
ಬೆಂಗಳೂರಿನಲ್ಲಿ ರವಿ ಮರೆಯಾದಾಗ….!
ಮೊನ್ನೆರಾಜರಾಜೇಶ್ವರಿ ನಗರದಲ್ಲಿ ಸರಿಸುಮಾರು 5 ಗಂಟೆ ಕಾಲ ಕರೆಂಟ್ ಇರಲಿಲ್ಲ. ಬೆಳಿಗ್ಗೆ 7 ಗಂಟೆಗೆ ಕರೆಂಟ್ ಮಾಯವಾಯಿತು. ಆಗತಾನೆ ಹಾಸಿಗೆಯಿಂದ ಮೇಲೆದ್ದ ಮಂದಿ ಬೆಸ್ಕಾಂ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.
ಬೆಸ್ಕಾಂ ಕಚೇರಿಯಲ್ಲಿ ಟೆಲಿಫೋನ್ಗಳು ರಿಂಗಣಿಸಿದವು. ಜನರ ಮೇಲೆ ಬೆಸ್ಕಾಂ ಅಧಿಕಾರಿಗಳ ಅವಾಜ್…..
`ಏನ್ರೀ! ಪೇಪರ್ ನೋಡಲ್ವೆನ್ರೀ. ಯಾವ ಯಾವ ಏರಿಯಾಗಳಲ್ಲಿ ಲೋಡ್ ಶೆಡ್ಡಿಂಗ್ ಇದೆ ಅಂತ ಎಲ್ಲಾ ರಿಪೋರ್ಟ್ ಬಂದಿದೆ. ಮಾತೆತ್ತಿದರೆ ಇಲ್ಲಿಗೆ ಫೋನ್ ಮಾಡ್ತೀರಾ. ಕರೆಂಟ್ ಏನು ನಮ್ಮಪ್ಪನ ಮನೆ ಆಸ್ತೀನಾ.’ ಫೋನ್ ಕುಕ್ಕಿದ ಆತ.
ಇದೊಂದು ಥರಾ ಫುಡ್ಚೈನ್ ಇದ್ದಹಾಗೆ. ಒಂದರಿಂದ ಇನ್ನೊಂದಕ್ಕೆ ನಂಟು. ಕರೆಂಟ್ ಇಲ್ಲ ಅಂದ್ರೆ ನೀರು ಬರಲ್ಲ. ನೀರಿಲ್ಲ ಅಂದ್ರೆ ಸ್ನಾನ ಇಲ್ಲ. ಸ್ನಾನ ಇಲ್ಲದೆ ಆಫೀಸ್ಗೆ ಹೋಗೋ ಹಾಗಿಲ್ಲ. ಕೆಲವರು ಸೆಂಟ್ ಹೊಡಕೊಂಡು ಹೋಗ್ತಾರೆ ಬಿಡಿ! ಬೆಳಗೆ ಎದ್ದು ಬಟ್ಟೆ ಎಲ್ಲಾ ಒಗಿಯೋಣ ಎಂದು ಮಲಗಿದ ನಾರಿಮಣಿಯರಿಗೆ ದಿನಪೂರ್ತಿ ಮೂಡ್ ಆಫ್. ಛಾರ್ಜ್ ಮಾಡದವರ ಸೆಲ್ಫೋನ್ ಸ್ವಿಚ್ಡ್ ಆಫ್. ಹಾಲು ಹಣ್ಣು ತಣ್ಣಗೆ ಮಾಡುವ ರೆಫ್ರೀಜರೇಟರ್ ಬೆಚ್ಚಗೆ ಕೂತಿದೆ.
ಅಂಗೂ ಹಿಂಗೂ ನ್ಸೂಸ್ ಪೇಪರ್ ತಿರುವಿ ಹಾಕಿದವರು ಸಮಸ್ಯೆಯಿಂದ ಸೇಫ್. ಯಾಕೆಂದರೆ ನಾಳೆ ಕರೆಂಟ್ ಇರಲ್ಲ ಅಂತ, ಇರುವ ನೀರನ್ನು ಹಿತ ಮಿತವಾಗಿ ಬಳಸಿಕೊಳ್ಳಬಹುದು. ರೆಫ್ರಿಜರೇಟರ್ಗೆ ರಾತ್ರಿಇಡೀ ಚಾರ್ಜ್ ಮಾಡಿಕೊಳ್ಳಬಹುದು. ಈ ರೀತಿಯ ಬೇರೆ ಕ್ರಮ ಕೈಗೊಳ್ಳಬಹುದು. ಒಟ್ಟಾರೆ ಕರೆಂಟ್ ಇಲ್ಲದೆ ಹೇಗೆ ಜೀವನ ಮಾಡಬಹುದು ಅಂತ ಪ್ಲಾನ್ ಮಾಡಬಹುದು.
ಬೆಸ್ಕಾಂ ಅಧಿಕಾರಿಗಳು ಏನಂತಾರೆ?: ಬೆಂಗಳೂರು ವಿದ್ಯುತ್ ಸೇವೆ ನಿಗಮ(ಬೆಸ್ಕಾಂ) ಉತ್ತರ ವಿಭಾಗದ ಎಕ್ಸಿಕ್ವೀಟೀವ್ ಎಂಜಿನಿಯರ್ ಒಬ್ಬರು ಹೇಳೋ ಪ್ರಕಾರ ಬೆಂಗಳೂರಲ್ಲಿ ಲೋಡ್ ಶೆಡ್ಡಿಂಗೇ ಇಲ್ಲವಂತೆ. ಆದ್ರೆ ದಿನಾ ಪೂರ್ತಿ ಕರೆಂಟ್ ತಗಿತಾರಂತೆ! ಕಾರಣವಿಷ್ಟೆ: ಏನಾದರೂ ಟೆಕ್ನಿಕಲ್ ಕಾರಣ ಇದ್ದಾಗ, ಅಂದರೆ ಕಂಬ ಬಿದ್ದು ಹೋದಾಗ, ಲೈನ್ ತೊಂದರೆ ಇದ್ದಾಗ, ಶಾರ್ಟ್ ಶರ್ಕಿಟ್ ಆದಾಗ, ಲೈನ್ ವಿಸ್ತರಣೆ ಮಾಡುವಾಗ ಲೈನ್ ತಗಿಯಲೇ ಬೇಕು. ಇದನ್ನು ಇಲಾಖೆ ಲೋಡ್ ಶೆಡ್ಡಿಂಗ್ ಅನ್ನೊದಿಲ್ಲ. ತಾಂತ್ರಿಕ ಕಾರಣದ ಫವರ್ ಕಟ್ ಅಂತಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು ಅಂತಾರೆ ಅವರು.
ತೊಂದರೆ ಮುಕ್ತ ಅಪಾರ್ಟ್ ಮೆಂಟ್: ವಿದ್ಯುತ್ ಇಲಾಖೆ ಅಪಾರ್ಟ್ಮೆಂಟ್ಗಳನ್ನು ಬಹುಮಹಡಿ ಕಟ್ಟಡಗಳು ಎಂದು ಕರೆಯುತ್ತದೆ. ಸಾಮಾನ್ಯ ಕಟ್ಟಡಗಳಿಗೂ ಇವಕ್ಕೂ ಬಹಳ ವ್ಯತ್ಯಾಸವಿದೆ. ಇದರಲ್ಲಿ 500 ಸ್ಕ್ವೇರ್ ಮೀಟರ್ಗಿಂತ ಹೆಚ್ಚು ವಿಸ್ತೀರ್ಣ, 25 ಕಿಲೋ ವ್ಯಾಟ್ಸ್ತಿಂತ ಹೆಚ್ಚು ವಿದ್ಯುತ್ ಬಳಸುವ ಕಟ್ಟಡಗಳು ಸೇರುತ್ತವೆ. ಅದು ಅಪಾರ್ಟ್ಮೆಂಟ್ ಆಗಿರಬಹುದು ಅಥವಾ ಯಾವುದೇ ಕಟ್ಟಡ ಆಗಿರಬಹುದು. ಇವುಗಳಿಗೆ ನೀಡುವ ವಿದ್ಯುತ್ ಸಂಪರ್ಕ ಸಾಮಾನ್ಯ ಮನೆಗೆ ನೀಡುವ ಸಂಪರ್ಕಕ್ಕಿಂತ ಭಿನ್ನ. ಮುಖ್ಯವಾಗಿ ಬಹುಮಹಡಿ ಕಟ್ಟಡಗಳಿಗೆ ಕಡ್ಡಾಯವಾಗಿ ಸ್ವತಃ ಟ್ರಾನ್ಸ್ಫಾರ್ಮರ್ ಹೊಂದಿರಬೇಕು. ಹೀಗಾಗಿ ಸಾಮಾನ್ಯ ಸಂದರ್ಭಗಳಲ್ಲಿ ಅಲ್ಲಿ ಟೆಕ್ನಿಕಲ್ ಕಾರಣ ಉದ್ಬವ ಆಗಲಾರದು. ಅಪಾರ್ಟ್ಮೆಂಟ್ ನಿವಾಸಿಗಳು ಫವರ್ ಕಟ್ ಸಮಸ್ಯೆಯಿಂದ ಸ್ವಲ್ಪ ಸೇಫ್. ಶಾರ್ಟ್ ಶರ್ಕಿಟ್ನಂತಹ ಮೇಜರ್ ಅನಾಹುತಗಳಾದಾಗ ಅಲ್ಲೂ ಕೂಡ ಸಮಸ್ಯೆ ಇದ್ದದ್ದೇ.
ಮಾಹಿತಿ ಬೇಕು: ಬೆಂಗಳೂರಂಥ ಊರಲ್ಲಿ ಬದುಕಲು ಅನ್ನ, ನೀರು, ಗಾಳಿ ಇವಿಷ್ಟು ಮಾತ್ರ ಇದ್ರೆ ಸಾಕಾಗಲ್ಲ. ಇನ್ನೊಂದು ಮುಖ್ಯವಾದ ಅಂಶ ಅಂದರೆ ಮಾಹಿತಿ. ಮಾಹಿತಿಯ ಅರಿವು ಬೇಕೇ ಬೇಕು. ಈ ಊರ ಜೀವನ ಬಲು ಕಷ್ಟಕರ. ಮುಳ್ಳಿನ ಮೇಲಿನ ಜೀವನ. ಯಾವಾಗ ಅದೇನು ಅಪಾಯ ಬರುತ್ತೆ ಅಂತ ಹೇಳಲಿಕ್ಕೆ ಬರೊಲ್ಲ. ಒಂದು ದಿನ ಕರೆಂಟ್ ಇಲ್ಲ ಅಂದರೆ ಏನೇನೆಲ್ಲಾ ಆಗಿ ಹೋಗುತ್ತೆ. ವಿದ್ಯುತ್ ಮೇಲಿನ ಅವಲಂಬನೆ ಇಲ್ಲಿ ತಾರಕ ಸ್ಥಿತಿಯಲ್ಲಿದೆ. ಬೇರೊಂದು ಶಕ್ತಿಯ ಮೂಲ ಇವರಿಗೆ ಬೇಕಿಲ್ಲ! ಹಳ್ಳಿಗಳಲ್ಲಿ ದಿನಕ್ಕೆ 12 ಗಂಟೆ ಕರೆಂಟ್ ಮಾತ್ರ. ಪಾಪ! ಅವರು ವಿದ್ಯುತ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸೀಮೆಎಣ್ಣೆ ದೀಪ ಹಳ್ಳಿಗಳಲ್ಲಿ ಎಂದೆದಿಗೂ `ನಂದದ ದೀಪ.’
`ಮಾಹಿತಿ ಇಂದು ಜಗತ್ತನ್ನು ಆಳುತ್ತಿದೆ.’ ವಿದ್ಯುತ್ ಮಾಹಿತಿ ಮಾತ್ರವಲ್ಲ. ಹವಾಮಾನ ವರದಿ, ಕ್ರೈಮ್ ರಿಪೋರ್ಟ್, ಪ್ರಮುಖ ರಾಜಕೀಯ ಆಗುಹೋಗುಗಳು ಇವೆಲ್ಲದರ ಮಾಹಿತಿ ಬೇಕು. ಎಲ್ಲೋ ನಡೆಯುವ ಒಂದು ಘಟನೆ ಅಲ್ಲಿಗೆ ಮಾತ್ರ ಸೀಮಿತವಲ್ಲ. ನಾಳೆ ಇಲ್ಲೇ ಸಂಭವಿಸಿಬಿಡಬಹುದು. ಇಲ್ಲಿಯ ಅದೆಷ್ಟೋ ಕಟ್ಟಡಗಳು ಭಯೋತ್ಪಾದಕ ಸ್ಫೋಟನಾ ಪಟ್ಟಿಯಲ್ಲಿವೆ. ಇದೆಲ್ಲದರ ಮಾಹಿತಿ ಇದ್ದರೆ ಒಳ್ಳೆಯದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ