
ಮಳೆ ಮಳೆ ಮಳೆ ಮಳೆ
ಆಕಾಶ ಹಸಿರುಗಟ್ಟಿದರೆ ಬೆಂಗಳೂರಿಗರ ಹೃದಯದಲ್ಲಿ ದುಗುಡಗಟ್ಟುತ್ತದೆ. ಇದೇನು ಮುಂಬೈ ನಗರದಲ್ಲಿ ಸುರಿಯುವಂಥ ಮಹಾಮಳೆಯೇನಲ್ಲ. ದೂರದ ದಿಲ್ಲಿಯಲ್ಲಿ ದಿನಗಟ್ಟಲೆ ಬೀಳುವ ಕುಂಭದ್ರೋಣ ಮಳೆಯೂ ಅಲ್ಲ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ವಾರಗಟ್ಟಲೆ ಬಿಡದೆ ಹೊಡೆಯುವ ವಿಪರೀತ ಮಳೆಯೂ ಅಲ್ಲ.....ಆದರೂ ಕೇವಲ ಒಂದು ಗಂಟೆ ಬೆಂಗಳೂರಿನಲ್ಲಿ ಮಳೆಯಾದರೆ ಇಡೀ ನಗರದ ಚಿತ್ರಣ ಬದಲಾಗುತ್ತದಲ್ಲ ಯಾಕೆ?
ಕಳೆದ ವಾರದ `ದಾಖಲೆ' ಮಳೆಗೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ. ಬುಧವಾರ ಮಧ್ಯರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತಗೊಂಡಿದೆ. ತಗ್ಗು ಪ್ರದೇಶದಲ್ಲಿ ವಾಸ ಮಾಡುವ ನಿವಾಸಿಗಳು ರಾತ್ರಿಯಿಡೀ ನಿದ್ದೆಮಾಡದೆ ನೀರನ್ನು ಹೊರದಬ್ಬಿದ್ದಾರೆ. ಒತ್ತುವರಿಯಿಂದ ಕಿರಿದಾದ ನಮ್ಮ ರಾಜಾ ಕಾಲುವೆ ಮಳೆ ನೀರನ್ನು ಕಾದುಕೊಳ್ಳಲು ಸೋತು ಹೋಗಿದೆ. ಅತ್ತ ಬಾಪೂಜಿ ನಗರದ ಮೋರಿ ಉಕ್ಕಿ ಹರಿದು ರಸ್ತೆಗೆಲ್ಲಾ ನೀರು ಕೊಟ್ಟಿದೆ. ಹಲವು ಮನೆಗಳು ಕುಸಿದು ಬಿದ್ದಿವೆ. ಅಪಾರ್ಟಮೆಂಟ್ಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ. ಮರಗಳು ಧರೆಗುರುಳಿವೆ...... ಮಳೆಯಿಂದಾದ ಪರಿಣಾಮಗಳು ಹೀಗೆಯೇ ಮುಂದುವರಿಯುತ್ತವೆ.
ಮಳೆಯ ಪರಿಣಾಮವನ್ನು ಅನುಭವಿಸದ ಯಾವ ಬಡಾವಣೆಯೂ ಇಲ್ಲ. ಅಷ್ಟಕ್ಕೂ ಮಳೆಯಾದ ಪ್ರಮಾಣ 66.೦೮ ಮಿಮಿಯಷ್ಟು. ಈ ಪ್ರಮಾಣ ಬೆಂಗಳೂರಿನಲ್ಲಿ `ದಾಖಲೆಯ ಮಳೆ' ಎನಿಸಿಕೊಂಡರೂ ಉತ್ತರದ ನಗರಗಳಿಗೆ ಹಾಗೂ ಮಲೆನಾಡು ಪ್ರದೇಶಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಕೊಡಗಿನಲ್ಲಿ ವಾರಗಟ್ಟಲೆ ಮಳೆ ಸುರಿದರೂ ಅಲ್ಲಿಗೆ ಯಾವ ದುಷ್ಪರಿಣಾಮ ಆಗದು. ಆದರೆ ಬೆಂಗಳೂರಿಗೆ ಮಾತ್ರ ಮಳೆ ದುಸ್ವಪ್ನವಾಗಿದೆ. ಸರಿಯಾಗಿ ಐದಾರು ಗಂಟೆ ಸತತವಾಗಿ ಮಳೆಯಾದರೆ ಬೆಂಗಳೂರಿನ ಗತಿ ಏನಾಗಬಹುದು? ಅದು ಊಹೆ ನಿಲುಕದು!
ಅವತ್ತಿನ ಸಣ್ಣ ಮಳೆಗೆ ಆ ಹುಡುಗ ವಿಜಯ್ ಕೊಚ್ಚಿ ಹೋದ. ಇನ್ನು ಮಲೆನಾಡಿನ ಮಳೆ ಇಲ್ಲಿ ಸುರಿದರೆ ದೇವರೇ ಗತಿ. ಬೆಂಗಳೂರಿನಲ್ಲಿರುವ ವ್ಯವಸ್ಥೆಯನ್ನು ನೋಡಿದರೆ ನಾಳೆ ವಿಧಾನ ಸೌಧದ ಮುಂದೆಯೇ ನೀರುಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಕಳೆದ ಗುರುವಾರವಂತೂ ಬಿಬಿಎಂಪಿಯ ದೂರುಕೇಂದ್ರಗಳು ದೂರುಗಳಿಂದ ತುಂಬಿ ಹೋಗಿದ್ದವು. ಸ್ವತಃ ಸಚಿವರೇ(ಆರ್.ಅಶೋಕ್) ದೂರು ಕೇಂದ್ರಗಳಿಗೆ ಬಂದಿದ್ದರು. ಬಿಬಿಎಂಪಿ ಆಯುಕ್ತರು ಜಲಾವೃತಗೊಂಡ ನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಆಗಿದ್ದೇನು?
ಮಳೆ ನಿರ್ವಹಣೆಗೆ ನಾವು ಸಜ್ಜಾಗಿಲ್ಲ: ಬೆಂಗಳೂರಿನಲ್ಲಿ ಯಾವುದೂ ಸರಿಯಾಗಿಲ್ಲ. ಅವೈಜ್ಞಾನಿಕ ವ್ಯವಸ್ಥೆಗಳು ಬೆಂಗಳೂರನ್ನು ಕಾಡುತ್ತಿವೆ. ಇಲ್ಲಿಯ ಒಳಚರಂಡಿ ವ್ಯವಸ್ಥೆ ಎರಡು ದಶಕಗಳ ಹಿಂದಿನ ಬೆಂಗಳೂರಿಗೆ ಸರಿಹೊಂದುತ್ತದೆ. ಇವತ್ತಿನ ೃಹತ್ ಬೆಂಗಳೂರಿಗೆ ಈ ಒಳಚರಂಡಿ ಆಟೋ ರಸ್ತೆಯಲ್ಲಿ ಲಾರಿ ನುಗ್ಗಿಸಿದಂತೆ! ೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಸಂಬಂಧಪಟ್ಟವರು ಮಳೆ ಬಗ್ಗೆ ಯೋಚಿಸುವುದೇ ಇಲ್ಲ. ಮೊನ್ನೆಯ ಮಳೆಯಲ್ಲಿ ಗೋಡನ್ಗಳು, ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ ಮಳೆ ನಿರ್ವಹಣೆಯಲ್ಲಿನ ನಮ್ಮ ಅಜ್ಞಾನ ಮನವರಿಕೆಯಾಗುತ್ತದೆ.
ಭೂಗಳ್ಳರ ಹಾವಳಿ: ಒಂದಿಂಚು ಜಾಗ ಸಿಕ್ಕಿದರೆ ಸಾಕು, ಬೆಳಕು ಹರಿಯುವಷ್ಟರಲ್ಲಿ ೃಹತ್ ಕಟ್ಟಡ ಬಂದು ನಿಂತಿರುತ್ತದೆ. ಚರಂಡಿ ಜಾಗ ಸಿಕ್ಕರೂ ಸರಿ, ಸ್ಮಶಾನ ಜಾಗವಾದರೂ ಸರಿ! ಭೂಗಳ್ಳರು ಅಂದರೆ ಯಾರೋ ಕಳ್ಳರಲ್ಲ. ಸಭ್ಯಸ್ಥರು ಎನಿಸಿಕೊಂಡವರೇ ಜಾಗವನ್ನು ಸರ್ಕಾರಿ ಜಾಗವನ್ನು ಇಂಚಿಂಚಿನಂತೆ ವಶಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಭೂ ಕದ್ದಮೇಲೆ ಮಳೆ ಬಗ್ಗೆ ಯೋಚಿಸುವುದೆಲ್ಲಿಂದ ಬಂತು!
ಸ್ಲಂ ಮಾತ್ರವಲ್ಲ: ಜಯನಗರದ ಮನೆಗಳೇ ಮಳೆಗೆ ತತ್ತರಿಸಿವೆ ಅಂದಮೇಲೆ ಎಲ್ಲೋ ತಗ್ಗಾದ ಜಾಗದಲ್ಲಿರುವ ಸ್ಲಂಗಳ ಪಾಡೇನು? ಮೋರಿಗಳ ಪಕ್ಕದಲ್ಲಿ, ರಸ್ತೆಗಳ ಇಕ್ಕೆಲಗಳಲ್ಲಿ ವಾಸಿಸುವ ಜನರಿಗೆ ಮಳೆಯಿಂದಾಗುವ ತೊಂದರೆಯನ್ನು ಕೇಳುವವರು ಯಾರು? ಇನ್ನು ಅದೆಷ್ಟು ಮಕ್ಕಳು ಕೊಚ್ಚಿ ಹೋಗುವುದನ್ನು ನೋಡಬೇಕೋ ಏನೋ!
ವೈಪರಿತ್ಯ ಹವಾಮಾನ: ಇದು ಮುಂಗಾರು ಮಳೆ ಮುಗಿಯುವ ಕಾಲ. ಅಕ್ಟೋಬರ್ 2ನೇ ದಿನದಿಂದ ಹಿಂಗಾರು ಮಳೆ ಆರಂಭವಾಗಲಿದೆ. ಕಡೆಯ ಹಂತದಲ್ಲಿ ಮುಂಗಾರು ಮಳೆ ತನ್ನ ಅಬ್ಬರವನ್ನು ತೋರುತ್ತಿದೆ. ಇದು ಅಕಾಲಿಕ ಮಳೆಯೂ ಹೌದು. ರೈತರಿಗೆ ಈ ಮಳೆಯಿಂದ ಅನುಕೂಲವೇನೂ ಇಲ್ಲ.
ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಬೀಸುವ ಮಾರುತಗಳು ಅಲ್ಲೇ ಗಿರಕಿ ಹೊಡೆಯುತ್ತಿರವುದೇ ಈ ಕುಂಭದ್ರೋಣ ಮಳೆಗೆ ಕಾರಣ ಎಂದು ಹಲವಾನ ವರದಿ ಹೇಳಿದೆ. ಇದು ಹೀಗೆಯೇ ಮುಂದುವರಿದರೆ ಮಳೆಯ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದರಲ್ಲಿ ನಮ್ಮ ಪಾಲಿಕೆ ಅಧಿಕಾರಿಗಳು ಮಹಾ ಜಾಣರು. ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಮಳೆಯಿಂದ ರಕ್ಷಿಸಲು ವೈಜ್ಞಾನಿಕವಾದ ಕಾರಣ ಕಂಡುಕೊಳ್ಳಬೇಕು. ಜನರೂ ಕೂಡ ಇದನ್ನು ಅರಿತುಕೊಳ್ಳಬೇಕು. ಎಲ್ಲದಕ್ಕೂ ಬಿಬಿಎಂಪಿ ಕಡೆಯೇ ಕೈ ತೋರಿದರೂ ಕಷ್ಟವೇ. ಒಂದು ಸಣ್ಣ ಮೋರಿ ಹೊಡೆದರೂ ಅದನ್ನು ರಿಪೇರಿ ಮಾಡಲು ವಾರಗಳೇ ಬೇಕು. ಇನ್ನು ಮನೆ ಮುಳುಗುತ್ತಿದೆ ಬನ್ನಿ ಎಂದರೆ ಇವರು ಬರುತ್ತಾರೆಯೇ!
1 ಕಾಮೆಂಟ್:
nice
ಕಾಮೆಂಟ್ ಪೋಸ್ಟ್ ಮಾಡಿ