ಶುಕ್ರವಾರ, ಅಕ್ಟೋಬರ್ 3, 2008




ಕಸದಿಂದ ರಸ, ರಸದಿಂದ ವಿದ್ಯುತ್‌!



ಬೆಂಗಳೂರಿನ ತಿಪ್ಪೆಗಳು ಬಹುಬೇಗನೆ ಖಾಲಿಯಾಗಲಿವೆ! ನಗರದ ಹೊರವಲಯದಲ್ಲಿರುವ ಕೆರೆಗಳು ಗಬ್ಬುನಾಥ ಮುಕ್ತವಾಗಲಿವೆ. ರಸ್ತೆಗಳ ಇಕ್ಕೆಲೆಗಳು ಸ್ವಚ್ಛವಾಗಲಿವೆ. ಪೌರಕಾರ್ಮಿಕ ಮಂದಿ ನಿಮ್ಮ ಮನೆ ಮುಂದೆ ಬಂದು ಕಸ ಇದ್ರೆ ಕೊಡಿಯಮ್ಮ! ಎಂದು ಕೇಳುವ ಕಾಲ ಬರಲಿದೆ.
ಹೌದು. ಈಗ ಕಸಕ್ಕೆ ಭಾರಿ ಬೇಡಿಕೆ ಬಂದಿದೆ. ಕಸದಿಂದ ರಸ ಉತ್ಪತ್ತಿ ಮಾಡುವ ಎಲ್ಲಾ ಚಿಂತನೆಗಳು ನಡೆಯುತ್ತಿವೆ. ಅಂದುಕೊಂಡಿರುವುದೆಲ್ಲಾ ಸರಿಯಾಗಿ ನಡೆದರೆ ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ `ತ್ಯಾಜ್ಯದಿಂದ ವಿದ್ಯುತ್‌’ ಘಟಕ ನಿರ್ಮಾಣಗೊಳ್ಳಲಿದೆ. ಈಗಾಗಲೆ ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯದ(ಎಂಎನ್‌ಆರ್‌ಐ) ಹಸಿರು ನಿಶಾನೆ ದೊರೆತಿದೆ. ಇಷ್ಟರಲ್ಲೇ ನಿಮ್ಮ ಕಸ ನಿಮ್ಮ ಮನೆಯನ್ನು ಬೆಳಗಲಿದೆ.
ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತ್ಯಾಜ್ಯವಿಲೇವಾರಿ ಸಮಸ್ಯೆ ಒಂದು ಗಂಭೀರ ಸಮಸ್ಯೆ. ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಮಸ್ಯೆ ಇದು. ದಿನಂಪ್ರತಿ ಈ ಊರಲ್ಲಿ ಉತ್ಪತ್ತಿಯಾಗುವ 30.000 ಟನ್‌ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಒಂದು ದೊಡ್ಡ ಸವಾಲಾಗಿದೆ. ೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಚೆಲ್ಲುತ್ತಿದೆ. ಖಾಸಗೀ ಗುತ್ತಿಗೆದಾರರ ಸಹಾಯದೊಂದಿಗೆ ಅದೇನೇನೋ ಸರ್ಕಸ್‌ ಮಾಡುತ್ತಿದೆ.
`ಸ್ವಚ್ಛ ಬೆಂಗಳೂರು’ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳ 2500 ಟನ್‌ ತ್ಯಾಜ್ಯ ವಿಲೇವಾರಿಗೆ 5.40 ಕೋಟಿ ರೂ. ಹಣ ವೆಚ್ಚ ಮಾಡುತ್ತಿದೆ. 1999ರಲ್ಲಿ ರಚಿಸಲಾಗಿರುವ `ಬೆಂಗಳೂರು ಟಾಸ್ಕ್‌ ಫೋರ್ಸ್‌’ ಕಸ ವಿಲೆವಾರಿಗೆ ಅವಿರತವಾಗಿ ಪ್ರಯತ್ನಿಸುತ್ತಿದೆ. ಇಡೀ ದೇಶದ ಬೇರೆ ಬೇರೆ ನಗರಗಳಿಗೆ ಹೋಲಿಸಿದರೆ ಕಸ ವಿಲೇವಾರಿ ಕ್ರಮದಲ್ಲಿ ಬೆಂಗಳೂರು ನಗರ ಉತ್ತಮ ಸ್ಥಾನದಲ್ಲಿದೆ ಆದರೂ ಕಸದ ಕಿರಿಕಿರಿ ಇದ್ದೇ ಇದೆ.
ಈ ಪರಿ ತ್ಯಾಜ್ಯವನ್ನು ಬಿಸಾಡುವುದಾದರೂ ಎಲ್ಲಿಗೆ? ಬೇರೆ ರಾಜ್ಯಗಳ ಕಡೆಗೂ ಕಳಿಸುವ ಹಾಗಿಲ್ಲ. ಅದೊಂದು ದೊಡ್ಡ ಕಾನೂನಿನ ಸಮಸ್ಯೆ. ಕಸದ ಪರ್ಯಾಯ ಬಳಕೆಗೆ ಒಂದು ಮೂಲ ಬೇಕೇ ಬೇಕಿತ್ತು. ಅದರ ಹುಡುಕಾಟದಲ್ಲಿ ದೊರೆತ ಒ0ದು ವ್ಯವಸ್ಥೆಯೇ `ತ್ಯಾಜ್ಯದಿಂದ ವಿದ್ಯುತ್‌’ ಘಟಕ ನಿರ್ಮಾಣ ಯೋಜನೆ.
ಪೌರಕಾರ್ಮಿಕರು ಪ್ರತಿ ಮನೆಯ ಮನೆ ಬಾಗಿಲಿಗೂ ಬಂದು ಕಸ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕಸದ ಆರೋಗ್ಯಗರ ಬಳಕೆಗೆ ಚಿಂತನೆ ನಡೆದಿದೆ. ತ್ಯಾಜ್ಯದಿಂದ ವಿದ್ಯುತ್‌ ತಯಾರಿಸುವ ಕ್ರಮ ಇತರೆ ವಿದ್ಯುತ್‌ ತಯಾರಿಕಾ ಮಾದರಿಯಲ್ಲಿಯೇ ಇರುತ್ತದೆ. ಉದ್ದೇಶಿಸಲಾಗಿರುವ ಈ ಯೋಜನೆಯಿಂದ ಎಂಟರಿಂದ ಹತ್ತು ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ವಿದ್ಯುತ್‌ ಘಟಕವು ರಾಜ್ಯಲ್ಲೇ ಅತಿದೊಡ್ಡ ವಿದ್ಯುತ್‌ ತಯಾರಿಕಾ ಘಟಕವಾಗಲಿದೆ. ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಬಿಬಿಎಂಪಿ ಈ ಘಟನ ನಿರ್ಮಾಣ ಕಾಮಗಾರಿ ಆರಂಭಿಸಲಿದೆ. ಪೂರೈಸಬೇಕಾಗಿರುವ ಕಾನೂನು ಅವಶ್ಯಕತೆಗಳನ್ನು ಕರ್ನಾಟಕ ರಾಜ್ಯ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮ(ಕೆಆರ್‌ಇಡಿಸಿ) ನಿರ್ವಹಿಸಲಿದೆ.
ಖರ್ಚುವೆಚ್ಚ: ಉದ್ದೇಶಿತ ತ್ಯಾಜ್ಯದಿಂದ ವಿದ್ಯುತ್‌ ಘಟಕ ನಿರ್ಮಾಣಕ್ಕೆ 65 ಕೋಟಿ ರೂ. ಹಣ ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡರಿಂದ ಮೂರು ವರ್ಷಗಳಲ್ಲಿ ಘಟಕ ನಿರ್ಮಾಣ ಪೂರ್ಣಗೊಳ್ಳಲಿದೆ. ಭಾರತ ಸರ್ಕಾರದ ನವೀಕರಿಸಲಾಗದ ಶಕ್ತಿ ಮೂಲಗಳ ಸಚಿವಾಲಯವು 10 ಕೋಟಿ ರೂ ಸಬ್ಸಿಡಿ ನೀಡಲು ಒಪ್ಪಿದೆ.
ಸೈಡ್‌ ಎಫೆಕ್ಟ್‌: ಏನೇ ಕೆಲಸ ಮಾಡಿದರೂ ಅದರಿಂದ ಅವಗುಣಗಳು ಇದ್ದೇ ಇರುತ್ತವೆ. ತ್ಯಾಜ್ಯದಿಂದ ವಿದ್ಯುತ್‌ ಯೋಜನೆ ಜಾರಿಯಿಂದ ಉದ್ಭವವಾಗಿರುವ ಸೈಡ್‌ ಎಫೆಕ್ಟ್‌ ಅಂದರೆ ಪರಿಸರ ನಾಶ ಸಮಸ್ಯೆ. ತ್ಯಾಜ್ಯವನ್ನು ಉರುವಲಾಗಿ ಬಳಸಿದಾಗ ಅದರ ಶಾಖ ಇಂಧನ ಮೂಲವಾಗುತ್ತದೆ. ತ್ಯಾಜ್ಯವನ್ನು ಸುಡುವಾಗ ಹೊರಹೊಮ್ಮುವ ಹೊಗೆ ಗಾಳಿಯನ್ನು ಮಲಿನಗೊಳಿಸಿದೆ. ಆದ್ದರಿಂದ ಈ ಯೋಜನೆಯ ಮೇಲೆ ಪರಿಸರ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಯೋಜನೆಯ ಮೇಲೆ ವೆಚ್ಚ ಮಾಡಲಾಗುತ್ತಿರುವ ಹಣವನ್ನೇ ತ್ಯಾಜ್ಯ ನಿರ್ವಹಣೆಗೆ ಬಳಸಿದರೆ ಪರಿಸರ ನಾಶ ತಡೆಯಬಹುದು ಎಂಬುದು ಅವರ ವಾದವಾಗಿದೆ.
ಮುಖ್ಯವಾಗಿ ವಾಯುಮಾಲಿನ್ಯ ಘಟಕ ನಿರ್ಮಾಣದಿಂದ ಸುತ್ತಮುತ್ತಲಿನ ಪರಿಸರ ಹಾಳಾಗಲಿದ್ದು ಹೊರ ಹೊಮ್ಮುವ ಹೊಗೆ ಸೇವಿಸುವ ಜನರಿಗೆ ವಿವಿಧ ರೋಗಗಳು ಹರಡುವ ಭೀತಿ ಇದೆ.
ಏನೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಾಗಲೂ ಈ ಪರಿಸರ ಸಮಸ್ಯೆ ಎದುರಾಗುತ್ತದೆ. ಸಹಜವಾಗಿಯೇ ತ್ಯಾಜ್ಯದಿಂದ ವಿದ್ಯುತ್‌ ಘಟಕ ನಿರ್ಮಾಣ ಯೋಜನೆಯಲ್ಲೂ ಪರಿಸರ ನಾಶ ಸಮಸ್ಯೆ ಎದುರಾಗಿದೆ. ಈ ಘಟಕ ನಿರ್ಮಾಣ ಮಾಡುವುದರಿಂದ ಎರಡು ಲಾಭಗಳಿವೆ. ಒಂದು: ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ. ಎರಡು: ವಿದ್ಯುತ್‌ ಉತ್ಪಾದನೆ. ಆದ್ದರಿಂದ ಈ ಯೋಜನೆ ಜಾರಿಯಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಘಟಕದ ಚಿಮಣಿಯನ್ನು ಎತ್ತರಕ್ಕೆ ನಿರ್ಮಾಣ ಮಾಡುವುದರಿಂದ ಪರಿಸರ ನಾಶ ಸಮಸ್ಯೆಗೆ ತಡೆಗೋಡೆ ಹಾಕಬಹುದು. ಈಗ ಮೊದಲು ಮಾಡಬೇಕಾದ ಕೆಲಸವೆಂದರೆ ಪರಿಸರ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗೆ ಚಾಲನೆ ನೀಡುವುದು

ಕಾಮೆಂಟ್‌ಗಳಿಲ್ಲ: