
ವಾಸ್ತು ಹೆಸರಿನಲ್ಲಿ ವೃಕ್ಷಗಳಿಗೆ ವಿಷ!
ಮುಂದಿನ ಮರ ಮನೆ ಮಾಲಿಕನಿಗೆ ಕಿರಿಕಿರಿ. ಏನಾದರೂ ಮಾಡಿ ಆ ಜಾಗದಲ್ಲಿ ಮರವೇ ಇರಲಿಲ್ಲ ಎನ್ನುವ ರೀತಿ ಮಾಡಬೇಕು. ಕಡಿದು ಬೀಳಿಸುವ ಹಾಗಿಲ್ಲ, ಅದು ಅಕ್ರಮ! ಮರದ ಕಾಟದಿಂದ ತಪ್ಪಿಸಿಕೊಳ್ಳಲು ಒಂದು ಕೆಲಸ ಮಾಡಬಹುದು. ಯಾರಿಗೂ ತಿಳಿಯದ ಹಾಗೆ ಮರಕ್ಕೆ ವಿಷ ಉಣಿಸಿ ಕೊಲ್ಲುವುದು! ಅಲ್ಲಿಗೆ ಮರದ ಕಿರಿಕಿರಿಯಿಂದ ಬಚಾವ್. ಕಾಂಪೌಂಡ್ಗೆ ಸ್ವಲ್ಪ ಜಾಸ್ತಿ ಜಾಗ ಸಿಕ್ಕಿದ ಹಾಗಾಯಿತು.
ಇದು ತಮಾಷೆಯಲ್ಲ. ಇದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸತ್ಯ ಸಂಗತಿ. ಒಂದುಕಡೆ ರಸ್ತೆ ಅಗಲೀಕರಣದ ಹೆಸರಲ್ಲಿ ಬಿಬಿಎಂಪಿ ಮರಗಳನ್ನು ನೆಲಕ್ಕುರುಳಿಸುತ್ತಿದೆ. ಇನ್ನೊಂದು ಕಡೆ ಮೆಟ್ರೋ ರೈಲಿಗೆ ಮರಗಳನ್ನು ಬಲಿಕೊಡಲಾಗುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ಸುದ್ದಿ. ಆದರೆ ಯಾರಿಗೂ ಗೊತ್ತಿರದ ಇನ್ನೊಂದು ಸುದ್ದಿಯೇ `ಮರಗಳಿಗೆ ವಿಷ ಉಣಿಸಿ ಕೊಲೆ.’
ಇತ್ತಿಚೆಗೆ ಮಲ್ಲೇಶ್ವರಂ ಬಡಾವಣೆಯ 15ನೇ ಕ್ರಾಸ್ನಲ್ಲಿ ಮರಬಿದ್ದು ಮಹಿಳೆಯೊಬ್ಬರು ಮೃತಪಟ್ಟರು. ಮಳೆ ಗಾಳಿ ಏನೂ ಇರಲಿಲ್ಲ. ಇದ್ದಕ್ಕಿದ್ದಂತೆ ಬಿದ್ದ ಮರದ ಬುಡವನ್ನು ಪರಿಶೀಲಿಸಿದಾಗ ಬಹಿರಂಗಗೊಂಡ ಸುದ್ದಿಯೇ ಮರಗಳಿಗೆ ವಿಷಪ್ರಾಷನ! ಯಾರೋ ಕಿಡಿಗೇಡಿಗಳು ಮರದ ಬುಡಕ್ಕೆ ಮರ್ಕ್ಯುರಿ ಮಿಶ್ರಣವನ್ನು ಸುರಿದು, ಅದರ ಬೇರುಗಳು ಸುಟ್ಟುಹೋಗುವಂತೆ ಮಾಡಿದ್ದರು. ಅವರು ಬುದ್ದಿವಂತ ಕಿಡಿಗೇಡಿಗಳು. ಬುಡದ ಸುತ್ತಲೂ ಸಗಣಿ ಹಾಕಿದ್ದ ಕಾರಣ ವಿಷ ಬುಡದಲ್ಲಿ ಇರುವುದು ಯಾರಿಗೂ ತಿಳಿಯಲಿಲ್ಲ.
ಕಾರಣಗಳು ಏನು ಗೊತ್ತೆ?: ಬಹಳ ಕ್ಷುಲ್ಲಕವಾಗಿವೆ. ವಾಸ್ತು ಹೆಸರಿನಲ್ಲಿ ಮರವನ್ನು ಕೊಲ್ಲಲಾಗುತ್ತಿದೆ. ಈ ಜೋತಿಷಿಗಳಿಗೂ ಬುದ್ಧಿ ಇಲ್ಲ. ವಾಸ್ತು ದೋಷವಿದ್ದರೆ `ಮನೆ ಬಿಡಿ’ ಎಂದು ಸಲಹೆ ಮಾಡಲಿ. ಅದು ಬಿಟ್ಟು ಮರ ಕಡಿಯಿರಿ ಅಂತ ಯಾಕೆ ಮಾಡಬೇಕು? ಮರದ ಬೇರುಗಳು ಮನೆಯ ಕಾಂಪೌಂಡಿನ ಗೋಡೆಯನ್ನು ಹಾಳುಗೆಡವುತ್ತವೆ ಎಂದೂ ಕೂಡ ಮರಕ್ಕೆ ವಿಷ ಉಣಿಸಲಾಗುತ್ತಿದೆ.
ಸೌದೆಗಾಗಿ ಮರದ ಕೊಲೆ: ಇಟ್ಟಿಗೆ ಸುಡುವವರು ಬದುಕಿರುವ ಮರಗಳನ್ನು ಕೆಡವಿ ಒಣಗಿಸಿ ಸೌದೆ ಮಾಡಿಕೊಳ್ಳುತ್ತಾರೆ. ಬರೀ ಇಟ್ಟಿಗೆ ಸುಡುವವರು ಮಾತ್ರವಲ್ಲ ದಿನಬಳಕೆಗೆ ಸೌದೆಯನ್ನು ಬೆಳೆಸುವವರು ಕೂಡ ಸಣ್ಣ ಪುಟ್ಟ ಮರಗಳನ್ನು ಕಡಿದು ಸೌದೆಗೆ ಬಳಸುತ್ತಾರೆ. ಗ್ರಾಮೀಣ ಭಾಗದಲ್ಲಿ ಸೌದೆಯಿಂದ ಅಡುಗೆ ಮಾಡುವವರು ಈ ಕೃತ್ಯವನ್ನು ಹೆಚ್ಚು ಮಾಡುತ್ತಾರೆ.
ಭಾರತೀಯ ಅರಣ್ಯ ಕಾನೂನಿನ ಪ್ರಕಾರ ಈ ಎಲ್ಲಾ ಕೃತ್ಯಗಳು ಅಕ್ರಮ. ಅರಣ್ಯ ಉತ್ಪನ್ನಗಳಿಗೆ ಧಕ್ಕೆ ಮಾಡುವವರಿಗೆ ಶಿಕ್ಷಿ ವಿಧಿಸುವ ಉಪಬಂಧಗಳು ಈ ಕಾನೂನಿನಲ್ಲಿ ಇದೆ. ಆದರೆ ಬೆಂಗೂಳೂರಿನ ಯಾವೊಂದು ಪೊಲೀಸ್ ಠಾಣೆಯಲ್ಲೂ ಮರಕ್ಕೆ ವಿಷಪ್ರಾಷನಕ್ಕೆ ಸಂಬಂಧಿಸಿದ ಯಾವೊಂದು ಪ್ರಕರಣವೂ ದಾಖಲಾಗಿಲ್ಲ.
ಇಲಾಖೆಗಳಿಗೆ ಬಾಯಿ ಇಲ್ಲ: ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಈ ವಿಷಯ ಗೊತ್ತೇ ಇಲ್ಲಾ ಎಂಬಂತೆ ನಾಟಕ ಆಡುತ್ತಾರೆ. ಬೀಳುವ ಅಪಾಯವಿರುವ ಕೆಲವು ಹಳೆಯ ಮರಗಳನ್ನು ಕಡಿಯಬೇಕು ನಿಜ. ಆದರೆ ಯಾರಿಗೂ ತಿಳಿಯದ ಹಾಗೆ ಯಾವುದೋ ಅನಿಲವನ್ನು ಇಂಜೆಕ್ಟ್ ಮಾಡಿ ಕೆಡವಬೇಕಿಲ್ಲ. ಮರ ಉರುಳಿ ಬಿದ್ದಾಗ ಮಾತ್ರ ಮರಕ್ಕೆ ವಿಷಾನಿಲ ಇಂಜೆಕ್ಟ್ ಮಾಡಲಾಗಿದೆ ಎಂದು ತಿಳಿಯುತ್ತದೆ. ಆದರೆ ಅದಕ್ಕೂ ಮುಂಚೆ ಮರವನ್ನು ಟೆಸ್ಟ್ ಮಾಡಿ ಆ ರೀತಿ ಏನಾದರೂ ಮಾಡಲಾಗಿದೆಯೇ ಎಂಬುದನ್ನು ಪತ್ತೆ ಮಾಡುವ ಮಾನದಂಡ ಅಧಿಕಾರಿಗಳ ಬಳಿ ಇಲ್ಲ.
ತಪ್ಪಿಸಿಕೊಳ್ಳುವುದು ಸುಲಭ: ಮರ ಹಸಿರಾಗಿ ಆರೋಗ್ಯವಾಗಿಯೇ ಇರುತ್ತದೆ. ಇದ್ದಕ್ಕಿಂದಂತೇ ಉರುಳಿ ಬಿದ್ದಾಗ ಯಾರ ಮೇಲೂ ಅನುಮಾನ ಪಡಲಿಕ್ಕಾಗುವುದಿಲ್ಲ.ಗೆದ್ದಲು ತಿಂದು ಸತ್ತಿದ್ದಕ್ಕೆ ಯಾರೇನು ಮಾಡಕ್ಕಾಗುತ್ತೆ ಅಂತ ಸುಲಭವಾಗಿ ಅಪರಾಧಿಗಳು ತಪ್ಪಿಸಿಕೊಳ್ಳಬಹುದು.
ಯಾವ ಕಾರಣಕ್ಕಾಗಿ ಮರ ಉರುಳಿ ಬಿದ್ದಿತು, ನಿಜವಾಗಿ ವಿಷ ಉಣಿಸಿ ಮರವನ್ನು ಕೊಲ್ಲಲಾಯಿತೆ ಎಂದು ಪತ್ತೆ ಮಾಡುವ ಮಾನದಂಡದ ಅವಶ್ಯಕತೆ ಬೇಕಾಗಿದೆ. ಇದರಿಂದ ಅಪರಾಧಿಗಳನ್ನು ಪತ್ತೆಮಾಡಬಹುದು.
ಬೆಂಗಳೂರಿನಲ್ಲಿ ಇಂಚು ಜಾಗಕ್ಕೂ ಚಿನ್ನಕ್ಕಿಂತ ಜಾಸ್ತಿ ಬೆಲೆ. ಗೇಣುದ್ದ ಭೂಮಿ ಪುಕ್ಕಟ್ಟೆ ಸಿಗುತ್ತೆ ಅಂದ್ರೆ, ಮರ ಬೀಳಿಸೋದು ಮಾತ್ರವಲ್ಲ, ಮನುಷ್ಯರ ಪ್ರಾಣ ತೆಗೆಯೋಕು ಸಿದ್ಧವಿರುವ ಮಂದಿ ಇದ್ದಾರೆ. ಇದೇ ರಿಯಲ್ ಎಸ್ಟೇಟ್ ಭೂಮ್! ಇವರು ಹೇಗಾದರೂ ಕಿತ್ತಾಡಿಕೊಂಡು ಸಾಯಲಿ. ಆದರೆ ಅಮಾಯಕ ಮರಗಳ ಪ್ರಾಣ ತೆಗೆಯೋದು ಯಾವ ನ್ಯಾಯ?
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ