ಶುಕ್ರವಾರ, ಅಕ್ಟೋಬರ್ 3, 2008





30,000 ಮರಗಳಿಗೆ ಗಂಡಾಂತರ!?





ಬೆಂಗಳೂರು ಬರಿದಾಗಲಿದೆ..!
ಉದ್ಯಾನ ನಗರ ನಮ್ಮೂರು ಎಂದು ಹೇಳಿಕೊಳ್ಳುವ ಕಾಲ ಮುಗಿಯುತ್ತಾ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ 30 ಸಾವಿರ ಮರಗಳು ನೆಲಕ್ಕುರುಳಲಿವೆ. ನಗರದ 120 ರಸ್ತೆಗಳ ಅಗಲೀಕರಣಕ್ಕೆ ಬಿಬಿಎಂಪಿ ಚಾಲನೆ ನೀಡಿದ್ದು, ರಸ್ತೆಯ ಇಕ್ಕೆಲಗಳಲ್ಲಿರುವ ಮರ ಕಡಿಯುವ ಕಾರ್ಯಾಚರಣೆಯನ್ನು ಪ್ಯಾಲೆಸ್‌ ರಸ್ತೆಯಿಂದ ಆರಂಭಿಸಿದೆ. ಶೇಷಾದ್ರಿ, ಅವೆನ್ಯೂ, ಕೆಆರ್‌, ರಿಚ್ಮಂಡ್‌ ಮುಂತಾದ ರಸ್ತೆಗಳು ಈ ಪಟ್ಟಿಯಲ್ಲಿ ಸೇರಿವೆ.
ಅಮಾಯಕ ಮರಗಳು ಅನ್ಯಾಯವಾಗಿ ಬಿಬಿಎಂಪಿ ಬಾಯಿಗೆ ಬಲಿಯಾಗಲಿವೆ.
ಇದು ನಿಜವೇ!?
30 ಸಾವಿರ ಮರ ಕಡಿಯುವುದು ಅಂದರೆ ಹುಡುಗಾಟವೇ?
ಯಾರನ್ನು ಕೇಳಿ ಬಿಬಿಎಂಪಿ ಈ ಕ್ರಮ ಕೈಗೊಂಡಿದೆ?
ಸರ್ಕಾರ ಏನು ಕಡ್ಲೆಕಾಳು ತಿನ್ನುತ್ತಿದಿಯೇ?
ಈ ಪ್ರಶ್ನೆ ಬರಲೇಬೇಕು!
ಇದು ಎಷ್ಟು ನಿಜ, ಎಷ್ಟು ಸುಳ್ಳು ಅಂತಾ ಗೊತ್ತಿಲ್ಲ. ಆದರೆ `ಹಸಿರು ಉಸಿರು’ ಎನ್ನುವ ಸಂಸ್ಥೆಯೊಂದು ಇದು ನಿಜ! ಎನ್ನುತ್ತಿದೆ. ಈ ಮೇಲಿನ ಎಲ್ಲಾ ಅಂಕಿ-ಅಂಶಗಳ ವರದಿಯನ್ನು ಬಿಡುಗಡೆ ಮಾಡಿರುವುದೂ ಕೂಡ ಈ ಸಂಸ್ಥೆಯೇ. ಈ ಸಂಸ್ಥೆಯ ಅಧ್ಯಯನದ ಪ್ರಕಾರ ನಾಗರಿಕರು ಬಿಬಿಎಂಪಿ ಕ್ರಮದ ವಿರುದ್ಧ ಬಂಡೇಳದಿದ್ದರೆ ಇನ್ನು ಕೇವಲ ನಾಲ್ಕೈದು ತಿಂಗಳೊಳಗೆ ಅಷ್ಟೂ ಮರಗಳು ನೆಲಕ್ಕುರಳಲಿವೆಯಂತೆ. ಇದರಿಂದ ಮರ ಮಾತ್ರ ಬೀಳುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ವಾಸಿಸುತ್ತಿರುವ ಕುಟುಂಬಗಳೂ ಕೂಡ ಬೀದಿಗೆ ಬೀಳಲಿವೆ.
ಇನ್ನೂ ಒಂದು ಹೆಜ್ಚೆ ಮುಂದೆ ಸಾಗಿರುವ ಹಸಿರು ಉಸಿರು ರಾಜ್ಯ ಹೈ ಕೊರ್ಟ್‌ ಬಾಗಿಲು ಬಡಿದಿದೆ. ಮರ ಕಡಿದು ರಸ್ತೆ ಅಗಲೀಕರಣ ಮಾಡುವುದನ್ನು ಸ್ಥಗಿತಗೊಳಿಸುವಂತೆ ರಿಟ್‌ಅರ್ಜಿ ಸಲ್ಲಿಸಿದೆ.
ಇದ್ದಕ್ಕಿದ್ದಂತೆ ಇತ್ತೀಚೆಗೆ (ಜೂ.25) ಬಿಬಿಎಂಪಿ ಪ್ಯಾಲೇಸ್‌ ರಸ್ತೆ ಅಗಲೀಕರಣ ಪ್ರಕ್ರಿಯೆಯನ್ನು ಆರಂಭಿಸಿಯೇ ಬಿಟ್ಟಿತು. ಹಸಿರು ಉಸಿರು ಕಾರ್ಯಕರ್ತರ ಕಣ್ಣು ಕೆಂಪೇರಿತು. ಪ್ರತಿಭಟನೆ ಆರಂಭವಾಯಿತು.
ಪ್ರಕರಣ ಕೋರ್ಟ್‌ನಲ್ಲಿದೆ, ಯಾವ ಆಧಾರದ ಮೇಲೆ ಬಿಬಿಎಂಪಿ ಆಯುಕ್ತರು ಯೋಜನೆಗೆ ಚಾಲನೆ ನೀಡಿದರು ಎಂಬುದು ಅವರ ಆರೋಪ. ಆಯುಕ್ತರಿಗೆ ಕಾನೂನು ಗೊತ್ತಿಲ್ಲವೇ? ಡೌನ್‌ ಡೌನ್‌ ಸುಬ್ರಮಣ್ಯ ಅಂದರು. ಅವರ ಇನ್ನೊಂದು ಆರೋಪ ಏನು ಅಂದರೆ `ನಾವು ಪರಿಸರ ಪ್ರೇಮಿಗಳು ಮಹಾರಾಣಿ ಕಾಲೇಜಿನಿಂದ ಬಿಸಿಲಿನಲ್ಲಿ ಪ್ರತಿಭಟಿಸುತ್ತಾ ಬಿಬಿಎಂಪಿ ಕಚೇರಿಗೆ ಬಂದರೆ ಆಯುಕ್ತ ಸುಬ್ರಮಣ್ಯ ನಮ್ಮ ಮನವಿಯನ್ನು ಆಲಿಸುವುದಿರಲಿ ನಮ್ಮ ಬಳಿಗೆ ಬರುವ ಸೌಜನ್ಯ ತೋರಬಾರದೇ? ಸಭೆಯಿಂದ ಎದ್ದು ಹೋಗುವುದೇ?’ ಎಂಬುದು. ಸುಬ್ರಮಣ್ಯ ಕ್ಷಮೆಯಾಚಿಸಬೇಕು ಎಂಬುದು ಕೂಡ ಅವರ ಒತ್ತಾಯ.
ಹೀಗೆ ಮಾಡಿದ್ದು ಸರಿಯೇ ಆಯುಕ್ತರೇ ಎಂದು ಬಿಬಿಎಂಪಿ ಆಯುಕ್ತ ಸುಬ್ರಮಣ್ಯ ಅವರನ್ನು ಕೇಳಿದಾಗ….`ಅವರು ಯಾರು ಅಂತ ನನಗೆ ಗೊತ್ತೇ ಇಲ್ಲ. ಬಾಯಿಗೆ ಬಂದತೆ ಏನೇನೋ ಮಾತನಾಡುತ್ತಿದ್ದರು. ಅವರಿಗೆ ಹೇಗೆ ಬಿಹೇವ್‌ ಮಾಡಬೇಕು ಅನ್ನೋದೇ ಗೊತ್ತಿಲ್ಲ. ಕಚೇರಿಗೆ ನುಗ್ಗಲು ಯತ್ನಿಸುತ್ತಿದ್ದರು. ನಾನು ಸಾರಾಸಗಟಾಗಿ ತಿರಸ್ಕರಿಸಿ ಎದ್ದುಹೋದೆ.’ ಎಂದರು.
ಎರಡು ಲಕ್ಷ ಗಿಡ ನೆಡ್ತೀವಿ: ಹಸಿರು ಉಸಿರು ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಬಗ್ಗೆ ಕೇಳಿದಾಗ ಆಯುಕ್ತರು ಹೇಳಿದ್ದಿಷ್ಟು: `ಅವರ ವರದಿಯ ಪ್ರಕಾರ ನಗರದ 120 ರಸ್ತೆ ಅಗಲೀಕರಣಕ್ಕೆ 1, 500 ಕೋಟಿ ಹಣ ಬೇಕು. ಅಷ್ಟೊಂದು ಹಣ ಸರ್ಕಾರದ ಬೊಕ್ಕಸದಲ್ಲಿ ಎಲ್ಲಿದೆ? ರಸ್ತೆ ಅಗಲೀಕರಣ ಪ್ರಕ್ರಿಯೆ ಎಲ್ಲಾ ಕಾಲದಲ್ಲಿ ನಡೆಯುತ್ತದೆ. ನಗರ ಬೆಳೆದಂತೆ ರಸ್ತೆಯೂ ಬೆಳೆಯಬೇಕು. ರಸ್ತೆ ಅಗಲ ಮಾಡಲು ಮರ ಕಡಿಬೇಕು ನಿಜ. ಆದರೆ ಆ ಜಾಗದಲ್ಲಿ ಗಿಡ ಹಾಕ್ತೀವಿ. ಅಗಲೀಕರಣ ಯೋಜನೆ ರೂಪಿಸಿರುವುದು ನಿಜ. ಪರಿಸರವಾದಿಗಳೂ ಸೇರಿದಂತೆ ಎಲ್ಲರ ಒಪ್ಪಿಗೆ ಮೇರೆಗೆ ಯೋಜನೆಯನ್ನು ಅಂಗೀಕರಿಸಲಾಗಿದೆ. ಹೆಚ್ಚೆಂದರೆ 800 ಮರ ಕಡಿಯಬೇಕಾಗುತ್ತದೆ. ಅದರಂತೆ 2 ಲಕ್ಷ ಗಿಡ ನೆಡುವ ಕಾರ್ಯ ಯೋಜನೆಯ ಅಂಗವಾಗಿದೆ.’ ಎಂದರು.
ಹಸಿರು ಉಸಿರು ಸಲ್ಲಿಸಿರುವ ರಿಟ್‌ಅರ್ಜಿ ಬಗ್ಗೆ ಕೇಳಿದಾಗ ಆಯುಕ್ತರು ಹೇಳಿದ್ದು ಬೇರೆನೆ! `ಹೋಗಿಲಿ ಬಿಡ್ರಿ. ಕೋರ್ಟ್‌ ಯೋಜನೆಯನ್ನು ನಿಲ್ಲಿಸಿ ಅಂದ್ರೆ. ನಿಲ್ಲಿಸ್ತೀವಿ. ಅವರುಂಟು, ಕೋರ್ಟುಂಟು, ಸರ್ಕಾರವುಂಟು. ನಮಗೇನು’ ಎಂದು ಪ್ರಶ್ನಿಸಿದರು.
ಇಲ್ಲಿ ಎರಡೂ ಪಕ್ಷ(ಆಯುಕ್ತರು ವಿರುದ್ಧ ಹಸಿರು ಉಸಿರು)ಗಳನ್ನು ಗಮನಿಸಿದಾಗ ಪರಿಸರವಾದಿಗಳ ವರ್ತನೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತೆ ಸ್ಪಷ್ಟವಾಗುತ್ತದೆ. ಯಾವುದೇ ಒಂದು ಸಂಸ್ಥೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದಾಗ ಅಧಿಕಾರಿಯಾದವನು ಅದಕ್ಕೆ ಸೋಗು ಹಾಕದೆ ಲಕ್ಷ್ಯ ಕೊಡಬೇಕು. ಅಷ್ಟಕ್ಕೂ ಆ ವರದಿ ಒಂದು ಅಂದಾಜು. ಅದೇ ಅಂತಿಮವಲ್ಲ.
ಸದ್ಯಕ್ಕೆ ರಸ್ತೆ ಅಗಲೀಕರಣ ಪ್ರಕರಣ ಕೋರ್ಟ್‌ನಲ್ಲಿದೆ. ಆದೇಶ ಬರುವ ತನಕ ಕಾಯಲೇಬೇಕು. ನ್ಯಾಯಾಲಯ ಯೋಜನೆಗೆ ಹಸಿರು ನಿಶಾನೆ ತೋರಿದರೆ ಬೆಂಗಳೂರು ತನ್ನ ಹಸಿರು ಸೌಂದರ್ಯ ಕಳೆದುಕೊಳ್ಳುವುಂತೂ ನಿಜ.

ಕಾಮೆಂಟ್‌ಗಳಿಲ್ಲ: