ಮಂಗಳವಾರ, ಸೆಪ್ಟೆಂಬರ್ 30, 2008


ಸ್ಕ್ಯಾಂಡಲ್‌ವುಡ್‌ಕತೆ


ಈಗ ನೀವೂ ಕೂಡ ಗಂಧ ಬೆಳೆಯಬಹುದು!
ಆಶ್ಚರ್ಯ ಪಡಬೇಕಾಗಿಲ್ಲ. ಇದು ಹೊಸ ಕಾನೂನಲ್ಲ. ಹಳೇ ಕಾನೂನು! ಕರ್ನಾಟಕ ಅರಣ್ಯ ಕಾಯ್ದೆಗೆ 2001ರಲ್ಲಿ ತಿದ್ದುಪಡಿ ತಂದು ಗಂಧ ಬೆಳೆಯುವ ಹಕ್ಕನ್ನು ಎಲ್ಲರಿಗೂ ನೀಡಲಾಗಿದೆ. ಆದರೆ ಸಾರ್ವಜನಿಕವಾಗಿ ಗಂಧ ಬೆಳೆಯುವ ಧೈರ್ಯ ಯಾರಿಗೂ ಇಲ್ಲ. ದುರಾದೃಷ್ಟವೆಂದರೆ ಈ ವಿಷಯ ಕೆಲವರಿಗೆ ಗೊತ್ತಿಲ್ಲ.
ಬೆಂಗಳೂರು ನಗರ ವಿಭಾಗದ ಅರಣ್ಯ ವಲಯವನ್ನು ತೆಗೆದುಕೊಂಡರೆ ಐಐಟಿ, ಐಐಎಂ, ಐಐಎಸ್‌ಸಿ, ಬೆಂಗಳೂರು ವಿವಿ ಹಾಗೂ ಇನ್ನಿತರ ಸರ್ಕಾರಿ ಕಚೇರಿ ಆವರಣಗಳಲ್ಲಿ ಮಾತ್ರ ಗಂಧದ ಮರಗಳು ಕಂಡುಬರುತ್ತವೆ. ಅರಣ್ಯ ಇಲಾಖೆಗಳ ಬಳಿ ಗಂಧದ ಮರಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿ- ಅಂಶಗಳಿಲ್ಲ. ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಇತಿಹಾಸ ಪ್ರಸಿದ್ಧ ಚಂದನವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ದುರಂತ.
ಹಳ್ಳಿಗರಲ್ಲಿ ಗಂಧದ ಬಗ್ಗೆ ಬೇರೆಯದೇ ನಂಬಿಕೆ ಇದೆ. ಗಂಧ ಬೆಳೆದರೆ ಅದು ನಮ್ಮದಾಗುವುದಿಲ್ಲ. ಗಂಧ ಸರ್ಕಾರದ ಸ್ವತ್ತು. ಅದನ್ನು ಸರ್ಕಾರ ಮಾತ್ರವೇ ಬೆಳೆಯಬೇಕು, ವೈಯಕ್ತಿಕವಾಗಿ ಬೆಳೆಯುವ ಹಕ್ಕು ಯಾರಿಗೂ ಇಲ್ಲ. ಗಂಧವನ್ನು ಮಾರಾಟ ಮಾಡುವ ಹಾಗಿಲ್ಲ. ಗಂಧ ಬೆಳೆದರೆ ಅರಣ್ಯ ಅಧಿಕಾರಿಗಳು ಕಡಿದುಕೊಂಡು ಹೋಗುತ್ತಾರೆ……
ಇಂತಹ ತಪ್ಪು ತಿಳುವಳಿಕೆಗಳು ಜನರಲ್ಲಿವೆ. ಕರ್ನಾಟಕ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಅರ್ಧ ದಶಕ ಕಳೆದರೂ ಈ ಕಾನೂನು ನಾಗರಿಕರಿಗೆ ನೀಡಿರುವ ಅಧಿಕಾರದ ಅರಿವನ್ನು ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿಲ್ಲ.
ಗಂಧ ಮಾರಟಕ್ಕೆ ಕೆಲ ನಿಮಮಾವಳಿಗಳಿವೆ. ಸಾರ್ವಜನಿಕರು ಗಂಧ ಬೆಳೆದರೆ ಸರ್ಕಾರ ಮಾರುಕಟ್ಟೆ ನೀಡುತ್ತದೆ. ಗಂಧ ಬೆಳೆದವರಿಗೆ ಬೋನಸ್‌ ಕೂಡ ನೀಡುತ್ತದೆ.
ಗಂಧ ಚೋರರು: ಅರಣ್ಯ ಇಲಾಖೆ ಅಧಿಕಾರಿಗಳು ಗಂಧ ಸಂತತಿ ಕಡಿಮೆಯಾಗಲು ಗಂಧದ ಕಳ್ಳತನವೇ ಕಾರಣ ಎನ್ನುತ್ತಾರೆ. ಅಂತರ ರಾಜ್ಯ ಗಂಧ ಚೋರರು ಗಂಧಕಳ್ಳತನದಲ್ಲಿ ತೊಡಗಿದ್ದಾರೆ. ಈ ಕಾರಣದಿಂದ ಗಂಧವನ್ನು ವೈಯಕ್ತಿಕವಾಗಿ ಬೆಳೆಯಲು ಜನರು ಹೆದರುತ್ತಾರೆ ಎಂಬ ಅಭಿಪ್ರಾಯ ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದು ನಿಜ ಕೂಡ. ಇತ್ತೀಚೆಗೆ ಬೆಂಗಳೂರಿನ ಐಐಎಂ ಆವರಣದಲ್ಲಿ ಗಂಧ ಕಡಿದು ಇಬ್ಬರು ಅಂತರ ರಾಜ್ಯ ಕಳ್ಳರು ಸಿಕ್ಕಿ ಬಿದ್ದರು. ಬೆಂಗಳೂರು ವಿವಿ(ಜ್ಞಾನಭಾರತಿ) ಆವರಣದಲ್ಲಿ ಪ್ರತಿನಿತ್ಯ ಗಂಧದ ಕಳ್ಳತನ ನಡೆಯುವ ಬಗ್ಗೆ ವರದಿಯಿದೆ. ಸರಿಯಾದ ರಕ್ಷಣೆ ವ್ಯವಸ್ಥೆ ಇಲ್ಲದೆ ಗಂಧದ ಮರಗಳು ಕಳ್ಳರ ಕೊಡಲಿಗೆ ಬಲಿಯಾಗುತ್ತಿವೆ.

ಇತಿಹಾಸ: ಗಂಧದ ಮರಕ್ಕೆ ಧಾರ್ಮಿಕ ಹಿನ್ನೆಲೆಯಿದೆ. ಗಂಧದ ಪರಿಮಳದ ಬಗ್ಗೆ ಪುರಾಣ ಸಾಹಿತ್ಯದಲ್ಲಿ ಉಲ್ಲೇಖವಿದೆ. ಗಂಧಕ್ಕೆ ಔಷಧೀಯ ಗುಣವಿದ್ದು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ವಿಶೇಷ ಸ್ಥಾನವಿದೆ. ಕಾಳಿದಾಸನಿಂದ ಹಿಡಿದು ಟಿಪ್ಪು ಸುಲ್ತಾನನವರೆಗೂ ಗಂಧದ ಪರಿಮಳ ಹರಡಿತ್ತು. ಶ್ರೀರಂಗ ಪಟ್ಟಣ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಈಗ ಅಲ್ಲಿ ಗಂಧ ಕಾಣ ಸಿಗುವುದಿಲ್ಲ. ಒಂದು ಕಾಲದಲ್ಲಿ ಕರ್ನಾಟಕ ಗಂಧಕ್ಕೆ ಪ್ರಸಿದ್ಧಿಯಾಗಿತ್ತು. ಮೈಸೂರು ಸ್ಯಾಂಡಲ್‌ಗೆ ಅಂತಾರಾಷ್ಟ್ರೀಯ ಖ್ಯಾತಿಯಿದೆ. ಇಂದು ಕರ್ನಾಟಕದ ಕಾಡುಗಳಲ್ಲಿ ಗಂಧದ ಮರ ತಡಕಿದರೂ ಸಿಗುವುದಿಲ್ಲ.
ಇಂದಿಗೂ ಗಂಧಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಿದೆ. ಗಂಧದ ಕರಕುಶಲ ವಸ್ತುಗಳು, ಗಂಧದ ವಿಗ್ರಹಗಳಿಗೆ ಬಲು ಬೇಡಿಕೆಯಿದೆ. ಗಂಧದ ಎಣ್ಣೆಗೂ ಕೂಡ ಅಪಾರ ಬೇಡಿಕೆಯಿದೆ. ರಾಜ್ಯದ ಮಲೆನಾಡು ಪ್ರದೇಶದಲ್ಲಿ ಗಂಧ ಹೇರಳವಾಗಿ ದೊರೆಯುತ್ತಿತ್ತು. ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಪ್ರದೇಶ ಗಂಧಕ್ಕೆ ಹೆಸರುವಾಸಿಯಾಗಿತ್ತು. 1880ರ ವರದಿಯ ಪ್ರಕಾರ ರಾಜ್ಯದ ಒಟ್ಟು ಆದಾಯದಲ್ಲಿ ಶೇ. 30ರಷ್ಟು ಗಂಧದ ಪಾಲಿತ್ತು.

ಗಂಧ ಸಹಾಯವಾಣಿ: ಕರ್ನಾಟಕ ಅರಣ್ಯ ಇಲಾಖೆ ಗಂಧದಮರ ರಕ್ಷಣೆಗೆ ಹೊಸ ಮಾಡಿದೆ. ಗಂಧದ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಸಹಾಯವಾಣಿಯೊಂದನ್ನು ರಚಿಸಿದ್ದು, ಆ ಮೂಲಕ ಗಂಧದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆ ಸಹಾಯವಾಣಿ ನೀಡಲಿದೆ.
ಬೆಂಗಳೂರು ನಗರ ಅರಣ್ಯ ವಲಯದ ಡಿಸಿಎಫ್‌ ಶ್ರೀವಾಸ್ತವ್‌ ಸಹಾಯವಾಣಿ ಕುರಿತು ಮಾಹಿಸಿ ನೀಡಿದ್ದಾರೆ. ಈ ಸಹಾಯವಾಣಿಯ ಅನುಕೂಲವನ್ನು ಸಾರ್ವಜನಿಕರೂ ಕೂಡ ಪಡೆಯಬಹುದಾಗಿದೆ. ಸಾರ್ವಜನಿಕರು ಗಂಧಬೆಳೆಯುವ ಎಲ್ಲಾ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ಪಡೆಯಬಹುದಾಗಿದೆ. ಅಲ್ಲದೆ ಸರ್ಕಾರ ಗಂಧ ಗಣತಿಯನ್ನು ಕೈಕೊಂಡಾಗ ಗಂಧ ಬೆಳೆದ ಮಾಲೀಕರು ಈ ಸಹಾಯವಾಣಿಗೆ ತಮ್ಮ ಮಾಹಿತಿಯನ್ನು ನೀಡಬಹುದಾಗಿದೆ.
ಈ ಸಹಾಯವಾಣಿಯ ಮುಖ್ಯವಾದ ಉದ್ದೇಶವೆಂದರೆ ಗಂಧ ಕಳ್ಳತನ ತಡೆಯುವುದು. ಗಂಧ ಕಳ್ಳತನದ ಬಗ್ಗೆ ಈ ಸಹಾಯವಾಣಿಯ ಮೂಲಕ ದೂರನ್ನೂ ಕೂಡ ಸಲ್ಲಿಸಬಹುದು.
ಅರಣ್ಯ ಇಲಾಖೆಯ ಈ ಪ್ರಯತ್ನ ಎಷ್ಟರಮಟ್ಟಿಗೆ ರಾಜ್ಯಕ್ಕೆ ಗಂಧದ ಪರಿಮಳ ತರಬಲ್ಲದು ಎಂಬುದನ್ನು ಕಾದು ನೋಡಬೇಕು. ಗಂಧರಾಜ್ಯ ನಿರ್ಮಾಣ ಆಗದಿದ್ದರೆ ಬೇಡ, ಸ್ಯಾಂಡಲ್‌ವುಡ್‌ ಸ್ಕ್ಯಾಂಡಲ್‌ವುಡ್‌ ಆಗದಿದ್ದರೆ ಸಾಕು