
ತ್ಯಾಜ್ಯ ನಿರ್ವಹಣೆ: ಯಾರು ಹೊಣೆ?
1976ರಲ್ಲಿ ನಡೆದ ಘಟನೆ. ಅಮೆರಿಕಾದ ನಯಾಗರ ನಗರದ ಶಾಲೆಯೊಂದರ ಮಕ್ಕಳು ಇದ್ದಕ್ಕಿದ್ದಂತೆ ಅಸ್ವಸ್ಥರಾಗತೊಡಗಿದರು. ವಿಚಿತ್ರ ಲಕ್ಷಣಗಳುಳ್ಳ ರೋಗಕ್ಕೆ ಅಸಂಖ್ಯಾತ ಮಕ್ಕಳು ತುತ್ತಾದರು. ಕೆಲವರು ಮೃತಪಟ್ಟರು. ಶಾಲೆಯ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಕ್ಯಾನ್ಸರ್ಗೆ ತುತ್ತಾದರು. ಹುಟ್ಟುವ ಮಕ್ಕಳು ಗರ್ಭದಲ್ಲೇ ಸತ್ತವು, ಅಂಗವಿಕಲರಾಗಿ ಹುಟ್ಟಿದವು. ಕಾರಣ ಹುಡುಕುತ್ತಾ ಹೊರಟಾಗ ಬಹಿರಂಗಗೊಂಡ ವಿಷಯಕ್ಕೆ ಅಮೆರಿಕಾ ಮಾತ್ರವಲ್ಲ, ಇಡೀ ಜಗತ್ತು ನಡುಗಿತು.
ಕಾರಣವಿಷ್ಟೆ. ಆ ಜಾಗ ಹೂಕರ್ ಪ್ಲಾಸ್ಟಿಕ್ ಮತ್ತು ಕೆಮಿಕಲ್ ಕಂಪನಿಯ `ತಿಪ್ಪೆಗುಂಡಿ’ಯಾಗಿತ್ತು.
ಹೂಕರ್ ಪ್ಲಾಸ್ಟಿಕ್ ಮತ್ತು ಕೆಮಿಕಲ್ ಕಂಪನಿ ಆ ಜಾಗವನ್ನು ಹಿಂದೆ ತನ್ನ ತ್ಯಾಜ್ಯ ವಿಲೇವಾರಿಗಾಗಿ ಪಡೆದಿತ್ತು. ಹತ್ತು ವರ್ಷಗಳ ನಂತರ ಜಾಗವನ್ನು ಮಾರಾಟ ಮಾಡಿತ್ತು. ಅದೇ ಜಾಗದಲ್ಲಿ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು.
ಆಗಬಾರದ್ದು ಆಗಿ ಹೋದ ನಂತರ ಆ ಜಾಗ `ಶುದ್ಧ’ಗೊಳಿಸಲು ಅಮೆರಿಕಾ 100 ಮಿಲಿಯನ್ ಡಾಲರ್ ಹಣ ವೆಚ್ಚ ಮಾಡಿತು. ಸೌಂದರ್ಯ ನಗರ ಎಂದೇ ಹೆಸರಾಗಿದ್ದ ನಯಾಗರದಲ್ಲಿ ನಡೆದ ಈ ಘಟನೆಯಿಂದ ವೈಟ್ಹೌಸ್ ನಾಯಕರು ಇರುಸು ಮರುಸಿಗೆ ಒಳಗಾಗಬೇಕಾಯಿತು.
ಈ ಘಟನೆಯ ನಂತರ ವಿಷಯುಕ್ತ ತ್ಯಾಜ್ಯದ ಅಪಾಯದ ಅರಿವು ಜಗತ್ತಿಗೆ ಆಯಿತು. `ವಿಶ್ವ ಪರಿಸರ ವಿಷಯ’ದಲ್ಲಿ ಇದು ಮರೆಯಲಾಗದ ಪ್ರಕರಣವಾಗಿದೆ.
ತ್ಯಾಜ್ಯ ವಿಲೇವಾರಿ ಒಂದು ಜಾಗತಿಕ ಸಮಸ್ಯೆ. ಪಾಶ್ಚಿಮಾತ್ಯ ರಾಷ್ಟ್ರಗಳು ತ್ಯಾಜ್ಯ ನಿರ್ವಹಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿವೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಬಡ ರಾಷ್ಟ್ರಗಳನ್ನು ತಮ್ಮ ಡಸ್ಟ್ಬಿನ್ಗಳೆಂದು ಭಾವಿಸಿರುವುದು ದುರದೃಷ್ಟಕರ. ತಮ್ಮ ರಾಷ್ಟ್ರದ ಅಪಾಯಕಾರಿ ತ್ಯಾಜ್ಯವನ್ನು ಹಡಗುಗಳ ಮೂಲಕ ಸಾಗಿಸಿ ಬಡರಾಷ್ಟ್ರಗಲ್ಲಿ ಚೆಲ್ಲುತ್ತಿವೆ.
1986ರಿಂದ 1988ರ ನಡುವೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತೃತೀಯ ಜಗತ್ತಿನ ಬಡ ರಾಷ್ಟ್ರಗಳಿಗೆ 3.656 ಮಿಲಿಯನ್ ಟನ್ ಅಪಾಯಕಾರಿ ತ್ಯಾಜ್ಯವನ್ನು ಸಾಗಿಸಿವೆ. ಈ ವಿಷಯವನ್ನು ಕೋಲ್ಕತ್ತಾದ ಅಮೃತ ಬಜಾರ್ ಪತ್ರಿಕಾ 1989 ನವೆಂಬರ್ 25ರಂದು ಪ್ರಕಟಿಸಿದಾಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಧೋರಣೆ ಬಗ್ಗೆ ಭಾರತದಲ್ಲಿ ಪ್ರಬಲ ವಿರೋಧ ವ್ಯಕ್ತವಾಯಿತು. ಈ ಕುರಿತು ರಾಷ್ಟ್ರಗಳ ನಡುವೆ ಒಡಂಬಡಿಕೆಯಾಗಿತ್ತು ಎಂಬ ವಿಷಯ ಅನಂತರ ಹೊರಬಿತ್ತು.
ಒಸಾಮಾ ಬಿನ್ ಲಾಡೆನ್ ನೇತೃತ್ವದ ಅಲ್ಕೈದಾ ಸಂಘಟನೆಯ ಉಗ್ರಗಾಮಿಗಳು ಕೆಡವಿದ ವಿಶ್ವ ವಾಣಿಜ್ಯ ಕಟ್ಟಡದ ತ್ಯಾಜ್ಯವನ್ನು ಅಮೆರಿಕಾ ಭಾರತಕ್ಕೆ ತಂದು ಸುರಿಯಿತು. ಅಮೆರಿಕಾದ ದೊಡ್ಡಣ್ಣನ ನೀತಿಯ ವಿರುದ್ಧ ಭಾರತೀಯರು ತಿರುಗಿ ಬೀಳಲಿಲ್ಲ.
ಕೆಲರಾಷ್ಟ್ರಗಳು ತಮ್ಮ ತ್ಯಾಜ್ಯವನ್ನು ಸಮುದ್ರಕ್ಕೆ ಸುರಿಯುತ್ತಾ ಬಂದಿವೆ. ಇದು ಸಾಗರ ಜೀವಿಗಳ ಜೀವಕ್ಕೆ ಕುತ್ತಾಗುತ್ತಿದೆ. ಆಗಾಗ ಸಮುದ್ರದಲ್ಲಿ ಲಕ್ಷಾಂತರ ಮೀನುಗಳು ಸಾಯುವುದಕ್ಕೆ ಅಪಾಯಕಾರಿ ತ್ಯಾಜ್ಯವೇ ಕಾರಣ.
ಆಫ್ರಿಕಾ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ತ್ಯಾಜ್ಯ ವಿಲೇವಾರಿ ಕ್ರಮವನ್ನು ಬಲವಾಗಿ ವಿರೋಧಿಸಿವೆ. ಕೀನ್ಯಾದ ಮಾಜಿ ಅಧ್ಯಕ್ಷ ಡ್ಯಾನಿಯಲ್ ಅರಪ್ ಮೊಯಿ ಇದನ್ನು `ವಿಷಬೀಜ ಭಯೋತ್ಪಾದನೆ’ ಎಂದು ಬಣ್ಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಗಳನ್ನು ರೂಪಿಸಲಾಗಿದೆ. ಅವುಗಳಲ್ಲಿ `ಬೆಸಲ್ ಮಾತುಕತೆ’ ಪ್ರಮುಖವಾದುದು. ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಿಸರ ಕಾರ್ಯಕ್ರಮದಿಂದ (UNEP) 1989ರಲ್ಲಿ ರೂಪಿಸಲಾಯಿತು. ಈ ಮಾತುಕತೆಯಲ್ಲಿ 150ಕ್ಕೂ ಹೆಚ್ಚುರಾಷ್ಟ್ರಗಳು ಭಾಗವಹಿಸಿದ್ದವು. ತ್ಯಾಜ್ಯ ವಿಲೇವಾರಿ ಕ್ರಮವನ್ನೊಳಗೊಂಡ ಒಂದು ಕರಡನ್ನು ಈ ಸಭೆಯಲ್ಲಿ ಅಂಗೀಕರಿಸಲಾಯಿತು.
ತ್ಯಾಜ್ಯದ ವಿಷಯದಲ್ಲಿ ಭಾರತದ ಸ್ಥಿತಿ ಭಯಂಕರವಾಗಿದೆ. ಭಾರತ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತಿಪ್ಪೆಗುಂಡಿ ಸಮಸ್ಯೆಯೂ ಒಂದು! ಹಲವು ಕಾನೂನುಗಳಿದ್ದರೂ ತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿದೆ. ಪರಿಸರ (ಸಂರಕ್ಷಣೆ) ಕಾನೂನು- 1986ರ ಹಲವು ಸೆಕ್ಷನ್ಗಳಲ್ಲಿ ತ್ಯಾಜ್ಯ ನಿರ್ವಹಣೆಯ ವಿಧಾನಗಳನ್ನು ಉಲ್ಲೇಖಿಸಲಾಗಿದೆ. ತ್ಯಾಜ್ಯ ನಿರ್ವಹಣಾ ನಿಯಮಗಳು- 1989 ಇದರಲ್ಲಿ ಹಲವು ಕ್ರಮವಿಧಾನಗಳನ್ನು ನೀಡಲಾಗಿದೆ. ಈ ಕಾನೂನುಗಳಿರುವುದು ಬಹು ಸಂಖ್ಯಾತ ಭಾರತೀಯರಿಗೆ ಗೊತ್ತಿಲ್ಲ. ಡಸ್ಟ್ಬಿನ್ ಲಾ ಯಾರಿಗೆ ಬೇಕು?!
ರಾಷ್ಟ್ರದ ಮಲಿನ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಇಲ್ಲಿ ಪ್ರತಿನಿತ್ಯ 2500 ಟನ್ ವಿಷಯುಕ್ತ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಈ ೃಹತ್ ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿ ಕ್ರಮದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮಗಳು ಉಂಟಾಗುತ್ತಿವೆ. ಈ ತ್ಯಾಜ್ಯ ಬಹಳ ಅಪಾಯಕಾರಿಯಾಗಿದ್ದು, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ವಿಲೇವಾರಿಗೆ ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವ ಕಾರಣ ಗಾಳಿ, ಜಲ, ಅಂತರ್ಜಲ ಮಲಿನಗೊಳ್ಳುತ್ತಿವೆ.
ಬರೀ ಬೆಂಗಳೂರು ಮಾತ್ರವಲ್ಲ. ಎಲ್ಲಾ ಮೆಟ್ರೋಪಾಲಿಟನ್ ನಗರಗಳ ಹಣೆಬರಹವೂ ಇದೇ. ನವದೆಹಲಿಯಲ್ಲಿ ದಿನಕ್ಕೆ 4000 ಟನ್ ತ್ಯಾಜ್ಯ ಉತ್ಪತ್ತಿಯಾದರೆ ಮುಂಬೈ ನಗರದಲ್ಲಿ 4500 ಟನ್ ಉತ್ಪತ್ತಿಯಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಇದೆ. ಎಲ್ಲಾ ರಾಜ್ಯಗಳಲ್ಲಿಯೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿವೆ. ಇವು ಮಾಲಿನ್ಯದ ಮಟ್ಟವನ್ನು ಅಳೆದು ಸುರಿದು ಅಂಕಿ ಅಂಶ ನೀಡುತ್ತವೆ. ತ್ಯಾಜ್ಯ ವಿಲೇವಾರಿಗೆ ಹಲವು ನೀತಿ ನಿಯಮಾವಳಿಗಳನ್ನು ಜಾರಿ ಮಾಡಿವೆ. ಆದರೆ ಎಲ್ಲಾ ನಿಯಮಗಳು ಕಡತದಲ್ಲಿ ಭದ್ರವಾಗಿವೆ. ಭಾರತ ತ್ಯಾಜ್ಯ ವಿಲೇವಾರಿಯಲ್ಲಿ ಸಂಪೂರ್ಣವಾಗಿ ಸೋತಿದೆ.
ವ್ಯರ್ಥ ತ್ಯಾಜ್ಯಗಳು ಮೂರು ರೀತಿಯಲ್ಲಿರುತ್ತವೆ. ದ್ರವ, ಘನ ಮತ್ತು ರೇಡಿಯೋ ವಿಕಿರಣ ತ್ಯಾಜ್ಯ. ಕೈಗಾರಿಕೆ ಹೊರಸೂಸುವ ವ್ಯರ್ಥ ವಸ್ತು, ಕ್ಲೋರೋಫ್ಲೋರೋ ಕಾರ್ಬನ್ (ಸಿಎಫ್ಸಿ) ಮುಂತಾದವು ದ್ರವತ್ಯಾಜ್ಯದಲ್ಲಿ ಸೇರುತ್ತವೆ. ಇದು ಬಹಳ ಬೇಗ ಗಾಳಿ, ನೀರಿನೊಡನೆ ಸೇರಿ ವಾತಾವರಣವನ್ನು ಹಾಳುಗೆಡವಬಲ್ಲದು. ದ್ರವತ್ಯಾಜ್ಯದ ಶುದ್ಧೀಕರಣ ಬಹಳ ಕಷ್ಟ. ಇದು ಸದಾ ವಾತಾವರಣದಲ್ಲಿ ಅಸ್ತಿತ್ವದಲ್ಲಿರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮಾನವ ಬಳಸಿ ಬಿಸಾಡಿದ ವಸ್ತುಗಳನ್ನು ಘನತ್ಯಾಜ್ಯ ಎನ್ನಬಹುದು. ಆಸ್ಪತ್ರೆ ತ್ಯಾಜ್ಯ, ಸತ್ತ ಪ್ರಾಣಿ ಪಕ್ಷಿ ಗಿಡಮರಗಳು ಮುಂತಾದವು ಘನ ತ್ಯಾಜ್ಯದಲ್ಲಿ ಸೇರುತ್ತವೆ. ವಿಲೇವಾರಿ ಕ್ರಮಗಳನ್ನು ಅನುಸರಿಸಿದರೆ ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ನಾಗರಿಕ ಪರಮಾಣು ಶಕ್ತಿ ಉತ್ಪಾದನೆಯಲ್ಲಿ `ರೇಡಿಯೋ ವಿಕಿರಣ ತ್ಯಾಜ್ಯ’ ಹೊರಹೊಮ್ಮುತ್ತದೆ. ಈಗ ಎಲ್ಲಾ ರಾಷ್ಟ್ರಗಳು ನಾಗರಿಕ ಪರಮಾಣು ರಾಷ್ಟ್ರಗಳಾಗಿ ಮಾರ್ಪಡುತ್ತಿದ್ದು, ಪರಮಾಣು ಇಂಧನ ಶಕ್ತಿ ಘಟಕಗಳ ನಿರ್ಮಾಣದಲ್ಲಿ ತೊಡಗಿವೆ. ಪರಮಾಣು ಉತ್ಪಾದನೆಗೆ ಮುಖ್ಯವಾಗಿ ಬೇಕಾಗಿರುವುದು ಥೋರಿಯಂ. ಇದು ಬಹಳ ದುಬಾರಿ ಇಂಧನ ಮೂಲ. ಒಂದು ಕೆ.ಜಿ. ಥೋರಿಯಂ ಮೂರು ಸಾವಿರ ಟನ್ ಕಲ್ಲಿದ್ದಲಿಗೆ ಸಮ. ರೇಡಿಯೋ ವಿಕಿರಣ ತಾಜ್ಯ ಜೀವಮಂಡಲದ ಮೇಲೆ ಭೀಕರ ಪರಿಣಾಮ ಬೀರುತ್ತದೆ.
ವಾಯುಮಾಲಿನ್ಯದಲ್ಲಿ ಬೆಂಗಳೂರು ಹಲವು ವರ್ಷಗಳಿಂದ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಇಲ್ಲಿ ಪ್ರತಿ ತಿಂಗಳು 15000 ವಾಹನಗಳು ನೋಂದಾವಣೆಗೊಳ್ಳುತ್ತಿವೆ. ಬೆಂಗಳೂರಿನ ಗಾಳಿ ಮಲಿನವಾಗುವುದಕ್ಕೆ ವಾಹನಗಳೇ ಕಾರಣ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ.
ಇತ್ತೀಚೆಗೆ ತ್ಯಾಜ್ಯ ವಿಲೇವಾರಿ ಅಕ್ರಮವಾಗುತ್ತಿದೆ. ತ್ಯಾಜ್ಯ ಸಾಗಣೆದಾರರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳು ತಮ್ಮ ತಾಜ್ಯವನ್ನು ಬೆಂಗಳೂರಿನ ಹೊರವಲಯದ ಖಾಲಿ ಪ್ರದೇಶಗಳಲ್ಲಿ ಸುರಿಯುತ್ತಿರುವುದು ಪತ್ತೆಯಾಗಿದೆ. ಈ ವಿಷಯವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕ ಶರತ್ಚಂದ್ರ ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಸರ್ಕಾರ ಮಾತ್ರ ಹೊಣೆಯಲ್ಲ. ಸಾರ್ವಜನಿಕರೂ ಹೊಣೆಗಾರರೇ. ತಮ್ಮ ಮನೆಯ ತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಕ್ರಮಗಳನ್ನು ಅನುಸರಿಸಿದರೆ ಅರ್ಧದಷ್ಟು ಸಮಸ್ಯೆಗೆ ಪರಿಹಾರ ದೊರೆಯುತ್ತದೆ.