
ಅಪ್ಪಿಕೋ 25
1983, ಸೆಪ್ಟಂಬರ್ 8…..
ಕೊಡಲಿ ಪೆಟ್ಟಿಗೆ ಸಿಕ್ಕಿ ಬಲಿಯಾಗುತ್ತಿದ್ದ ಮರಗಳ ಉಳಿವಿಗಾಗಿ ಅಂದು ತೆಗೆದುಕೊಂಡ ಮಹತ್ವದ ನಿರ್ಧಾರ ಇಂದು ಐತಿಹಾಸಿಕ ದಿನ. ಮರವನ್ನು ಅಪ್ಪಿ `ಜೀವ ಬೇಕಾದರೂ ಬಿಟ್ಟೇವು ಮರವನ್ನು ಬಿಡೆವು’ ಎಂಬ ಘೋಷಣೆಯೊಂದಿಗೆ ನಡೆಸಿದ ಶಾಂತಿಯುತ ಚಳವಳಿಯೇ ಅಪ್ಪಿಕೋ ಚಳವಳಿ. ಈ ಚಳವಳಿಗೆ ಇಂದು 25 ವಸಂತಗಳು ತುಂಬಿವೆ. ಅದರ ನೆನೆಪು ಮಾತ್ರ ನಳನಳಿಸುವ ಹಸಿರು ಮರದಂತೆ ಇನ್ನೂ ಹಸಿರಾಗಿದೆ.
ಪರಿಸರ ಪ್ರೇಮಿ ಸುಂದರ ಲಾಲ್ ಬಹುಗುಣ ಅವರ ಮಾರ್ಗದರ್ಶನದೊಂದಿಗೆ ಮಲೆನಾಡು ಪ್ರದೇಶದಲ್ಲಿ ನಡೆದ ಈ ಆಂದೋಲನ ಜಾಗತಿಕ ಮಟ್ಟದಲ್ಲಿ ಹೆಸರು ಪಡೆಯಿತು. ಅಷ್ಟೊತ್ತಿಗಾಗಲೇ ಹಿಮಾಲಯದಲ್ಲಿ ಚಿಪ್ಕೊ ಚಳವಳಿ ಯಶಸ್ವಿಯಾಗಿತ್ತು. ಶಿರಸಿ ಸಮೀಪದ ಕಳಾಸೆ, ಕುದ್ರಗೋಡು ದುರ್ಗಮ ಅರಣ್ಯ ಪ್ರದೇಶದಲ್ಲಿ ಗುತ್ತಿಗೆದಾರರು ಮರಗಳನ್ನು ಕಡಿಯಲು ಯತ್ನಿಸಿದಾಗ ನಡೆದ ಸಂಘಟಿತ ಹೋರಾಟವಿದು.
ಬಹುಗುಣ(ವಂತ) ಮುಟ್ಟಿದ್ದೆಲ್ಲಾ ಚಿನ್ನ. ಅವರ ಮಾರ್ಗದರ್ಶನದಲ್ಲಿ ಈಶಣ್ಣ, ಮಹಬಲೇಶ್ವರ ಹೆಗಡೆ, ಕೆ.ವಿ. ಸುಬ್ಬಣ್ಣ, ಆರ್.ವಿ. ಹೆಗಡೆ, ಎಸ್.ಎನ್. ಭಟ್ಟ, ಪಾಂಡುರಂಗ ಹೆಗಡೆ ಮುಂತಾದವರು ಅಪ್ಪಿಕೋ ಚಳವಳಿಯಲ್ಲಿ ಪಾಲ್ಗೊಂಡು ಇತಿಹಾಸ ನಿರ್ಮಿಸಿದರು.
ಆತ್ಮ ವಿಮರ್ಶಾ ವೇದಿಕೆ: ಈ ಚಳವಳಿಯ 25ನೇ ವರ್ಷಾಚರಣೆ ಬರೀ ಆಚರಣೆಯಲ್ಲ. ಆತ್ಮ ವಿಮರ್ಷೆಗೆ ಒಂದು ಅವಕಾಶ. ಇವತ್ತಿನ ಪರಿಸರ ಹೋರಾಟಗಳು ಯಾವ ಮಟ್ಟ ತಲುಪಿವೆ ಎಂಬುದನ್ನು ನಾವೆಲ್ಲರೂ ಯೋಚಿಸಬೇಕಿದೆ. ಅದೆಲ್ಲೋ ನಾಲ್ಕು ಗಿಡ ನೆಟ್ಟು ಪ್ರಚಾರ ಪಡೆದು, ಪರಿಸರ ಹೋರಾಟದ ಹೆಸರಿನಲ್ಲಿ ವಿದೇಶಿ ಹಣ ಸುಲಿಯುವ ನಮ್ಮ ಎನ್ಜಿಒಗಳ ಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ರೈತ ಹೋರಾಟಗಳು ದಿಕ್ಕುತಪ್ಪಿವೆ. ರೈತ ನಾಯಕರು ರಾಜಕಾರಣಿಗಳ ಚಮಚಾಗಳಾಗಿದ್ದಾರೆ. ಅಧಿಕಾರಕ್ಕೆ ಹಾತೊರೆಯುತ್ತಿದ್ದಾರೆ. ಸಂಘಟಿತ ಹೋರಾಟ ಮಾಯವಾಗಿದೆ. ರೈತರ ಬದುಕು ವಿಷಮಯವಾಗಿದೆ. ರೈತರಿಗೆ ವಿಶ್ವಾಸ ತುಂಬುವ ಒಬ್ಬನೇ ಒಬ್ಬ ನಾಯಕ ಇಲ್ಲ.
ಅಂದು ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣ ಒತ್ತೆ ಇಟ್ಟರು. ಇಂದು ತಮ್ಮ ಜೇಬು ತುಂಬಿಸಿಕೊಳ್ಳಲು ಪಂಚಭೂತಗಳಲ್ಲಿ ಒಂದಾದ ಭೂಮಿಯನ್ನೇ ಒತ್ತೆ ಇಟ್ಟಿದ್ದಾರೆ. ಇದು ನ್ಯಾಯವೆ..?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ