ಬುಧವಾರ, ಫೆಬ್ರವರಿ 11, 2009




ಪರಿಸರ ಕರತಾಡನ!

ಆ 24 ಗಂಟೆಗಳಲ್ಲಿ ಇಡೀ ದೇಶಾದ್ಯಂತ ಮ್ಯಾಜಿಕ್‌ ನಡೆದು ಹೋಯಿತು. ಸುದ್ದಿ ಪ್ರಸಾರಕ್ಕಾಗಿ ಸ್ಪರ್ಧೆಗಿಳಿಯುವ ಖಾಸಗೀ ಸುದ್ದಿವಾಹಿನಿಯೊಂದು ದೇಶದ ಆಗು ಹೋಗುಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟಿತ್ತು. 24 ಗಂಟೆಗಳ ಪರಿಸರ ಆಂದೋಲನವನ್ನು ಪ್ರಸಾರ ಮಾಡುವ ಮೂಲಕ `ದೇಶದಲ್ಲೇ ಪ್ರಥಮ' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ರಾಷ್ಟ್ರದ ಜನರು ಈ ಆಂದೋಲನಕ್ಕೆ ಒಕ್ಕೊರೊಲಿನಿಂದ ಸ್ಪಂದಿಸಿದರು. ಇದೊಂದು ಪರಿಸರ ಕರತಾಡನವೇ ಸರಿ!
ಅದು ಎನ್‌ಡಿ ಟಿವಿ ಸುದ್ದಿವಾಹಿನಿ. ಅದು ಗ್ರೀನಥಾನ್‌(ಹಸಿರು ಓಟ) ಕಾರ್ಯಕ್ರಮ. ಶನಿವಾರ (ಫೆ. 7) ಸಂಜೆ 7 ಗಂಟೆಯಿಂದ ಭಾನುವಾರ ಸಂಜೆ 7 ಗಂಟೆಯವರೆಗೆ ಎಲ್ಲಾ ಎನ್‌.ಡಿ. ಟಿವಿ ವಾಹಿನಿಗಳಲ್ಲಿ ನಡೆದ ಗ್ರೀನಥಾನ್‌ ಕಾರ್ಯಕ್ರಮ ದಾಖಲೆಗೆ ಯೋಗ್ಯವಾಯಿತು. ಸದಾ ಟೀಕೆ ಟಿಪ್ಪಣಿಗಳಿಗೆ ಒಳಗಾಗುವ ಟಿವಿ ಮಾಧ್ಯಮಗಳಿಗೆ ಈ ಘಟನೆ ಒಂದು ಮಾದರಿ. ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ವ್ಯಕ್ತಿಗಳು, ಪರಿಸರವಾದಿಗಳು, ಚಲನಚಿತ್ರ ಮಂದಿ ಎಲ್ಲರೂ ಇದಕ್ಕೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಇಡೀ ಬಾಲಿವುಡ್‌ ಎನ್‌.ಡಿ. ಟಿವಿಯ ಜತೆಗಿತ್ತು.
ನಗರಗಳು ಬೆಳೆಯುತ್ತಿವೆ. ಹಸಿರುಮಯ ವಾತಾವರಣ ಮಾಯವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ಮೇಲಿನ ಹಲ್ಲೆ ನಿತ್ಯ ನಿರಂತರವಾಗಿದೆ. ಸರ್ಕಾರಗಳ ಅಭಿವೃದ್ಧಿ ಯೋಜನೆಗಳಲ್ಲಿ ಪರಿಸರ ಕಾಳಜಿ ಇಲ್ಲದಾಗಿದೆ. ಮೆಟ್ರೋ ನಗರಗಳಲ್ಲಿ ಕೊಳಚೆ ಬಡಾವಣೆಗಳು ತಲೆ ಎತ್ತುತ್ತಿವೆ. ಕೊಳಚೆ ನಿವಾಸಿಗಳು ಪರಿಸರ ಏರುಪೇರುಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಮುಂಬೈ ನಗರದಲ್ಲಿ ಅತೀವೃಷ್ಟಿ ಸಂಭವಿಸಿದಾಗ ಕೊಳಚೆ ನಿವಾಸಿಗಳ ಜೀವನ ಇಕ್ಕಟ್ಟಿಗೆ ಸಿಲುಕುತ್ತದೆ. ಮಳೆ ಸುರಿಯುವಾಗ ನೋಡ ನೋಡುತ್ತಿದ್ದಂತೆ ಕೊಳಚೆ ನಿವಾಸಿಗಳು ಚೆರಂಡಿಯಲ್ಲಿ ಕೊಚ್ಚಿಹೋಗುವ ಘಟನೆಗಳು ಮುಂಬೈನಲ್ಲಿ ಲೆಕ್ಕವಿಲ್ಲ. ಬೆಂಗಳೂರೇನು ಕಡಿಮೆಯೆ? ಪಕೃತಿ ಮೇಲಿನ ಹಲ್ಲೆಯ ಪ್ರಥಮ ಕೀರ್ತಿ ಬೆಂಗಳೂರಿಗೇ ಸಲ್ಲಬೇಕು!
ಜಾಗೃತಿಗಾಗಿ ಗ್ರೀನಥಾನ್‌: `ನಾಳಿನ ಒಳಿತಿಗಾಗಿ ಜಾಗೃತಿ' ಎಂಬ ಉದ್ದೇಶದಿಂದ ಎನ್‌ಡಿ ಟಿವಿ ಗ್ರೀನಥಾನ್‌ ಕಾರ್ಯಕ್ರಮ ನಡೆಸಿತು. ರಾಷ್ಟ್ರದ ಜನರಲ್ಲಿ ಪರಿಸರ ಕಾಳಜಿ ಮೂಡಿಸಲು 24 ಗಂಟೆಗಳ ಕಾಲ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ಏಕಕಾಲದಲ್ಲಿ ಅಭಿಯಾನ ನಡೆದವು. ಸ್ವಚ್ಛ ಮುಂಬೈ (ಮುಂಬೈ ಕ್ಲಿನಥಾನ್‌)ಅಭಿಯಾನದಡಿಯಲ್ಲಿ ಕಲುಷಿತವಾಗಿರುವ 124 ಕಿಮೀ ಉದ್ದದ ಸಮುದ್ರ ತೀರದ ಸ್ಪಚ್ಛತೆಗಾಗಿ ಆಂದೋಲನ ನಡೆಯಿತು. ಇದರಲ್ಲಿ ಮುಂಬೈನ ಹಲವು ಎನ್‌ಜಿಗಳು ಕೈಜೋಡಿಸಿದ್ದವು.
`ಯಮುನಾ ರಕ್ಷಿಸಿ' ಅಭಿಯಾನದಡಿಯಲ್ಲಿ ಯಮುನಾ ನದಿ ರಕ್ಷಣಾ ಕಾರ್ಯ ಕೈಗೊಳ್ಳಲಾಯಿತು. ಹಿಮಾಲಯದಲ್ಲಿ ಜನ್ಮಿಸುವ ಯಮುನಾ ನದಿ ರಾಷ್ಟ್ರದ ಅತೀ ಕಲುಷಿತ ನದಿಗಳಲ್ಲೊಂದು. ದೆಹಲಿ ನಗರಕ್ಕೆ ಶೇ. 70ರಷ್ಟು ಕುಡಿಯುವ ನೀರನ್ನು ಈ ನದಿಯಿಂದ ಬಳಸಲಾಗುತ್ತದೆ. ಕೆಟ್ಟಿರುವ ಯಮುನೆಯ ಉಳಿವಿಗಾಗಿ ಎನ್‌.ಡಿ. ಟಿವಿ ಟಯೋಟಾ ಕಂಪನಿಯ ನೆರವಿನೊಂದಿಗೆ `ಸೇವ್‌ ಯಮುನಾ' ಅಭಿಯಾನ ನಡೆಸಿತು.
ಎಲ್ಲವೂ ಬೆಳಕಿಗಾಗಿ: ಮುಸ್ಸಂಜೆ ಆಗುತ್ತಿದ್ದಂತೆ ಸಾವಿರಾರು ಜನರ ಮನೆ ಮನಗಳಲ್ಲಿ ಕಗ್ಗತ್ತಲು ಆವರಿಸಿಕೊಳ್ಳತ್ತದೆ. ದೇಶ ದೊಡ್ಡದಾಗಿದೆ. ಆಧುನೀಕತೆ ಎಲ್ಲೆಲ್ಲೂ ಇದೆ. ಆದರೂ ಬೆಳಕನ್ನೇ ಕಾಣದ ಅದೆಷ್ಟೋ ಕುಟುಂಬಗಳು ನಮ್ಮ ನಡುವೆ ಇವೆ. ವಿದ್ಯುತ್ತನ್ನೇ ಕಾಣದೆ ಸೀಮೆಎಣ್ಣೆ ದೀಪಗಳ ನಡುವೆ ಕಾಲ ಕಳೆಯುತ್ತಿರುವ ಬಿಲಿಯನ್‌ಗಟ್ಟಲೆ ಹಳ್ಳಿಗರ ಬದುಕಿನಲ್ಲಿ ಬೆಳಕು ಮೂಡಿಸುವ ಮುಖ್ಯ ಉದ್ದೇಶವನ್ನು ಗ್ರೀನಥಾನ್‌ ಹೊಂದಿತ್ತು ಎಂಬುದು ವಿಶೇಷ.
ಈ ಬೆಳಕಿನ ಯೋಜನೆಯನ್ನು ರೂಪಿಸಿದವರು ತೆರಿ(ಇಂದನ ಮೂಲ ಸಂಶೋಧನಾ ಸಂಸ್ಥೆ)ಯ ಅಧ್ಯಕ್ಷ ರಾಜೇಂದ್ರ ಪಚೌರಿ. ಗ್ಲೊಬಲ್‌ ವಾರ್ಮಿಂಗ್‌ನ ಅಪಾಯದ ವಿರುದ್ಧ ಹೋರಾಡುವಂತೆ ವಿಶ್ವಕ್ಕೆ ಕರೆ ಕೊಟ್ಟ ಪಚೌರಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರು.
ಬೆಳಕಿಗಾಗಿ ನಿಧಿ: ತೆರಿಯ ಬೆಳಕಿನ ಯೋಜನೆಗಾಗಿ ನಿಧಿ ಮೂಲಕ ಹಣ ಸಂಗ್ರಹಿಸುವ ಅಭಿಯಾನ ಎನ್‌ಡಿ ಟಿವಿ ಗ್ರೀನಥಾನ್‌ನ ಪ್ರಮುಖ ಅಂಗ. ವಿದ್ಯುತ್‌ ಸೌಲಭ್ಯ ಇಲ್ಲದ ಭಾರತದ ಹಳ್ಳಿಗಳಿಗೆ ಸೌರಶಕ್ತಿ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಗೆ ಪರಿಸರ ಕಾಳಜಿವುಳ್ಳವರಿಂದ ನಿಧಿ ಸಂಗ್ರಹ ಕಾರ್ಯಕ್ಕೆ ಎನ್‌ಡಿ ಟಿವಿ ಚಾಲನೆ ನೀಡಿತು. ಹಣ ಸಹಾಯ ಮಾಡುವವರು ತೆರಿ ಸಂಸ್ಥೆಗೆ ಡಿಡಿ ಕಳಿಸುವ ವ್ಯವಸ್ಥೆ ಮಾಡಿತ್ತು. ಎಸ್‌ಎಂಎಸ್‌ ಹಾಗೂ ಆನ್‌ಲೈನ್‌ ಮೂಲಕವೂ ಹಣ ಸಹಾಯ ಮಾಡುವ ವ್ಯವಸ್ಥೆ ಇತ್ತು. ಅದಕ್ಕಾಗಿ ಎನ್‌ಡಿ ಟಿವಿ ಕಾಲ್‌ಸೆಂಟರ್‌ವೊಂದನ್ನು ತೆರೆದಿತ್ತು.
24 ಗಂಟೆಗಳಲ್ಲಿ ಎನ್‌ಡಿ ಟಿವಿ ಬಹುಕೋಟಿ ಸಹಾಯ ಹಣ ಸಂಗ್ರಹಿಸಿತು. ಪರಿಸರ ಕಾಳಜಿಯುಳ್ಳ ಲಕ್ಷಾಂತರ ಮಂದಿ ತಮ್ಮ ಸಹಾಯ ಅಸ್ತವನ್ನು ಧಾರಾಳಾವಾಗಿ ಚಾಚಿದರು.
ಹಸಿರು ಗೀತೆ: ಗ್ರೀನಥಾನ್‌ ಕಾರ್ಯಕ್ರಮದ ಉದ್ದಕ್ಕೂ ಗ್ರೀನ್‌ ಅಂಥೆಮ್‌(ಹಸಿರುಗೀತೆ) ಮಹತ್ವ ಪಡೆದುಕೊಂಡಿತ್ತು. ಪರಿಸರ ಜಾಗೃತಿಗಾಗಿ ರಾಷ್ಟ್ರಗೀತೆಯಷ್ಟೇ ಮಹತ್ವವನ್ನು ಈ ಗೀತೆಗೆ ನೀಡಲಾಗಿತ್ತು.
ಬೆಂಗಳೂರಲ್ಲೂ ನಡೆಯಬೇಕಿದೆ ಹಸಿರು ನಡಿಗೆ: ಬೆಂಗಳೂರಿನಲ್ಲಿ ಪರಿಸರ ಸಮಸ್ಯೆಗಳು ಒಂದಾ ಎರಡಾ....ರಸ್ತೆ ಅಗಲೀಕರಣ, ಮರಗಳ ನೆಲಸಮ, ಟ್ರಾಫಿಕ್‌, ರಿಯಲ್‌ ಎಸ್ಟೇಟ್‌ ದಂಧೆ, ಕೆರೆ ಒತ್ತುವರಿ, ಚೆರಂಡಿ ಸಮಸ್ಯೆ, ಅವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಮುಚ್ಚದ ಕೊಳವೆ ಬಾವಿಗಳು, ಅಗೆತ, ಧೂಳು.....ಪಟ್ಟಿ ಉದ್ದವಾಗಿ ಬೆಳೆಯುತ್ತದೆ!
ಬೆಂಗಳೂರಿನ ಪರಿಸರ ಸಮಸ್ಯೆ ನಿವಾರಣೆಗೆ ಎನ್‌ಡಿ ಟಿವಿ ಗ್ರೀನಥಾನ್‌ನಂತಹ ಪರಿಸರ ಆಂದೋಲನಗಳ ಅಗತ್ಯವಿದೆ. ರೋಗಿಗಳಿಗೆ ಈ ಊರು ನರಕಯಾತನೆಯಾಗಿದೆ. ಶ್ರೀಸಾಮಾನ್ಯನಿಗೆ ಬೆಂಗಳೂರು ಅಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಭೂಮಿ ದಂಧೆಯ ವಸ್ತುವಾಗಿ ರೌಡಿಸಂಗೆ ವೇದಿಕೆಯಾಗಿದೆ. ಇಷ್ಟೇ ಅಲ್ಲ, ಅಪರಾಧ ಪ್ರಮಾಣ ಏರುಗತಿಯಲ್ಲಿದೆ. ಪ್ರತಿನಿತ್ಯ ಕೊಲೆ ಸುಲಿಗೆಗಳು ಸಾಮಾನ್ಯವಾಗಿವೆ. ಹಿರಿಯರ ಮೇಲೆ ಕಿರುಕುಳ ಪ್ರಕರಣಗಳು ನಿರಾತಂಕವಾಗಿ ನಡೆಯುತ್ತಿವೆ. ಇಂತಹ ಸಮಸ್ಯೆಗಳಿಂದ ಹೊರ ಬರಲು ಜನಜಾಗೃತಿ ಒಂದೇ ಪರಿಹಾರ.
ಬೆಂಗಳೂರಿನ ೃಹತ್‌ ಪಾಲಿಕೆ `ಮರ ಕಡಿದರೆ ರಸ್ತೆ ಅಭಿವೃದ್ಧಿ' ಎಂಬ ಮಂತ್ರವನ್ನು ಬಿಟ್ಟು ಸಸ್ಯಕಾಂತ್ರಿ ಕೈಗೊಳ್ಳುವ ಅಗತ್ಯತೆ ಇದೆ.
ತಿಮ್ಮಕ್ಕ ಸ್ಮೃತಿ: ಕರ್ನಾಟಕದಲ್ಲಿ ಪರಿಸರ ಕಾಳಜಿ ವಿಷಯ ಬಂದ ಕೂಡಲೆ ಸಾಲುಮರದ ತಿಮ್ಮಕ್ಕ ನೆನಪಾಗುತ್ತಾರೆ. ತಮ್ಮ ಮುಗ್ಧ ಪರಿಸರ ಕಾಳಜಿಯಿಂದಾಗಿ ವಿಶ್ವಪ್ರಸಿದ್ಧರಾದ ಮಹಾಮಾತೆ ಆಕೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿಯವರಾದ ಇವರು ನಡೆದಾಡುವ ವಿಶ್ವಕೋಶವಾಗಿದ್ದಾರೆ. ತಮ್ಮ ಸಾಲು ಮರ ಕಲ್ಪನೆಯನ್ನು ಸಾಕಾರಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಹಸಿರಿನ ಮಹತ್ವವನ್ನು ಸಾರಿದವರು. ಅವರು ಮಾತನಾಡಲಿಲ್ಲ. ಮಾಡಿ ತೋರಿಸಿದರು. ಮರ ನೆಡುತ್ತಾ ನೆಡುತ್ತಾ ಮನೆ ಮಾತಾದರು. ವಿದೇಶಿ ವಿವಿಗಳಲ್ಲಿ ತಿಮ್ಮಕ್ಕರ ಬಗ್ಗೆ ಸಂಶೋಧನೆ ಕೇಂದ್ರಗಳೇ ಇವೆ. ಈ ವಿಷಯ ತಿಮ್ಮಕ್ಕರಿಗೆ ಗೊತ್ತೊ ಗೊತ್ತಿಲ್ಲವೋ!
ಸುಂದರ ಲಾಲ್‌ ಬಹುಗುಣ ಕೂಡ ಪರಿಸರ ಜಾಗೃತಿಯ ಮಹತ್ವವನ್ನು ಹಲವು ದಶಕಗಳಿಂದ ಒತ್ತಿ ಹೇಳುತ್ತಾ ಬಂದಿದ್ದಾರೆ. ಅವರ ಅಪ್ಪಿಕೋ ಚಳವಳಿಗೆ ಕಳೆದ ವರ್ಷ 25 ವಸಂತ ತುಂಬಿತು. ಅವರ ಪರಿಸರ ಅಭಿಯಾನಗಳು ನಿರಂತರವಾಗಿ ಸಾಗಿವೆ. ಶಾಲಾ ಮಕ್ಕಳಲ್ಲಿ ಮೊದಲು ಪರಿಸರ ಕಾಳಜಿ ಮೂಡಿಸಬೇಕು ಎನ್ನುವ ಅವರ ನಿರ್ಧಾರಕ್ಕೆ ನಮ್ಮ ಸರ್ಕಾರಗಳು ದನಿಗೂಡಿಸಬೇಕಿದೆ.
ಬೆಂಗಳೂರಿನಲ್ಲಿ ಪರಿಸರದ ಮೇಲೆ ಕೆಸಲ ಮಾಡುವ ನೂರಾರು ಎನ್‌ಜಿಒಗಳಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿದೆ. ವನ್ಯಜೀವಿ ಘಟಕವಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿದೆ. ಇವರೆಲ್ಲರೂ ಕೈಜೋಡಿಸಿದರೆ ಬೆಂಗಳೂರಿನಲ್ಲಿ ಪರಿಸರ ಕಾಳಜಿ ನಿರ್ಮಿಸಬಲ್ಲ ಒಂದು ೃಹತ್‌ ಅಭಿಯಾನ ನಡೆಸಬಹುದು.