ಶನಿವಾರ, ಜನವರಿ 3, 2009




ಎಂಜಿ ರೋಡಿನ ಒಂದು ಮ್ಯಾನ್‌ಹೋಲ್‌ ಕಥೆ!





ಎಂ.ಜಿ. ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಕಳೆದ 20 ದಿನಗಳಿಂದ ಶಂಕರ್‌ನಾಗ್‌ ಥಿಯೇಟರ್‌ ಎದುರಿನ ಮಿಲಿಟರಿ ಕಚೇರಿ ಬಳಿ ಒಳಚರಂಡಿ ಮ್ಯಾನ್‌ಹೋಲ್‌ ಒಡೆದು ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಈವರೆಗೂ ಯಾರೂ ತಲೆಕೆಡಿಸಿಕೊಂಡಿಲ್ಲ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಯಲ್ಲೇ ಈ ಸ್ಥಿತಿ ಇದೆ ಅಂತಾದರೆ ಇತರ ಬಡಾವಣೆಗಳ ಪಾಡೇನು?
ಮೊನ್ನೆ ಯಾರೋ ಸ್ಥಳೀಯರು ತ್ಯಾಜ್ಯ ಹರಿಯುತ್ತಿದ್ದ ಜಾಗಕ್ಕೆ ಫಿನಾಯಿಲ್‌ ಹಾಕಿ ಕೆಟ್ಟ ವಾಸನೆ ತಡೆಯಲು ಪ್ರಯತ್ನಿಸಿದ್ದರು. ಆದರೂ ವಾಸನೆ ನಿಂತಿಲ್ಲ. ಎಷ್ಟು ಕೆಟ್ಟ ವಾಸನೆ ಅಂದರೆ ಮನೆಗೆ ಹೋಗಿ ಅದನ್ನು ನೆನಸಿಕೊಂಡರೆ ಊಟ ಸೇರದಷ್ಟು!
ಮಿಲಿಟರಿ ಕಚೇರಿಯಿಂದ ರಸ್ತೆಯ ಎಡಭಾಗದಲ್ಲಿ ತ್ಯಾಜ್ಯದ ಹರಿವು ಪ್ರಾರಂಭವಾಗಿ ಮೆಯೋ ಹಾಲ್‌ ತಿರುವಿನಲ್ಲಿ ದಿಣ್ಣೆ ಇರುವುದರಿಂದ ಮುಂದೆ ಹರಿಯಲು ಸಾಧ್ಯವಾಗದೆ ಆ ಜಾಗದಲ್ಲಿ ನಿಂತಿದೆ. ಓಡಾಡುವವರು ಯಾತನೆ ಪಟ್ಟುಕೊಳ್ಳುವಷ್ಟು ಅಸಹ್ಯ ವಾಸನೆ ಸೃಷ್ಟಿಯಾಗಿದೆ. ಗ್ರಹಚಾರಕ್ಕೆ ಅಲ್ಲೇ ಟ್ರಾಫಿಕ್‌ ಸಿಗ್ನಲ್‌ ಕೂಡ ಇದೆ. ಮೂರು ನಿಮಿಷ ವಾಸನೆಯೊಳಗೆ ನಿಲ್ಲಬೇಕು. ಅಲ್ಲೇ ದಿನವಿಡೀ ನಿಲ್ಲುವ ಟ್ರಾಫಿಕ್‌ ಪೊಲೀಸ್‌ ಗತಿ ಏನಾಗಿರಬೇಕು ಊಹಿಸಿ.
ಈ ಕುರಿತು ಆತನನ್ನು ಸಾರ್ವಜನಿಕರು ಕೇಳಿದ್ದಕ್ಕೆ, `ಈ ದರಿದ್ರ ವಾಸನೆ ಕುಡಿದು ನನ್ನ ಮೂಗೇ ಹಾಳಾಗಿ ಹೋಗಿದೆ. 20 ದಿನ ಆಯ್ತು. ಮೂಗಿಗೆ ಕ್ಯಾಪ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಹಾದು ಹೋಗುವ ಜನರೆಲ್ಲಾ ನನ್ನನ್ನ ಕೇಳ್ತಾರೆ. ಇದರ ಬಗ್ಗೆ ನನಗೇನು ಗೊತ್ತು. ನಾನೇನು ಕಾರ್ಪೊರೇಷನ್‌ನವನಾ' ಎಂದು ಉರಿದು ಬೀಳುತ್ತಾರೆ.
ಟ್ರಾಫಿಕ್‌ನಲ್ಲಿ ನಿಂತವರೆಲ್ಲಾ ಒಂದೊಂದು ಮಾತು. ಪಕ್ಕದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೆಟ್ರೋದಂತಹ ೃಹತ್‌ ಕಾಮಗಾರಿಯ ಮುಂದೆ ಮ್ಯಾನ್‌ಹೋಲ್‌ನಂತಹ ಪುಟ್ಟ ಕಾಮಗಾರಿ ಸಂಬಂಧಪಟ್ಟವರ ಕಣ್ಣಿಗೆ ಕಾಣಿಸುತ್ತಿಲ್ಲವೇನೋ!
ಇಲಾಖೆಯ ಸಹವಾಸವೇ ಅಲ್ಲ:


ನಗರದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್‌ ಅವರನ್ನು ಈ ಕುರಿತು ಸಂಪರ್ಕಿಸಿದಾಗ, `ಈವರೆಗೂ ಕಂಪ್ಲೇಂಟ್‌ ಬಂದಿಲ್ಲ. ನಿಮ್ಮ ಕರೆಯನ್ನೇ ದೂರು ಅಂತ ಪರಿಗಣಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ' ಎಂಬ ಭರವಸೆ ಕೊಟ್ಟು ಜಾರಿಕೊಂಡರು. ಮೆಟ್ರೋ ಕಾಮಗಾರಿಯಿಂದಾಗಿ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಮೆಟ್ರೋಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಯಾರೂ ದೂರು ಸಲ್ಲಿಸದೇ ಇರುವುದರಿಂದ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಸಿದ್ಧ ಉತ್ತರ.
ಈ ಅಧಿಕಾರಿಗಳಿಗೆ ಎಂಜಿ ರಸ್ತೆಯ ಈ ಭಾಗ ಯಾವ ಸೇವಾಠಾಣೆಯ ವ್ಯಾಪ್ತಿಗೆ ಬರುತ್ತೆ ಅನ್ನೋದೇ ಗೊತ್ತಿಲ್ಲ. ಅಲ್ಲಿಗೆ ಫೋನ್‌ ಮಾಡಿ, ಇಲ್ಲಿಗೆ ಫೋನ್‌ ಮಾಡಿ ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.
ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ 110 ಸೇವಾಠಾಣೆಗಳಿವೆ. ವಿವಿಧ ಬಡಾವಣೆಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯೂ ಇದೆ. ಯಾರು ಬೇಕಾದರೂ ಕರೆ ಮಾಡಿ ದೂರು ಸಲ್ಲಿಸಬಹುದು. (Intraviros Response System 155313)
ಎಂ.ಜಿ. ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಒಡೆದ ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಇಲ್ಲಿಯವರೆಗೂ ಯಾವ ದೂರು ದಾಖಲಾಗಿಲ್ಲ ಅಥವಾ ಸಲ್ಲಿಸಿದ ದೂರನ್ನು ನಿರ್ಲಕ್ಷಿಸಿರಬಹುದು.
ನಗರದ ಹೃದಯ ಭಾಗದ ಗತಿಯೇ ಹೀಗಾದರೆ ಬೇರೆ ಹೊರ ವಲಯಗಳ ಪಾಡೇನು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಒಟ್ಟಿನಲ್ಲಿ ವಾಸನೆ ಕುಡಿಯುವುದು ಜನರ ನಿತ್ಯ ಕರ್ಮವಾಗಿದೆ! ಸದ್ಯ ಜನರಿಗೆ ಕಾಯುವುದೇ ಕಾಯಕ.








ಊರೆಲ್ಲಾ ಅಗೆತ, ಕೊರೆತ!





ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದರೂ ಬರೀ ಅಗೆತ. ಕೊರೆತ!
ನೀರಿಗಾಗಿ, ರೋಡಿಗಾಗಿ, ಮನೆ ಮೇಲೆ ಮನೆ ಪೇರಿಸಲು, ಮಹಡಿ, ಮಹಲು, ಮೆಟ್ರೋ, ಅಂಡರ್‌ಗ್ರೌಂಡ್‌, ಕಾರಿಡಾರ್‌, ಅಡೆಗೋಡೆ, ತಡೆಗೋಡೆ, ಪ್ಲಾಂಟೇಷನ್ಸ್‌, ಯೂನಿಟ್ಸ್‌......ಭೂಮಿಯನ್ನು ಅಗೆದು ಕೊರೆದು ಕುಟ್ಟಿ ನೆಲವನ್ನು ಬಿಲ ಮಾಡಿಬಿಟ್ಟಿದ್ದಾರೆ.
ಕಾವೇರಿಯನ್ನು ಮನೆ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಅಗೆತ. ಮನೆ ಕಟ್ಟುವುದಕ್ಕೆ ಅಗೆತ. ಕೆಡವುದಕ್ಕೂ ಅಗೆತ! ರಸ್ತೆ ಅಗಲೀಕರಣಕ್ಕೆ ಅಗೆತ ಅಗೆತ.... ಹೊಸೂರು ರಸ್ತೆಯಲ್ಲಿ ವರ್ಷಪೂರ್ತಿ ಅಗೆತ ನಡೆಯುತ್ತದೆ. ಮೈಸೂರು ರಸ್ತೆ ಕರ್ಮಕಾಂಡ! ವರ್ಷಗಳಿಂದಲೂ ಅಗಲೀಕರಣ ನಡೆಯುತ್ತಲೇ ಇದೆ. ಬಳ್ಳಾರಿ ರಸ್ತೆಯಲ್ಲಿ ಮರಗಳಿಗೆ ಉಳಿಗಾಲವಿಲ್ಲ. ತುಮಕೂರು ರಸ್ತೆಯಲ್ಲಿ ಪ್ರತಿನಿತ್ಯ ಕಾಮಗಾರಿ. ವಿಜಯ ನಗರ ಅಂಡರ್‌ಪಾಸ್‌ ಕಾಮಗಾರಿ ಕುಂಟುತ್ತಿದೆ. ರಾಜಾಜಿ ನಗರದ ಬೈಪಾಸ್‌ ಮುಗಿದಿಲ್ಲ. ಒಂದಾ ಎರಡಾ.....ಒಟ್ಟಿನಲ್ಲಿ ಭೂ ಮೇಲಿನ ದಾಳಿ ನಿರಾತಂಕವಾಗಿ ನಡೆಯುತ್ತಿದೆ.
ಕಾಮಗಾರಿಗಳನ್ನು ಮುಗಿಸಲು ಇಲಾಖೆಗಳಿಗೆ ಮನಸಿಲ್ಲ. ಡೆಡ್‌ಲೈನ್‌ಗಳು ಮುಂದಕ್ಕೆ ಹೋಗುತ್ತಲೇ ಇವೆ. ತಿಂಗಳು ಅಂದದ್ದು ವರ್ಷ ಆದರೂ ಮುಗಿಯೊಲ್ಲ. ಇತ್ತೀಚೆಗೆ ಬಿಬಿಎಂಪಿ 15 ದಿನಗಳಲ್ಲಿ ಕಾಮಗಾರಿಯೊಂದನ್ನು ಮಗಿಸುವುದಾಗಿ ಹೇಳಿ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು ನಗೆಪಾಟಲಿಗೆ ಈಡಾಗಿತ್ತು. ಅಧಿಕಾರಿಗಳಿಗೆ ಡೆಡ್‌ಲೈನ್‌ ಪ್ರಜ್ಞಯೇ ಇಲ್ಲ.
ಅಂತರ್ಜಲ ಬತ್ತುತ್ತಿದೆ:
500 ಅಡಿ ಅಲ್ಲ, 1000 ಅಡಿ ಆದ್ರೂ ನೀರು ಬರೋ ತನಕ ಭೂಮಿ ಕೊರೆಯುವುದನ್ನು ಬಿಡದ ನಮ್ಮ ಸೂಪರ್‌ ಪಾಸ್ಟ್‌ ರಿಗ್‌ಗಳು. ಬುರುಡೇಸರ್‌ಗಳು, ಇಟಾಚಿಗಳನ್ನು ನೋಡಿದರೆ ಹೆದರಿಕೆ ಆಗುತ್ತೆ. ಬಂಡಗಲ್ಲನ್ನು ಉಡಾಸುವ ಡೈನೆಮೆಂಟ್‌ಗಳು ಭೂಮಿಯನ್ನು ಮಾತ್ರವಲ್ಲ. ಜೀವವನ್ನೂ ನಡುಗಿಸುತ್ತವೆ. ಸಣ್ಣ ಪುಟ್ಟ ರಸ್ತೆಮಾಡಲೂ ಕೊರೆತ ಇದ್ದೇ ಇದೆ. ಕೊರೆಯುವಾಗ ಬರುವ ಕಟ ಕಟ ಚಟ ಪಟ ಶಬ್ದ ಒಂದು ಕಿಮಿ ದೂರದ ನಿಶಬ್ದತೆಯನ್ನು ನುಂಗಿ ಹಾಕುತ್ತೆ. ಹೊರಹೊಮ್ಮುವ ಧೂಳು ಅಲರ್ಜಿಯಂತಹ ಖಾಯಿಲೆಗಳನ್ನು ಹೊತ್ತು ತರುತ್ತೆ.
ಈ ಅಗೆತದ ದುಷ್ಟರಿಣಾಮದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಭೂ ಕೊರೆತದಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭೂಮಿ ಸಡಿಲಗೊಂಡಾಗ ಅಂತರ್ಜಲ ಬತ್ತಿ ಹೋಗುತ್ತದೆ. ಮೊದಲೆಲ್ಲಾ ನೂರರಿಂದ ಇನ್ನೂರು ಅಡಿ ಕೊರೆದರೆ ಅಂತರ್ಜಲ ಸಿಗುತ್ತಿತ್ತು. ಇವತ್ತು ಐನೂರು ಅಡಿ ಕೊರೆದರೂ ನೀರು ಹನಿಯುವುದಿಲ್ಲ. ಅಗೆತದಿಂದ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಸ್ಥಳೀಯರು ಬಹಳ ಕಿರಿಕಿರಿ ಅನುಭವಿಸಬೇಕು. ಕೊರೆದ ಬಾವಿಯನ್ನು ಮುಚ್ಚದಿದ್ದಾಗ ಇನ್ನೊಂದು ಗಂಭೀರ ಸಮಸ್ಯೆ.
ನಗರಾಭಿವೃದ್ಧಿ:

ಪರದೇಸಿಗಳು ಸುಳಿದಾಡುವ ಈ ಇಂಟರ್‌ನ್ಯಾಷನಲ್‌ ಫೇಮಸ್‌ ಊರಿನಲ್ಲಿ ಉದ್ದದ ಅಗಲದ ರಸ್ತೆ ಇಲ್ಲದಿದ್ದರೆ ಹೇಗೆ? ಎತ್ತರದ ಮಹಡಿ ಮಹಲುಗಳಿಲ್ಲದಿದ್ದರೆ ಹೇಗೆ? ನಗರಾಭಿವೃದ್ಧಿಗೆ ಇವೆಲ್ಲಾ ಬೇಡವೇ?
ಇವೆಲ್ಲಾ ಬೇಕು ನಿಜ. ಆದರೆ ಅದರಿಂದಾಗುವ ದುಷ್ಟರಿಣಾಮಗಳ ಬಗ್ಗೆಯೂ ಯೋಚಿಸಬೇಕು.
ಯಾವುದೇ ಅಪಾರ್ಟ್‌ಮೆಂಟ್‌ ನೋಡಿ. ಪಾರ್ಕಿಂಗ್‌ ಜಾಗ ಅಂಡರ್‌ಗ್ರೌಂಡ್‌ನಲ್ಲಿರುತ್ತದೆ. ಮೊದಲೇ ಬಹುಮಹಡಿ ಕಟ್ಟಡ. ಅಡಿಪಾಯಕ್ಕೆಂದೇ ಮೀಟರ್‌ಗಟ್ಟಲೇ ಕೊರೆದಿದ್ದಾಗಿದೆ. ಪಾರ್ಕಿಂರ್ಗ ಜಾಗಕ್ಕೆ ಮತ್ತೂ ಕೊರೆಯುವುದು. ಇದು ದೊಡ್ಡ ಬಿಸಿನೆಸ್‌.
ಭೂಮಿ ಶೋಷಣೆಯ ವಸ್ತು:
ಈ ಊರಲ್ಲಿ ಭೂಮಿ ಬಂಗಾರ ಅಂತ ಎಲ್ಲರಿಗೂ ಗೊತ್ತು. ಅದರ ಜೊತೆಗೆ ಭೂಮಿ ಶೋಷಣೆಯ ವಸ್ತು. ಪರಿಸರ ತಜ್ಞರು ಬೆಂಗಳೂರಿನ ನಗರಾಭಿವೃದ್ಧಿ ಯೋಜನಗಳ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಸ್ತೆ ಅಗೆತ, ಬಡಾವಣೆ ನಿರ್ಮಾಣ, ಕೈಗಾರಿಕೆ ನಿರ್ಮಾಣದಂತಹ ಕಾರ್ಯಗಳನ್ನು ಜಾರಿಗೊಳಿಸುವಾಗ ಪರಿಸರ ರಕ್ಷಣೆಯ ಕ್ರಮ ಕೈಗೊಳ್ಳುಬೇಕು ಎಂಬುದು ಅವರ ಒತ್ತಾಯ.
ಪರಿಸರ ಕಮಿಟಿ ರಚನೆ:

ಪರಿಸರ ತಜ್ಞರು ಬಹಳ ದಿನಗಳಿಂದ ಸರ್ಕಾರದ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸುವಾಗ ಆ ಯೋಜನೆಯ ಸಾಧಕ ಬಾಧಕಗಳು, ಪರಿಸರದ ಮೇಲೆ ಯೋಜನೆಯ ಪರಿಣಾಮಗಳನ್ನು ನಿರ್ಧರಿಸಲು ಪರಿಸರವಾದಿಗಳ ಕಮಿಟಿ ರಚಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರದ ಭರವಸೆಯೂ ಇದೆ. ಭರವಸೆ ಈಡೇರಿಲ್ಲ ಅಷ್ಟೆ. ಕೆಲವೊಂದು ಯೋಜನೆಗಳಿಗೆ ಕಮಿಟಿಗಳು ರಚನೆಯಾಗಿದ್ದವು. ಆದರೆ ಈಗ ಆ ಕಮಿಟಿಗಳು ಜೀವಂತವಾಗಿಲ್ಲ.
ಖಾಸಗಿ ಕಾರಿಡಾರ್‌ ಯೋಜನೆಗಳನ್ನು ಜಾರಿಗೊಳಿಸುವಾಗ ಅದರಿಂದಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನವನ್ನು( Environmental Impact Assessment) ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಥವಾ ರಾಜ್ಯ ಪರಸರ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು. ಆದರೆ ಇದೊಂದು ದೊಡ್ಡ ಮೋಸ. ಅಧ್ಯಯನದಲ್ಲಿ ಒಂದು ಇದ್ದರೆ, ಯೋಜನೆ ಜಾರಿಗೊಂಡಾಗ ಇನ್ನೊಂದು ಇರುತ್ತದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಗೆತಗಳಿಗೆ ಅವೈಜ್ಞಾನಿಕ ಯೋಜನೆಗಳು, ಇಲಾಖೆಗಳ ಅಧಿಕಾರಿಗಳ ಸೋಮಾರಿತನ, ರಾಜಕಾರಣಿಗಳ ಹೊಟ್ಟೆಬಾಕತನವೇ ಕಾರಣ. ಅಧಿಕಾರಿಗಳು ಪರಿಸರ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಮಂಡಳಿಗೆ ವರದಿಗಳನ್ನು ಮಾತ್ರ ರವಾನಿಸುತ್ತಿದೆ. ಮಾಲಿನ್ಯ ಮಾತ್ರ ನಿಯಂತ್ರಣದಲ್ಲಿ ಇಲ್ಲ.
ಸರ್ಕಾರದ ಅಭಿವೃದ್ಧಿ ಮಂತ್ರದಲ್ಲಿ ಪರಿಸರ ಕಾಳಜಿ ಎಳ್ಳಷ್ಟೂ ಇಲ್ಲ. ಹೀಗಾದ್ರೆ ಜೀವ ವೈವಿಧ್ಯವನ್ನು ಕಾಯುವ ಭೂಮಿಯನ್ನು ಕಾಯುವವರು ಯಾರು?