ಶುಕ್ರವಾರ, ಅಕ್ಟೋಬರ್ 3, 2008



ನಾವು ನೀರಿನ ಅಜ್ಞಾನಿಗಳು!


ನೀರಿನ ಅಜ್ಞಾನ ಕಾಡುತ್ತಿದೆ…..!
ಮಳೆ ಬಂದು ನಿಂತಾಗ ಬೆಂಗಳೂರನ್ನು ಒಮ್ಮೆ ಗಮನಿಸಿ. ನಗರದ ಎಲ್ಲಾ ಮೋರಿಗಳು ಮಳೆ ನಿಂತ ಅರ್ಧ ಗಂಟೆ ಕಾಲ ಧೋ ಎಂದು ತುಂಬಿ ಹರಿಯುತ್ತವೆ. ರಸ್ತೆಗಳೂ ಮೋರಿಗಳಾಗುತ್ತವೆ. ಮನೆಗಳಿಗೆ ನೀರು ನುಗ್ಗುತ್ತದೆ. ಗೊತ್ತುಗುರಿ ಇಲ್ಲದೆ ಹರಿದು ಹಳ್ಳಸೇರುತ್ತದೆ. ಸಿಂಪ್ಲಿ ವೇಸ್ಟ್‌ ಆಫ್‌ ವಾಟರ್‌!
ಇದು ನೀರಿನ ಅಜ್ಞಾನ (ವಾಟರ್‌ ಇಲ್ಲಿಟೆರೆಸಿ) ಅಲ್ಲದೆ ಮತ್ತಿನ್ನೇನು? ನೀರಿನ ಮಹತ್ವ ಅರಿತ್ತಿದ್ದರೆ ಜೀವಜಲ ಈ ಪರಿ ವ್ಯರ್ಥವಾಗುತ್ತಿತ್ತೆ? ಮನೆ ಮೇಲೆ ಮನೆ ಕಟ್ಟುತ್ತಾರೆ. ಇಷ್ಟಗಲ `ಮಳೆ ನೀರು ಸಂಗ್ರಾಹಕ’ ಕಟ್ಟಿಸಿಕೊಳ್ಳಲು ಮುಖ ನೋಡುತ್ತಾರೆ. ಇದು ನಿಜಕ್ಕೂ ಅಜ್ಞಾನವೇ ಸರಿ.
ನಾಗಾಲೋಟದ ಚಲನೆಯಲ್ಲಿರುವ ಬೆಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಲು ಮುಖ್ಯವಾದುದು. ಇಲ್ಲಿ ಪ್ರತಿನಿತ್ಯ 64 ಮಿಲಿಯನ್‌ ಲೀಟರ್‌ ಶುದ್ಧ ನೀರನ್ನು ಕಾರ್‌ ತೊಳೆದು, ತಮ್ಮ ಮನೆಯ ನಾಯಿತೊಳೆದು ವ್ಯರ್ಥಮಾಡಲಾತ್ತಿದೆ. ನೀರಿನ ಬೇಕಾಬಿಟ್ಟಿ ಬಳೆಕೆಯಿಂದಾಗಿ ನರಗದ ನೀರಿನ ಬೇಡಿಕೆ ಪೂರೈಕೆಯಾಗುತ್ತಿಲ್ಲ. ಅರ್ಕಾವತಿ ನದಿ ನೀರು ಬರುತ್ತೆ. ಕಾವೇರಿ ನೀರು ಬರುತ್ತೆ. ಯಾವ ನೀರು ಬಂದರೂ ಅಷ್ಟೆ. ಕೊಡ ನೀರಿಗೆ ರೂಪಾಯಿ ಕೊಟ್ಟು ಕೊಳ್ಳುವ ಸ್ಥಿತಿ ಸಾಗುತ್ತಲೇ ಇದೆ!
ಮಂಡಳಿ ಏನು ಮಾಡುತ್ತಿದೆ: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಮಳೆ ನೀರು ಸಂಗ್ರಹಣೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಬರೀ ಅದರ ಮಹತ್ವದ ಬಗ್ಗೆ ಮಾತನಾಡುತ್ತದೆಯೋ ಹೊರತು ಅದರ ಕಾರ್ಯರೂಪದ ಬಗ್ಗೆ ಮಾತಿಲ್ಲ.
ಹೊಸ ಕಟ್ಟಡಗಳಿಗೆ `ಮಳೆನೀರು ಸಂಗ್ರಾಹಕ’ ನಿರ್ಮಾಣ ಕಡ್ಡಾಯವಾದರೆ ಸಮಸ್ಯೆಗೆ ಬಹುತೇಕ ಪರಿಹಾರ ಕಂಡುಕೊಳ್ಳಬಹುದು. ಬಹಳ ವರ್ಷಗಳಿಂದ ಇದನ್ನು ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಬಗ್ಗೆ ಮಾತುಕತೆ ನಡೆಯುತ್ತಲೇ ಇದೆ. ಆದರೆ ಮಂಡಳಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ನಗರದ ಶೇ. 90ರಷ್ಟು ಕಟ್ಟಡ ಮಾಲೀಕರಿಗೆ ಮಳೆನೀರು ಸಂಗ್ರಹಣೆಯ ಅರಿವಿಲ್ಲ. ಸರ್ಕಾರದ ಈ ಯೋಜನೆ ಮಂಡಳಿಯಿಂದ ಕಡೆಗಣಿಸ್ಪಟ್ಟಿದೆ.
ಕೈಗಾರಿಕೆಗಳ ನಿರ್ಲಕ್ಷ್ಯ: ನಗರದ ಹೊರ ವಲಯವನ್ನು ಸುತ್ತುವರಿದಿರುವ ಕೈಗಾರಿಕೆಗಳು ನೀರನ್ನು ಅಳತೆ ಇಲ್ಲದೆ ಫೋಲು ಮಾಡುತ್ತಿವೆ. ಅವರಿಗೆ ನೀರು ಬೇಕಷ್ಟೆ. ಬೇಕಾದ ನೀರನ್ನು ಸಂಗ್ರಹಿಸಿಕೊಳ್ಳುವ ವ್ಯವಧಾನ ಇಲ್ಲವಾಗಿದೆ. ಮಳೆನೀರು ಸಂಗ್ರಾಹಕ ನಿರ್ಮಿಸಿಕೊಳ್ಳಲು ಹಿಂದುಮುಂದು ನೋಡುವ ಉದ್ಯಮಿಗಳು ಸರ್ಕಾರದ ಮುಂದೆ ನೀರಿಗಾಗಿ ಕೈಚಾಚಿ ನಿಂತಿದ್ದಾರೆ. ನದಿ ನೀರು ನೇರವಾಗಿ ಅವರ ಪ್ಯಾಕ್ಟರಿಯೊಳಗೆ ಬಂದು ಬಿಡಬೇಕು!
ಸಬ್ಸಿಡಿ ಇದೆ: ಮಳೆನೀರು ಸಂಗ್ರಾಹಕ ನಿರ್ಮಿಸಲು ಮುಂದಾದವರಿಗೆ ನೀರು ಸರಬರಾಜು ಮಂಡಳಿ ತೆರಿಗೆ ಸಬ್ಸಿಡಿ ನೀಡುತ್ತದೆ. ಸಾಲ ಸೌಲಭ್ಯವೂ ಸಿಗುತ್ತದೆ. ಒಮ್ಮೆ ನಿರ್ಮಾಣವಾದ ನಂತರ ಅದರ ಕಾರ್ಯಾಚರಣೆಯ ಬಗ್ಗೆ ಹೆಲ್ಪ್‌ಲೈನ್‌ ವ್ಯವಸ್ಥೆಯೂ ಇದೆ. ನಾಲ್ಕು ರೀತಿಯ ಸಂಗ್ರಹಕ ಮಾದರಿಗಳಿವೆ. ವಾಸದ ಮನೆಗಳಿಗೆ, ಕೈಗಾರಿಕೆಗಳಿಗೆ, ಇನ್ನಿತರ ಕಟ್ಟಡಗಳಿಗೆ ಬೇರೆ ಬೇರೆ ರೀತಿಯ ಸಂಗ್ರಹಕಗಳನ್ನು ನಿರ್ಮಾಣ ಮಾಡಬೇಕಾಗುತ್ತದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಳೆನೀರನ್ನು ಅಮೂಲ್ಯವೆಂದು ಪರಿಗಣಿಸಿದೆ. ಮಳೆ ನೀರು ಸಂಗ್ರಹಕ ನಿರ್ಮಾಣ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ರಾಜ್ಯ ಮಂಡಳಿಗಳಿಗೆ ಸೂಚಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ನೀರಿನ ಬೇಡಿಕೆ ಪೂರೈಸಲು ಈ ಯೋಜನೆ ಅತ್ಯಾವಶ್ಯ ಎಂದು ಹೇಳಿದೆ.
ಬದಲಾಗುತ್ತಿರುವ ವೈಪರಿತ್ಯ ಪರಿಸರದೊಳಗೆ ಮಳೆರಾಯ ಬರುವುದೇ ಅಪರೂಪವಾಗಿರುವ ಇಂದಿನ ದಿನಗಳಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ನೀರು ನಿರ್ವಹಣೆ ಬೆಂಗಳೂರು ನಗರಕ್ಕೆ ಒಂದು ದೊಡ್ಡ ಚಾಲೆಂಜ್‌. ಮಳೆನೀರಿನ ಅಮೂಲ್ಯತೆಯ ಅರಿವು ಮೊದಲು ಮೂಡಬೇಕು. ರಸ್ತೆಯಲ್ಲಿ ಹರಿಯುವ ಮಳೆನೀರಿನೋಳಗೆ ಮಕ್ಕಳಾಟ ನೋಡಿದ್ದೇವೆ. ಪ್ರವಾಹ ಬಂದು ಮನೆಗಳು ಕೊಚ್ಚಿ ಹೋಗುವುದನ್ನು ನೋಡಿದ್ದೇವೆ. ಇಷ್ಟೊಂದು ನೀರು ಮಳೆ ಇಲ್ಲದೆ ಬರಲಾರದು. ಬಂದಾಗ ಬಿಡದೆ ಹಿಡಿಯಬೇಕು. ಬಿಟ್ಟರೆ ನಿಜಕ್ಕೂ ಗ್ರೇಟ್‌ ಲಾಸ್‌!

ಕಾಮೆಂಟ್‌ಗಳಿಲ್ಲ: