

ಪರಿಸರ ಸ್ನೇಹಿಗಳಾಗೋಣ
ಗಣೇಶನನ್ನು ಆರಾಧಿಸೋಣ
ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ ಮತ್ತೊಮ್ಮೆ ಬಂದಿದೆ. ಕಡ್ಲೆ ಕಾಳು ಗಣಪ, ಧಾನ್ಯ ಗಣಪ, ಸಾಸಿವೆ ಗಣಪ, ನಾಟ್ಯ ಗಣಪ, ಬಾಲ ಗಣಪ, ಬಾದಾಮಿ ಗಣಪ, ಕಮಲದ ಮೇಲೆ ಅರಳಿದ ಗಣಪ, ನಿಂತಿರುವ ಗಣಪ. ಕೂತಿರುವ ಗಣಪ……ಈಗಿನ ಅಭಿನವ್ ಬಿಂದ್ರಾ ಗಣಪ ಮುಂತಾದ ಮೂರುತಿ ಕೊಳ್ಳಲು ಭಕ್ತರಿಗೆ ಸಂಭ್ರಮವೋ ಸಂಭ್ರಮ.
ಕೊಳ್ಳಿ. ಬೇಡ ಎನ್ನಲಾಗುವುದಿಲ್ಲ. ಆದರೆ ರಾಸಾಯನಿಕ ಬಣ್ಣ ಬಳಸಿ ಮಾಡಿದ ಗಣಪನನ್ನು ಮಾತ್ರ ಕೊಳ್ಳಬೇಡಿ. ಇತ್ತೀಚೆಗೆ ಗಣಪನ ವಿಗ್ರಹವನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಮಾಡಲಾಗುತ್ತಿದೆ. ಇಂತಹ ಮೂರ್ತಿಗಳನ್ನು ಮನೆಯಲ್ಲಿ ಇಡುವುದರಿಂದ ಗಂಟಲು ಬೇನೆ, ಚರ್ಮ ತುರಿಕೆ, ಕಣ್ಣು ಉರಿಯುವಿಕೆ, ಮೂಗು ಕಟ್ಟುವಂತಹ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಪರಿಸರ ಸ್ನೇಹಿಗಳಾಗೋಣ: ಗಣೇಶನನ್ನು ಆರಾಧಿಸುವಾಗ ಭಕ್ತರು ಎಚ್ಚರಿಕೆಯಿಂದ ಆಚರಿಸಿದರೆ ಪರಿಸರವನ್ನು ಸಂರಕ್ಷಿಸಬಹುದು. ಗಣೇಶ ಹಬ್ಬ ಬಂದಾಗಾದರೂ ಪರಿಸರ ಸ್ನೇಹಿಗಳಾಗಬೇಕಲ್ಲವೇ?
ಹಿಂದೆ ಗಣೇಶನನ್ನು ಕೆಲವು ಮಂದಿ ಮಾತ್ರ ಮಾಡುತ್ತಿದ್ದರು. ನಿಜವಾಗಿ ಶಿಲ್ಪಕಲೆ ಗೊತ್ತಿದ್ದವರು ಮಾತ್ರ ಮಾಡುತ್ತಿದ್ದರು. ವಂಶ ಪಾರಂಪರ್ಯವಾಗಿ ಬಂದಿದ್ದ ಕಾಯಕವಾಗಿತ್ತು. ವಿಗ್ರಹ ಮಾಡುವುದು ಪರಮಾತ್ಮನ ಆರಾಧನೆ ಎಂದೇ ಭಾವಿಸುತ್ತಿದ್ದರು. ಇವತ್ತು ಅವರು ಮೂಲೆ ಗುಂಪಾಗಿದ್ದಾರೆ. ಈಗ ಗಣೇಶನನ್ನು ಲಾಭ ಗಳಿಕೆ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ. ಜೇಡಿ ಮಣ್ಣಿನ ಗಜಾನನನನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಈಗೆಲ್ಲಾ ಮೌಲ್ಡ್ ಗಣಪನನ್ನು ಮಾಡುತ್ತಿದ್ದಾರೆ. ಇದಕ್ಕೆ ಕಲಾವಿದರ ಅವಶ್ಯಕತೆ ಇಲ್ಲಾ. ಮೌಲ್ಡ್ ಮೂಲಕ ಯಾರು ಬೇಕಾದರೂ ಮಾಡಬಹುದು.
ಮಣ್ಣಿನಿಂದ ಮಾಡಿದ ಗಣಪನ ವಿಸರ್ಜನೆ ಬಲು ಸುಲಭ. ಎಲ್ಲೇ ವಿಸರ್ಜನೆ ಮಾಡಿದರೂ ಬಲು ಬೇಗನೆ ಕರಗಿ ಹೋಗುತ್ತಾನೆ. ಇದರಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವೂ ಬೀರುವುದಿಲ್ಲ. ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಿಂದ ಮಾಡಿದ ಗಣಪಂದಿರು ಅಷ್ಟು ಬೇಗನೆ ಕರಗಲಾರರು. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಜೊತೆ ಬಳಸುವ ರಾಸಾಯನಿಕಗಳು ಬಹಳ ಕೆಟ್ಟವು. ಇವು ಕಣ್ಣಿಗೆ ಸೋಕಿದರೆ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಈ ಮೂರ್ತಿಗಳನ್ನು ಮಕ್ಕಳು ಮುಟ್ಟದಂತೆ ನೋಡಿಕೊಳ್ಳುವುದು ಒಳ್ಳೆಯದು.
ಬಿಬಿಎಂಪಿ ಕ್ರಮ: ಗಣೇಶ ಹಬ್ಬ ಬಂದಾಗಲೆಲ್ಲಾ ಪಾಲಿಕೆ ಕ್ರಮಕೈಗೊಳ್ಳುವುದು ಮಾಮೂಲು. ಅದರಂತೆ ಈ ವರ್ಷವೂ ಕೂಡ ಶಾಂತಿಯುತ ಗಣೇಶ ವಿಸರ್ಜನೆಗೆ ಕ್ರಮ ಕೈಗೊಂಡಿದೆ.
ಬಿಬಿಎಂಪಿ ಗಣೇಶ ವಿಸರ್ಜನೆ ಉದ್ದೇಶಕ್ಕಾಗಿಯೇ ಕೆರೆಗಳ ಬದಿಯಲ್ಲಿ ಟ್ಯಾಂಕ್ಗಳನ್ನು ನಿರ್ಮಿಸಿದೆ. ಕಡ್ಡಾಯವಾಗಿ ಅಲ್ಲಿಯೇ ವಿಸರ್ಜಿಸಬೇಕೆಂದು ಆದೇಶ ನೀಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆಗಳಲ್ಲಿ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಕೆರೆ ಬಾಗದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವವರಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಗಣೇಶ ಪೂಜೆಗಾಗಿ ಬಳಸುವ ಪೂಜಾ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅದಕ್ಕಾಗಿಯೇ ಇಡಲಾಗಿರುವ ಡಸ್ಟ್ಬಿನ್ಗಳಲ್ಲಿ ಹಾಕಬೇಕಾಗಿ ಬಿಬಿಎಂಪಿ ಕೋರಿದೆ. ಕೆರೆಗಳ ಗೇಟ್ನಲ್ಲಿ ಈ ಡಸ್ಟ್ಬಿನ್ಗಳನ್ನು ಆಯಾ ಕೆರೆಗಳ ಮುಖ್ಯ ಗೇಟ್ನಲ್ಲಿ ಇಡಲಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ರಾತ್ರಿ 10: 30 ಗಂಟೆಯ ನಂತರ ಗಣೇಶ ವಿಸರ್ಜನೆ ಅವಕಾಶವಿಲ್ಲ.
ಮೊಬೈಲ್ ಟ್ಯಾಂಕ್: ಬಿಬಿಎಂಪಿ ಈ ಬಾರಿ ಗಣೇಶ ವಿಸರ್ಜನೆಗೆ ವಿಶೇಷವಾಗಿ ಮೊಬೈಲ್ ಟ್ಯಾಂಕರ್ಗಳನ್ನು ಸಿದ್ಧಪಡಿಸಿದೆ. ಎರಡು ಅಡಿ ಅಥವಾ ಅದಕ್ಕಿಂತ ಚಿಕ್ಕ ಗಣೇಶ ಮೂರ್ತಿಗಳನ್ನು ಈ ಮೊಬೈಲ್ ಟ್ಯಾಂಕರ್ಗಳಲ್ಲಿ ವಿಸರ್ಜಿಸಬಹುದಾಗಿದೆ.
ಪಟಾಕಿ ಹೊಡೆಯುವಾಗ ಎಚ್ಚರ: ಗಣೇಶ ಹಬ್ಬ ಎಂದರೆ ಪಟಾಕಿ ಹಬ್ಬವೂ ಕೂಡ. ದೀಪಾವಳಿ ಹಬ್ಬವಾದರೆ ಎಲ್ಲರೂ ಪಟಾಕಿ ಹೊಡೆಯುತ್ತಾರೆ. ಆದರೆ ಗಣೇಶ ಹಬ್ಬದಲ್ಲಿ ಎಲ್ಲರೂ ಪಟಾಕಿ ಹೊಡೆಯುವುದಿಲ್ಲ. ಆದ್ದರಿಂದ ರಾತ್ರಿವೇಳೆ ಪಟಾಕಿ ಸಿಡಿಸಿದರೆ ಬೇರೆಯವರಿಗೆ ತೊಂದರೆ ಆಗುತ್ತದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಊರೆಲ್ಲಾ ಮೆರವಣಿಗೆ ಒಳ್ಳೆಯದಲ್ಲ. ಸುಮ್ಮನೆ ತೊಂದರೆ ಸೃಷ್ಟಿ. ಗಣೇಶನನ್ನು ಕೂರಿಸಿದ ಜಾಗದಲ್ಲಿ ಪೂಜಿಸಿ, ಸೀದಾ ವಿಸರ್ಜನಾ ಸ್ಥಳಕೆ ತೆಗೆದುಕೊಂಡು ಹೋಗಿ ಅಲ್ಲೊಮ್ಮೆ ಪೂಜಿಸಿ ವಿಸರ್ಜಿಸಿದರೆ ಮುಗಿಯಿತು.
ಮೈಕಾಸುರನ ಹಾವಳಿ ಬೇಡ: ಇದು ಬರೀ ಕಿರಿ ಕಿರಿ. ಮೈಕ್ ಹಾಕುವುದರಿಂದ ಶಬ್ದ ಮಾಲಿನ್ಯವೂ ಆಗುತ್ತದೆ. ಮೊದಲೇ ಈ ಊರ ಜನ ವಾಹನ ಶಬ್ದಕ್ಕೇ ಕಿವುಡಾಗುತ್ತಿದ್ದಾರೆ. ಅನಿಯಮಿತವಾಗಿ ಮೈಕ್ ಹಾಕುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಅಲ್ಲದೆ ನಿಯಮಿತ ಅವಧಿಗಿಂತ ಹೆಚ್ಚು ಕಾಲ ಮೈಕ್ ಹಾಕುವುದಾದರೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಇವಿಷ್ಟು ಗಣೇಶ ಹಬ್ಬದ ಪ್ರಯುಕ್ತ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳು. ಎಲ್ಲರೂ ಸ್ವಯಂ ಸ್ಫೂರ್ತಿಯಿಂದ ಕ್ರಮ ತೆಗೆದುಕೊಂಡರೆ ಅಲ್ಲಿ ಸಮಸ್ಯೆ ಎಂಬುದೇ ಉದ್ಬವವಾಗಲಾರದು. ಯಾರದೋ ಒತ್ತಾಯಕ್ಕಾಗಿ ತೆಗೆದುಕೊಂಡಾಗ ಸಮಸ್ಯೆ ಉಂಟಾಗುತ್ತದೆ.
ನಮ್ಮಗಣೇಶ ಹಬ್ಬದ ಶುಭ ಗಳಿಗೆಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡೋಣ, ಮಾತನಾಡೋಣ, ಯೋಚಿಸೋಣ. ಜೈ ಗಣೇಶ.