
ಕೆ. ಆರ್. ಮಾರುಕಟ್ಟೆ: ಬೆಂಗಳೂರಿನ ನರಕ!
ಬೆಂಗಳೂರಿಗೆ ಬಂದು, ದಾರಿತಪ್ಪಿ ಕೆ ಆರ್ ಮಾರುಕಟ್ಟೆ ಕಡೆ ಹೊದವನಿಗೆ ಹೇಗಿದೆ ಬೆಂಗಳೂರು? ಎಂಬ ಪ್ರಶ್ನೆಯನ್ನು ಕೇಳಿನೋಡಿ. `ಇಷ್ಟು ದಿನ ನರಕವನ್ನು ಕೇಳಿ ತಿಳಿದಿಕೊಂಡಿದ್ದೆ ಆದರೆ ಈಗ ಕಣ್ಣಾರೆ ಕಂಡೆ, ಏನು ಗುರು ಇದು ಇಷ್ಟೊಂದು ಕೆಟ್ಟದಾಗಿದೆ? ಇವರೆಲ್ಲಾ ಮನುಷ್ಯರಾ? ಒಂದು ಅಡ್ರೆಸ್ ಕೇಳಿದರೆ ಹೇಳುವುದಿಲ್ಲ’ ಎನ್ನುತ್ತಾನವನು. ಬೆಳಗ್ಗೆ ಎದ್ದು ಫ್ರೆಶ್ ಆಗಿ ಆಪೀಸ್ಗೆ ಹೊರಟು, ಅಕಸ್ಮಾತ್ ಮಾರ್ಕೆಟ್ನಲ್ಲಿ ಇಳಿದುಕೊಂಡರೆ ಅವತ್ತೆಲ್ಲಾ ಮೂಡ್ ಆಪ್. ಯಾಕೆಂದರೆ ಮಾರ್ಕೆಟ್ ಸ್ಥಿತಿ ಆ ಮಟ್ಟಕ್ಕಿದೆ.
ನಾಲ್ಕು ಕಡೆಯಿಂದಲೂ ಚತುಸ್ಪಥ ರಸ್ತೆ, ಮೇಲ್ಗಡೆ ಫ್ಲೈಓವರ್, ಫ್ಲೈಓವರ್ಗೆ ಸಂಪರ್ಕ ಕಲ್ಪಿಸುವ ಬೇರೆ ಬೇರೆ ರಸ್ತೆಗಳು, ದಟ್ಟ ಜನಸಂದಣಿ, ಕಿರಿದಾದ ಜಾಗ, ಬಳಕೆಯಾಗದ ಸುರಂಗ ಮಾರ್ಗಗಳು, ರಸ್ತೆಯ ಇಕ್ಕೆಲಗಳಲ್ಲಿ ಸೆಕೆಂಡ್ ಹ್ಯಾಂಡ್ ಚಪ್ಪಲಿ ಮಾರಾಟ, ಜನ ಮತ್ತು ವಾಹನಗಳು ತಿರುಗಾಡುವ ಒಂದೇ ಜಾಗ, ಟ್ರಾಫಿಕ್ ನಿಯಂತ್ರಕರ ಮಾತಿಗೆ ಕ್ಯಾರೆ ಎನ್ನದ ಮಹಾಶಯರು, ಕೋಟೆಯ ಎದುರಿಗಿರುವ ಒಂದೇ ಒಂದು ಉಚಿತ ಶೌಚಾಲಯ, ಅಲ್ಲಿನ ನೂಕುನುಗ್ಗಲು, ಬಳಕೆಯಾಗದ ಪಾವತಿ ಶೌಚಾಲಯಗಳು, ಉಸಿರು ಕಟ್ಟಿಸುವ `ಸು’ಗಂಧ, ರಸ್ತೆಯಲ್ಲಿ ಹರಿಯವ ಕಾವೇರಿ ನದಿ. ಅಬ್ಬಾ! ಒಂದಾ ಎರೆಡಾ…
ಇಷ್ಟೆಲ್ಲಾ ಸಮಸ್ಯೆಗಳು ಒಂದೇ ಕಡೆ ಎದುರಾದಾಗ ಯಾರಿಗೆ ತಾನೆ ಮೂಡ್ ಆಪ್ ಆಗುವುದಿಲ್ಲ ಹೇಳಿ. ಹೆಸರೇ ಸೂಚಿಸುವಂತೆ ಅದು ಮಾರ್ಕೆಟ್, ಮಾರುಕಟ್ಟೆ ಅಂದ ಮೇಲೆ ಮಾರುವವರು ಕೊಳ್ಳುವವರು ಇದ್ದೇ ಇರುತ್ತಾರೆ. ಆದರೆ ಕೆ ಆರ್ ಮಾರ್ಕೆಟ್ ಮಾತ್ರ ವಿಶೇಷವಾದುದು. ನಿಮಿಷಕ್ಕೊಂದು ಹೊಡೆದಾಟ, ಜಗಳಗಳು ಅಸಂಖ್ಯಾತ. ಜೋಕೆ ! ಏನಾದರು ಕೊಳ್ಳಲು ಹೋಗಿ ಜಾಸ್ತಿ ಚೌಕಾಶಿ ಮಾಡಿಬಿಟ್ಟೀರಿ, ನಿಮ್ಮ ಜೊತೆ ಯಾರು ಇಲ್ಲ ಅಂದ್ರೆ ನಿಮಗೆ ಏಟು ಬೀಳುವುದಂತು ಗ್ಯಾರಂಟಿ.
ಬಸ್ ಹಿಡಿಯುವುದುಕ್ಕಾಗುತ್ತದೆಯೇ ಅಲ್ಲಿ? ಹೋಗಲಿ ಬಸ್ ಕಂಡಕ್ಟರ್ಗಳಾಗಲಿ ಅಥವಾ ಬೇರೆ ಜನರಾಗಲಿ ಅಡ್ರಸ್ ಕೇಳಿದರೆ ಹೇಳುತ್ತಾರೆಯೆ? ಅದೂ ಇಲ್ಲ. ಕೈಯ್ಯಲ್ಲಿ ಚೀಟಿ ಇಡ್ಕೊಂಡು, ಸರ್ ಈ ಬಸ್ ಇಲ್ಲಿಗೆ ಹೋಗುತ್ತದೆ? ಎಂದು ಕೇಳಿ ನೋಡಿ. ಸುಮ್ಮನೆ ಕತ್ತು ಅಲ್ಲಾಡಿಸುತ್ತಾರಷ್ಟೆ. ಅದರರ್ಥ ಹೋಗುತ್ತದೆ ಅಂತಲು ಅಲ್ಲ ಅಥವಾ ನನಗೆ ಗೊತ್ತಿಲ್ಲ ಎಂತಲೂ ಅಲ್ಲ. ಕತ್ತು ಅಲ್ಲಾಡಿಸಿದರೆ ಏನಂತ ಅರ್ಥ ಮಾಡ್ಕೊಬೇಕು ಸರ್? ಅಂತ ಇನ್ನೊಮ್ಮೆ ಕೇಳಿಬಿಟ್ಟರಿ ಅಂತ ಇಟ್ಕೊಳಿ. `ಏನಪ್ಪಾ ಮೈಗೆ ಉಷಾರಿಲ್ವ. ಮನೇಲಿ ಹೇಳಿ ಬಂದಿದ್ದೀಯ ತಾನೆ’ ಎನ್ನುತ್ತಾ ತಳ್ಳಿಯೇಬಿಡುತ್ತಾರೆ.
ಪಾಪ! ಕೆಲಸ ಹುಡುಕಿಕೊಂಡು ನೂರಾರು ಯುವಕರು ಪ್ರತಿನಿತ್ಯ ಬೆಂಗಳೂರಿಗೆ ಬರುತ್ತಾರೆ. ಅವರ ಅನುಭವ ಕೇಳದರೆ, ಒಬ್ಬೊಬ್ಬರದು ರೋಚಕ. ಅಪ್ಪಾ! ಕೆಲಸವೂ ಬೇಡ ಈ ಮಾನಸಿಕ ಹಿಂಸೆಯೂ ಬೇಡ ಎಂದು ಹೆದರಿ ಓಡಿ ಹೋಡಿಹೋಗುವವರಿಗೆ ಇಲ್ಲಿ ಕೊರತೆ ಇಲ್ಲ. ಸಿಟಿ ಬಸ್ ಹತ್ತಿ, ಯಾವುದೇ ಪಾರ್ಕಿಗೆ ಹೋಗಿ. ಕೈಯಲ್ಲೊಂದು ಪೈಲ್ ಹಿಡಿದುಕೊಂಡು ತಮ್ಮ ಹಣೆ ಬರಹವನ್ನು ಅದರಲ್ಲಿ ತುಂಬಿಕೊಂಡು ಕೆಲಸಕ್ಕೊಸ್ಕರ ಕಾದು ಬೆಂಡಾಗಿ ಹೈರಾಣಾಗಿ ಕೈಚೆಲ್ಲಿ ಕುಳಿತಿರುತ್ತಾರೆ. ಗೆಳೆಯರ ರೂಮಿನಲ್ಲೋ, ಹಾಸ್ಟೆಲ್ಲುಗಳಲ್ಲೊ ಉಳಿದುಕೊಂಡಿರುತ್ತಾರೆ, ಅಪ್ಪ ಖರ್ಚಿಗೆ ಅಂತ ಕೊಟ್ಟ ದುಡ್ಡು ಖಾಲಿಯಾಗಿರುತ್ತದೆ. ಗಟ್ಟಿಯಾದ, ದೃತಿಗೆಡದ, ಆತ್ಮ ವಿಶ್ವಾಸವಿರುವ ಯವಕ ಒಂದು ಒಳ್ಳೆಯ ಕ್ಷಣಕ್ಕೋಸ್ಕರ ಎಲ್ಲಾ ಟಾರ್ಚರ್ ಸಹಿಸಿಕೊಂಡು ಕಾಯುತ್ತಾನೆ. ಆ ಕ್ಷಣ ಬಂದಾಗ, ಬೆಂಗಳೂರಿನ ಕಹಿಸತ್ಯಗಳನ್ನು ಅರ್ಥ ಮಾಡಿಕೊಂಡು ಮರೆಯಲಾಗದ ಅನುಭವಗಳೆಂದು ದಾಖಲಿಸಿಡುತ್ತಾನೆ. ಮುಂದೊಂದು ದಿನ ಅದನ್ನುತೆಗೆದು ನೋಡಿ `ಇದು ನಾನೇನಾ?’ ಎಂದು ಅಚ್ಚರಿ ಪಟ್ಟುಕೊಳ್ಳುತ್ತಾನೆ. ಇನ್ನು ಕಾಯಲಾಗದ, ದೃತಿಗೆಟ್ಟ ಜೊಳ್ಳು ಯುವಕ ಬೆಂಗಳೂರಿನ ಕಹಿಸತ್ಯಗಳಿಗೆ ಬೆದರಿ ಮಾಯವಾಗುತ್ತಾನೆ.
ಹಣ ಉಳ್ಳವನು ಎಂಜಿ ರೋಡ್ಗೋಗ್ತಾನೆ ಸ್ವಾಮೀ, ಉಳ್ಳದವ ಎಲ್ಲಿಗೆ ಹೋಗಬೇಕು ಹೇಳಿ, ಮಾರ್ಕೆಟ್ಗೇ ಹೋಗಬೇಕು. ಯೂನಿರ್ವಸಿಟಿಯ ಡಿಗ್ರಿ ಗಳನ್ನು ನೆಚ್ಚಿಕೊಂಡು ಬಂದರೆ ಇಲ್ಲಿ ಬದುಕಿಲ್ಲ.
ಯುವತಿಯರ ಪಾಡು: ಇನ್ನು ಯುವತಿಯರ ಪಾಡು ನೆನಸಿಕೊಂಡರೆ ಭಯವಾಗುತ್ತದೆ. ಅವಳು ಮಾರ್ಕೆಟ್ನ ರಸ್ತೆಯಲ್ಲಿ ನಡೆಯುವಾಗ ಅದೆಷ್ಟುಜನ ಅವಳ ಸೊಂಟ ಜಿಗುಟಿರುತ್ತಾರೋ ಅವಳಿಗೇ ಗೊತ್ತು. ಎಲ್ಲವನ್ನು ಸಹಿಸಿಕೊಂಡು ನಡೆದರೆ ಬಚಾವ್, ಇಲ್ಲವಾದರೆ ಕೊಚ್ಚೆಗೆ ಕಲ್ಲೆಸೆದು ಮಖಕ್ಕೆ ಸಿಡಿಸಿಕೊಂಡಂತೆ! ಕೆಲ ಹೆಣ್ಣು ಮಕ್ಕಳಂತೂ ಮಾರ್ಕೆಟ್ ಕಡೆ ಹೋಗುವುದಿರಲಿ ಆ ಕಡೆ ತಲೆ ಹಾಕಿಯೂ ಮಲಗಲು ಹೆದುರುತ್ತಾರೆ.
ಇದು ನಮ್ಮ ಊರಲ್ಲ, ನಮ್ಮ ಭಾಷೆಯಲ್ಲ; ಒಮ್ಮೊಮ್ಮೆ ಅನ್ನಿಸಿ ಬಿಡುತ್ತದೆ `ಇದು ಕರ್ನಾಟಕವೇ ಅಲ್ಲ, ಇಲ್ಲಿ ಕನ್ನಡವೇ ಇಲ್ಲ. ಬೆಂಗಳೂರಿನಲ್ಲಿ ಕನ್ನಡಿಗರಿಗೆ ಭವಿಷ್ಯವೇ ಇಲ್ಲ’ ಎಂದು.
ಆ ಮಾರ್ಕೆಟ್ನಲ್ಲಿ ಸರಿಯಾಗಿರೋ ಒಂದು ಬಸ್ ಸ್ಟಾಂಡಿಲ್ಲ ರೀ. ವಾಣಿ ವಿಲಾಸ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳು ಒಂದೇಕಡೆ ಇವೆ. ಎರಡು ಆಸ್ಪತ್ರೆಗಳಿಗೆ ಒಂದೇ ರಸ್ತೆ. ಕೆಂಗೇರಿ ಕಡೆಯಿಂದ ಬರುವ ಬಸ್ಸು ನಿಲ್ಲುವ ಜಾಗವಂತೂ……ಅದು ಜಾಗವಲ್ಲ ಗೊಜ್ಜೆ ಗುಂಡಿ. ಕಲಾಸಿಪಾಳ್ಯ ಕಡೆಗೆ ಹೋಗುವ ತಿರುವಿನಲ್ಲಿ ಒಂದು ಉಚಿತ ಶೌಚಾಲಯವಿದೆ. ಹೊಸದು, ಇತ್ತೀಚಿಗೆ ಕಟ್ಟಿಸಿದ್ದು. ಅದರೊಳಕ್ಕೊಮ್ಮೆ ಹೋದರೆ ಹೊರಕ್ಕೆ ಬರುವುದು ಸಾಹಸವೇ ಸರಿ. ಗಬ್ಬು ನಾಥ ಛೀ!
ಕಣ್ಣಿನ ವ್ಯವಹಾರ: ಮಾರ್ಕೆಟ್ನ ಇನ್ನೊಂದು ಮುಖ್ಯವಾದ ವಿಷಯ. ರಾತ್ರಿ ಹತ್ತು ಗಂಟೆ ಆಯ್ತು ಅಂದ್ರೆ ಬೇರೆ ಬೇರೆ ಏನೇನೋ ವ್ಯವಹಾರಗಳು ನಡೆಯುತ್ತವೆ. ಅದು ಕಣ್ಣಿನ ವ್ಯವಹಾರ. ಹೆಂಗಸರ ಗುಂಪೊಂದು ನಿಂತಿರುತ್ತದೆ, ಯಾವನೋ ಅಲ್ಲಿಗೆ ಹೋಗ್ತಾನೆ. ಕಣ್ಣಿನಲ್ಲೇ ಏನೇನೋ ಮಾತುಕತೆಗಳು ನಡೆಯುತ್ತವೆ, ಅದಕ್ಕೆಂದೇ ಕಾಯುತ್ತಿದ್ದ ಆಟೊವೊಂದು ಸುಯ್ಯನೆ ಬರುತ್ತದೆ, ಇಬ್ಬರನ್ನು ಹತ್ತಿಸಿಕೊಂಡು ಕಣ್ಣಿಗೆ ಕಾಣದೆ ಮಾಯವಾಗುತ್ತದೆ. ಅಲ್ಲಿಗೆ ಮುಗಿಯಿತು, ಚಲುವ ಸುವರ್ಣ ಕನ್ನಡ ನಾಡು!
ಇದು ಬೆಂಗಳೂರು, ಸಿಲಿಕಾನ್ ಸಿಟಿ, ವ್ಯಾಲಿ, ಮೆಟ್ರೋ ನಗರ. ನ್ಯೂಯಾರ್ಕ್ನಲ್ಲಿ ಕುಳಿತು ಬೆಂಗಳೂರಿನ ಬಗ್ಗೆ ಮಾತನಾಡುವಾಗ ನಿಜವಿರಬಹುದು. ಆದರೆ ಮಾರ್ಕೆಟ್ನಲ್ಲಿ ನಿಂತು ಕ್ಷಣಕಾಲ ಯೋಚಿಸಿದರೆ ಇದು ಗಬ್ಬುನಗರ.