
ರಸ್ತೆ ಸಾರಿಗೆಯೇ ಎಲ್ಲಾ ಸಮಸ್ಯೆಯ ಮೂಲ
ಬೆಂಗಳೂರಿಗೆ ಅದಾವ ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ! 1995ನೇ ಇಸವಿಯ ನಂತರ ಸಂಪೂರ್ಣವಾಗಿ ಬದಲಾಗಿ ಹೋಯಿತು. `ಉದ್ಯಾನನಗರಿ' ಎಂಬ ಹೆಸರು ಮಾಯವಾಗಿ `ಐಟಿ ರಾಜಧಾನಿ' ಎಂಬ ಬಿರುದು ಬಂತು. `ಚೆಡ್ಡಿ ಹೋಗಿ ಪ್ಯಾಂಟು ಬಂತು' ಎಂಬಂತೆ ಬೆಂಗಳೂರಿನಲ್ಲಿ ಹಸಿರು ಮಾಯವಾಗಿ ಮಹಡಿ ಮಹಲುಗಳು ತಲೆಯೆತ್ತಿದವು. ಕೆರೆಗಳಲ್ಲಿ ನೀರು ಬತ್ತಿದ್ದೇ ತಡ, ಮಳೆ ಬರುವಷ್ಟರಲ್ಲಿ ಅಲ್ಲೊಂದು ಐಟಿ ಕಂಪನಿ!
ಈ ಎಲ್ಲಾ ಬದಲಾವಣೆಗಳು ಬೆಂಗಳೂರಿನ ಜೀವನ ಶೈಲಿಯನ್ನು ಬದಲಾಯಿಸಿವೆ. ಪ್ರತಿನಿತ್ಯ ಪರಿಸರ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ನಗರದಾದ್ಯಂತ ಹಸಿರು ಮನೆ ಅನಿಲಗಳ ಹಾವಳಿ ಹೆಚ್ಚಾಗಿದೆ. ಜನರ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. ಈ ಪರಿಣಾಮಕ್ಕೆ ಕಾರಣವಾದ ಅಂಶವನ್ನು ಅಧ್ಯಯನವೊಂದು ಸ್ಪಷ್ಟಪಡಿಸಿದೆ. ಅದರ ಪ್ರಕಾರ, ಬೆಂಗಳೂರಿನ ರಸ್ತೆ ಸಾರಿಗೆ ವಲಯದಲ್ಲಿ ಆಗುತ್ತಿರುವ ಕೊನೆಮೊದಲಿಲ್ಲದ ಬದಲಾವಣೆಯೇ ಪ್ರಮುಖ ಕಾರಣ ಎಂದು ಹೇಳಿದೆ. ಸಾರಿಗೆ ಬೆಳವಣಿಗೆಯಿಂದಾಗಿ ನಗರದ ಚಿತ್ರಣವೇ ಬದಲಾಗುತ್ತಿದೆ. ವಾಹನ ಗಳು ಹೆಚ್ಚುತ್ತಿವೆ. ರಸ್ತೆಗಳು ಅಗಲವಾಗುತ್ತಿವೆ. ಮರಗಳು ನೆಲಕ್ಕುರುಳುತ್ತಿವೆ. ಹಸಿರು ಇಲ್ಲವಾಗುತ್ತಿದೆ. ರಸ್ತೆ ಸಾರಿಗೆಯೇ ಎಲ್ಲಾ ಸಮಸ್ಯೆಯ ಮೂಲ ಎನ್ನಲಾಗಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಎನ್ಜನ್ ಗ್ಲೋಬಲ್ ಎಂಬ ಖಾಸಗೀ ಸಂಸ್ಥೆಯ ಸಹಯೋಗದೊಂದಿಗೆ `ರಸ್ತೆ ಸಾರಿಗೆ ವಲಯದಿಂದ ಹಸಿರು ಮನೆ ಅನಿಲ' ಎಂಬ ವಿಷಯ ಕುರಿತು ಇತ್ತೀಚಿಗೆ ಈ ಅಧ್ಯಯನ ನಡೆಸಿತು. ಈ ಅಧ್ಯಯನದ ಪ್ರಕಾರ, ನಗರದ ಹಸಿರು ವಾತಾವರಣ ಕಾಣೆಯಾಗಲು ವ್ಯಕ್ತಿಯ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೈಟ್ರೋಜನ್ ಗಳಂತಹ ವಿಷಕಾರಕ ಹಸಿರು ಮನೆ ಅನಿಲಗಳು ಹೆಚ್ಚಾಗಲು ರಸ್ತೆ ಸಾರಿಗೆಯಲ್ಲಿನ ಮಿತಿಮೀರಿದ ಬೆಳವಣಿಗೆಯೇ ಕಾರಣ ಎಂದು ಹೇಳಿದೆ.
ಹೆಚ್ಚುತ್ತಿರುವ ವಾಹನಗಳು
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ ಅಂತ ವಾಹನ ಬಳಕೆಯನ್ನು ಯಾರೂ ಕಮ್ಮಿ ಮಾಡಿಲ್ಲ. ವಾಹನ ದಟ್ಟಣೆ ಎಷ್ಟರ ಮಟ್ಟಿಗೆ ಇರುತ್ತದೆ ಅಂದರೆ ಮೈಸೂರು, ಹೊಸೂರು, ವಿಮಾನ ನಿಲ್ದಾಣ ರಸ್ತೆಗಳನ್ನು ನೋಡಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದ ಅನ್ವಯ, ಎರಡು ದಶಕಗಳಲ್ಲಿ ವಾಹನಗಳ ಸಂಖ್ಯೆ ಎಷ್ಟಿತ್ತೋ ಈಗ ಅದರ ಮೂರು ಪಟ್ಟು ಹೆಚ್ಚಾಗಿದೆ!
ಆರ್ಟಿಓ ಮಾಹಿತಿಯಂತೆ 2007ನೇ ಇಸವಿಯಲ್ಲಿ 20,42,320 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. 4,20,397 ಕಾರುಗಳು ನೋಂದಣಿಯಾಗಿವೆ. 86,490 ಆಟೋ ರಿಕ್ಷಾಗಳು ನೋಂದಣಿಯಾಗಿವೆ. ಈಗ ಇದರ ಸಂಖ್ಯೆ ದ್ವಿಗುಣವಾಗಿದ್ದು, ಪ್ರತಿನಿತ್ಯ 1,500 ವಾಹನಗಳು ನೋಂದಣಿಗೊಳ್ಳುತ್ತಿವೆ. ಇಷ್ಟೊಂದು ವಾಹನಗಳು ನಮ್ಮ ರಸ್ತೆಗಳಲ್ಲಿ ಪ್ರತಿನಿತ್ಯ ಓಡಾಟ ನಡೆಸುತ್ತಿವೆ. ಅವು ಹೊರ ಸೂಸುವ ವಿಷಾನಿಲ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಸಿರು ಮನೆ ಅನಿಲಗಳ ಪ್ರಮಾಣ ಬೃಹದಾಕಾರವಾಗಿ ಹೆಚ್ಚಾಗುತ್ತಿರುವುದು ಪರಿಸರ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ.
ಹಸಿರು ಮನೆ ಪರಿಣಾಮ ಒಂದು ಪಾಕೃತಿಕ ಪ್ರಕ್ರಿಯೆ. ಲಕ್ಷಾಂತರ ಜೀವಿಗಳ ಜೀವನಕ್ಕೆ ಹಸಿರು ಮನೆ ಪ್ರಕ್ರಿಯೆ ಅತಿಮುಖ್ಯ. ಆದರೆ ವ್ಯಕ್ತಿ ಪ್ರಾಕೃತಿಕ ಪ್ರಕ್ರಿಯೆಗೆ ಮಧ್ಯಪ್ರವೇಶ ಮಾಡಿದ್ದಾನೆ. ಈ ಕಾರಣದಿಂದಲೇ ಹಸಿರು ಮನೆ ಅನಿಲಗಳು ಮೀತಿಮೀರಿ ಹೆಚ್ಚುತ್ತಿವೆ ಎಂಬುದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ ಎಚ್.ಸಿ. ಶರತ್ ಚಂದ್ರ ಅವರ ಅಭಿಪ್ರಾಯ.
ಹಸಿರು ಮನೆ ಅನಿಲಗಳ ಹೆಚ್ಚಳಕ್ಕೆ ಮುಖ್ಯ ಕಾರಣ- ದಹನ ಇಂಧನಗಳ ಅಪಾರ ಬಳಕೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಎನ್ಜನ್ ಗ್ಲೋಬಲ್ ಸಂಸ್ಥೆ ತನ್ನ ಅಧ್ಯಯನದಲ್ಲಿ ಕೆಲ ಪೆಟ್ರೋಲ್ ಬಂಕ್ ಗಳನ್ನು ಆಯ್ಕೆ ಮಾಡಿಕೊಂಡು ಯಾವ ಇಂಧನ ವನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂಬುದನ್ನು ಪತ್ತೆ ಮಾಡಿದೆ. ಅದರ ಪ್ರಕಾರ, ಬೆಂಗಳೂರಿ ನಲ್ಲಿ ಡೀಸಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ. 2005- 06ನೇ ಸಾಲಿನಲ್ಲಿ ಬೆಂಗಳೂರಿಗೆ 500 ಟನ್ ಡೀಸಲ್ ಪೂರೈಸಲಾಗಿತ್ತು. ಆದರೆ ಈ ಡೀಸಲ್ ವಾಹನಗಳಿಗೆ ಸಾಕಾಗದೆ ಇನ್ನೂ ಹೆಚ್ಚು ಡೀಸಲ್ ಬೇಡಿಕೆಯನ್ನು ಪೂರೈಕೆ ಕಂಪನಿಗಳ ಮುಂದೆ ಇಡಲಾಗಿತ್ತು.
ಜನ ಕಾರು ಬಿಟ್ಟು ಬರುತ್ತಿಲ್ಲ
ಡೀಸೆಲ್ ಬಳಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಅಂಶ ಅಧ್ಯಯನದಿಂದ ಸ್ಪಷ್ಟವಾಗಿದೆ. ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಮಿತಿಮೀರಿ ಏರುತ್ತಿದೆ. ಅಂದರೆ ದೇಶದ ಎಲ್ಲಾ ನಗರಗಳಿಗಿಂತ ಹೆಚ್ಚಿನ ಕಾರುಗಳು ಇಲ್ಲಿವೆ. ಐಟಿ ಮಂದಿ ಸಾರ್ವಜನಿಕ ವಾಹನ ಹತ್ತಲು ತಯಾರಿಲ್ಲ. ಅವರು ಸ್ವಂತ ವಾಹನಗಳನ್ನೇ ಬಳಸಲು ಇಷ್ಟಪಡುತ್ತಾರೆ. ಇದನ್ನೂ ಈ ಅಧ್ಯಯನದಿಂದ ಪತ್ತೆ ಮಾಡಲಾಗಿದೆ. ಐಷಾ ರಾಮಿ ಪ್ರಯಾಣಿಕರಿಗಾಗಿಯೇ ಬಿಎಂಟಿಸಿ ಹೈಟೆಕ್ ಬಸ್ಸುಗಳನ್ನು ರಸ್ತೆಗಿಳಿಸಿತು. ಆದರೆ ಆ ಬಸ್ಸುಗಳಿಗೆ ಜನರು ಬರದೇ ಖಾಲಿ ಹೊಡೆಯು ತ್ತಿವೆ. ಇನ್ನೇನು ಮೆಟ್ರೋ ಬರುತ್ತಿದೆ ಆಗಲಾ ದರೂ ಕಾರಿನ ಜನ ರೈಲು ಏರುವರೆ? ಮಾಲಿನ್ಯ ನಿಯಂತ್ರಣಕ್ಕೆ ತಮ್ಮ ಕೊಡುಗೆ ನೀಡುವರೆ?
ಹಸಿರು ಮನೆ ಪರಿಣಾಮ:
ಹಸಿರು ಮನೆ ಪರಿಣಾಮ ಒಂದು ನೈಸರ್ಗಿಕ ಪ್ರಕ್ರಿಯೆ. ಸೂರ್ಯನ ವಿಕಿರಣಗಳಿಗೆ ಭೂಮಿ ಮೇಲಿನ ವಾತಾವರಣ ನೀಡುವ ಪ್ರತಿಕ್ರಿಯೆ ಯಿಂದ ಈ ಪ್ರಕ್ರಿಯೆ ನಡೆಯುತ್ತದೆ. ಭೂ ಗ್ರಹದಲ್ಲಿ ಆರೋಗ್ಯಯುತ ವಾತಾವರಣ ನಿರ್ಮಾಣಗೊಳ್ಳಲು ಈ ನೈಸರ್ಗಿಕ ಪ್ರಕ್ರಿಯೆ ಮಹತ್ವವಾದದು. ಈ ಪರಿಣಾಮದಿಂದಲೇ ಭೂಮಿ ತಂಪಾಗುತ್ತದೆ ಅಥವಾ ಬಿಸಿಯಾಗು ತ್ತದೆ. ಆದರೆ ಇತ್ತೀಚೆಗೆ ಈ ಪ್ರಕ್ರಿಯೆ ನಕಾರಾತ್ಮಕ ವಾದ ಪರಿಣಾಮ ಬೀರುತ್ತಿದೆ.
ಆಧುನಿಕ ಮಾನವ ತನ್ನ ಚಟುವಟಿಕೆಗಳ ಮೂಲಕ ಭೂಮಿಯ ಮೇಲಿನ ವಾತಾವರಣ ವನ್ನು ಬದಲಿಸುವಂತಹ ಅನಿಲಗಳನ್ನು ನಿರ್ಮಾಣ ಮಾಡುತ್ತಿದ್ದಾನೆ. ಮೀತಿ ಮೀರಿದ ದಹನ ಇಂಧನಗಳ ಬಳಕೆ, ಹೆಚ್ಚು ಹೆಚ್ಚು ಕೈಗಾರಿಕೆಗಳ ಸ್ಥಾಪನೆ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಜನ ಸಂಖ್ಯೆ ಹೆಚ್ಚಳ, ಅರಣ್ಯ ನಾಶ ಚಟುವಟಿಕೆ ಗಳಿಂದಾಗಿ ವಿಷಾಯುಕ್ತ ಅನಿಲಗಳು ಅವಶ್ಯಕತೆ ಯನ್ನು ಮೀರಿ ಹೆಚ್ಚುತ್ತಿವೆ. ಇವು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ.