ಸೋಮವಾರ, ಸೆಪ್ಟೆಂಬರ್ 29, 2008






ಪರಿಸರ ಸ್ನೇಹಿಗಳಾಗೋಣ
ಗಣೇಶನನ್ನು ಆರಾಧಿಸೋಣ

ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬ ಮತ್ತೊಮ್ಮೆ ಬಂದಿದೆ. ಕಡ್ಲೆ ಕಾಳು ಗಣಪ, ಧಾನ್ಯ ಗಣಪ, ಸಾಸಿವೆ ಗಣಪ, ನಾಟ್ಯ ಗಣಪ, ಬಾಲ ಗಣಪ, ಬಾದಾಮಿ ಗಣಪ, ಕಮಲದ ಮೇಲೆ ಅರಳಿದ ಗಣಪ, ನಿಂತಿರುವ ಗಣಪ. ಕೂತಿರುವ ಗಣಪ……ಈಗಿನ ಅಭಿನವ್‌ ಬಿಂದ್ರಾ ಗಣಪ ಮುಂತಾದ ಮೂರುತಿ ಕೊಳ್ಳಲು ಭಕ್ತರಿಗೆ ಸಂಭ್ರಮವೋ ಸಂಭ್ರಮ.
ಕೊಳ್ಳಿ. ಬೇಡ ಎನ್ನಲಾಗುವುದಿಲ್ಲ. ಆದರೆ ರಾಸಾಯನಿಕ ಬಣ್ಣ ಬಳಸಿ ಮಾಡಿದ ಗಣಪನನ್ನು ಮಾತ್ರ ಕೊಳ್ಳಬೇಡಿ. ಇತ್ತೀಚೆಗೆ ಗಣಪನ ವಿಗ್ರಹವನ್ನು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬಳಸಿ ಮಾಡಲಾಗುತ್ತಿದೆ. ಇಂತಹ ಮೂರ್ತಿಗಳನ್ನು ಮನೆಯಲ್ಲಿ ಇಡುವುದರಿಂದ ಗಂಟಲು ಬೇನೆ, ಚರ್ಮ ತುರಿಕೆ, ಕಣ್ಣು ಉರಿಯುವಿಕೆ, ಮೂಗು ಕಟ್ಟುವಂತಹ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.
ಪರಿಸರ ಸ್ನೇಹಿಗಳಾಗೋಣ: ಗಣೇಶನನ್ನು ಆರಾಧಿಸುವಾಗ ಭಕ್ತರು ಎಚ್ಚರಿಕೆಯಿಂದ ಆಚರಿಸಿದರೆ ಪರಿಸರವನ್ನು ಸಂರಕ್ಷಿಸಬಹುದು. ಗಣೇಶ ಹಬ್ಬ ಬಂದಾಗಾದರೂ ಪರಿಸರ ಸ್ನೇಹಿಗಳಾಗಬೇಕಲ್ಲವೇ?
ಹಿಂದೆ ಗಣೇಶನನ್ನು ಕೆಲವು ಮಂದಿ ಮಾತ್ರ ಮಾಡುತ್ತಿದ್ದರು. ನಿಜವಾಗಿ ಶಿಲ್ಪಕಲೆ ಗೊತ್ತಿದ್ದವರು ಮಾತ್ರ ಮಾಡುತ್ತಿದ್ದರು. ವಂಶ ಪಾರಂಪರ್ಯವಾಗಿ ಬಂದಿದ್ದ ಕಾಯಕವಾಗಿತ್ತು. ವಿಗ್ರಹ ಮಾಡುವುದು ಪರಮಾತ್ಮನ ಆರಾಧನೆ ಎಂದೇ ಭಾವಿಸುತ್ತಿದ್ದರು. ಇವತ್ತು ಅವರು ಮೂಲೆ ಗುಂಪಾಗಿದ್ದಾರೆ. ಈಗ ಗಣೇಶನನ್ನು ಲಾಭ ಗಳಿಕೆ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ. ಜೇಡಿ ಮಣ್ಣಿನ ಗಜಾನನನನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಈಗೆಲ್ಲಾ ಮೌಲ್ಡ್‌ ಗಣಪನನ್ನು ಮಾಡುತ್ತಿದ್ದಾರೆ. ಇದಕ್ಕೆ ಕಲಾವಿದರ ಅವಶ್ಯಕತೆ ಇಲ್ಲಾ. ಮೌಲ್ಡ್‌ ಮೂಲಕ ಯಾರು ಬೇಕಾದರೂ ಮಾಡಬಹುದು.
ಮಣ್ಣಿನಿಂದ ಮಾಡಿದ ಗಣಪನ ವಿಸರ್ಜನೆ ಬಲು ಸುಲಭ. ಎಲ್ಲೇ ವಿಸರ್ಜನೆ ಮಾಡಿದರೂ ಬಲು ಬೇಗನೆ ಕರಗಿ ಹೋಗುತ್ತಾನೆ. ಇದರಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವೂ ಬೀರುವುದಿಲ್ಲ. ಆದರೆ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ಸಿನಿಂದ ಮಾಡಿದ ಗಣಪಂದಿರು ಅಷ್ಟು ಬೇಗನೆ ಕರಗಲಾರರು. ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾರೆ.
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಜೊತೆ ಬಳಸುವ ರಾಸಾಯನಿಕಗಳು ಬಹಳ ಕೆಟ್ಟವು. ಇವು ಕಣ್ಣಿಗೆ ಸೋಕಿದರೆ ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಈ ಮೂರ್ತಿಗಳನ್ನು ಮಕ್ಕಳು ಮುಟ್ಟದಂತೆ ನೋಡಿಕೊಳ್ಳುವುದು ಒಳ್ಳೆಯದು.
ಬಿಬಿಎಂಪಿ ಕ್ರಮ: ಗಣೇಶ ಹಬ್ಬ ಬಂದಾಗಲೆಲ್ಲಾ ಪಾಲಿಕೆ ಕ್ರಮಕೈಗೊಳ್ಳುವುದು ಮಾಮೂಲು. ಅದರಂತೆ ಈ ವರ್ಷವೂ ಕೂಡ ಶಾಂತಿಯುತ ಗಣೇಶ ವಿಸರ್ಜನೆಗೆ ಕ್ರಮ ಕೈಗೊಂಡಿದೆ.
ಬಿಬಿಎಂಪಿ ಗಣೇಶ ವಿಸರ್ಜನೆ ಉದ್ದೇಶಕ್ಕಾಗಿಯೇ ಕೆರೆಗಳ ಬದಿಯಲ್ಲಿ ಟ್ಯಾಂಕ್‌ಗಳನ್ನು ನಿರ್ಮಿಸಿದೆ. ಕಡ್ಡಾಯವಾಗಿ ಅಲ್ಲಿಯೇ ವಿಸರ್ಜಿಸಬೇಕೆಂದು ಆದೇಶ ನೀಡಲಾಗಿದೆ. ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆಗಳಲ್ಲಿ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ಕೆರೆ ಬಾಗದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸುವವರಿಗೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿ ಆದೇಶಿಸಿದೆ.
ಗಣೇಶ ಪೂಜೆಗಾಗಿ ಬಳಸುವ ಪೂಜಾ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅದಕ್ಕಾಗಿಯೇ ಇಡಲಾಗಿರುವ ಡಸ್ಟ್‌ಬಿನ್‌ಗಳಲ್ಲಿ ಹಾಕಬೇಕಾಗಿ ಬಿಬಿಎಂಪಿ ಕೋರಿದೆ. ಕೆರೆಗಳ ಗೇಟ್‌ನಲ್ಲಿ ಈ ಡಸ್ಟ್‌ಬಿನ್‌ಗಳನ್ನು ಆಯಾ ಕೆರೆಗಳ ಮುಖ್ಯ ಗೇಟ್‌ನಲ್ಲಿ ಇಡಲಾಗಿದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ರಾತ್ರಿ 10: 30 ಗಂಟೆಯ ನಂತರ ಗಣೇಶ ವಿಸರ್ಜನೆ ಅವಕಾಶವಿಲ್ಲ.
ಮೊಬೈಲ್‌ ಟ್ಯಾಂಕ್‌: ಬಿಬಿಎಂಪಿ ಈ ಬಾರಿ ಗಣೇಶ ವಿಸರ್ಜನೆಗೆ ವಿಶೇಷವಾಗಿ ಮೊಬೈಲ್‌ ಟ್ಯಾಂಕರ್‌ಗಳನ್ನು ಸಿದ್ಧಪಡಿಸಿದೆ. ಎರಡು ಅಡಿ ಅಥವಾ ಅದಕ್ಕಿಂತ ಚಿಕ್ಕ ಗಣೇಶ ಮೂರ್ತಿಗಳನ್ನು ಈ ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬಹುದಾಗಿದೆ.
ಪಟಾಕಿ ಹೊಡೆಯುವಾಗ ಎಚ್ಚರ: ಗಣೇಶ ಹಬ್ಬ ಎಂದರೆ ಪಟಾಕಿ ಹಬ್ಬವೂ ಕೂಡ. ದೀಪಾವಳಿ ಹಬ್ಬವಾದರೆ ಎಲ್ಲರೂ ಪಟಾಕಿ ಹೊಡೆಯುತ್ತಾರೆ. ಆದರೆ ಗಣೇಶ ಹಬ್ಬದಲ್ಲಿ ಎಲ್ಲರೂ ಪಟಾಕಿ ಹೊಡೆಯುವುದಿಲ್ಲ. ಆದ್ದರಿಂದ ರಾತ್ರಿವೇಳೆ ಪಟಾಕಿ ಸಿಡಿಸಿದರೆ ಬೇರೆಯವರಿಗೆ ತೊಂದರೆ ಆಗುತ್ತದೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಊರೆಲ್ಲಾ ಮೆರವಣಿಗೆ ಒಳ್ಳೆಯದಲ್ಲ. ಸುಮ್ಮನೆ ತೊಂದರೆ ಸೃಷ್ಟಿ. ಗಣೇಶನನ್ನು ಕೂರಿಸಿದ ಜಾಗದಲ್ಲಿ ಪೂಜಿಸಿ, ಸೀದಾ ವಿಸರ್ಜನಾ ಸ್ಥಳಕೆ ತೆಗೆದುಕೊಂಡು ಹೋಗಿ ಅಲ್ಲೊಮ್ಮೆ ಪೂಜಿಸಿ ವಿಸರ್ಜಿಸಿದರೆ ಮುಗಿಯಿತು.
ಮೈಕಾಸುರನ ಹಾವಳಿ ಬೇಡ: ಇದು ಬರೀ ಕಿರಿ ಕಿರಿ. ಮೈಕ್‌ ಹಾಕುವುದರಿಂದ ಶಬ್ದ ಮಾಲಿನ್ಯವೂ ಆಗುತ್ತದೆ. ಮೊದಲೇ ಈ ಊರ ಜನ ವಾಹನ ಶಬ್ದಕ್ಕೇ ಕಿವುಡಾಗುತ್ತಿದ್ದಾರೆ. ಅನಿಯಮಿತವಾಗಿ ಮೈಕ್‌ ಹಾಕುವುದರಿಂದ ವಿದ್ಯಾರ್ಥಿಗಳಿಗೂ ತೊಂದರೆ ಆಗುತ್ತದೆ. ಅಲ್ಲದೆ ನಿಯಮಿತ ಅವಧಿಗಿಂತ ಹೆಚ್ಚು ಕಾಲ ಮೈಕ್‌ ಹಾಕುವುದಾದರೆ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್‌ ಠಾಣೆಯಿಂದ ಅನುಮತಿ ಪಡೆಯಬೇಕಾಗುತ್ತದೆ.
ಇವಿಷ್ಟು ಗಣೇಶ ಹಬ್ಬದ ಪ್ರಯುಕ್ತ ನಾವೆಲ್ಲರೂ ತೆಗೆದುಕೊಳ್ಳಬೇಕಾದ ಎಚ್ಚರಿಕಾ ಕ್ರಮಗಳು. ಎಲ್ಲರೂ ಸ್ವಯಂ ಸ್ಫೂರ್ತಿಯಿಂದ ಕ್ರಮ ತೆಗೆದುಕೊಂಡರೆ ಅಲ್ಲಿ ಸಮಸ್ಯೆ ಎಂಬುದೇ ಉದ್ಬವವಾಗಲಾರದು. ಯಾರದೋ ಒತ್ತಾಯಕ್ಕಾಗಿ ತೆಗೆದುಕೊಂಡಾಗ ಸಮಸ್ಯೆ ಉಂಟಾಗುತ್ತದೆ.
ನಮ್ಮಗಣೇಶ ಹಬ್ಬದ ಶುಭ ಗಳಿಗೆಯಲ್ಲಿ ನಾಲ್ಕು ಒಳ್ಳೆಯ ಕೆಲಸ ಮಾಡೋಣ, ಮಾತನಾಡೋಣ, ಯೋಚಿಸೋಣ. ಜೈ ಗಣೇಶ.



ಮಹತ್ವ ಪಡೆಯುತ್ತಿರುವ ಪರಿಸರ ಕಾನೂನು


ಎಂ.ಸಿ. ಮೆಹತಾ ಎಂಬ ಪರಿಸರ ಪ್ರೇಮಿ ಇಲ್ಲದಿದ್ದರೆ ಬಹುಶಃ ಪರಿಸರ ಕಾನೂನುಗಳ ಒಂದು ಸ್ಪಷ್ಟ ಚಿತ್ರಣ ಭಾರತದಲ್ಲಿ ಸಿಗುತ್ತಿರಲಿಲ್ಲ. ಭಾರತೀಯ ಪರಿಸರ ಕಾನೂನು ಉದಯವಾಗುವುದಕ್ಕೆ ಮೆಹತಾ ಕೊಡುಗೆ ಅಪಾರ. ನಿಜವಾಗಿ ಪರಿಸರ ಕಾನೂನು ಕಾನೂನೇ ಅಲ್ಲ, ಅದು ಸರ್ವೋಚ್ಛ ನ್ಯಾಯಾಲಯದ ಕೊಡುಗೆ ಎಂದು ಹೇಳುವುದುಂಟು. ಪರಿಸರ ಸಮಸ್ಯೆಯೊಂದು ಸಾರ್ವಜನಿಕ ಹಿತಾಸಕ್ತಿ ದಾವೆಯ ರೂಪದಲ್ಲಿ ಕೋರ್ಟ್‌ ಮೆಟ್ಟಿಲೇರಿದಾಗ ತೀರ್ಪಿನ ರೂಪದಲ್ಲಿ ಹೊರಬಂದ ಅಭಿಪ್ರಾಯವೇ ಇಂದು ಪರಿಸರ ಕಾನೂನಾಗಿ ರೂಪುಗೊಂಡಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.
ಇದಕ್ಕೆ ಹಲವು ಉದಾಹರಣೆಗಳಿವೆ. ಆ ಪೈಕಿ ಇತ್ತೀಚಿನ ಕೆಲವು…
* ತಾಜ್‌ ಪ್ರಕರಣ: ಆಗ್ರಾ ಸುತ್ತಮುತ್ತಲಿನ ಕೈಗಾರಿಕೆಗಳಿಂದ ವಿಶ್ವ ಪ್ರಸಿದ್ಧ ಸ್ಮಾರಕ ತಾಜ್‌ಮಹಲ್‌ನ ಅಮೃತ ಶಿಲೆಗಳು ಹಸಿರು ಬಣ್ಣಕ್ಕೆ ತಿರುಗಿ ಹೊಳಪು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿದ ಎಂ.ಸಿ. ಮೆಹತಾ ಸಾರ್ವಜನಿಕ ಹಿತಾಸಕ್ತಿ ದಾವೆ ಹಿಡಿದು ಸುಪ್ರೀಂ ಕೋರ್ಟ್‌ ಬಾಗಿಲು ತಟ್ಟಿದರು. ಕೋರ್ಟ್‌ ಇದನ್ನು ಗಂಭೀರವಾಗಿ ಪರಿಗಣಿಸಿ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿತು. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪು ಭಾರತೀಯ ಪರಿಸರ ಕಾನೂನುಗಳಲ್ಲಿ ಲ್ಯಾಂಡ್‌ಮಾರ್ಕ್‌ ಜಡ್ಜ್‌ಮೆಂಟ್‌.
* ಗಂಗಾನದಿ ಪ್ರಕರಣ: ಭಾರತೀಯರಿಗೆ ಗಂಗಾನದಿ ಬಲು ಪವಿತ್ರವಾದುದು. ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳು ಈ ನೀರಿನಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಇಲ್ಲಿ ಮಿಂದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಆದರೆ ಗಂಗಾನದಿಯ ಇನ್ನೊಂದು ಮುಖ ಸಾವು! ಕೈಗಾರಿಕೆಗಳು ತಡೆಯಿಲ್ಲದೆ ಬಿಡುತ್ತಿದ್ದ ತ್ಯಾಜ್ಯದಿಂದ ಪವಿತ್ರ ನೀರು ಅಪವಿತ್ರಗೊಂಡಿತ್ತು. ಸಾಧು ಸಂತರ ಹೆಣಗಳು ಇಲ್ಲಿ ತೇಲಾಡುತ್ತಿದ್ದವು. ಇದನ್ನು ಎಂ.ಸಿ. ಮೆಹತಾ ಪ್ರಶ್ನಿಸಿದರು. ಗಂಗಾ ನದಿ ಉಳಿವಿಗಾಗಿ ಕೋರ್ಟ್‌ 30ಕ್ಕೂ ಹೆಚ್ಚು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿತು. ಇವು ಪರಿಸರ ಕಾನೂನಿನ ತತ್ವಗಳಾಗಿ ರೂಪುಗೊಂಡಿವೆ.
* ದೆಹಲಿ ವಾಯುಮಾಲಿನ್ಯ ಪ್ರಕರಣ: ದೆಹಲಿ ನಗರದಲ್ಲಿ ವಾಯುಮಾಲಿನ್ಯ ಮಿತಿ ಮೀರಿತ್ತು. ವಿಶ್ವದ ನಾಲ್ಕನೇ ಅತಿ ಹೆಚ್ಚು ಮಲಿನ ನಗರ ಎಂಬ ಅಗ್ಗಳಿಕೆ ಅದಕ್ಕಿತ್ತು, ಈಗಲೂ ಇದೆ. ಎಲ್ಲೆಂದರಲ್ಲಿ ಕೈಗಾರಿಕೆಗಳು ಅಕ್ರಮವಾಗಿ ತಲೆ ಎತ್ತಿದ್ದವು. ಇವುಗಳ ವಿರುದ್ಧ ಎಂ.ಸಿ. ಮೆಹತಾ ರಿಟ್‌ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ ಈ ರಿಟ್‌ ಅರ್ಜಿಗೆ ಉತ್ತರವಾಗಿ ಕಾನೂನನ್ನು ಕಡೆಗಣಿಸಿದ್ದ 8378 ಕೈಗಾರಿಕೆಗಳಿಗೆ ನೋಟಿಸ್‌ ಜಾರಿ ಮಾಡಿತು. ನಂತರ `ದೆಹಲಿ ಮಾಸ್ಟರ್‌ ಪ್ಲಾನ್‌’ ರಚಿಸಿ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪನೆಯಾಗದ ಹಾಗೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶ ನೀಡಿತು.
ಈ ರೀತಿಯ 40ಕ್ಕೂ ಹೆಚ್ಚು ಪ್ರಕರಣಗಳನ್ನು ಎಂ.ಸಿ. ಮೆಹತಾ ಗೆದ್ದಿದ್ದಾರೆ. ಅವರು ಒಬ್ಬಂಟಿ ಹೋರಾಟಗಾರ. ಪರಿಸರ ವಕೀಲ. ಭಾರತ ಸಂವಿಧಾನ ತನ್ನ 21ನೇ ವಿಧಿಯನ್ವಯ ಭಾರತೀಯ ಪ್ರಜೆಗಳಿಗೆ `ಜೀವಿಸುವ ಹಕ್ಕು’ ನೀಡುತ್ತದೆ. ಈ ವಿಧಿಯಲ್ಲಿ `ಸ್ವಾಸ್ಥ್ಯ ಪರಿಸರದಲ್ಲಿ ಜೀವಿಸುವ ಹಕ್ಕು’ ಸೇರಿಸುವಲ್ಲಿ ಮೆಹತಾರ ಪಾತ್ರ ಮಹತ್ವವಾದುದು. ಈ ನಿಟ್ಟಿನಲ್ಲಿ ಮೆಹತಾರನ್ನು ಭಾರತೀಯ ಪರಿಸರ ಕಾನೂನಿನ ನಿರ್ಮಾತೃ ಅಥವಾ ಪಿತಾಮಹ ಎಂದು ಕರೆಯಲಾಗುತ್ತದೆ.
ಜಗತ್ತಿನ ಖ್ಯಾತ ಪರಿಸರವಾದಿಗಳಲ್ಲಿ ಎಂ.ಸಿ. ಮೆಹತಾ ಅತ್ಯಂತ ಪ್ರಭಾವಿ ತಜ್ಞ. ಪರಿಸರದ ಸೇವೆಗಾಗಿ ನೀಡುವ `ಎನ್ವಿರಾನ್‌ಮೆಂಟಲ್‌ ಗೋಲ್ಡ್‌ಮನ್‌ ಪ್ರೈಜ್‌’ ಮೆಹತಾರಿಗೆ ಸಂದಿದೆ.
ಜಾಗತಿಕ ವಿಚಾರ: ಪರಿಸರ ಮಾಲಿನ್ಯದ ವಿಷಯಗಳು ಯಾವುದೇ ಒಂದು ದೇಶಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಲ್ಲ. ಪರಿಸರ ಅಕ್ಷರಶಃ ಜಾಗತಿಕ ವಿಚಾರ. ಈ ಸೃಷ್ಟಿಯನ್ನು ಅನುಭವಿಸಲು ಎಲ್ಲಾ ರಾಜ್ಯಗಳಿಗೂ ಸಮಾನ ಹಕ್ಕಿದೆ. ಭೂಮಿಯ ಯಾವುದೋ ಒಂದು ಜಾಗದಲ್ಲಿ ನಡೆಯುವ ಪರಿಸರ ಹಾನಿ ಚಚುವಟಿಕೆಯ ಪರಿಣಾಮ ಎಲ್ಲಾ ರಾಜ್ಯಗಳ ಮೇಲೆ ಬೀರುತ್ತದೆ. ಆದ್ದರಿಂದಾಗಿ ಪರಿಸರದ ಮೇಲೆ ಏನೇ ಆದರೂ ಅದರ ಝಳಪು ಇಡೀ ಜಗತ್ತನ್ನೇ ಆವರಿಸಿಕೊಳ್ಳುತ್ತದೆ.
ಪಠ್ಯವಾಗಿ ಪರಿಸರ ಕಾನೂನು: ಕಳೆದ ನಾಲ್ಕು ದಶಕಗಳ ಹಿಂದೆ `ಪರಿಸರ’ದ ವಿಷಯ ಸಮಾಜ ವಿಜ್ಞಾನದ ಒಂದು ಭಾಗವಾಗಿತ್ತು. ಆನಂತರ `ಪರಿಸರ ವಿಜ್ಞಾನ’ ಎಂಬ ಸ್ವತಂತ್ರ ವಿಷಯ ಅಸ್ತಿತ್ವಕ್ಕೆ ಬಂತು. ಇಂದು ವಿವಿಗಳು ಇದನ್ನು ಬೋಧಿಸುತ್ತಿವೆ. ಆದರೆ ಇದರ ಜ್ಞಾನ ಸ್ಕ್ರೆನ್ಸ್‌ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ದೊರೆಯುತ್ತಿದೆಯೇ ಹೊರತು ವಿಜ್ಞಾನೇತರ ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ. ಇದು ಇದರ ಪ್ರಮುಖ ದೋಷ. ಅಷ್ಟಕ್ಕೂ ವಿಜ್ಞಾನ ಎಂಬುದು ಲ್ಯಾಬೊರೇಟರಿಗಳಲ್ಲಿ ನಡೆಯುವ ಆಪರೇಷನ್‌! ಇದು ಸಾಮಾನ್ಯನ ಕೈಗೆ ಎಟಕುವುದಿಲ್ಲ.
ಪರಿಸರದ ಒಂದು ಭಾಗವಾಗಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಪರಿಸರ ಕಾನೂನು ಅರಿಯುವ ಅವಶ್ಯಕತೆ ಇದೆ. ಪಾರ್ಲಿಮೆಂಟಿನಲ್ಲಿ ಪಾಸಾಗಿ ರಾಷ್ಟ್ರಾಧ್ಯಕ್ಷರಿಂದ ಅಂಕಿತ ಪಡೆದ ಕಾನೂನು ಮಾತ್ರ ಪರಿಸರ ಕಾನೂನಲ್ಲ. ಪರಿಸರ ಕಾನೂನನ್ನು ಅಂತಾರಾಷ್ಟ್ರೀಯ ಮಾತುಕತೆ, ಒಂಬಡಿಕೆಗಳ ಗುಚ್ಛ ಎನ್ನಲಾಗುತ್ತದೆ. (Environmental law is a bunch of international conventions, summits, agreements’) ಯಾಕೆಂದರೆ ಪರಿಸರ ಅಧ್ಯಯನವನ್ನು ಯಾವುದೋ ಒಂದು ರಾಷ್ಟ್ರವನ್ನು ಗಮನದಲ್ಲಿ ಇಟ್ಟುಕೊಂಡು ಅಭ್ಯಸಿಸಲು ಸಾಧ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಬೆಳವಣಿಗೆಗಳನ್ನು ಅರಿಯುವುದು ಅಗತ್ಯ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ೃಹತ್‌ ಪರಿಸರ ಚಳವಳಿಯೇ ಇದೆ. ಭೂಮಿ ಮಾತುಕತೆಗಳು (Earth summits), 21 ಅಂಶಗಳ ಕಾರ್ಯಸೂಚಿ (21 Agenda), ಮುನ್ನೆಚ್ಚರಿಕೆ ತತ್ವ (Precautionery principle), ರಿಯೋ ಘೋಷಣೆ (Rio declaration), ರಚನಾತ್ಮಕ ಅಭಿವೃದ್ಧಿ( sustainable development), ಸ್ಟಾಕ್‌ಹೋಮ್‌ ಮಾತುಕತೆ (Stockholm conference), ಮುಂತಾದ ಹತ್ತು ಹಲವು ನಿಯಮಾವಳಿ ಮಾತುಕತೆಗಳಿವೆ. ಇವುಗಳನ್ನು ಅರಿತಾಗ ಮಾತ್ರ ಪರಿಸರ ಅಧ್ಯಯನ ಪರಿಪೂರ್ಣ.
ವಿದೇಶಗಳಲ್ಲಿ ಪರಿಸರದ ಸಂಪೂರ್ಣ ಅಧ್ಯಯನವನ್ನು ಪ್ರಾಥಮಿಕ, ಪ್ರೌಢ ಶಿಕ್ಷಣ ಹಂತದಲ್ಲಿ ಸಾರ್ವತ್ರಿಕ ಪಠ್ಯವಾಗಿ ಸೇರಿಸಲಾಗಿದೆ. ಯಾವುದೇ ಕೋರ್ಸ್‌ ಆಗಿದ್ದರೂ ಪರಿಸರ ಅಧ್ಯಯನ ಕಡ್ಡಾಯ.
ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು: ಭಾರತ ಈಗ ಪರಿಸರ ಅಧ್ಯಯನದ ಮಹತ್ವವನ್ನು ಅರಿತಂತೆ ಕಾಣುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಪರಿಸರ ಕಾನೂನು ಮತ್ತು ಭಾರತೀಯ ಸಂವಿಧಾನವನ್ನು ಪಠ್ಯವಾಗಿ ಅಳವಡಿಸಿದೆ. ಎಂಜಿನಿಯರಿಂಗ್‌ನಲ್ಲಿ ಸಂವಿಧಾನವನ್ನು ಈಗಾಗಲೇ ಬೋಧಿಸಲಾಗುತ್ತಿದೆ. ಪರಿಸರ ಕಾನೂನನ್ನೂ ಅಳವಡಿಸುವ ಚಿಂತನೆ ಇದೆ. ಇವರಿಗೆ ಬೋಧಿಸುವವರು ಯಾರು ಗೊತ್ತೆ? ಪರಿಸರ ವಿಜ್ಞಾನ ಕಲಿತ ವಿಜ್ಞಾನ ಅಧ್ಯಾಪಕರಲ್ಲ. ಪರಿಸರ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (LL.M) ಕಲಿತ ಕಲಾ ಅಧ್ಯಾಪಕರು. ಇದು ನಿಜಕ್ಕೂ ವಿಶೇಷ. ಹೇಳಿಕೊಡುವವರಿಗೂ, ಕಲಿಯುವವರಿಗೂ ಹೊಸ ಅನುಭವ.
ಭಾರತದಲ್ಲಿ ಪರಿಸರ ಕಾನೂನನ್ನು ಸ್ವತಂತ್ರವಾಗಿ ಎರಡು ಕಡೆ ಮಾತ್ರ ಬೋಧಿಸಲಾಗುವುದು. ಬೆಂಗಳೂರು ವಿವಿ ಮತ್ತು ದೆಹಲಿಯ ಜವಹರ್‌ ಲಾಲ್‌ ನೆಹರು ವಿವಿ. ಬೆಂಗಳೂರಿನಲ್ಲಿ ಪರಿಸರ ಕಾನೂನು ಪಠ್ಯವಾಗಿರುವುದು ಕರ್ನಾಟಕದ ಹೆಮ್ಮೆ. ಪರಿಸರ ಕಾನೂನು ಕಲಿಯಲು ಇಲ್ಲಿಗೆ ದೇಶವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪರಿಸರ ಕಾನೂನಿನಲ್ಲಿ ಸಂಶೋಧನೆ ನಡೆಸಿರುವ ಡಾ. ಸುಬ್ರಮಣ್ಯ ಮತ್ತು ಡಾ. ಲತಿಕಾ ನಾಥ್‌ (ಇಬ್ಬರೂ ದೆಹಲಿಯ ಜೆಎನ್‌ಯುವಿನಲ್ಲಿ ಕಲಿತವರು) ಎಂಬ ಇಬ್ಬರು ಹಿರಿಯ ಪ್ರಾಧ್ಯಾಪಕರು ಬೆಂಗಳೂರು ವಿವಿಯಲ್ಲಿದ್ದಾರೆ.
ಪರಿಸರ ಕಾನೂನು ಒಂದು ವಿಶಿಷ್ಟವಾದ ಪಠ್ಯವಿಷಯ. ಇದರಲ್ಲಿ ಕಲೆ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇವೆ. ಕಾನೂನು ಎಂದ ಮೇಲೆ ಅಲ್ಲಿ ಪ್ರಕರಣ ಅಧ್ಯಯನ ಇದ್ದೇ ಇರುತ್ತದೆ. ಇದು ನಿಜವಾಗಿಯೂ ಕುತೂಹಲಕರವಾಗಿರುತ್ತದೆ. ಸಂವಿಧಾನವನ್ನು ಪ್ರಾಥಮಿಕ ಶಿಕ್ಷಣಕ್ಕೆ ಅಳವಡಿಸಿರುವಂತೆ ಪರಿಸರ ಕಾನೂನನ್ನು ಅಳವಡಿಸಿದರೆ ಮಕ್ಕಳಿಗೆ ವಿಷಯದ ಮೇಲಿನ ಕುತೂಹಲ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ. ಪರಿಸರ ಕಾನೂನು ವಿಜ್ಞಾನ ಸಂಬಂಧೀ ವಿಷಯವಾದರೂ ಕಲಾ ವಿದ್ಯಾರ್ಥಿಗಳಿಗೂ ಕಲಿಯುವ ಅವಕಾಶವಿದೆ. ದುರದೃಷ್ಟವೆಂದರೆ ಪರಿಸರ ಕಾನೂನು ಅಧ್ಯಯನ ಕಾನೂನು ಪದವಿಗೆ ಮಾತ್ರ ಸೀಮಿತವಾಗಿದೆ.


ಬರಹ:
ಯೋಗೇಶ್‌ಮಾರೇನಹಳ್ಳಿ