ಮಂಗಳವಾರ, ಸೆಪ್ಟೆಂಬರ್ 30, 2008




ಈ ಗಾಳಿ ವಿಷವಾಗಿದೆ!



ಬೆಂಗಳೂರಿನ ಅಸ್ತಮಾ, ಡಯಾಬಿಟಿಸ್‌ ರೋಗಿಗಳು ಆದಷ್ಟು ಬೇಗ ಊರು ಬಿಡುವುದು ಒಳಿತು! ಹೌದು, ಬೇರೆ ದಾರಿಯಿಲ್ಲ. ಬೆಂಗಳೂರಿನಲ್ಲಿ ಬೀಸುತ್ತಿರುವ ಗಾಳಿಯಲ್ಲಿ ಆಮ್ಲಜನಕ ಮಾಯವಾಗಿದೆ. ಅಸಂಖ್ಯಾತ ವಿಷಾನಿಲಗಳು ಬೆಂಗಳೂರನ್ನು ಆಳುತ್ತಿವೆ. ಇವು ಸಾವನ್ನು ಹೊತ್ತು ತರುವ ಅಲೆಗಳಾಗಿವೆ. ಈ ಅನಿಲಗಳನ್ನು ಸೇವಿಸುತ್ತಾ ಇಲ್ಲಿ ಬದುಕಿ ಆಯುಷ್ಯ ಕಳೆದುಕೊಳ್ಳುವುದಕ್ಕಿಂತ ಊರು ಬಿಡುವುದೇ ಸರಿಯಾದ ದಾರಿ.
ವಾಯುಮಾಲಿನ್ಯದಲ್ಲಿ ಬಹಳ ವರ್ಷಗಳಿಂದ ಬೆಂಗಳೂರು ಪ್ರಥಮ ಸ್ಥಾನ ಕಾಯ್ದುಕೊಂಡಿದೆ. ಪ್ರತಿದಿನ 15, 000 ವಾಹನಗಳು ನೋಂದಣಿಯಾಗುತ್ತಿವೆ. ಈ ವಾಹನಗಳು 3 ಲಕ್ಷ ಮೆಟ್ರಿಕ್‌ ಟನ್‌ ಡೀಸೆಲ್‌, 6 ಲಕ್ಷ ಮೆಟ್ರಿಕ್‌ ಟನ್‌ ಪೆಟ್ರೋಲ್‌ಲನ್ನು ಪ್ರತಿವರ್ಷ ದಹಿಸುತ್ತಿವೆ. ಇಷ್ಟೊಂದು ಇಂಧನ ಕುಡಿದ ವಾಹನಗಳು ಹೊರಸೂಸುವ ವಿಷಯುಕ್ತ ಅನಿಲದಿಂದ ಬೆಂಗಳೂರು ಮಂದಿಯ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. `ಗಾರ್ಡನ್‌ ಸಿಟಿ’ಯಲ್ಲಿ ಪ್ರತಿವರ್ಷ 800 ಮಂದಿ ಗಂಟಲು ಕ್ಯಾನ್ಸರ್‌, ಅಸ್ತಮಾ ಇತ್ಯಾದಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಗಂಟಲು ಬೇನೆ, ಚರ್ಮ ರೋಗಗಳು ಬೆಂಗಳೂರಿಗರನ್ನು ಕಾಡುತ್ತಿವೆ. ಹಿರಿಯ ನಾಗರಿಕರ ಕಷ್ಟವನ್ನು ಹೇಳತೀರದು.
`ಚರ್ಮಕ್ಕೆ ಸಂಬಂಧಿಸಿದಂತಹ ಕೆಲ ಖಾಯಿಲೆ ಕೇಸುಗಳು ಇತ್ತೀಚೆಗೆ ಜಾಸ್ತಿಯಾಗುತ್ತಿವೆ. ಇವು ಎಷ್ಟು ವಿಚಿತ್ರವಾಗಿವೆ ಅಂದರೆ ಆ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಲು(ಡಯಾಗ್ನೈಸ್‌) ಸಾಧ್ಯವಿಲ್ಲ. ಡಯಾಗ್ನೈಸ್‌ ಮಾಡಲು ಆಗಲಿಲ್ಲ ಅಂದರೆ ಚಿಕಿತ್ಸೆ ನೀಡುವುದು ಹೇಗೆ? ಇದು ಬಹಳ ವಿಚಿತ್ರ.’ ಎನ್ನುತ್ತಾರೆ ಡಾ. ಶೈಲೇಂದ್ರ.
ಇಂಧನಗಳನ್ನು ದಹಿಸಿದಾಗ (ಫಾಸಿಲ್‌ ಪ್ಯೂಯಲ್‌) ಉತ್ಪತ್ತಿಯಾಗುವ ಅನಿಲ(ಕಾರ್ಬನ್‌ ಡೈ ಆಕ್ಸೈಡ್‌, ಕ್ಲೊರೋ ಪ್ಲೋರೋ ಕಾರ್ಬನ್‌) ಬಹಳ ವಿಷಯುಕ್ತವಾಗಿರುತ್ತವೆ. ನಮ್ಮ ಕಾರುಗಳಿಂದ ನೈಟ್ರೋಜನ್‌ ಉತ್ಪತ್ತಿಯಾಗುತ್ತದೆ. ನೈಟ್ರೋಜನ್‌ ಬಹಳ ಕೆಟ್ಟ ಅನಿಲ. ಬೆಂಗಳೂರಿನಲ್ಲಿ ಅದೆಷ್ಟು ಇಂಧನ ಉತ್ಪತ್ತಿಯಾಗುತ್ತಿವೆ ಅಂದರೆ, ಲೆಕ್ಕಕ್ಕೆ ಸಿಗದಷ್ಟು!
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನಲ್ಲೇ ಇದೆ! ಬೆಂಗಳೂರಿನ ವಾಯುಮಾಲಿನ್ಯ ಈ ಮಂಡಳಿಗೆ ಬಿಸಿತುಪ್ಪವಾಗಿದೆ. ಏನೇ ಸರ್ಕಸ್‌ ಮಾಡಿದರೂ ವಾಯುಮಾಲಿನ್ಯದ ಪ್ರಥಮ ಸ್ಥಾನದಿಂದ ಬೆಂಗಳೂರನ್ನು ಕೆಳಗಿಳಿಸಲು ಸಾಧ್ಯವಾಗಿಲ್ಲ. ಮಾಯುಮಾಲಿನ್ಯ ತಪಾಸಣೆಗಾಗಿ ನಗರದ ಮೂರು ಕಡೆಗಳಲ್ಲಿ ಘಟಕಗಳನ್ನು ಹೊಂದಿದೆ. ಆದರೂ ನಗರದ ಗಾಳಿ ಪ್ರತಿನಿತ್ಯ ಹದಗೆಡುತ್ತಿದೆ. ಪ್ರತಿವರ್ಷ ವಾಯುಮಾಲಿನ್ಯದ ಅಂಕಿ ಅಂಶಗಳ ವರದಿಯನ್ನು ತಪ್ಪದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ದೆಹಲಿ)ಗೆ ಸಲ್ಲಿಸುತ್ತಿದೆ.
ಮಾಲಿನ್ಯ ನಿಯಂತ್ರಣಕ್ಕಾಗಿ `ಟಾಸ್ಕ್‌ ಪೋರ್ಸ್‌’ವೊಂದನ್ನು 2001ರಲ್ಲಿ ರಚಿಸಲಾಗಿದೆ. ಇದರಲ್ಲಿ ಆರು ಮಂದಿ ಉನ್ನತ ಅಧಿಕಾರಿಗಳಿದ್ದಾರೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರು. ಪೊಲೀಸ್‌, ಅರಣ್ಯ, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿದ್ದಾರೆ. ಬೆಂಗಳೂರಿನ ವಾಯುಸ್ಥಿತಿ ಬಗ್ಗೆ ಮಾತನಾಡಲು ಇವರಿಗ ಬಾಯಿಲ್ಲ!
ಬೆಂಗಳೂರು ಬೆಳೆಯುತ್ತಿದೆ! ಇದೊಂದೇ ಎಲ್ಲಾ ಸಮಸ್ಯೆಗಳ ಮೂಲ. ಕಳೆದ ಐದು ವರ್ಷಗಳಿಂದ ಬೆಂಗಳೂರು 20 ವರ್ಷಗಳಲ್ಲಿ ಬೆಳೆದಷ್ಟು ಬೆಳದಿದೆ. ಭಾರತದ ಭವಿಷ್ಯದ ನಗರ ಎಂದೇ ಈ ನಗರವನ್ನು ಬಣ್ಣಸಲಾಗುತ್ತಿದೆ. ಬೆಂಗಳೂರಿನ ಕೆರೆಗಳು ಒತ್ತುವರಿಯಾಗುತ್ತಿವೆ. ಬೆಂಗಳೂರು ಬೆಂಗಾಡಾಗುತ್ತಿದೆ.
ಗ್ರೀನ್‌ಟಾಕ್ಸ್‌: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ(ವಿಧಾನ ಸೌಧ ವಲಯ) ಗ್ರೀನ್‌ ಟ್ಯಾಕ್ಸ್‌ ವಾಹನ ಬಳಕೆದಾರರ ಮೇಲೆ ಗ್ರೀನ್‌ ಟ್ಯಾಕ್ಸ್‌ ವಿಧಿಸಲು ಒಂದು ಕರಡನ್ನು ಸಿದ್ಧಪಡಿಸಿದೆ. ಅದನ್ನು ಮಂಡಳಿಯ ಅಧ್ಯಕ್ಷ ಡಾ. ಶರತ್‌ಚಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಲಸ ಮಾಡುವ ನೂರಾರು ಎನ್‌ಜಿಒಗಳಿವೆ. ಅಸಂಖ್ಯಾತ ಪರಿಸರ ತಜ್ಞರಿದ್ದಾರೆ. ಪರಿಸರದ ಮೇಲೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನು ಕರೆದುಕೊಂಡು ಬಂದು ಉಪನ್ಯಾಸ ಕೊಡಿಸುತ್ತಾರೆ. ತಿಂಗಳಿಗೊಂದು ಫಾರಿನ್‌ ಟೂರ್‌ ಮಾಡುತ್ತಾರೆ. ವಿದೇಶಿ ಹಣ ಹರಿದು ಬರುತ್ತದೆ. ಮಾತೆತ್ತಿದರೆ ಯುಎನ್‌ಇಪಿ(ಅಮೆರಿಕಾದ ಪರಿಸರ ಕಾರ್ಯಕ್ರಮ), ಡಬ್ಲ್ಯುಟಿಒ, ಡಬ್ಲ್ಯುಎಚ್‌ಒಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಸ್ಥಳೀಯ ಸಮಸ್ಯೆ ಬಗ್ಗೆ ಕಿಂಚಿತ್ತೂ ಅರಿವಿಲ್ಲ.
ನ್ಯಾನೋ ಕಾರು ಬರುತ್ತಿದೆ. ಬೆಂಗಳೂರಿನ ಮಂದಿ ಮುಗಿಬಿದ್ದು ಬುಕ್‌ ಮಾಡುತ್ತಿದ್ದಾರೆ. ದ್ವಿಚಕ್ರ ವಾಹಗಳ ಸಂಖ್ಯೆ ಕುಸಿಯುವ ನಿರೀಕ್ಷೆ ಇದೆ. ಬೆದರಿದ ದ್ವಿಚಕ್ರ ವಾಹನ ಕಂಪನಿಗಳು 10 ಸಾವಿರ ಬೆಲೆಯ ಬೈಕ್‌ ಸಿದ್ಧಪಡಿಸಲು ಚಿಂತಿಸಿವೆ. ಒಟ್ಟಿನಲ್ಲಿ ಈ ನಗರ ನರಕವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಕಾಮೆಂಟ್‌ಗಳಿಲ್ಲ: