
ಶನಿವಾರ, ಜೂನ್ 26, 2010
ಜೇನು ಗೋಳು!

ಭಾನುವಾರ, ಅಕ್ಟೋಬರ್ 4, 2009
ಮಳೆ ಮಳೆ ಮಳೆ ಮಳೆ

ಮಳೆ ಮಳೆ ಮಳೆ ಮಳೆ
ಆಕಾಶ ಹಸಿರುಗಟ್ಟಿದರೆ ಬೆಂಗಳೂರಿಗರ ಹೃದಯದಲ್ಲಿ ದುಗುಡಗಟ್ಟುತ್ತದೆ. ಇದೇನು ಮುಂಬೈ ನಗರದಲ್ಲಿ ಸುರಿಯುವಂಥ ಮಹಾಮಳೆಯೇನಲ್ಲ. ದೂರದ ದಿಲ್ಲಿಯಲ್ಲಿ ದಿನಗಟ್ಟಲೆ ಬೀಳುವ ಕುಂಭದ್ರೋಣ ಮಳೆಯೂ ಅಲ್ಲ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ವಾರಗಟ್ಟಲೆ ಬಿಡದೆ ಹೊಡೆಯುವ ವಿಪರೀತ ಮಳೆಯೂ ಅಲ್ಲ.....ಆದರೂ ಕೇವಲ ಒಂದು ಗಂಟೆ ಬೆಂಗಳೂರಿನಲ್ಲಿ ಮಳೆಯಾದರೆ ಇಡೀ ನಗರದ ಚಿತ್ರಣ ಬದಲಾಗುತ್ತದಲ್ಲ ಯಾಕೆ?
ಕಳೆದ ವಾರದ `ದಾಖಲೆ' ಮಳೆಗೆ ಇಡೀ ಬೆಂಗಳೂರು ಬೆಚ್ಚಿ ಬಿದ್ದಿದೆ. ಬುಧವಾರ ಮಧ್ಯರಾತ್ರಿ ಸುರಿದ ಮಳೆಗೆ ಅರ್ಧ ಬೆಂಗಳೂರು ಜಲಾವೃತಗೊಂಡಿದೆ. ತಗ್ಗು ಪ್ರದೇಶದಲ್ಲಿ ವಾಸ ಮಾಡುವ ನಿವಾಸಿಗಳು ರಾತ್ರಿಯಿಡೀ ನಿದ್ದೆಮಾಡದೆ ನೀರನ್ನು ಹೊರದಬ್ಬಿದ್ದಾರೆ. ಒತ್ತುವರಿಯಿಂದ ಕಿರಿದಾದ ನಮ್ಮ ರಾಜಾ ಕಾಲುವೆ ಮಳೆ ನೀರನ್ನು ಕಾದುಕೊಳ್ಳಲು ಸೋತು ಹೋಗಿದೆ. ಅತ್ತ ಬಾಪೂಜಿ ನಗರದ ಮೋರಿ ಉಕ್ಕಿ ಹರಿದು ರಸ್ತೆಗೆಲ್ಲಾ ನೀರು ಕೊಟ್ಟಿದೆ. ಹಲವು ಮನೆಗಳು ಕುಸಿದು ಬಿದ್ದಿವೆ. ಅಪಾರ್ಟಮೆಂಟ್ಗಳಿಗೆ ನೀರು ನುಗ್ಗಿದೆ. ವಾಹನಗಳು ನೀರಿನಲ್ಲಿ ಮುಳುಗಿವೆ. ಮರಗಳು ಧರೆಗುರುಳಿವೆ...... ಮಳೆಯಿಂದಾದ ಪರಿಣಾಮಗಳು ಹೀಗೆಯೇ ಮುಂದುವರಿಯುತ್ತವೆ.
ಮಳೆಯ ಪರಿಣಾಮವನ್ನು ಅನುಭವಿಸದ ಯಾವ ಬಡಾವಣೆಯೂ ಇಲ್ಲ. ಅಷ್ಟಕ್ಕೂ ಮಳೆಯಾದ ಪ್ರಮಾಣ 66.೦೮ ಮಿಮಿಯಷ್ಟು. ಈ ಪ್ರಮಾಣ ಬೆಂಗಳೂರಿನಲ್ಲಿ `ದಾಖಲೆಯ ಮಳೆ' ಎನಿಸಿಕೊಂಡರೂ ಉತ್ತರದ ನಗರಗಳಿಗೆ ಹಾಗೂ ಮಲೆನಾಡು ಪ್ರದೇಶಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ. ಕೊಡಗಿನಲ್ಲಿ ವಾರಗಟ್ಟಲೆ ಮಳೆ ಸುರಿದರೂ ಅಲ್ಲಿಗೆ ಯಾವ ದುಷ್ಪರಿಣಾಮ ಆಗದು. ಆದರೆ ಬೆಂಗಳೂರಿಗೆ ಮಾತ್ರ ಮಳೆ ದುಸ್ವಪ್ನವಾಗಿದೆ. ಸರಿಯಾಗಿ ಐದಾರು ಗಂಟೆ ಸತತವಾಗಿ ಮಳೆಯಾದರೆ ಬೆಂಗಳೂರಿನ ಗತಿ ಏನಾಗಬಹುದು? ಅದು ಊಹೆ ನಿಲುಕದು!
ಅವತ್ತಿನ ಸಣ್ಣ ಮಳೆಗೆ ಆ ಹುಡುಗ ವಿಜಯ್ ಕೊಚ್ಚಿ ಹೋದ. ಇನ್ನು ಮಲೆನಾಡಿನ ಮಳೆ ಇಲ್ಲಿ ಸುರಿದರೆ ದೇವರೇ ಗತಿ. ಬೆಂಗಳೂರಿನಲ್ಲಿರುವ ವ್ಯವಸ್ಥೆಯನ್ನು ನೋಡಿದರೆ ನಾಳೆ ವಿಧಾನ ಸೌಧದ ಮುಂದೆಯೇ ನೀರುಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಕಳೆದ ಗುರುವಾರವಂತೂ ಬಿಬಿಎಂಪಿಯ ದೂರುಕೇಂದ್ರಗಳು ದೂರುಗಳಿಂದ ತುಂಬಿ ಹೋಗಿದ್ದವು. ಸ್ವತಃ ಸಚಿವರೇ(ಆರ್.ಅಶೋಕ್) ದೂರು ಕೇಂದ್ರಗಳಿಗೆ ಬಂದಿದ್ದರು. ಬಿಬಿಎಂಪಿ ಆಯುಕ್ತರು ಜಲಾವೃತಗೊಂಡ ನಗರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಆಗಿದ್ದೇನು?
ಮಳೆ ನಿರ್ವಹಣೆಗೆ ನಾವು ಸಜ್ಜಾಗಿಲ್ಲ: ಬೆಂಗಳೂರಿನಲ್ಲಿ ಯಾವುದೂ ಸರಿಯಾಗಿಲ್ಲ. ಅವೈಜ್ಞಾನಿಕ ವ್ಯವಸ್ಥೆಗಳು ಬೆಂಗಳೂರನ್ನು ಕಾಡುತ್ತಿವೆ. ಇಲ್ಲಿಯ ಒಳಚರಂಡಿ ವ್ಯವಸ್ಥೆ ಎರಡು ದಶಕಗಳ ಹಿಂದಿನ ಬೆಂಗಳೂರಿಗೆ ಸರಿಹೊಂದುತ್ತದೆ. ಇವತ್ತಿನ ೃಹತ್ ಬೆಂಗಳೂರಿಗೆ ಈ ಒಳಚರಂಡಿ ಆಟೋ ರಸ್ತೆಯಲ್ಲಿ ಲಾರಿ ನುಗ್ಗಿಸಿದಂತೆ! ೃಹತ್ ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಸಂಬಂಧಪಟ್ಟವರು ಮಳೆ ಬಗ್ಗೆ ಯೋಚಿಸುವುದೇ ಇಲ್ಲ. ಮೊನ್ನೆಯ ಮಳೆಯಲ್ಲಿ ಗೋಡನ್ಗಳು, ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿರುವುದನ್ನು ನೋಡಿದರೆ ಮಳೆ ನಿರ್ವಹಣೆಯಲ್ಲಿನ ನಮ್ಮ ಅಜ್ಞಾನ ಮನವರಿಕೆಯಾಗುತ್ತದೆ.
ಭೂಗಳ್ಳರ ಹಾವಳಿ: ಒಂದಿಂಚು ಜಾಗ ಸಿಕ್ಕಿದರೆ ಸಾಕು, ಬೆಳಕು ಹರಿಯುವಷ್ಟರಲ್ಲಿ ೃಹತ್ ಕಟ್ಟಡ ಬಂದು ನಿಂತಿರುತ್ತದೆ. ಚರಂಡಿ ಜಾಗ ಸಿಕ್ಕರೂ ಸರಿ, ಸ್ಮಶಾನ ಜಾಗವಾದರೂ ಸರಿ! ಭೂಗಳ್ಳರು ಅಂದರೆ ಯಾರೋ ಕಳ್ಳರಲ್ಲ. ಸಭ್ಯಸ್ಥರು ಎನಿಸಿಕೊಂಡವರೇ ಜಾಗವನ್ನು ಸರ್ಕಾರಿ ಜಾಗವನ್ನು ಇಂಚಿಂಚಿನಂತೆ ವಶಮಾಡಿಕೊಂಡು ಮನೆ ಕಟ್ಟಿಕೊಂಡಿದ್ದಾರೆ. ಭೂ ಕದ್ದಮೇಲೆ ಮಳೆ ಬಗ್ಗೆ ಯೋಚಿಸುವುದೆಲ್ಲಿಂದ ಬಂತು!
ಸ್ಲಂ ಮಾತ್ರವಲ್ಲ: ಜಯನಗರದ ಮನೆಗಳೇ ಮಳೆಗೆ ತತ್ತರಿಸಿವೆ ಅಂದಮೇಲೆ ಎಲ್ಲೋ ತಗ್ಗಾದ ಜಾಗದಲ್ಲಿರುವ ಸ್ಲಂಗಳ ಪಾಡೇನು? ಮೋರಿಗಳ ಪಕ್ಕದಲ್ಲಿ, ರಸ್ತೆಗಳ ಇಕ್ಕೆಲಗಳಲ್ಲಿ ವಾಸಿಸುವ ಜನರಿಗೆ ಮಳೆಯಿಂದಾಗುವ ತೊಂದರೆಯನ್ನು ಕೇಳುವವರು ಯಾರು? ಇನ್ನು ಅದೆಷ್ಟು ಮಕ್ಕಳು ಕೊಚ್ಚಿ ಹೋಗುವುದನ್ನು ನೋಡಬೇಕೋ ಏನೋ!
ವೈಪರಿತ್ಯ ಹವಾಮಾನ: ಇದು ಮುಂಗಾರು ಮಳೆ ಮುಗಿಯುವ ಕಾಲ. ಅಕ್ಟೋಬರ್ 2ನೇ ದಿನದಿಂದ ಹಿಂಗಾರು ಮಳೆ ಆರಂಭವಾಗಲಿದೆ. ಕಡೆಯ ಹಂತದಲ್ಲಿ ಮುಂಗಾರು ಮಳೆ ತನ್ನ ಅಬ್ಬರವನ್ನು ತೋರುತ್ತಿದೆ. ಇದು ಅಕಾಲಿಕ ಮಳೆಯೂ ಹೌದು. ರೈತರಿಗೆ ಈ ಮಳೆಯಿಂದ ಅನುಕೂಲವೇನೂ ಇಲ್ಲ.
ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಬೀಸುವ ಮಾರುತಗಳು ಅಲ್ಲೇ ಗಿರಕಿ ಹೊಡೆಯುತ್ತಿರವುದೇ ಈ ಕುಂಭದ್ರೋಣ ಮಳೆಗೆ ಕಾರಣ ಎಂದು ಹಲವಾನ ವರದಿ ಹೇಳಿದೆ. ಇದು ಹೀಗೆಯೇ ಮುಂದುವರಿದರೆ ಮಳೆಯ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದರಲ್ಲಿ ನಮ್ಮ ಪಾಲಿಕೆ ಅಧಿಕಾರಿಗಳು ಮಹಾ ಜಾಣರು. ಮುಂದಿನ ದಿನಗಳಲ್ಲಿ ಬೆಂಗಳೂರನ್ನು ಮಳೆಯಿಂದ ರಕ್ಷಿಸಲು ವೈಜ್ಞಾನಿಕವಾದ ಕಾರಣ ಕಂಡುಕೊಳ್ಳಬೇಕು. ಜನರೂ ಕೂಡ ಇದನ್ನು ಅರಿತುಕೊಳ್ಳಬೇಕು. ಎಲ್ಲದಕ್ಕೂ ಬಿಬಿಎಂಪಿ ಕಡೆಯೇ ಕೈ ತೋರಿದರೂ ಕಷ್ಟವೇ. ಒಂದು ಸಣ್ಣ ಮೋರಿ ಹೊಡೆದರೂ ಅದನ್ನು ರಿಪೇರಿ ಮಾಡಲು ವಾರಗಳೇ ಬೇಕು. ಇನ್ನು ಮನೆ ಮುಳುಗುತ್ತಿದೆ ಬನ್ನಿ ಎಂದರೆ ಇವರು ಬರುತ್ತಾರೆಯೇ!
ಪರಿಸರ ನಿವೇಶನ ಅಧ್ಯಯನ

ಪರಿಸರ ನಿವೇಶನ ಅಧ್ಯಯನ
ಬೆಂಗಳೂರಿನಲ್ಲಿ ಒಂದು ನಿವೇಶನ ಕೊಳ್ಳಲು ಅವಶ್ಯಕವಾಗಿ ಪರಿಶೀಲಿಸಬೇಕಾದ ಅಂಶಗಳು ಯಾವುವು?
ಈ ಪ್ರಶ್ನೆಗೆ ಬರುವ ಉತ್ತರಗಳು ಅಪಾರ. ನಿವೇಶನ ಇರುವ ಏರಿಯಾ, ಅದರ ದಾಖಲಾತಿ ಕಾಗದ ಪತ್ರಗಳು, ಪಾವತಿ ಮಾಡಬೇಕಾದ ಕಂದಾಯ ವಿವರ, ಅಳತೆ, ದರ...ಇವಿಷ್ಟು ಅಗತ್ಯವಾಗಿ ಪರಿಶೀಲಿಸಲೇ ಬೇಕಾದ ಅಂಶಗಳು.
ಇವುಗಳ ಜೊತೆಗೆ ಇನ್ನುಮುಂದೆ ಇನ್ನೊಂದು ಅಂಶವನ್ನು ಪರಿಶೀಲಿಸಬೇಕಾಗುತ್ತದೆ. ಅದು `ನಿವೇಶನ ಪರಿಸರ ಅಧ್ಯಯನ'(ಎನ್ವಿರಾನ್ಮೆಂಟ್ ಸೈಟ್ ಅಸೆಸ್ಮೆಂಟ್). ಇಲ್ಲಿಯ ತನಕ ಪರಿಸರ ಪರಿಣಾಮ ಅಧ್ಯಯನ(ಎನ್ವಿರಾನ್ಮೆಂಟ್ ಇಂಪ್ಯಾಕ್ಟ್ ಅಸೆಸ್ಮೆಂಟ್(ಇಐಎ) ಮಾತ್ರ ಇತ್ತು. ಇದೇನಿದು ಪರಿಸರ ನಿವೇಶನ ಅಧ್ಯಯನ ಎಂದು ಆಶ್ಚರ್ಯವಾಗಬಹುದು. ಆದರೆ ಪರಿಸರ ಪರಿಣಾಮ ಅಧ್ಯಯನಕ್ಕೂ ಪರಿಸರ ನಿವೇಶನ ಅಧ್ಯಯನಕ್ಕೂ ಬಹಳ ವ್ಯತ್ಯಾಸವಿದೆ.
ಏನಿದು ನಿವೇಶನ ಅಧ್ಯಯನ: ಪರಿಸರ ನಿವೇಶನ ಅಧ್ಯಯನವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ `ನಿವೇಶನದ ವಾಸ ಯೋಗ್ಯತೆಯ ಪರಿಶೀಲನೆ' ಎನ್ನಬಹುದು. ನಿವೇಶನದ ವಾಸ ಯೋಗ್ಯತೆಯನ್ನು ಅಧ್ಯಯನ ಮಾಡುವುದು ಕಡ್ಡಾಯವಾದರೆ ಅದರಿಂದ ಬಹಳ ಉಪಯೋಗವಿದೆ. ಅದರಲ್ಲೂ ಕೈಗಾರಿಕಾ ನಿವೇಶನಗಳಲ್ಲಿ ಈ ಅಧ್ಯಯನ ಕೈಗೊಳ್ಳುವುದರಿಂದ ಒಳಿತು ಜಾಸ್ತಿ.
ರಾಜ್ಯದಲ್ಲಿ ಹಲವು ಕೈಗಾರಿಕೆಗಳು ಲಾಕೌಟ್ ಆಗಿವೆ. ಇದಕ್ಕೆ ಕಾರಣವೇನು ಗೊತ್ತೆ? ಮುಖ್ಯವಾಗಿ ನಿವೇಶನದಲ್ಲಿ ಅಂತರ್ಜಲ ಇಲ್ಲದಿರುವುದು.
ಕೇವಲ ಇದೊಂದು ಕಾರಣದಿಂದ ಇಡೀ ಕೈಗಾರಿಕೆಯನ್ನೇ ಮುಚ್ಚಿದ ಬಹಳಷ್ಟು ಉದಾಹರಣೆಗಳಿವೆ. ಆ ಕೈಗಾರಿಕಾ ಪ್ರದೇಶವನ್ನು ಕೊಳ್ಳುವುದಕ್ಕೆ ಮುಂಚೆ ನಿವೇಶನ ಪರಿಸರ ಅಧ್ಯಯನ ಕೈಗೊಂಡಿದ್ದರೆ ಈ ರೀತಿಯ ಲಾಕೌಟ್ ತಪ್ಪಿಸಬಹುದಾಗಿತ್ತು.
ಕೆಲವು ನಿವೇಶನಗಳನ್ನು ಮುಂಚೆ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಲಾಗುತ್ತಿರುತ್ತದೆ. ಅಂತಹ ನಿವೇಶನದಲ್ಲಿ ಮನೆ ಅಥವಾ ಕೈಗಾರಿಕೆ ನಿರ್ಮಾಣ ಮಾಡಿದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಮೆರಿಕಾದ ಚಿಕಾಗೋದಲ್ಲಿ ವಿಷಾನಿಲ ನಿರ್ವಹಣೆ ಮಾಡಿದ ನಿವೇಶನದ ಮೇಲೆ ಶಾಲೆ ನಿರ್ಮಾಣ ಮಾಡಿ ಹಲವು ಶಾಲಾ ಮಕ್ಕಳು ಮೃತಪಟ್ಟಿದ್ದನ್ನು ಇಲ್ಲಿ ಉಲೇಖ ಮಾಡಬಹುದು. ಈ ಪ್ರಕರಣದ ನಂತರ ಅಮೆರಿಕಾದಲ್ಲಿ ನಿವೇಶನ ಪರಿಸರ ಅಧ್ಯಯನ ಕಡ್ಡಾಯವಾಯಿತು.
ಅಲ್ಲದೆ ಕೆಲವು ನಿವೇಶನಗಳಲ್ಲಿ ೃಹತ್ ಬೆಂಕಿ ಅಪಘಾತ ಸಂಭವಿಸಿದ್ದರೆ ಆ ನಿವೇಶನ ಸುತ್ತ ಅಂತರ್ಜಲ ಬತ್ತಿ ಹೋಗುವ ಸಾಧ್ಯತೆ ಇರುತ್ತದೆ. ಅನಿಲ ಸೋರಿಕೆ ಹಾಗೂ ಸ್ಫೋಟ ಉಂಟಾಗಿರುವ ನಿವೇಶನಗಳಲ್ಲೂ ಅಪಾಯ ಇರುತ್ತದೆ. ಆದ್ದರಿಂದ ನಿವೇಶನ ಕೊಳ್ಳುವುದಕ್ಕೆ ಮುಂಚೆ ಅದರ ವಾಸ ಯೋಗ್ಯತೆಯನ್ನು ಪರಿಶೀಲಿಸಿದರೆ ಅನುಕೂಲ.
ಹಲವು ಪಾಶ್ಚಾತ್ಯ ದೇಶಗಳಲ್ಲಿ ಪರಿಸರ ನಿವೇಶನ ಅಧ್ಯಯನ ಕಡ್ಡಾಯ. ಭಾರತದಲ್ಲಿ ಕಡ್ಡಾಯವಲ್ಲದಿದ್ದರೂ ಈ ಪರಿಕಲ್ಪನೆಯನ್ನು ಇತ್ತೀಚೆಗೆ ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಭಾರತದಲ್ಲಿ ಪ್ರಥಮವಾಗಿ ಪರಿಸರ ನಿವೇಶನ ಅಧ್ಯಯನವನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಪರಿಸರ ತಜ್ಞರು ನಿವೇಶನ ಪರಿಸರ ಅಧ್ಯಯನ ಕಡ್ಡಾಯ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಧ್ಯಯನ ಮಾಡುವವರು ಯಾರು?: ಪರಿಸರ ನಿವೇಶನ ಅಧ್ಯಯನ ಇಲ್ಲಿ ಕಡ್ಡಾಯವಲ್ಲದ ಕಾರಣ ಪರಿಶೀಲನೆಗಾಗಿ ಸರ್ಕಾರದಿಂದ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಬೆಂಗಳೂರಿನಲ್ಲಿ ಖಾಸಗೀ ಕಂಪನಿಯೊಂದು ನಿವೇಶನ ಪರಿಸರ ಅಧ್ಯಯನ ಸೇವೆ ನೀಡುತ್ತದೆ.
ಮಡಿವಾಳ ಬಡಾವಣೆಯಲ್ಲಿರುವ `ಎನ್ಜೆನ್' ಕಂಪನಿಯು ಪರಿಸರ ನಿವೇಶನ ಅಧ್ಯಯನ ಸೇವೆ ನೀಡುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಹಲವು ಕೈಗಾರಿಕಾ ನಿವೇಶನಗಳಿಗೆ ಈ ಕಂಪನಿ ಪರಿಸರ ನಿವೇಶನ ಅಧ್ಯಯನ ಮಾಡಿಕೊಟ್ಟಿದೆ.
ಕೇವಲ ಲಾಕೌಟ್ ಆದ ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ವಾಸದ ಮನೆಗಳ ನಿವೇಶನ, ಅಪಾರ್ಟ್ಮೆಂಟ್ ನಿವೇಶನಗಳಲ್ಲೂ ಕೂಡ ಎನ್ಜೆನ್ ಅಧ್ಯಯನ ಕೈಗೊಳ್ಳುತ್ತದೆ. ಆ ಮೂಲದ ನಿವೇಶನದ ಉಪಯೋಗವನ್ನು ನಿರ್ಧರಿಸಿ ದರ ನಿರ್ಧಾರಕ್ಕೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೆ ಹಲವು ಕೈಗಾರಿಕೆ ನಿವೇಶನ ಅಧ್ಯಯನ ಮಾಡಿ ಮಾರಾಟ ದರ ನಿರ್ಧಾರಕ್ಕೆ ಅನುವು ಮಾಡಿಕೊಟ್ಟಿದೆ.
ಕೈಗಾರಿಕೋದ್ಯಮಿ ಎಸ್.ವಿ. ಗೌತಮ್ ರಾಜ್ ಪೀಣ್ಯದಲ್ಲಿ ಸ್ವತಃ ಕೈಗಾರಿಕೆಯೊಂದನ್ನು ಸ್ಥಾಪಿಸಿದ್ದಾರೆ. ಇವರು ಪರಿಸರ ನಿವೇಶನ ಅಧ್ಯಯನವನ್ನು ಬಲವಾಗಿ ನಂಬುತ್ತಾರೆ.
`ರಿಯಲ್ ಎಸ್ಟೇಟ್ ವೃತ್ತಿಮಾಡುವ ಮಧ್ಯವರ್ತಿಗಳಿಲ್ಲದೆ ಬೆಂಗಳೂರಿನಲ್ಲಿ ಇವತ್ತು ಒಂದಿಂಚೂ ಭೂಮಿ ಕೊಳ್ಳಲು ಸಾಧ್ಯವಿಲ್ಲ. ಯಾವುದೋ ಕಾಗದ ಪತ್ರ ತೋರಿಸಿ ಯಾಮಾರಿಸುವರೇ ಜಾಸ್ತಿ. ಇಂತಹ ಸ್ಥಿತಿಯಲ್ಲಿ ಕೈಗಾರಿಕಾ ನಿವೇಶನವನ್ನು ಅಧ್ಯಯನ ಮಾಡಿಸುವುದರಿಂದ ಆ ಪ್ರದೇಶ ಹಿಂದೆ ಏನಾಗಿತ್ತು. ಯಾವುದಕ್ಕೆ ಬಳಸಲಾಗುತಿತ್ತು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು' ಎನ್ನುತ್ತಾರೆ ಗೌತಮ್ರಾಜ್.
ನಿವೇಶನದ ಉಪಯೋಗ ಸಾಮರ್ಥ್ಯ: ಈ ಅಧ್ಯಯನ ಕೈಗೊಳ್ಳುವುದರಿಂದ ಬಹಳ ಉಪಯೋಗವಿದೆ. ಭೂಮಿಯ ಉಪಯುಕ್ತತೆ ಮತ್ತು ಅನುಪಯುಕ್ತತೆಯನ್ನು ಅಳೆಯಲು ಈ ಅಧ್ಯಯನ ಸಹಾಯಕವಾಗುತ್ತದೆ.
ಬೆಂಗಳೂರಿನಲ್ಲಿ ತ್ಯಾಜ್ಯ ವ್ಯರ್ಥ ನಿರ್ವಹಣೆಗೆ ನಿವೇಶನ ಹುಡುಕಾಟ ಯಾವಾಗಲು ನಡೆಯುತ್ತಲೇ ಇರುತ್ತದೆ. ನಗರದ ಹೊರ ವಲಯದಲ್ಲಿ ಮುಖ್ಯರಸ್ತೆಯಲ್ಲೇ ತಾಜ್ಯ ಸುರಿದಿರುವುದನ್ನು ಗಮನಿಸಬಹುದು. ಹೆಚ್ಚು ಉಪಯುಕ್ತವಾದ ನಿವೇಶನದಲ್ಲಿ ತ್ಯಾಜ್ಯ ಸುರಿಯುವ ಬದಲು ನಿವೇಶನದ ಪರಿಸರ ಅಧ್ಯಯನ ಮಾಡಿ ಹೆಚ್ಚು ಉಪಯುಕ್ತ ಭೂಮಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವುದನ್ನು ತಡೆಯಬಹುದು.
ಈ ಅಧ್ಯಯನದ ಇನ್ನೊಂದು ಉಪಯೋಗವೆಂದರೆ ಪರಿಸರ ರಕ್ಷಣೆ. ಪರಿಸರ ಹಿತವನ್ನೇ ಮುಖ್ಯವಾಗಿಟ್ಟುಕೊಂಡೇ ರೂಪಿಸಲಾಗಿರುವ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ(ಕಡೇಪಕ್ಷ) ಕಡ್ಡಾಯಗೊಳಿಸಿದರೆ ರಿಯಲ್ ಎಸ್ಟೇಟ್ ಹೆಸರಿನಲ್ಲಿ ನಡೆಯುತ್ತಿರುವ ಭೂಮಿಯ ಮೇಲಿನ ಹಲ್ಲೆಯನ್ನು ತಡೆಯಬಹುದು.
ಬುಧವಾರ, ಜೂನ್ 24, 2009
ಅಪರೂಪದ ಅತಿಥಿಗಳು!

ಇನ್ನು ಸ್ವಲ್ಪ ದಿನ ಬಿಟ್ಟು ಮೈಸೂರು ಮೃಗಾಲಯಕ್ಕೆ ಭೇಟಿ ಕೊಡಿ. ನಿಮಗೊಂದು ಅಚ್ಚರಿ ಕಾದಿದೆ. ನಿಮ್ಮನ್ನು ಸ್ವಾಗತಿಸಲು ಅಪರೂಪದ ಅತಿಥಿಗಳು ಬರಲಿದ್ದಾರೆ. ಆದರೆ ಅವರು ಎರೆಡು ಕಾಲಿನ ಮಾನವ ಪ್ರಾಣಿಯಲ್ಲ. ನಿಮಗೆ ಸ್ವಾಗತ ಕೋರಲಿರುವವರು ನಾಲ್ಕು ಕಾಲಿನ ಅಪರೂಪದ ವನ್ಯಜೀವಗಳು! ಜಗತ್ತಿನಲ್ಲೇ ವಿಶೇಷ ಎನಿಸಿಕೊಂಡಿರುವ ಕೆಲವು ಪ್ರಾಣಿ, ಪಕ್ಷಿಗಳು ಮೈಸೂರು ಮೃಗಾಲಯಕ್ಕೆ ಬರುತ್ತಿವೆ.
ಮೈಸೂರು ಮೃಗಾಲಯ ಐತಿಹಾಸಿಕ ಮಹತ್ವ ಪಡೆದುಕೊಂಡಿರುವ ಒಂದು ಪ್ರಾಣಿ ಸಂಗ್ರಹಾಲಯ. ವಿಶ್ವದ ಕೆಲವೇ ಕೆಲವು ಪ್ರಮುಖ ಪ್ರಾಣಿ ಸಂಗ್ರಹಾಲಯಗಳಲ್ಲಿ ಮೈಸೂರು ಮೃಗಾಲಯ ಕೂಡ ಒಂದು. ಆದರೆ ಇತ್ತೀಚಿನ ಆನೆಗಳಿಗೆ ವಿಷ ಪ್ರಾಷನ ಪ್ರಕರಣದ ಕಪ್ಪು ಚುಕ್ಕೆಯನ್ನು ಹೊರೆತು ಪಡಿಸಿದರೆ ಈ ಪ್ರಾಣಿ ಸಂಗ್ರಹಾಲಯವನ್ನು ಭಾರತದ ಹೆಮ್ಮೆ ಎನ್ನಬಹುದು.
ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು ಪ್ರಾಣಿ ವಿನಿಮಯ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದೆ. ಸಿಂಗಪೂರ್ ಪ್ರಾಣಿ ಸಂಗ್ರಹಾಲಯ ಮತ್ತು ಚೆಕ್ ಗಣರಾಜ್ಯದ ಜೀಲಿನ್ ಮುಗಾಲಯಗಳ ಜೊತೆ ಮೈಸೂರು ಮೃಗಾಲಯ ಕೆಲವು ಪ್ರಾಣಿ ಪಕ್ಷಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದೆ.
ಮೈಸೂರು ಮೃಗಾಲಯವು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಹಲವು ವರ್ಷಗಳ ಹಿಂದೆಯೇ ಪ್ರಾಣಿ ವಿನಿಮಯದ ಮನವಿ ಸಲ್ಲಿಸಿತ್ತು. ಕೇಂದ್ರ ಪ್ರಾಧಿಕಾರ ಪ್ರಾಣಿ ವಿನಿಮಕ್ಕೆ ಹಸಿರು ನಿಶಾನೆ ತೋರಿದ ನಂತರ ಕೇಂದ್ರ ಸಚಿವಾಲಯವು ಪ್ರಾಣಿ ವಿನಿಮಕ್ಕೆ ಒಪ್ಪಿಗೆ ನೀಡಿದೆ. ಇಷ್ಟರಲ್ಲೇ ಮೃಗಾಲಯಕ್ಕೆ ಅಪರೂಪದ ಪ್ರಾಣಿ, ಪಕ್ಷಿಗಳು ಬರುವುದು ಖಚಿತವಾಗಿದೆ.
ಮೈಸೂರು ಮೃಗಾಲಯ ಚೆಕ್ ಗಣರಾಜ್ಯದ ಜಿಲಿನ್ ಮೃಗಾಲಯದ ಜೊತೆ ವಿವಿಧ ಬಣ್ಣಗಳ ಮೆಕಾವ್ಗಿಳಿ, ಕಾಂಗರೂ ಜಾತಿಯ ವಲ್ಲಬೈ, ಕಾಪುಚಿನ್ ಕೋತಿ ಸೇರಿದಂತೆ ವಿವಿಧ ಅಪರೂಪದ ವನ್ಯಜೀವಗಳನ್ನು ವಿನಿಯಮ ಮಾಡಿಕೊಳ್ಳತ್ತಿದೆ. ಅದೇರೀತಿ ಒಂದು ಜೊತೆ ಕರಡಿಗಳಿಗೆ ಸಿಂಗಪೂರ್ ಮೃಗಾಯಲಯದಿಂದ ಅತೀ ಅಪರೂಪದ ಆಫ್ರಿಕನ್ ಕಾಡು ನರಿ ಹಾಗೂ ಕಾಡುಬೆಕ್ಕುಗಳನ್ನು ವಿನಿಯಮ ಮಾಡಿಕೊಳ್ಳಲಿದೆ.
ಈ ವನ್ಯಜೀವಿಗಳ ವಿನಿಮಯಕ್ಕೆ ವಿದೇಶಿ ವ್ಯಾಪಾರದ ಡೈರೆಕ್ಟರ್ ಜನರಲ್ ಅವರ ಅನುಮತಿ ಅವಶ್ಯವಾಗಿದ್ದು, ಶೀಘ್ರದಲ್ಲೇ ಅವರು ಅನುಮತಿ ನೀಡಲಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರ ತಿಳಿಸಿದೆ. ಹಾಗೂ ಈ ಪ್ರಾಣಿಗಳ ಆಮದು ಮತ್ತು ರಪ್ತು ತೆರಿಗೆ ವಿನಾಯಿತಿ ಪಡೆಯಲಿದೆ.
ಮೈಸೂರು ಮೃಗಾಲಯ ವಿದೇಶಿ ಪ್ರಾಣಿ ಸಂಗ್ರಹಾಲಯಗಳ ಜೊತೆ ಪ್ರಾಣಿ ಪಕ್ಷಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. 1996ರಲ್ಲಿ ಕೂಡ ಕೆಲವು ವನ್ಯಜೀವಿಗಳನ್ನು ವಿನಿಮಯ ಮಾಡಿಕೊಂಡಿತ್ತು. ಆದಾದ ನಂತರ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ವಿನಿಮಯ ಮಾಡಿಕೊಳ್ಳುತ್ತಿದೆ.
ವಿದೇಶದ ಹಲವು ಮೃಗಾಯಲಗಳು ತಮ್ಮ ಅಪರೂಪದ ವನ್ಯಜೀವಗಳನ್ನು ಮೈಸೂರು ಮೃಗಾಲಯಗಳಿಗೆ ನೀಡಲು ಮುಂದೆ ಬಂದಿವೆ. ಏಕೆಂದರೆ ಕೆಲವು ಅಪರೂಪದ ಪ್ರಾಣಿಗಳಿಗೆ ಬೇಕಾದ ವಾತಾವರಣವನ್ನು ಒದಗಿಸಲು ಕೆಲ ದೇಶಗಳು ವಿಫಲವಾಗಿವೆ. ಅಂತಹ ಪ್ರಾಣಿಗಳನ್ನು ಪಡೆಯಲು ಹಲವು ದಿನಗಳಿಂದಲೂ ಮೈಸೂರು ಮೃಗಾಲಯ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ಪ್ರಾಣಿ ವಿನಿಮಕ್ಕೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಹಾಗೂ ವಿನಿಮಯ ಏಜನ್ಸಿಗಳ ಮೂಲಕ ಮಾತ್ರ ವಿದೇಶಿ ವಸ್ತುಗಳನ್ನು ಪಡೆಯಬೇಕಾಗುತ್ತದೆ. ವಿದೇಶಿ ಪ್ರಾಣಿಗಳನ್ನು ಪಡೆಯುವುದು ಇನ್ನೂ ಕಷ್ಟವೇ. ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
ಐತಿಹಾಸಿಕ ನಗರಿಗೆ ಅಪರೂಪದ ಪ್ರಾಣಿ, ಪಕ್ಷಿಗಳ ಆಗಮನ ಆಗುತ್ತಿರುವುದರಿಂದ ನಗರದ ಆಕರ್ಷಣೆ ಇಮ್ಮಡಿಯಾಗಲಿದೆ. ಪ್ರಾಣಿಪ್ರಿಯರಿಗೆ ಇದು ಸಂತಸ ತರಲಿದೆ.
ಗುರುವಾರ, ಮೇ 21, 2009

ರಸ್ತೆ ಸಾರಿಗೆಯೇ ಎಲ್ಲಾ ಸಮಸ್ಯೆಯ ಮೂಲ
ಬೆಂಗಳೂರಿಗೆ ಅದಾವ ಗ್ರಹಣ ಹಿಡಿದಿದೆಯೋ ಗೊತ್ತಿಲ್ಲ! 1995ನೇ ಇಸವಿಯ ನಂತರ ಸಂಪೂರ್ಣವಾಗಿ ಬದಲಾಗಿ ಹೋಯಿತು. `ಉದ್ಯಾನನಗರಿ' ಎಂಬ ಹೆಸರು ಮಾಯವಾಗಿ `ಐಟಿ ರಾಜಧಾನಿ' ಎಂಬ ಬಿರುದು ಬಂತು. `ಚೆಡ್ಡಿ ಹೋಗಿ ಪ್ಯಾಂಟು ಬಂತು' ಎಂಬಂತೆ ಬೆಂಗಳೂರಿನಲ್ಲಿ ಹಸಿರು ಮಾಯವಾಗಿ ಮಹಡಿ ಮಹಲುಗಳು ತಲೆಯೆತ್ತಿದವು. ಕೆರೆಗಳಲ್ಲಿ ನೀರು ಬತ್ತಿದ್ದೇ ತಡ, ಮಳೆ ಬರುವಷ್ಟರಲ್ಲಿ ಅಲ್ಲೊಂದು ಐಟಿ ಕಂಪನಿ!
ಈ ಎಲ್ಲಾ ಬದಲಾವಣೆಗಳು ಬೆಂಗಳೂರಿನ ಜೀವನ ಶೈಲಿಯನ್ನು ಬದಲಾಯಿಸಿವೆ. ಪ್ರತಿನಿತ್ಯ ಪರಿಸರ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ನಗರದಾದ್ಯಂತ ಹಸಿರು ಮನೆ ಅನಿಲಗಳ ಹಾವಳಿ ಹೆಚ್ಚಾಗಿದೆ. ಜನರ ಆರೋಗ್ಯ ಇಕ್ಕಟ್ಟಿಗೆ ಸಿಲುಕಿದೆ. ಈ ಪರಿಣಾಮಕ್ಕೆ ಕಾರಣವಾದ ಅಂಶವನ್ನು ಅಧ್ಯಯನವೊಂದು ಸ್ಪಷ್ಟಪಡಿಸಿದೆ. ಅದರ ಪ್ರಕಾರ, ಬೆಂಗಳೂರಿನ ರಸ್ತೆ ಸಾರಿಗೆ ವಲಯದಲ್ಲಿ ಆಗುತ್ತಿರುವ ಕೊನೆಮೊದಲಿಲ್ಲದ ಬದಲಾವಣೆಯೇ ಪ್ರಮುಖ ಕಾರಣ ಎಂದು ಹೇಳಿದೆ. ಸಾರಿಗೆ ಬೆಳವಣಿಗೆಯಿಂದಾಗಿ ನಗರದ ಚಿತ್ರಣವೇ ಬದಲಾಗುತ್ತಿದೆ. ವಾಹನ ಗಳು ಹೆಚ್ಚುತ್ತಿವೆ. ರಸ್ತೆಗಳು ಅಗಲವಾಗುತ್ತಿವೆ. ಮರಗಳು ನೆಲಕ್ಕುರುಳುತ್ತಿವೆ. ಹಸಿರು ಇಲ್ಲವಾಗುತ್ತಿದೆ. ರಸ್ತೆ ಸಾರಿಗೆಯೇ ಎಲ್ಲಾ ಸಮಸ್ಯೆಯ ಮೂಲ ಎನ್ನಲಾಗಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಎನ್ಜನ್ ಗ್ಲೋಬಲ್ ಎಂಬ ಖಾಸಗೀ ಸಂಸ್ಥೆಯ ಸಹಯೋಗದೊಂದಿಗೆ `ರಸ್ತೆ ಸಾರಿಗೆ ವಲಯದಿಂದ ಹಸಿರು ಮನೆ ಅನಿಲ' ಎಂಬ ವಿಷಯ ಕುರಿತು ಇತ್ತೀಚಿಗೆ ಈ ಅಧ್ಯಯನ ನಡೆಸಿತು. ಈ ಅಧ್ಯಯನದ ಪ್ರಕಾರ, ನಗರದ ಹಸಿರು ವಾತಾವರಣ ಕಾಣೆಯಾಗಲು ವ್ಯಕ್ತಿಯ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಕಾರ್ಬನ್ ಡೈ ಆಕ್ಸೈಡ್, ಮೀಥೇನ್, ನೈಟ್ರೋಜನ್ ಗಳಂತಹ ವಿಷಕಾರಕ ಹಸಿರು ಮನೆ ಅನಿಲಗಳು ಹೆಚ್ಚಾಗಲು ರಸ್ತೆ ಸಾರಿಗೆಯಲ್ಲಿನ ಮಿತಿಮೀರಿದ ಬೆಳವಣಿಗೆಯೇ ಕಾರಣ ಎಂದು ಹೇಳಿದೆ.
ಹೆಚ್ಚುತ್ತಿರುವ ವಾಹನಗಳು
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಸ್ತಿ ಅಂತ ವಾಹನ ಬಳಕೆಯನ್ನು ಯಾರೂ ಕಮ್ಮಿ ಮಾಡಿಲ್ಲ. ವಾಹನ ದಟ್ಟಣೆ ಎಷ್ಟರ ಮಟ್ಟಿಗೆ ಇರುತ್ತದೆ ಅಂದರೆ ಮೈಸೂರು, ಹೊಸೂರು, ವಿಮಾನ ನಿಲ್ದಾಣ ರಸ್ತೆಗಳನ್ನು ನೋಡಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಯನದ ಅನ್ವಯ, ಎರಡು ದಶಕಗಳಲ್ಲಿ ವಾಹನಗಳ ಸಂಖ್ಯೆ ಎಷ್ಟಿತ್ತೋ ಈಗ ಅದರ ಮೂರು ಪಟ್ಟು ಹೆಚ್ಚಾಗಿದೆ!
ಆರ್ಟಿಓ ಮಾಹಿತಿಯಂತೆ 2007ನೇ ಇಸವಿಯಲ್ಲಿ 20,42,320 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. 4,20,397 ಕಾರುಗಳು ನೋಂದಣಿಯಾಗಿವೆ. 86,490 ಆಟೋ ರಿಕ್ಷಾಗಳು ನೋಂದಣಿಯಾಗಿವೆ. ಈಗ ಇದರ ಸಂಖ್ಯೆ ದ್ವಿಗುಣವಾಗಿದ್ದು, ಪ್ರತಿನಿತ್ಯ 1,500 ವಾಹನಗಳು ನೋಂದಣಿಗೊಳ್ಳುತ್ತಿವೆ. ಇಷ್ಟೊಂದು ವಾಹನಗಳು ನಮ್ಮ ರಸ್ತೆಗಳಲ್ಲಿ ಪ್ರತಿನಿತ್ಯ ಓಡಾಟ ನಡೆಸುತ್ತಿವೆ. ಅವು ಹೊರ ಸೂಸುವ ವಿಷಾನಿಲ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಸಿರು ಮನೆ ಅನಿಲಗಳ ಪ್ರಮಾಣ ಬೃಹದಾಕಾರವಾಗಿ ಹೆಚ್ಚಾಗುತ್ತಿರುವುದು ಪರಿಸರ ತಜ್ಞರಲ್ಲಿ ಆತಂಕ ಸೃಷ್ಟಿಸಿದೆ.
ಹಸಿರು ಮನೆ ಪರಿಣಾಮ ಒಂದು ಪಾಕೃತಿಕ ಪ್ರಕ್ರಿಯೆ. ಲಕ್ಷಾಂತರ ಜೀವಿಗಳ ಜೀವನಕ್ಕೆ ಹಸಿರು ಮನೆ ಪ್ರಕ್ರಿಯೆ ಅತಿಮುಖ್ಯ. ಆದರೆ ವ್ಯಕ್ತಿ ಪ್ರಾಕೃತಿಕ ಪ್ರಕ್ರಿಯೆಗೆ ಮಧ್ಯಪ್ರವೇಶ ಮಾಡಿದ್ದಾನೆ. ಈ ಕಾರಣದಿಂದಲೇ ಹಸಿರು ಮನೆ ಅನಿಲಗಳು ಮೀತಿಮೀರಿ ಹೆಚ್ಚುತ್ತಿವೆ ಎಂಬುದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ ಎಚ್.ಸಿ. ಶರತ್ ಚಂದ್ರ ಅವರ ಅಭಿಪ್ರಾಯ.
ಹಸಿರು ಮನೆ ಅನಿಲಗಳ ಹೆಚ್ಚಳಕ್ಕೆ ಮುಖ್ಯ ಕಾರಣ- ದಹನ ಇಂಧನಗಳ ಅಪಾರ ಬಳಕೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಎನ್ಜನ್ ಗ್ಲೋಬಲ್ ಸಂಸ್ಥೆ ತನ್ನ ಅಧ್ಯಯನದಲ್ಲಿ ಕೆಲ ಪೆಟ್ರೋಲ್ ಬಂಕ್ ಗಳನ್ನು ಆಯ್ಕೆ ಮಾಡಿಕೊಂಡು ಯಾವ ಇಂಧನ ವನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂಬುದನ್ನು ಪತ್ತೆ ಮಾಡಿದೆ. ಅದರ ಪ್ರಕಾರ, ಬೆಂಗಳೂರಿ ನಲ್ಲಿ ಡೀಸಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ. 2005- 06ನೇ ಸಾಲಿನಲ್ಲಿ ಬೆಂಗಳೂರಿಗೆ 500 ಟನ್ ಡೀಸಲ್ ಪೂರೈಸಲಾಗಿತ್ತು. ಆದರೆ ಈ ಡೀಸಲ್ ವಾಹನಗಳಿಗೆ ಸಾಕಾಗದೆ ಇನ್ನೂ ಹೆಚ್ಚು ಡೀಸಲ್ ಬೇಡಿಕೆಯನ್ನು ಪೂರೈಕೆ ಕಂಪನಿಗಳ ಮುಂದೆ ಇಡಲಾಗಿತ್ತು.
ಜನ ಕಾರು ಬಿಟ್ಟು ಬರುತ್ತಿಲ್ಲ
ಡೀಸೆಲ್ ಬಳಕೆ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಅಂಶ ಅಧ್ಯಯನದಿಂದ ಸ್ಪಷ್ಟವಾಗಿದೆ. ಬೆಂಗಳೂರಿನಲ್ಲಿ ಕಾರುಗಳ ಸಂಖ್ಯೆ ಮಿತಿಮೀರಿ ಏರುತ್ತಿದೆ. ಅಂದರೆ ದೇಶದ ಎಲ್ಲಾ ನಗರಗಳಿಗಿಂತ ಹೆಚ್ಚಿನ ಕಾರುಗಳು ಇಲ್ಲಿವೆ. ಐಟಿ ಮಂದಿ ಸಾರ್ವಜನಿಕ ವಾಹನ ಹತ್ತಲು ತಯಾರಿಲ್ಲ. ಅವರು ಸ್ವಂತ ವಾಹನಗಳನ್ನೇ ಬಳಸಲು ಇಷ್ಟಪಡುತ್ತಾರೆ. ಇದನ್ನೂ ಈ ಅಧ್ಯಯನದಿಂದ ಪತ್ತೆ ಮಾಡಲಾಗಿದೆ. ಐಷಾ ರಾಮಿ ಪ್ರಯಾಣಿಕರಿಗಾಗಿಯೇ ಬಿಎಂಟಿಸಿ ಹೈಟೆಕ್ ಬಸ್ಸುಗಳನ್ನು ರಸ್ತೆಗಿಳಿಸಿತು. ಆದರೆ ಆ ಬಸ್ಸುಗಳಿಗೆ ಜನರು ಬರದೇ ಖಾಲಿ ಹೊಡೆಯು ತ್ತಿವೆ. ಇನ್ನೇನು ಮೆಟ್ರೋ ಬರುತ್ತಿದೆ ಆಗಲಾ ದರೂ ಕಾರಿನ ಜನ ರೈಲು ಏರುವರೆ? ಮಾಲಿನ್ಯ ನಿಯಂತ್ರಣಕ್ಕೆ ತಮ್ಮ ಕೊಡುಗೆ ನೀಡುವರೆ?
ಹಸಿರು ಮನೆ ಪರಿಣಾಮ:
ಹಸಿರು ಮನೆ ಪರಿಣಾಮ ಒಂದು ನೈಸರ್ಗಿಕ ಪ್ರಕ್ರಿಯೆ. ಸೂರ್ಯನ ವಿಕಿರಣಗಳಿಗೆ ಭೂಮಿ ಮೇಲಿನ ವಾತಾವರಣ ನೀಡುವ ಪ್ರತಿಕ್ರಿಯೆ ಯಿಂದ ಈ ಪ್ರಕ್ರಿಯೆ ನಡೆಯುತ್ತದೆ. ಭೂ ಗ್ರಹದಲ್ಲಿ ಆರೋಗ್ಯಯುತ ವಾತಾವರಣ ನಿರ್ಮಾಣಗೊಳ್ಳಲು ಈ ನೈಸರ್ಗಿಕ ಪ್ರಕ್ರಿಯೆ ಮಹತ್ವವಾದದು. ಈ ಪರಿಣಾಮದಿಂದಲೇ ಭೂಮಿ ತಂಪಾಗುತ್ತದೆ ಅಥವಾ ಬಿಸಿಯಾಗು ತ್ತದೆ. ಆದರೆ ಇತ್ತೀಚೆಗೆ ಈ ಪ್ರಕ್ರಿಯೆ ನಕಾರಾತ್ಮಕ ವಾದ ಪರಿಣಾಮ ಬೀರುತ್ತಿದೆ.
ಆಧುನಿಕ ಮಾನವ ತನ್ನ ಚಟುವಟಿಕೆಗಳ ಮೂಲಕ ಭೂಮಿಯ ಮೇಲಿನ ವಾತಾವರಣ ವನ್ನು ಬದಲಿಸುವಂತಹ ಅನಿಲಗಳನ್ನು ನಿರ್ಮಾಣ ಮಾಡುತ್ತಿದ್ದಾನೆ. ಮೀತಿ ಮೀರಿದ ದಹನ ಇಂಧನಗಳ ಬಳಕೆ, ಹೆಚ್ಚು ಹೆಚ್ಚು ಕೈಗಾರಿಕೆಗಳ ಸ್ಥಾಪನೆ, ಕೃಷಿಯಲ್ಲಿ ರಾಸಾಯನಿಕಗಳ ಬಳಕೆ, ಜನ ಸಂಖ್ಯೆ ಹೆಚ್ಚಳ, ಅರಣ್ಯ ನಾಶ ಚಟುವಟಿಕೆ ಗಳಿಂದಾಗಿ ವಿಷಾಯುಕ್ತ ಅನಿಲಗಳು ಅವಶ್ಯಕತೆ ಯನ್ನು ಮೀರಿ ಹೆಚ್ಚುತ್ತಿವೆ. ಇವು ಹವಾಮಾನ ಬದಲಾವಣೆಗೆ ಕಾರಣವಾಗುತ್ತಿವೆ.
ಸೋಮವಾರ, ಮಾರ್ಚ್ 16, 2009
ಭವಿಷ್ಯದ ಬೆಳಕು
ಅರಮನೆಯಿಂದ ಗುಡಿಸಲಿನವರೆಗೆ ಸೂರ್ಯಶಕ್ತಿ!
ವಿದ್ಯುತ್ ಸಮಸ್ಯೆ ಇಂದು ನಿನ್ನೆಯದಲ್ಲ. ಹೆಚ್ಚುತ್ತಿರುವ ವಿದ್ಯುತ್ ಮೇಲಿನ ಅವಲಂಬನೆಯಿಂದಾಗಿ ವಿದ್ಯುತ್ತಿನ ಬೇಡಿಕೆಯೂ ಹೆಚ್ಚಾಗಿದೆ. ಶಕ್ತಿಯ ಮೂಲಗಳಿದ್ದರೆ ಮಾತ್ರ ವಿದ್ಯುತ್ ದೊರೆಯಲು ಸಾಧ್ಯ. ಆದರೆ ಪ್ರಕೃತಿ ಮೇಲೆ ನಡೆಯುತ್ತಿರುವ ತಡೆಯಿಲ್ಲದ ಹಲ್ಲೆಯಿಂದಾಗಿ ಶಕ್ತಿಯ ಮೂಲಗಳ ಉತ್ಪತ್ತಿ ಕ್ಷೀಣಿಸಿದೆ. ಪರ್ಯಾಯ ಇಂಧನ ಮೂಲಗಳ ಹುಡುಕಾಟ ಹಲವು ದಶಕಗಳಿಂದಲೂ ನಡೆಯುತ್ತಲೇ ಇದೆ. ವಿದೇಶಗಳಿಂದ ಖರೀದಿಯೂ ನಡೆಯುತ್ತಿದೆ. ಆದರೂ ನಮ್ಮ ದೇಶ ತನಗೆ ಬೇಕಾದ ವಿದ್ಯುತ್ ಬೇಡಿಕೆ ಈಡೇರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯುತ್ ಸಮಸ್ಯೆಯಿಂದ ನಮ್ಮ ರಾಜ್ಯವೂ ಹೊರತಾಗಿಲ್ಲ. ಹಳ್ಳಿಗಳ ಪಾಡು ಹಾಗಿರಲಿ, ಬೆಂಗಳೂರು ಮೈಸೂರಿನಂತಹ ನಗರಗಳಲ್ಲೂ ಈಗ ಪೂರ್ಣಾವಧಿ ವಿದ್ಯುತ್ ಇಲ್ಲ. ಪ್ರತಿನಿತ್ಯ ಲೋಡ್ಶೆಡ್ಡಿಂಗ್ ಸಾಮಾನ್ಯ. ಹಳ್ಳಿಗಳಲ್ಲಂತೂ ದಿನಕ್ಕೆ ಏಳು ಗಂಟೆ ವಿದ್ಯುತ್ ಸಿಕ್ಕರೆ ಅದೃಷ್ಟ ಎನ್ನುವಂತಾಗಿದೆ.
ಸದ್ಯದ ಸ್ಥಿತಿಯಲ್ಲಿ ವಿದ್ಯುತ್ ಸಮಸ್ಯೆ ಎದುರಿಸಲು ಸೌರಶಕ್ತಿ ಬಳಕೆಯೇ ಸರಿಯಾದ ಮಾರ್ಗ. ಭವಿಷ್ಯದ ಶಕ್ತಿ ಬೇಡಿಕೆಯನ್ನು ನೀಗಿಸಲು ಸೂರ್ಯಶಕ್ತಿ ವರದಾನವಾಗುತ್ತದೆ ಎಂಬುದನ್ನು ತಜ್ಞರು ಒಮ್ಮತದಿಂದ ಒಪ್ಪುತ್ತಾರೆ. ಪರಿಸರಕ್ಕೆ ಹಾನಿಯಿಲ್ಲದೆ ಅವಶ್ಯವಿರುವ ಇಂಧನವನ್ನು ಸೂರ್ಯಶಕ್ತಿ ಮಾತ್ರ ನೀಡಬಲ್ಲದು. ಭಾರತದಲ್ಲಿ ಸೂರ್ಯಶಕ್ತಿಯ ಬಳಕೆ ಕುರಿತಂತೆ ಹೆಚ್ಚು ಮನ್ನಣೆ ದೊರೆತಿದೆ. ಸೌರಶಕ್ತಿ ಬಳಕೆಗೆ ಸಂಬಂಧಪಟ್ಟಂತೆ ಭಾರತದಲ್ಲಿಯೇ ಹೆಚ್ಚು ಸಂಶೋಧನೆಗಳು ನಡೆದಿವೆ. ಕಳೆದ ಒಂದು ದಶಕದಲ್ಲಿ 13 ಲಕ್ಷ ಕುಟುಂಬಗಳು ಸೂರ್ಯಶಕ್ತಿಯ ಸಂಪರ್ಕ ಪಡೆದಿವೆ. ಭಾರತದ ಸೂರ್ಯಶಕ್ತಿ ಬಳಕೆಯ ಪ್ರಯತ್ನ ಕುರಿತು ಬೇರೆ ರಾಷ್ಟ್ರಗಳು ಆಸಕ್ತಿ ವ್ಯಕ್ತಪಡಿಸಿವೆ.
ಭಾರತದಲ್ಲಿ ಹೊಸ ಶಕ್ತಿಯ ಸಂಶೋಧನೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಸಚಿವಾಲಯವನ್ನೇ ರಚಿಸಲಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ 1996ರಲ್ಲಿ ಪೂರ್ಣ ಪ್ರಮಾಣದ ಇಂಧನ ಸಚಿವಾಲಯವಾಗಿ ಅಸ್ತಿತ್ವಕ್ಕೆ ಬಂತು. ಈ ಸಚಿವಾಲಯವು ಸೌರಶಕ್ತಿ ಸಂಶೋಧನೆ ಹಾಗೂ ಬಳಕೆಗೆ ಹೆಚ್ಚು ಗಮನ ನೀಡುತ್ತಿದ್ದು ಸೂರ್ಯಶಕ್ತಿಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶ್ರಮಿಸುತ್ತಿದೆ.
ಇಂಧನ ಸ್ವಾವಲಂಬನೆ: ಸ್ವಾವಲಂಬಿಯಾಗಿ ಪ್ರತಿವ್ಯಕ್ತಿ ತನ್ನ ಅವಶ್ಯಕತೆಗೆ ಬೇಕಾದ ಇಂಧನವನ್ನು ಹುಟ್ಟಿಸಿಕೊಳ್ಳಬಹುದಾದ ಒಂದೇ ಒಂದು ಇಂಧನವೆಂದರೆ ಸೌರಶಕ್ತಿ. ಒಂದು ದಿನದ ಸೂರ್ಯನ ಶಕ್ತಿ ಒಬ್ಬ ವ್ಯಕ್ತಿಯ ಪೂರ್ತಿ ಜೀವಿತಾವಧಿಗೆ ಬೇಕಾದ ಇಂಧನ ಅವಶ್ಯಕತೆಯನ್ನು ಪೂರೈಸಬಲ್ಲದು. ತಮಗೆ ಬೇಕಾದ ಸೂರ್ಯಶಕ್ತಿಯನ್ನು ಪ್ರತಿಯೊಬ್ಬ ವ್ಯಕ್ತಿ ಸ್ವತಂತ್ರವಾಗಿ ಪಡೆಯಬಹುದು. ಸೌರಶಕ್ತಿಯನ್ನು ಮೊದಲು ಶಾಖಕ್ಕಾಗಿ, ಬೆಳಕಿಗಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಸೋಲಾರ್ ಶಕ್ತಿ ಬಳಕೆಯ ಹಲವು ಉಪಕರಣಗಳು ಬಂದಿವೆ. ಸೋಲಾರ್ ಕುಕ್ಕರ್ನಿಂದ ಅಡುಗೆ ಮಾಡಬಹುದು, ಸೋಲಾರ್ ಐರನ್ ಬಾಕ್ಸ್ ಇದೆ. ಸೋಲಾರ್ ವಾಹನಗಳೂ ಬಂದಿವೆ.
ಸೋಲಾರ್ ತಂತ್ರಜ್ಞಾನ: ಸೋಲಾರ್ ತಂತ್ರಜ್ಞಾನ ಇಂದು ವಿಶ್ವಮನ್ನಣೆ ಪಡೆದುಕೊಳ್ಳುತ್ತಿದೆ. ಈ ತಂತ್ರಜ್ಞಾನದ ಒಂದು ವಿಶೇಷವೆಂದರೆ ಸೌರಶಕ್ತಿಯ ಸಂಪರ್ಕವನ್ನು ಯಾರೇ ತೆಗೆದುಕೊಂಡರೂ ಇಡೀ ತಂತ್ರಜ್ಞಾನ ಅವರದಾಗುತ್ತದೆ. ಅದೊಂದು ಉಪಕರಣ. ಯಾರು ಬೇಕಾದರೂ ಅದರ ಸಂಪರ್ಕ ತೆಗೆದುಕೊಳ್ಳಬಹುದು. ಬೇಕೆಂದಾಗ ಉಪಯೋಗಿಸಬಹುದು. ತಿಂಗಳ ಶುಲ್ಕ ಪಾವತಿಸುವ ತಲೆ ನೋವಿಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ಬೇಕಾಗಿಲ್ಲ. ಒಮ್ಮೆ ಅದನ್ನು ಮನೆಗೆ ಕೊಂಡು ತಂದರೆ ಆ ಇಡೀ ತಂತ್ರಜ್ಞಾನ ಅವರ ಸ್ವಂತವಾಗುತ್ತದೆ.
ಸೌರಶಕ್ತಿ ಶಾಶ್ವತವಾದುದು. ಸೌರತಂತ್ರಜ್ಞಾನ ಇರುವವರೆಗೂ ಅದರ ಉಪಯೋಗ ಪಡೆಯಬಹುದು. ಸೌರಶಕ್ತಿ ಶ್ರೀಮಂತರ ಸ್ವತ್ತಲ್ಲ. ಅರಮನೆಯಿಂದ ಗುಡಿಸಲಿನವರೆಗೆ ಯಾರು ಬೇಕಾದರೂ ಸೌರಶಕ್ತಿ ಸಂಪರ್ಕ ತೆಗೆದುಕೊಳ್ಳಬಹುದು. ಒಮ್ಮೆ ಒಂದಷ್ಟು ಬಂಡವಾಳ ಹಾಕಿದರೆ ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸೂರ್ಯನ ಕಿರಣ ಬೀಳುವ ಸೂಕ್ತವಾದ ಜಾಗ ನೋಡಿ ಉಪಕರಣವನ್ನು ಅಳವಡಿಸಿದರೆ ಮುಗಿಯಿತು. ನಮ್ಮ ಮನೆಯ ಮೇಲೆಯೇ ವಿದ್ಯುತ್ ಇರುತ್ತದೆ. ಕರೆಂಟ್ ಬರುವಿಕೆಗಾಗಿ ಕಾಯಬೇಕಾದ ಪರಿಸ್ಥಿತಿ ಇಲ್ಲ. ಬೇಕಾದಾಗ ಬೆಳಕು ಪಡೆಯಬಹುದು.
ನಿರ್ವಹಣೆ ಬಹಳ ಸರಳ: ಸೌರಶಕ್ತಿ ಪ್ರಕೃತಿದತ್ತವಾದುದು. ಅದರ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿಲ್ಲ. ಆದರೆ ಸೌರ ತಂತ್ರಜ್ಞಾನದ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ. ತಂತ್ರಜ್ಞಾನವನ್ನು ಮನೆಗೆ ಅಳವಡಿಸಿಕೊಂಡ ನಂತರ ಅದರ ಯಂತ್ರವನ್ನು ನಿರ್ವಹಿಸಬೇಕಾಗುತ್ತದೆ. ನಿರ್ವಹಣೆ ಕಷ್ಟವೇನಲ್ಲ. ತಂತ್ರಜ್ಞರೇ ಬೇಕೆಂದಿಲ್ಲ. ಮನೆಯ ಮಕ್ಕಳು, ಮಹಿಳೆಯರೂ ಕೂಡ ನಿರ್ವಹಿಸಬಹುದು. ಯಂತ್ರದಲ್ಲಿ ಒಂದು ಪ್ಯಾನೆಲ್ ಇರುತ್ತದೆ. ಅದನ್ನು ಬಹಳ ಸುಲಭವಾಗಿ ತೆಗೆಯಬಹುದು, ಮತ್ತೆ ಹಾಕಬಹುದು. ಒಂದು ಬ್ಯಾಟರಿ ಇರುತ್ತದೆ. ಅದನ್ನು ಮುಟ್ಟಿದರೆ ಶಾಕ್ ಹೊಡೆಯುವುದಿಲ್ಲ. ಯಾರೂ ಬೇಕಾದರೂ ಬಳಸಬಹುದು.
ಆರ್ಸಿಸಿ ಬಿಲ್ಡಿಂಗ್ಗಳಿಗೆ ಮಾತ್ರ ಸೌರಶಕ್ತಿ ಸಂಪರ್ಕ ಪಡೆಯಬಹುದೆಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಅದು ತಪ್ಪು. ಎಲ್ಲಾ ತರಹದ ಮನೆಗಳೂ ಸೌರಶಕ್ತಿ ಸಂಪರ್ಕ ಪಡೆಯಬಹುದು. ಹೆಂಚಿನ ಮನೆಗಳು ಹಾಗೂ ಹುಲ್ಲು ಹಾಸಿನ ಗುಡಿಸಲುಗಳೂ ಕೂಡ ಸೂರ್ಯಶಕ್ತಿ ಸಂಪರ್ಕ ಹೊಂದಬಹುದು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮನೆಯಿಂದ ಮನೆಗೆ ಅಂತರ ಜಾಸ್ತಿ ಇರುವುದರಿಂದ ಸೂರ್ಯ ಕಿರಣಗಳು ನೇರವಾಗಿ ಬೀಳುವುದರಿಂದ ಹಳ್ಳಿಗಳಲ್ಲಿ ಸೌರಶಕ್ತಿಯನ್ನು ಹೆಚ್ಚಾಗಿ ಪಡೆಯಬಹುದು.
ಸಮಯ ಪ್ರಜ್ಞೆ: ಸೌರಶಕ್ತಿಯಿಂದ ಒಂದು ಮಹತ್ವದ ಉಪಯೋಗವೆಂದರೆ ಸೌರಶಕ್ತಿ ಸಮಯ ಪ್ರಜ್ಞೆ ರೂಢಿಸಿಕೊಳ್ಳುವುದು. ಸೂರ್ಯಶಕ್ತಿಯನ್ನು ಒಂದು ನಿಗದಿತ ಅವಧಿಯ ಅಂತರದಲ್ಲಿ ಪಡೆದುಕೊಳ್ಳಬೇಕು. ಸಾಮಾನ್ಯವಾಗಿ ಮಧ್ಯಾಹ್ನ 12 ಗಂಟೆಯವರೆಗೂ ಸೂರ್ಯನ ಕಿರಣಗಳಲ್ಲಿ ಶಕ್ತಿಯ ಹರಿವು ಹೆಚ್ಚಾಗಿರುತ್ತದೆ. ಆ ಅವಧಿಯಲ್ಲಿಯೇ ಸೋಲಾರ್ ಶಕ್ತಿಯನ್ನು ಪಡೆಯಬೇಕು. ಇದರಿಂದಾಗಿ ಸಮಯ ಪ್ರಜ್ಞೆ ಮೂಡಲು ಸಹಾಯಕವಾಗುತ್ತದೆ.
ಪರಿಸರ ಮತ್ತು ಸೂರ್ಯಶಕ್ತಿ: ಸೌರಶಕ್ತಿಯನ್ನು ಮಿತಿ ಇಲ್ಲದಷ್ಟು ಪಡೆಯಬಹುದು. ಪರಿಸರ ಹಾನಿ ಇಲ್ಲದ ಒಂದೇ ಒಂದು ಇಂಧನ ಮೂಲವೆಂದರೆ ಸೌರಶಕ್ತಿ. ಇದು ಪರಿಸರ ಸ್ನೇಹಿ ಇಂಧನ. ಕಂಟಕಪ್ರಾಯವಾಗಿರುವ ಇಂಧನ ಮೂಲಗಳಿಂದ ಪರಿಸರವನ್ನು ರಕ್ಷಿಸಬೇಕಾದರೆ ಅತ್ಯಂತ ಜರೂರಾಗಿ ಸೌರಶಕ್ತಿ ಬಳಸಬೇಕಾಗಿದೆ.
ಹಲವು ದಶಕಗಳ ಹಿಂದೆಯೇ ಸೌರಶಕ್ತಿ ಬಳಕೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಆದರೆ ನಮ್ಮಲ್ಲಿ ಸೌರಶಕ್ತಿಯ ಬಗ್ಗೆ ಜನರಲ್ಲಿ ಅರಿವು ಬಹಳ ಕಡಿಮೆ. ಸರ್ಕಾರಗಳೂ ಕೂಡ ಜನರಲ್ಲಿ ಸೌರಶಕ್ತಿ ಕುರಿತು ಜಾಗೃತಿ ಮೂಡಿಸುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸದ್ಯಕ್ಕೆ ಅತ್ಯಂತ ಮಹತ್ವದ ಸೌರಶಕ್ತಿ ಅಭಿಯಾನ ನಡೆಯಬೇಕಿದೆ.
ಕೆಲವರು ಸೌರಶಕ್ತಿಯನ್ನು ಬಹಳ ಅನುಮಾನದ ದೃಷ್ಟಿಯಿಂದ ನೋಡುತ್ತಾರೆ. ಸಂಪರ್ಕ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ಬಿಸಿಲು ಬಂದಾಗ ಮಾತ್ರ ಅದರ ಉಪಯೋಗ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ ಸೂರ್ಯ ಅಸ್ತಿತ್ವದಲ್ಲಿ ಇರುವ ತನಕ ಅವನ ಕಿರಣಗಳು ನಮ್ಮ ಮೈ ಸೋಕುತ್ತದೆ ಎಂಬುದನ್ನು ಅವರು ಮರೆತಿದ್ದಾರೆ. ಬಿದ್ದ ಸೂರ್ಯಶಕ್ತಿಯನ್ನು ವ್ಯರ್ಥವಾಗಲು ಬಿಡದೆ ಅದನ್ನು ಹಿಡಿದಿಟ್ಟುಕೊಂಡರೆ ಅದನ್ನು ಬೇಕೆಂದಾಗ ಬಳಸಬಹುದಲ್ಲವೆ?
ಬುಧವಾರ, ಫೆಬ್ರವರಿ 11, 2009

ಪರಿಸರ ಕರತಾಡನ!
ಆ 24 ಗಂಟೆಗಳಲ್ಲಿ ಇಡೀ ದೇಶಾದ್ಯಂತ ಮ್ಯಾಜಿಕ್ ನಡೆದು ಹೋಯಿತು. ಸುದ್ದಿ ಪ್ರಸಾರಕ್ಕಾಗಿ ಸ್ಪರ್ಧೆಗಿಳಿಯುವ ಖಾಸಗೀ ಸುದ್ದಿವಾಹಿನಿಯೊಂದು ದೇಶದ ಆಗು ಹೋಗುಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟಿತ್ತು. 24 ಗಂಟೆಗಳ ಪರಿಸರ ಆಂದೋಲನವನ್ನು ಪ್ರಸಾರ ಮಾಡುವ ಮೂಲಕ `ದೇಶದಲ್ಲೇ ಪ್ರಥಮ' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಷ್ಟ್ರದ ಜನರು ಈ ಆಂದೋಲನಕ್ಕೆ ಒಕ್ಕೊರೊಲಿನಿಂದ ಸ್ಪಂದಿಸಿದರು. ಇದೊಂದು ಪರಿಸರ ಕರತಾಡನವೇ ಸರಿ!
ಅದು ಎನ್ಡಿ ಟಿವಿ ಸುದ್ದಿವಾಹಿನಿ. ಅದು ಗ್ರೀನಥಾನ್(ಹಸಿರು ಓಟ) ಕಾರ್ಯಕ್ರಮ. ಶನಿವಾರ (ಫೆ. 7) ಸಂಜೆ 7 ಗಂಟೆಯಿಂದ ಭಾನುವಾರ ಸಂಜೆ 7 ಗಂಟೆಯವರೆಗೆ ಎಲ್ಲಾ ಎನ್.ಡಿ. ಟಿವಿ ವಾಹಿನಿಗಳಲ್ಲಿ ನಡೆದ ಗ್ರೀನಥಾನ್ ಕಾರ್ಯಕ್ರಮ ದಾಖಲೆಗೆ ಯೋಗ್ಯವಾಯಿತು. ಸದಾ ಟೀಕೆ ಟಿಪ್ಪಣಿಗಳಿಗೆ ಒಳಗಾಗುವ ಟಿವಿ ಮಾಧ್ಯಮಗಳಿಗೆ ಈ ಘಟನೆ ಒಂದು ಮಾದರಿ. ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ವ್ಯಕ್ತಿಗಳು, ಪರಿಸರವಾದಿಗಳು, ಚಲನಚಿತ್ರ ಮಂದಿ ಎಲ್ಲರೂ ಇದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಇಡೀ ಬಾಲಿವುಡ್ ಎನ್.ಡಿ. ಟಿವಿಯ ಜತೆಗಿತ್ತು.
ನಗರಗಳು ಬೆಳೆಯುತ್ತಿವೆ. ಹಸಿರುಮಯ ವಾತಾವರಣ ಮಾಯವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮೇಲಿನ ಹಲ್ಲೆ ನಿತ್ಯ ನಿರಂತರವಾಗಿದೆ. ಸರ್ಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಪರಿಸರ ಕಾಳಜಿ ಇಲ್ಲದಾಗಿದೆ. ಮೆಟ್ರೋ ನಗರಗಳಲ್ಲಿ ಕೊಳಚೆ ಬಡಾವಣೆಗಳು ತಲೆ ಎತ್ತುತ್ತಿವೆ. ಕೊಳಚೆ ನಿವಾಸಿಗಳು ಪರಿಸರ ಏರುಪೇರುಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಮುಂಬೈ ನಗರದಲ್ಲಿ ಅತೀವೃಷ್ಟಿ ಸಂಭವಿಸಿದಾಗ ಕೊಳಚೆ ನಿವಾಸಿಗಳ ಜೀವನ ಇಕ್ಕಟ್ಟಿಗೆ ಸಿಲುಕುತ್ತದೆ. ಮಳೆ ಸುರಿಯುವಾಗ ನೋಡ ನೋಡುತ್ತಿದ್ದಂತೆ ಕೊಳಚೆ ನಿವಾಸಿಗಳು ಚೆರಂಡಿಯಲ್ಲಿ ಕೊಚ್ಚಿಹೋಗುವ ಘಟನೆಗಳು ಮುಂಬೈನಲ್ಲಿ ಲೆಕ್ಕವಿಲ್ಲ. ಬೆಂಗಳೂರೇನು ಕಡಿಮೆಯೆ? ಪಕೃತಿ ಮೇಲಿನ ಹಲ್ಲೆಯ ಪ್ರಥಮ ಕೀರ್ತಿ ಬೆಂಗಳೂರಿಗೇ ಸಲ್ಲಬೇಕು!
ಜಾಗೃತಿಗಾಗಿ ಗ್ರೀನಥಾನ್: `ನಾಳಿನ ಒಳಿತಿಗಾಗಿ ಜಾಗೃತಿ' ಎಂಬ ಉದ್ದೇಶದಿಂದ ಎನ್ಡಿ ಟಿವಿ ಗ್ರೀನಥಾನ್ ಕಾರ್ಯಕ್ರಮ ನಡೆಸಿತು. ರಾಷ್ಟ್ರದ ಜನರಲ್ಲಿ ಪರಿಸರ ಕಾಳಜಿ ಮೂಡಿಸಲು 24 ಗಂಟೆಗಳ ಕಾಲ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆದವು. ಸ್ವಚ್ಛ ಮುಂಬೈ (ಮುಂಬೈ ಕ್ಲಿನಥಾನ್)ಅಭಿಯಾನದಡಿಯಲ್ಲಿ ಕಲುಷಿತವಾಗಿರುವ 124 ಕಿಮೀ ಉದ್ದದ ಸಮುದ್ರ ತೀರದ ಸ್ಪಚ್ಛತೆಗಾಗಿ ಆಂದೋಲನ ನಡೆಯಿತು. ಇದರಲ್ಲಿ ಮುಂಬೈನ ಹಲವು ಎನ್ಜಿಗಳು ಕೈಜೋಡಿಸಿದ್ದವು.
`ಯಮುನಾ ರಕ್ಷಿಸಿ' ಅಭಿಯಾನದಡಿಯಲ್ಲಿ ಯಮುನಾ ನದಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಹಿಮಾಲಯದಲ್ಲಿ ಜನ್ಮಿಸುವ ಯಮುನಾ ನದಿ ರಾಷ್ಟ್ರದ ಅತೀ ಕಲುಷಿತ ನದಿಗಳಲ್ಲೊಂದು. ದೆಹಲಿ ನಗರಕ್ಕೆ ಶೇ. 70ರಷ್ಟು ಕುಡಿಯುವ ನೀರನ್ನು ಈ ನದಿಯಿಂದ ಬಳಸಲಾಗುತ್ತದೆ. ಕೆಟ್ಟಿರುವ ಯಮುನೆಯ ಉಳಿವಿಗಾಗಿ ಎನ್.ಡಿ. ಟಿವಿ ಟಯೋಟಾ ಕಂಪನಿಯ ನೆರವಿನೊಂದಿಗೆ `ಸೇವ್ ಯಮುನಾ' ಅಭಿಯಾನ ನಡೆಸಿತು.
ಎಲ್ಲವೂ ಬೆಳಕಿಗಾಗಿ: ಮುಸ್ಸಂಜೆ ಆಗುತ್ತಿದ್ದಂತೆ ಸಾವಿರಾರು ಜನರ ಮನೆ ಮನಗಳಲ್ಲಿ ಕಗ್ಗತ್ತಲು ಆವರಿಸಿಕೊಳ್ಳತ್ತದೆ. ದೇಶ ದೊಡ್ಡದಾಗಿದೆ. ಆಧುನೀಕತೆ ಎಲ್ಲೆಲ್ಲೂ ಇದೆ. ಆದರೂ ಬೆಳಕನ್ನೇ ಕಾಣದ ಅದೆಷ್ಟೋ ಕುಟುಂಬಗಳು ನಮ್ಮ ನಡುವೆ ಇವೆ. ವಿದ್ಯುತ್ತನ್ನೇ ಕಾಣದೆ ಸೀಮೆಎಣ್ಣೆ ದೀಪಗಳ ನಡುವೆ ಕಾಲ ಕಳೆಯುತ್ತಿರುವ ಬಿಲಿಯನ್ಗಟ್ಟಲೆ ಹಳ್ಳಿಗರ ಬದುಕಿನಲ್ಲಿ ಬೆಳಕು ಮೂಡಿಸುವ ಮುಖ್ಯ ಉದ್ದೇಶವನ್ನು ಗ್ರೀನಥಾನ್ ಹೊಂದಿತ್ತು ಎಂಬುದು ವಿಶೇಷ.
ಈ ಬೆಳಕಿನ ಯೋಜನೆಯನ್ನು ರೂಪಿಸಿದವರು ತೆರಿ(ಇಂದನ ಮೂಲ ಸಂಶೋಧನಾ ಸಂಸ್ಥೆ)ಯ ಅಧ್ಯಕ್ಷ ರಾಜೇಂದ್ರ ಪಚೌರಿ. ಗ್ಲೊಬಲ್ ವಾರ್ಮಿಂಗ್ನ ಅಪಾಯದ ವಿರುದ್ಧ ಹೋರಾಡುವಂತೆ ವಿಶ್ವಕ್ಕೆ ಕರೆ ಕೊಟ್ಟ ಪಚೌರಿ ನೊಬೆಲ್ ಪ್ರಶಸ್ತಿ ಪುರಸ್ಕೃತರು.
ಬೆಳಕಿಗಾಗಿ ನಿಧಿ: ತೆರಿಯ ಬೆಳಕಿನ ಯೋಜನೆಗಾಗಿ ನಿಧಿ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಎನ್ಡಿ ಟಿವಿ ಗ್ರೀನಥಾನ್ನ ಪ್ರಮುಖ ಅಂಗ. ವಿದ್ಯುತ್ ಸೌಲಭ್ಯ ಇಲ್ಲದ ಭಾರತದ ಹಳ್ಳಿಗಳಿಗೆ ಸೌರಶಕ್ತಿ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಪರಿಸರ ಕಾಳಜಿವುಳ್ಳವರಿಂದ ನಿಧಿ ಸಂಗ್ರಹ ಕಾರ್ಯಕ್ಕೆ ಎನ್ಡಿ ಟಿವಿ ಚಾಲನೆ ನೀಡಿತು. ಹಣ ಸಹಾಯ ಮಾಡುವವರು ತೆರಿ ಸಂಸ್ಥೆಗೆ ಡಿಡಿ ಕಳಿಸುವ ವ್ಯವಸ್ಥೆ ಮಾಡಿತ್ತು. ಎಸ್ಎಂಎಸ್ ಹಾಗೂ ಆನ್ಲೈನ್ ಮೂಲಕವೂ ಹಣ ಸಹಾಯ ಮಾಡುವ ವ್ಯವಸ್ಥೆ ಇತ್ತು. ಅದಕ್ಕಾಗಿ ಎನ್ಡಿ ಟಿವಿ ಕಾಲ್ಸೆಂಟರ್ವೊಂದನ್ನು ತೆರೆದಿತ್ತು.
24 ಗಂಟೆಗಳಲ್ಲಿ ಎನ್ಡಿ ಟಿವಿ ಬಹುಕೋಟಿ ಸಹಾಯ ಹಣ ಸಂಗ್ರಹಿಸಿತು. ಪರಿಸರ ಕಾಳಜಿಯುಳ್ಳ ಲಕ್ಷಾಂತರ ಮಂದಿ ತಮ್ಮ ಸಹಾಯ ಅಸ್ತವನ್ನು ಧಾರಾಳಾವಾಗಿ ಚಾಚಿದರು.
ಹಸಿರು ಗೀತೆ: ಗ್ರೀನಥಾನ್ ಕಾರ್ಯಕ್ರಮದ ಉದ್ದಕ್ಕೂ ಗ್ರೀನ್ ಅಂಥೆಮ್(ಹಸಿರುಗೀತೆ) ಮಹತ್ವ ಪಡೆದುಕೊಂಡಿತ್ತು. ಪರಿಸರ ಜಾಗೃತಿಗಾಗಿ ರಾಷ್ಟ್ರಗೀತೆಯಷ್ಟೇ ಮಹತ್ವವನ್ನು ಈ ಗೀತೆಗೆ ನೀಡಲಾಗಿತ್ತು.
ಬೆಂಗಳೂರಲ್ಲೂ ನಡೆಯಬೇಕಿದೆ ಹಸಿರು ನಡಿಗೆ: ಬೆಂಗಳೂರಿನಲ್ಲಿ ಪರಿಸರ ಸಮಸ್ಯೆಗಳು ಒಂದಾ ಎರಡಾ....ರಸ್ತೆ ಅಗಲೀಕರಣ, ಮರಗಳ ನೆಲಸಮ, ಟ್ರಾಫಿಕ್, ರಿಯಲ್ ಎಸ್ಟೇಟ್ ದಂಧೆ, ಕೆರೆ ಒತ್ತುವರಿ, ಚೆರಂಡಿ ಸಮಸ್ಯೆ, ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಮುಚ್ಚದ ಕೊಳವೆ ಬಾವಿಗಳು, ಅಗೆತ, ಧೂಳು.....ಪಟ್ಟಿ ಉದ್ದವಾಗಿ ಬೆಳೆಯುತ್ತದೆ!
ಬೆಂಗಳೂರಿನ ಪರಿಸರ ಸಮಸ್ಯೆ ನಿವಾರಣೆಗೆ ಎನ್ಡಿ ಟಿವಿ ಗ್ರೀನಥಾನ್ನಂತಹ ಪರಿಸರ ಆಂದೋಲನಗಳ ಅಗತ್ಯವಿದೆ. ರೋಗಿಗಳಿಗೆ ಈ ಊರು ನರಕಯಾತನೆಯಾಗಿದೆ. ಶ್ರೀಸಾಮಾನ್ಯನಿಗೆ ಬೆಂಗಳೂರು ಅಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಭೂಮಿ ದಂಧೆಯ ವಸ್ತುವಾಗಿ ರೌಡಿಸಂಗೆ ವೇದಿಕೆಯಾಗಿದೆ. ಇಷ್ಟೇ ಅಲ್ಲ, ಅಪರಾಧ ಪ್ರಮಾಣ ಏರುಗತಿಯಲ್ಲಿದೆ. ಪ್ರತಿನಿತ್ಯ ಕೊಲೆ ಸುಲಿಗೆಗಳು ಸಾಮಾನ್ಯವಾಗಿವೆ. ಹಿರಿಯರ ಮೇಲೆ ಕಿರುಕುಳ ಪ್ರಕರಣಗಳು ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಸಮಸ್ಯೆಗಳಿಂದ ಹೊರ ಬರಲು ಜನಜಾಗೃತಿ ಒಂದೇ ಪರಿಹಾರ.
ಬೆಂಗಳೂರಿನ ೃಹತ್ ಪಾಲಿಕೆ `ಮರ ಕಡಿದರೆ ರಸ್ತೆ ಅಭಿವೃದ್ಧಿ' ಎಂಬ ಮಂತ್ರವನ್ನು ಬಿಟ್ಟು ಸಸ್ಯಕಾಂತ್ರಿ ಕೈಗೊಳ್ಳುವ ಅಗತ್ಯತೆ ಇದೆ.
ತಿಮ್ಮಕ್ಕ ಸ್ಮೃತಿ: ಕರ್ನಾಟಕದಲ್ಲಿ ಪರಿಸರ ಕಾಳಜಿ ವಿಷಯ ಬಂದ ಕೂಡಲೆ ಸಾಲುಮರದ ತಿಮ್ಮಕ್ಕ ನೆನಪಾಗುತ್ತಾರೆ. ತಮ್ಮ ಮುಗ್ಧ ಪರಿಸರ ಕಾಳಜಿಯಿಂದಾಗಿ ವಿಶ್ವಪ್ರಸಿದ್ಧರಾದ ಮಹಾಮಾತೆ ಆಕೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯವರಾದ ಇವರು ನಡೆದಾಡುವ ವಿಶ್ವಕೋಶವಾಗಿದ್ದಾರೆ. ತಮ್ಮ ಸಾಲು ಮರ ಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಹಸಿರಿನ ಮಹತ್ವವನ್ನು ಸಾರಿದವರು. ಅವರು ಮಾತನಾಡಲಿಲ್ಲ. ಮಾಡಿ ತೋರಿಸಿದರು. ಮರ ನೆಡುತ್ತಾ ನೆಡುತ್ತಾ ಮನೆ ಮಾತಾದರು. ವಿದೇಶಿ ವಿವಿಗಳಲ್ಲಿ ತಿಮ್ಮಕ್ಕರ ಬಗ್ಗೆ ಸಂಶೋಧನೆ ಕೇಂದ್ರಗಳೇ ಇವೆ. ಈ ವಿಷಯ ತಿಮ್ಮಕ್ಕರಿಗೆ ಗೊತ್ತೊ ಗೊತ್ತಿಲ್ಲವೋ!
ಸುಂದರ ಲಾಲ್ ಬಹುಗುಣ ಕೂಡ ಪರಿಸರ ಜಾಗೃತಿಯ ಮಹತ್ವವನ್ನು ಹಲವು ದಶಕಗಳಿಂದ ಒತ್ತಿ ಹೇಳುತ್ತಾ ಬಂದಿದ್ದಾರೆ. ಅವರ ಅಪ್ಪಿಕೋ ಚಳವಳಿಗೆ ಕಳೆದ ವರ್ಷ 25 ವಸಂತ ತುಂಬಿತು. ಅವರ ಪರಿಸರ ಅಭಿಯಾನಗಳು ನಿರಂತರವಾಗಿ ಸಾಗಿವೆ. ಶಾಲಾ ಮಕ್ಕಳಲ್ಲಿ ಮೊದಲು ಪರಿಸರ ಕಾಳಜಿ ಮೂಡಿಸಬೇಕು ಎನ್ನುವ ಅವರ ನಿರ್ಧಾರಕ್ಕೆ ನಮ್ಮ ಸರ್ಕಾರಗಳು ದನಿಗೂಡಿಸಬೇಕಿದೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಸಲ ಮಾಡುವ ನೂರಾರು ಎನ್ಜಿಒಗಳಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿದೆ. ವನ್ಯಜೀವಿ ಘಟಕವಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿದೆ. ಇವರೆಲ್ಲರೂ ಕೈಜೋಡಿಸಿದರೆ ಬೆಂಗಳೂರಿನಲ್ಲಿ ಪರಿಸರ ಕಾಳಜಿ ನಿರ್ಮಿಸಬಲ್ಲ ಒಂದು ೃಹತ್ ಅಭಿಯಾನ ನಡೆಸಬಹುದು.