ಬಂದ ಮಹಿಳೆಯ ಸ್ಥಿತಿ ಹೇಳತೀರದು. ಆಕೆ ಎಲ್ಲಾ ಹಂತದಲ್ಲೂ ಶೋಷಣೆಯ ಬಲಿಪಶು. ಕೆಲಸ ಅರಸಿ ಬಂದ ಅದೆಷ್ಟೋ ಮಹಿಳೆಯರು ಲೈಂಗಿಕ ಕಾರ್ಯಕರ್ತರಾಗಿ ಬದಲಾದ ಹಲವು ಉದಾಹರಣೆಗಳಿವೆ. ಒಂದು ಅಂದಾಜಿನ ಪ್ರಕಾರ ವಲಸಿಗರಲ್ಲಿ ಹೆಚ್ಚಿನ ಜನಕ್ಕೆ ಏಡ್ಸ್ ರೋಗವಿದೆ.
ವಲಸಿಗರಿಗೆ ಭದ್ರತೆಯಿದೆಯೇ? ವಸತಿ, ಆರೋಗ್ಯ, ಶಿಕ್ಷಣ ಎಲ್ಲವೂ ಶೂನ್ಯ. ಕೊಳಚೆ ಪ್ರದೇಶಗಳೇ ಅವರ ವಾಸಸ್ಥಾನ. ಬೆಂಗಳೂರಿನ ಹೊರವಲಯದ ಕೆ.ಆರ್. ಪುರಂ, ಕೆಂಗೇರಿ, ನಾಯಂಡಹಳ್ಳಿ, ಕಮಲಾ ನಗರ, ಕುರುಬರಹಳ್ಳಿ ಮುಂತಾದ ಬಡಾವಣೆಗಳ ಕೊಳಚೆ ಪ್ರದೇಶಗಳಲ್ಲಿ ಹೆಚ್ಚಾಗಿ ವಲಸಿಗರು ಕಾಣಸಿಗುತ್ತಾರೆ. ಇವರಿಗೆ ಬೇರೆ ಆಯ್ಕೆಗಳೇ ಇಲ್ಲದಿರುವುದರಿಂದ ಸಮಸ್ಯೆಗಳೆಗೆ ಅಂಟಿಕೊಂಡು ಬದುಕುವಂತಾಗಿದೆ.
ವಲಯ ಬದಲಾವಣೆ ಪ್ರಯೋಗ: ಭಾರತಕ್ಕೆ ಅಂಟಿದ ಬಲುದೊಡ್ಡ ತಲೆನೋವು ವಲಸೆ. ಇದಕ್ಕೆ ದೊಡ್ಡ ಇತಿಹಾಸವೇ ಇದೆ. ಆದರೂ, ವಲಸೆ ಬಗೆಹರಿಯದ ಸಮಸ್ಯೆಯೇನೂ ಅಲ್ಲ. ಭಾರತೀಯ ಕಾರ್ಪೊರೇಟ್ ವಲಯ ಇತ್ತೀಚೆಗೆ ಒಂದು ನಿಲುವನ್ನು ಪ್ರತಿಪಾದಿಸಿದೆ. `ಕೃಷಿಕರನ್ನು ಕೃಷಿ ವಲಯದಿಂದ ಉತ್ಪನ್ನ ಮತ್ತು ತಂತ್ರಜ್ಞಾನ ವಲಯಕ್ಕೆ ಕೊಂಡೊಯ್ಯುವುದರಿಂದ ಕೆಲಸ ಅರೆಸುತ್ತಾ ಪಟ್ಟಣ ಸೇರುವುದನ್ನು ತಪ್ಪಿಸಬಹುದು' ಎನ್ನಲಾಗಿದೆ. ಇದು ಚೀನಾದ ಯಶಸ್ವಿ ಪ್ರಯೋಗ. ಚೀನಾದಲ್ಲಿ ಕಳೆದ ಒಂದು ದಶಕದಲ್ಲಿ 150 ಮಿಲಿಯನ್ ಜನರು ಕೃಷಿ ವಲಯದಿಂದ ಉತ್ಪನ್ನ ವಲಯಕ್ಕೆ ಜಿಗಿದಿದ್ದಾರೆ.
ಈ ಪ್ರಯೋಗ ಭಾರತದಲ್ಲೂ ಸಾಧ್ಯವಿದೆ. ಆದರೆ ಇದು ಫಲಪ್ರದವಾಗಬೇಕಾದರೆ ಶತಕಗಳೇ ಬೇಕು. ಅದಕ್ಕೂ ಮುಂಚೆ ಕೆಲ ಪೂರ್ವಸಿದ್ದತೆಗಳು ಜರೂರಾಗಿ ನಡೆಯಬೇಕಿದೆ. ಅವಿದ್ಯಾವಂತ ಗ್ರಾಮೀಣ ಭಾರತೀಯರು ಕೃಷಿಯಲ್ಲದ ವೃತ್ತಿಪರ ಚಟಿವಟಿಕೆಗಳಲ್ಲಿ ತೊಡಗಬೇಕು. ಎಲ್ಲಕ್ಕಿಂತ ಮಿಗಿಲಾಗಿ ಭಾರತದ `ಅಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ' ಬದಲಾಗಬೇಕು. ತಮ್ಮ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಬೇಕು. ಆನಂತರ ಈ ಪ್ರಯೋಗದಂತೆ ವ್ಯಕ್ತಿ ಉತ್ಪನ್ನ ವಲಯದ ಅಂಗವಾಗಬೇಕು. ಯಾವ ಪೂರ್ವ ತಯಾರಿಯೂ ಇಲ್ಲದೆ ಇದನ್ನು ಪ್ರಯೋಗಿಸಿದರೆ ಮತ್ತೊಂದು ಸಮಸ್ಯೆ ಉದ್ಬವಿಸುವ ಅಪಾಯವಿದೆ.
ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿ: ಸಂಘ ಜೀವಿ ಮನುಷ್ಯನಿಗೆ ತನ್ನ ಬದುಕಿಗೆ ಆಧಾರವಾಗಿರುವ ಮೂಲ ಅವಶ್ಯಕತೆಗಳು ಅತೀಮುಖ್ಯ. ಗೌರವಾನ್ವಿತ ಬದುಕು ಅವನ ಪ್ರಧಾನ ಗುರಿ. ಅದಕ್ಕಾಗಿ ಆಹಾರ ಭದ್ರತೆ, ವಸತಿ, ಶಿಕ್ಷಣ ಆರೋಗ್ಯ ಎಲ್ಲವೂ ಬೇಕು. ಹಾಗಾದರೆ, ಹಳ್ಳಿಗಳಲ್ಲಿ ಇವೆಲ್ಲವೂ ಸಿಗುವುದಿಲ್ಲವೆ? ಕೃಷಿಯಲ್ಲಿ ಬದುಕೇ ಇಲ್ಲವೆ?.....ಹಳ್ಳಿಗಳಲ್ಲಿ ಇವೆಲ್ಲವನ್ನು ಸೃಷ್ಟಿಸಬೇಕಾದ ಅವಶ್ಯವಿದೆ.
ಕೃಷಿಯಲ್ಲಿ ಬದುಕಿದೆ. ರಾಷ್ಟ್ರದ ರಾಷ್ಟ್ರೀಯ ಆದಾಯದಲ್ಲಿ ಕೃಷಿಯ ಪಾಲು ಗಣನೀಯ. ಆದರೆ ಕೃಷಿ ಅವಬಂಬಿತ ಜನಸಂಖ್ಯೆಗೆ ಆದಾಯವನ್ನು ಹೋಲಿಕೆ ಮಾಡಿದರೆ ಅತೀ ಕಡಿಮೆ. ಆದ್ದರಿಂದ ಇಡೀ ಕೃಷಿ ವ್ಯವಸ್ಥೆ ಬದಲಾಗಬೇಕಿದೆ. ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಯಗುವ ಅವಶ್ಯಕತೆಯಿದೆ. ಪ್ರಾಚೀನ ಕಾಲದ ಕೃಷಿ ಅಭ್ಯಾಸಗಳನ್ನು ಮೊದಲು ಕೈಬಿಡಬೇಕು. ಮಾರುಕಟ್ಟೆ ಅರಿತು ಮಾರುಕಟ್ಟೆ ಆಧಾರಿತ ಬೇಸಾಯದ ಅಗತ್ಯವಿದ್ದು, ಸಣ್ಣ ರೈತನಿಗೆ ಬಹುಕಾಲ ನಿಲ್ಲುವ ರಚನಾತ್ಮಕ ಕೃಷಿಯನ್ನು ಕಟ್ಟುವ `ಕೈ'ಗಳು ಬೇಕಾಗಿವೆ.
ಗ್ರೀನ್ ಪೌಂಡೇಶನ್(ಬೆಂಗಳೂರು ಮೂಲದ ಎನ್ಜಿಒ) ನಿರ್ದೇಶಕಿ ಹೇಳುವಂತೆ `ಸಣ್ಣ ರೈತರು ತಮ್ಮ ಸಣ್ಣ ಹಿಡುವಳಿಯಲ್ಲಿ ಬಹುಬೆಳೆಯ(ಅಂತರ ಬೆಳೆ) ಬೇಸಾಯ ಪದ್ಧತಿ ಅನುಸರಿಸಬೇಕು. ತಮ್ಮ ಆಹಾರ ಭದ್ರತೆಯನ್ನು ಕಾಯ್ದುಕೊಳ್ಳಬೇಕಾದರೆ ಏಕಬೆಳೆ ಬೇಸಾಯದಿಂದ ಬಹುಬೆಳೆ ಬೇಸಾಯ ಪದ್ಧತಿಯನ್ನು ಅನುಸರಿಸಬೇಕು, ಇದರಿಂದ ಮಾತ್ರ ವಲಸೆಯನ್ನು ತಪ್ಪಿಸಬಹುದು' ಎನ್ನುತ್ತಾರೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ದೇಶಪಾಂಡೆಯವರು ಹೇಳುವಂತೆ `ರಾಷ್ಟ್ರದ ಒಟ್ಟು ಕೃಷಿ ಆದಾಯ ಕ್ಷೀಣಿಸುತ್ತಿದ್ದು, ಬಳೆಕೆದಾರರ ಸೂಚ್ಯಾಂಕ ದರ(ಕನ್ಸೂಮರ್ಸ್ ಪ್ರೈಸ್ ಇಂಡೆಕ್ಸ್) ಏರುಗತಿಯಲ್ಲಿದೆ. ಆದರೆ ರೈತ ಇವೆರಡಕ್ಕೂ ಸ್ಪಂದಿಸಲಾರದ ಸ್ಥಿತಿಯಲ್ಲಿದ್ದಾನೆ. ಅಂದರೆ ಆಹಾರದ ಬೇಡಿಕೆಗೆ ತಕ್ಕ ಪೂರೈಕೆ ರೈತನಿಗೆ ಸಾಧ್ಯವಾಗಿಲ್ಲ' ಎನ್ನುತ್ತಾರೆ.
PURA ಪರಿಕಲ್ಪನೆ: ಗ್ರಾಮೀಣ ಭಾರತೀಯರು ಗುಳೇ ಹೋಗುವುದುನ್ನು ತಡೆಯಲು `ಪುರ'(Providing urban fecilities in rural aria) ಎಂಬ ನೂತನ ಪರಿಕಲ್ಪನೆ ಇತ್ತೀಚೆಗೆ ಕಾಣಿಸಿಕೊಂಡಿದೆ. ಇದು ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರ ಕನಸಿನ ಕೂಸು. ಗ್ರಾಮಗಳಲ್ಲೆ ನಗರ ಸೌಲಭ್ಯವನ್ನು ಸೃಷ್ಟಿಸುವುದು ಈ ಪರಿಕಲ್ಪನೆಯ ಉದ್ದೇಶ. ಕಲಾಂ ಅವರು ಹೇಳುವಂತೆ `ಗ್ರಾಮ ಮತ್ತು ನಗರ ಎಂಬ ಎರಡು ನದಿಗಳಿಗೆ ತಾಂತ್ರಿಕ ಜ್ಞಾನ ಮಾತ್ರ ಸೂಕ್ತ ಸೇತುವೆಯಾಗಬಲ್ಲದು. ತಾಂತ್ರಿಕ ಜ್ಞಾನದಿಂದ ಮಾತ್ರ ಗ್ರಾಮ-ನಗರಗಳ ಭಾವೈಕ್ಯತೆಯನ್ನು ಸೃಷ್ಟಿಸಿ ರಚನಾತ್ಮಕ ಅಭಿವೃದ್ಧಿಯತ್ತ ಸಾಗಬಹುದು' ಎನ್ನುತ್ತಾರೆ.
ಈಗಾಗಲೇ ಭಾರತ ಎಚ್ಚೆತ್ತುಕೊಂಡಿದ್ದು, ಹಳ್ಳಿಗಳಿಗೆ ಮೂಲ ಅವಶ್ಯಕತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಇದನ್ನು ಪ್ರಮುಖವೆಂದು ಪರಿಗಣಿಸಲಾಗಿದೆ.
1951ರಲ್ಲಿ ರಾಷ್ಟ್ರಾದ್ಯಂತ 725 ಪ್ರಾಥಮಿಕ ಆರೋಗ್ಯ ಘಟಕಗಳಿದ್ದವು. ಅವುಗಳ ಸಂಖ್ಯೆ 2004ರ ವೇಳೆಗೆ 1,68,986ಕ್ಕೆ ಏರಿವೆ. ಅದೇರೀತಿ 2000ನೇ ಇಸ್ವಿಯಲ್ಲಿ ಪ್ರತಿ ಕಿ.ಮಿ.ಗೆ ಶೇ. 94ರಷ್ಟು ಗ್ರಾಮೀಣ ಭಾರತೀಯರು ಕಿರಿಯ ಪ್ರಾಥಮಿಕ ಶಾಲೆಗಳನ್ನು ಹೊಂದಿದ್ದು, ಪ್ರತಿ 3 ಕಿ.ಮಿ.ಗೆ ಶೇ. 85ರಷ್ಟು ಗ್ರಾಮೀಣರು ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೊಂದಿದ್ದಾರೆ. ಇವುಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದ್ದು, ಗ್ರಾಮೀಣರು ತಮ್ಮ ಹಳ್ಳಿಗಳಲ್ಲೆ ಉಳಿಯುವಂತೆ ಪ್ರೋತ್ಸಾಹಿಸುತ್ತಿವೆ.
`ಧಾರವಾಡ ನಗರದಲ್ಲಿ ನಿಂತು ಕಲ್ಲೊಂದನ್ನು ಮೇಲಕ್ಕೆ ಬೀಸಿದಾಗ ಅದು ಸಾಹಿತಿಯೊಬ್ಬರ ಮನೆಯ ಮೇಲೆ ಬೀಳುವುದಂತೆ. ಆದರೆ ಬೆಂಗಳೂರು ನಗರದಲ್ಲಿ ನಿಂತು ಕಲ್ಲೊಂದನ್ನು ಮೇಲಕ್ಕೆ ಬೀಸಿದರೆ ಅದು ಸಾಫ್ಟ್ವೇರ್ ಇಂಜಿನಿಯರ್ ತಲೆ ಮೇಲೆ ಬೀಳುತ್ತದೆ.' ಇದು ಇತ್ತೀಚಿಗೆ ಹುಟ್ಟಿಕೊಂಡ ಗಾದೆ ಮಾತು. ನಮ್ಮ ನಗರಗಳ ಸ್ಥಿತಿ ಬದಲಾಗಿದ್ದು, ಅವು ಗುಳೇ ಬಂದ ಗ್ರಾಮೀಣ ವಲಸಿಗನಿಗೆ ಮುಳ್ಳಿನ ಹಾಸಿಗೆಯಾಗಿವೆ. ಮುಳ್ಳಿನ ಮೇಲೆ ದೇಹವೊಡ್ಡಿದ ಆತ ಪ್ರತಿನಿತ್ಯ ಗೋಳಿಡುತ್ತಿದ್ದಾನೆ.
(ಭಾರತಿ ಘನಶ್ಯಾಂ ಅವರ ಲೇಖನದಿಂದ ಪ್ರೇರಣೆ)