ಸೋಮವಾರ, ಜನವರಿ 26, 2009


ಇಂಜಿನಿಯರ್ಸ್‌ ಕೈಗೆ ಕಸ!



ಇನ್ನುಮುಂದೆ ಎಂಜಿನಿಯರುಗಳು ಕಸಬರಗೆ ಹಿಡಿಯಲಿದ್ದಾರೆ! ಬೆಂಗಳೂರಿನಲ್ಲಿ ಈಗ ನಿತ್ಯ ಉತ್ಪತ್ತಿಯಾಗುವ ಅಷ್ಟೂ ಕಸ ವಿಲೇವಾರಿಗೆ ಇಂಜಿನಿಯರುಗಳು ಹೊಣೆ. ಬೆಳಗಾಯಿತೆಂದರೆ ನಿಮ್ಮ ಏರಿಯಾಗಳಲ್ಲಿ ಬೀಳುವ ತ್ಯಾಜ್ಯ ನಿರ್ವಹಣಗೆ ನೀವು ಇನ್ನು ಮುಂದೆ ಇಂಜಿನಿಯರ್‌ಗೆ ಕರೆ ಮಾಡಬೇಕು. ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ ಬರುತ್ತಿಲ್ಲ ಎಂದಾಗಲೂ ನೀವು ಇಂಜಿನಿಯರ್‌ಗೆ ದೂರು ಸಲ್ಲಿಸಬೇಕು. ಆದರೆ ಒಂದು ಎಚ್ಚರಿಕೆ: ನೀವು ಕರೆ ಮಾಡಬೇಕಿರುವುದು ಇನ್ಫೋಸಿಸ್‌, ವಿಪ್ರೋ.....ಐಟಿ ಕಂಪನಿಗಳ ಟೆಕ್ಕಿಗಳಿಗಲ್ಲ. ಕಡ್ಡಾಯವಾಗಿ ಬಿಬಿಎಂಪಿ ಎಂಜಿನಿಯರುಗಳಿಗೆ!
ಬಹಳಷ್ಟು ಮಂದಿಗೆ ಗೊತ್ತಿಲ್ಲದೆ ಇರಬಹುದು. ಇಷ್ಟು ದಿವಸ ಬೆಂಗಳೂರಿನಲ್ಲಿ ಪ್ರತಿನಿತ್ಯ ಬೀಳುವ 3000 ಟನ್‌ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದವರು ವೈದ್ಯಾಧಿಕಾರಿಗಳು(ಆರೋಗ್ಯ ಇಲಾಖೆ). ಸ್ಟೆಥಸ್ಕೋಪ್‌ ಹಿಡಿದು ಆರೋಗ್ಯದ ಅರಿವು ಮೂಡಿಸಬೇಕಾದ ವೈದ್ಯರಿಗೆ ಕಸಬರಿಗೆ ಕೊಟ್ಟಿತ್ತು ನಮ್ಮ ೃಹತ್‌ ಪಾಲಿಕೆ!
ಆರೋಗ್ಯ ಎಂಜಿನಿಯರಿಂಗ್‌ ವಿಭಾಗ: ಬಿಬಿಎಂಪಿ ಈಗ `ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್‌ ವಿಭಾಗ' ಎಂಬ ಹೊಸ ವಿಭಾಗವೊಂದನ್ನು ರಚಿಸಲು ನಿರ್ಧರಿಸಿದ್ದು, ತಾಜ್ಯ ವಿಲೇವಾರಿ ಕರ್ತವ್ಯವನ್ನು ಆರೋಗ್ಯ ಇಲಾಖೆಯ ಬದಲಾಗಿ ಈ ಹೊಸ ಇಂಜಿನಿಯರಿಂಗ್‌ ಇಲಾಖೆಗೆ ವಹಿಸಲಿದೆ.
ಇಷ್ಟರಲ್ಲೇ ವಿಭಾಗ ರಚನೆಯಾಗಲಿದ್ದು, ರಚನೆಯಾಗುವ ತನಕ ಆಯಾ ಬಿಬಿಎಂಪಿ ವಾರ್ಡಿನ ಎಂಜಿನಿಯರುಗಳು ತ್ಯಾಜ್ಯ ವಿಲೇವಾರಿ ಕಾರ್ಯ ನೋಡಿಕೊಳ್ಳಲಿದ್ದಾರೆ. ಜ. 1ರಿಂದ ಜಾರಿಯಾಗುವಂತೆ ಈಗಾಗಲೆ ವೈದ್ಯಾಧಿಕಾರಿಗಳ ಕಸ ವಿಲೇವಾರಿ ಜವಬ್ದಾರಿಯನ್ನು ನಗರಸಭೆ ವಾರ್ಡಿನ ಎಂಜಿನಿಯರುಗಳಿಗೆ ವಹಿಸಲಾಗಿದೆ.
ಪರಿಸರ ಎಂಜಿನಿಯರುಗಳ ಸಹಕಾರ: ಬಿಬಿಎಂಪಿಯಲ್ಲಿ ಒಟ್ಟು ಆರು ಮಂದಿ ಪರಿಸರ ಎಂಜಿನಿಯರುಗಳಿದ್ದಾರೆ. ಇವರ ಕೆಲಸ: ತಾಜ್ಯ ನಿರ್ವಹಣಗೆ ಸೂಕ್ತ ಜಾಗವನ್ನು ಗುರ್ತಿಸುವುದು, ವಿಲೇವಾರಿ ಸ್ಥಳದಲ್ಲಿ ಉಂಟಾಗುತ್ತಿರುವ ಪರಿಸರ ಹಾನಿ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವುದು ಹಾಗೂ ತ್ಯಾಜದ ಸಾಗಾಣಿಗೆ ಕಾರ್ಯವನ್ನು ನಿರ್ವಹಿಸುವುದು. ಇಷ್ಟೊಂದು ಕಾರ್ಯವನ್ನು ಕೇವಲ ಆರು ಮಂದಿ ಪರಿಸರ ಎಂಜಿನಿಯರುಗಳು ನಿರ್ವಹಿಸುತ್ತಿರುವುದು ದೊಡ್ಡ ತಮಾಷೆ!
ಆದರೆ ಈಗ ನೂತನವಾಗಿ ರಚನೆಯಾಗುತ್ತಿರುವ ವಿಭಾಗದಿಂದ ಇನ್ನಷ್ಟು ಎಂಜಿನಿಯರುಗಳು ಕಸ ನಿರ್ವಹಣೆಗೆ ನೆರವಾಗಲಿದ್ದಾರೆ. ಅಲ್ಲದೆ ನೂತನ ವಿಭಾಗಕ್ಕೆ ಪರಿಸರ ಎಂಜಿನಿಯರುಗಳು ತಾಂತ್ರಿಕ ನೆರವು ನೀಡಲಿದ್ದಾರೆ. ಇವರು ಎರಡು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಅನುಭವನ್ನು ನೂತನ ಎಂಜಿನಿಯರುಗಳೊಂದಿಗೆ ಹಂಚಿಕೊಳ್ಳಲಿದ್ದಾರೆ.
ಕಡೆಗೂ ಬಿಬಿಎಂಪಿಗೆ ಜ್ಞಾನೋದಯ: ಭಾರತದಲ್ಲಿರುವ ಮೆಟ್ರೋಪಾಲಿಟನ್‌ ನಗರಗಳಲ್ಲಿ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪ್ರಥಮ ಸ್ಥಾನದಲ್ಲಿದ್ದರೆ, ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಕಡೆಯ ಸ್ಥಾನದಲ್ಲಿದೆ. ಇದಕ್ಕೆ ಸಾಕ್ಷಿ ಎಂದರೆ ಕಸ ವಿಲೇವಾರಿ ಜವಬ್ದಾರಿಯನ್ನು ಆರೋಗ್ಯ ಇಲಾಖೆಯ ವೈದ್ಯಾದಿಕಾರಿಗಳ ಸುಪರ್ದಿಗೆ ನೀಡಿರುವುದು. ಬೇರೆ ನಗರಗಳಲ್ಲಿ ಹಾಗಿಲ್ಲ. ಅಲ್ಲಿ ಈಗಾಗಲೆ ಇಂಜಿನಿಯರ್‌ ವಿಭಾಗ ಕಾರ್ಯ ನಿರ್ವಹಿಸುತ್ತಿದೆ. ಈಗ ಬಿಬಿಎಂಪಿಯೂ ಕೂಡ ಈ ವಿಭಾಗ ರಚಿಸುತ್ತಿರುವುದನ್ನು ನೋಡಿದರೆ ಜ್ಞಾನೋದಯವಾದಂತೆ ಕಾಣುತ್ತದೆ.
ನಿಟ್ಟುಸಿರು ಬಿಟ್ಟ ವೈದ್ಯರು: ಬೆಂಗಳೂರು ಕಸ ನಿರ್ವಹಣೆಯಿಂದ ಬಿಬಿಎಂಪಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನಿವೃತ್ತಿ ಪಡೆದಿದ್ದಾರೆ. ಈಗ ತಮ್ಮ ಆರೋಗ್ಯ ಸೇವೆಯತ್ತ ತಮ್ಮ ಗಮನ ಹರಿಸಲಿದ್ದಾರೆ. ಬೀರೂವಿನಲ್ಲಿ ಧೂಳು ಹಿಡಿದಿರುವ ಸ್ಟೆಥಸ್ಕೊಪ್‌ಗೆ ಕೆಲಸ ನೀಡಲಿದ್ದಾರೆ. ಜಾರಿ ಆಗದೇ ಬಿದ್ದುಕೊಂಡಿರುವ ಅಸಂಖ್ಯಾತ ಯೋಜನೆಗಳತ್ತ ಗಮನ ಹರಿಸಲಿದ್ದಾರೆ.
ಕಸ ನಿರ್ವಹಣೆ ವೈದ್ಯಾಧಿಕಾರಿಗಳಿಗೆ ಬಹುದೊಡ್ಡ ತಲೆ ನೋವಾಗಿತ್ತು. ಬಹುಕಾಲದಿಂದ ಬಿಬಿಎಂಪಿಯ ಕ್ರಮವನ್ನು ವಿರೋಧಿಸುತ್ತಾ ಬಂದಿದ್ದರು. ಹಲವು ಭಾರಿ ಪ್ರತಿಭಟನೆಗಳನ್ನೂ ನಡೆಸಿದ್ದರು. ಆದರೆ ಪಾಲಿಕೆ ವೈದ್ಯರ ಆಗ್ರಹವನ್ನು ತೊಟ್ಟಿಯಲ್ಲಿ ಬಿಸಾಡಿತ್ತು. ವೈದ್ಯಾಧಿಕಾರಿಗಳು ಈಗ ನಿರಾಳ. ದೀರ್ಘ ಕಾಲದ ಹೋರಾಟಕ್ಕೆ ಸಿಕ್ಕ ಜಯ ಎಂದು ವೈದ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ತಾಜ್ಯ ನಿರ್ವಹಣೆ ೃಹತ್‌ ನಗರಗಳ ಮುಂದಿರುವ ಒಂದು ೃಹತ್‌ ಸವಾಲು. ಇದು ಅಂತಾರಾಷ್ಟ್ರೀಯ ವಿಷಯ ಕೂಡ. ತಾಜ್ಯ ನಿರ್ವಹಣೆ ಕುರಿತಂತೆ ದೇಶ ದೇಶಗಳ ನಡುವೆ ಒಪ್ಪಂದ ಒಡಂಬಡಿಕೆಗಳಿವೆ. ಭಾರತದಲ್ಲಿ ತಾಜ್ಯ ನಿರ್ವಹಣೆ ಕುರಿತಂತೆ ಹಲವು ಕಾನೂನುಗಳಿವೆ. ನೀತಿ ನಿಯಮಗಳಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಜ್ಯ ಸಾಗಣೆ ಕುರಿತಂತೆ 1989ರ ಬೆಸೆಲ್‌ ಮಾತುಕತೆ ಪ್ರಮುಖವಾದುದು.
ಇವುಗಳ ನಡುವೆ ಪ್ರಾದೇಶಿಕ ಮಟ್ಟದಲ್ಲಿ ತೆಗೆದುಕೊಳ್ಳುವ ಕ್ರಮಗಳು ತಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲವು. ಈ ನಿಟ್ಟಿನಲ್ಲಿ ತಾಜ್ಯ ನಿರ್ವಹಣೆಗೆ ಬಿಬಿಎಂಪಿ ತೆಗೆದುಕೊಂಡಿರುವ ಕ್ರಮ ಯಾವ ರೀತಿಯ ಫಲಿತಾಂಶ ತರಲಿದೆ ಎಂದು ಕಾದು ನೋಡಬೇಕಿದೆ.

ಬುಧವಾರ, ಜನವರಿ 7, 2009


ವರದಿಯ ಪರಿಣಾಮ






ಭಾನುವಾರ, ಜನವರಿ 4, 2009



ಮಾಯವಾದ ಐತಿಹಾಸಿಕ ಹಸಿರುಕೋಟೆ


ಅದು ಶೇಷಾದ್ರಿ ರಸ್ತೆ. ಮೆಜೆಸ್ಟಿಕ್‌ಗೆ ಬಹಳ ಹತ್ತಿರವಿದೆ. ಸಮೀಪದಲ್ಲೇ ವಿಧಾನ ಸೌಧ ಇದೆ. ಹೈಕೋರ್ಟ್‌ ಇದೆ. ಅಲ್ಲೇ ಮಹಾರಾಣಿ ಕಾಲೇಜಿದೆ. ಸರ್ಕಾರಿ ಪಾಲಿಟೆಕ್ನಿಕ್‌ ಇದೆ. ಅಲ್ಲಿ ಸದಾ ಗಿಜಿ ಗಿಜಿ ಎನ್ನುವ ವಿದ್ಯಾರ್ಥಿಗಳು. ಕೋರ್ಟಿಗೆ ಹೋಗುವ ನ್ಯಾಯವಾದಿಗಳು. ವಿಧಾನ ಸೌಧಕ್ಕೆ ಹೋಗುವ ರಾಜಕಾರಣಿಗಳು.... ಈ ಎಲ್ಲಾ ಕಾರಣಗಳಿಂದ ಅಲ್ಲಿ ಯಾವಾಗಲು ಭಾರಿ ಜನಸಂದಣಿ. ಆಲ್‌ವೇಸ್‌ ಟ್ರಾಫಿಕ್‌ ಜಾಮ್‌!
ರಸ್ತೆಯ ಇಕ್ಕೆಲಗಳಲ್ಲಿ ಮರಗಳ ಸಾಲು. ಮರದ ನೆರಳಲ್ಲಿ ಬಸ್‌ ಕಾಯುವ ವಿದ್ಯಾರ್ಥಿಗಳು, ನಾಗರಿಕರು. ಮರದ ಬುಡದಲ್ಲಿ ಕೂತು ಚಪ್ಪಲಿ ಹೊಲೆಯುವವರು. ಸೀಬೆಕಾಯಿ ಮಾರುವವರು...
ಶೇಷಾದ್ರಿ ಟ್ರಾಫಿಕ್‌ನೊಳಗೆ ನಿಂತಾಗ ಒಂದು ಅದೇನೋ ಒಂಥರಾ ನೆಮ್ಮದಿ. ಭದ್ರಕೋಟೆ ಭದ್ರತೆಯ ಅನುಭವ. ಕಡುಬಿಸಿಲು ಅಲ್ಲಿಗೆ ಬರಲು ಛಾನ್ಸೆ ಇರಲಿಲ್ಲ. ಕಾರಣ ಇಷ್ಟೆ: ಅಲ್ಲಿ ದಟ್ಟಣೆಯ ಮರಗಳ ಸಾಲಿದೆ. ರಸ್ತೆಯ ಎರಡೂ ಕಡೆ ಭಾರಿ ಗಾತ್ರದ ಮರಗಳು ರಸ್ತೆಯನ್ನು ಕೋಟೆಯಂತೆ ಕಾದಿವೆ.
*****
ಈಗ ಆ ನೆಮ್ಮದಿ ಮಂಗಮಾಯ. ಭದ್ರಕೋಟೆ ಬಿದ್ದುಹೋಗಿದೆ. ಶೇಷಾದ್ರಿ ರಸ್ತೆಯ ಚಿತ್ರಣ ಬದಲಾಗಿದೆ. ಅಲ್ಲಿ ಮರಗಳೂ ಇಲ್ಲ. ಮರದ ನೆರಳೂ ಇಲ್ಲ. ಬರೀ ಬೋಳು ಬೋಳು!
ಸದ್ಯ ಶೇಷಾದ್ರಿ ರಸ್ತೆಗೆ ಹೋಗಿ. ತಕ್ಷಣ ಕನ್‌ಪ್ಸೂಸ್‌ ಆಗುತ್ತೆ. ದಾರಿ ತಪ್ಪಿದೆನೆ? ಅನ್ನಿಸುತ್ತೆ. ೃಹತ್‌ ಪಾಲಿಕೆಯ ಬಾಯಿಗೆ ಶೇಷಾದ್ರಿ ರಸ್ತೆಯ `ಐತಿಹಾಸಿಕ ಹಸಿರು ಕೋಟೆ' ತುತ್ತಾಗಿದೆ. ಆದರೆ ಅದು ನಿತ್ಯ ನಡೆದಾಡುವ ಮಂದಿಗೆ ನುಂಗಲಾಗದ ತುತ್ತು!
******
ಇದು ಬರೀ ಶೇಷಾದ್ರಿ ರಸ್ತೆಯ ಕತೆಯಲ್ಲ. ನಗರದ 120 ರಸ್ತೆಗಳ ಕತೆ. ಕಳೆದ ಆರು ತಿಂಗಳಿಂದ ವಿವಿಧ ರಸ್ತೆಗಳು ತನ್ನ ಐತಿಹಾಸಿಕ ಪರಂಪರೆಯನ್ನು ಕಳೆದುಕೊಳ್ಳುತ್ತಿವೆ.
ಬಿಬಿಎಂಪಿ ತನ್ನ ಕಾರ್ಯಾಚರಣೆಯನ್ನು ಬಳ್ಳಾರಿ ರಸ್ತೆಯಿಂದ ಆರಂಭಿಸಿತು. ಅಲ್ಲಿಯ ನೂರಾರು ರಸ್ತೆಗಳು ನೆಲಕ್ಕುರುಳಿದವು. ಕೆಲ ಪರಿಸರ ವಾದಿಗಳು ವಿರೊಧ ವ್ಯಕ್ತಪಡಿಸಿದರು. `ಹಸಿರು ಉಸಿರು' ಎನ್ನುವ ಎನ್‌ಜಿಒವೊಂದು ಬಿಬಿಎಂಪಿಯ ಮರಕಡಿತ ಕಾರ್ಯಾಚರಣೆಯನ್ನು ವಿರೋಧಿಸಿ ಉಚ್ಛನ್ಯಾಯಾಲಯದ ಮುಂದೆ ರಿಟ್‌ ಅರ್ಜಿಯನ್ನೂ ಸಲ್ಲಿಸಿತು. ಆದರೆ ಆ ಕೇಸು ಬಿದ್ದು ಹೋಯಿತು.
ಆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಮತ್ತೆ ಆರಂಭವಾಯಿತು. ಕ್ವೀನ್ಸ್‌ ರಸ್ತೆಯ ಹತ್ತಾರು ಮರಗಳಿಗೆ ಕೊಡಲಿ ಹಾಕಲಾಯಿತು. ರೇಸ್‌ಕೋರ್ಸ್‌ ರೋಡಿನ ಮರ ಕಡಿದು ಆ ಜಾಗದಲ್ಲಿ ಸಿಮೆಂಟ್‌ ರೋಡು ಮಾಡಿದ್ದಾಯಿತು. ಮೈಸೂರು ರಸ್ತೆಯ ಬಿಎಚ್‌ಇಎಲ್‌ ಕಾರ್ಖಾನೆಯ ಸಮೀಪದ ಹಲವು ೃಹತ್‌ ಮರಗಳಿಗೆ ನೆಲ ತೋರಿಸಿದ್ದಾಯಿತು....
120 ರಸ್ತೆಗಳ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಇಡೀ ನಗರ ಬೋಳಾಗಲಿದೆ.
ಗೊತ್ತೇ ಆಗದ ವಿಷಯ: ಸರ್ಕಾರದ ಇಲಾಖೆಗಳು ತೆಗೆದುಕೊಳ್ಳುವ ಕೆಲವೊಂದು ವಿಚಾರಗಳು ಸಾರ್ವಜನಿಕವಾಗಿ ಗೊತ್ತೇ ಆಗುವುದಿಲ್ಲ. ಅದರ ಪರಿಣಾಮ ಮಾತ್ರ ಅರಿವಾಗುತ್ತದೆ. ಬಿಬಿಎಂಪಿ ತೆಗೆದುಕೊಂಡ ರಸ್ತೆ ಅಗಲೀಕರಣದ ವಿಷಯ ಸಾರ್ವಜನಿಕವಾಗಿ ತಿಳಿದಿದ್ದು ಮರಗಳು ನೆಲಕ್ಕೆ ಉರುಳಿದಾಗ. ಇದು ನಾಗರಿಕರಿಗೆ ಮಾಡುವ ಮೋಸವಲ್ಲದೆ ಮತ್ತಿನ್ನೇನು?
ಇಲಾಖೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಾಗ ಅದರ ಸಾಧಕ ಬಾದಕಗಳನ್ನು ಮೊದಲು ಸಾರ್ವಜನಿಕರ ಮುಂದಿಟ್ಟು ಸಾರ್ವಜನಿಕ ಅಭಿಪ್ರಾಯ ನಿರ್ಮಾಣ ಮಾಡಬೇಕು. ಆದರೆ ಈ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು, ಸ್ವಹಿತ ರಾಜಕಾರಣಿಗಳು, ಸಂಬಂಧಪಟ್ಟ ವಿಷಯ ಜ್ಞಾನವೇ ಇಲ್ಲದ ತಜ್ಞರು. ಜೊತೆಗೆ ಕಾಣದ ಕೈಗಳು! ಇವರು ಆಡಿದ್ದೇ ಮಾತು. ಅದೇ ನಿರ್ಧಾರ. ಅಭಿಪ್ರಾಯ. ಜನಾಭಿಪ್ರಾಯ.

ಶನಿವಾರ, ಜನವರಿ 3, 2009




ಎಂಜಿ ರೋಡಿನ ಒಂದು ಮ್ಯಾನ್‌ಹೋಲ್‌ ಕಥೆ!





ಎಂ.ಜಿ. ರಸ್ತೆಯಲ್ಲಿ ನಡೆದಾಡುವವರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಕಳೆದ 20 ದಿನಗಳಿಂದ ಶಂಕರ್‌ನಾಗ್‌ ಥಿಯೇಟರ್‌ ಎದುರಿನ ಮಿಲಿಟರಿ ಕಚೇರಿ ಬಳಿ ಒಳಚರಂಡಿ ಮ್ಯಾನ್‌ಹೋಲ್‌ ಒಡೆದು ತ್ಯಾಜ್ಯ ರಸ್ತೆಯಲ್ಲಿ ಹರಿಯುತ್ತಿದೆ. ಈವರೆಗೂ ಯಾರೂ ತಲೆಕೆಡಿಸಿಕೊಂಡಿಲ್ಲ. ಬೆಂಗಳೂರಿನ ಪ್ರತಿಷ್ಠಿತ ರಸ್ತೆಯಲ್ಲೇ ಈ ಸ್ಥಿತಿ ಇದೆ ಅಂತಾದರೆ ಇತರ ಬಡಾವಣೆಗಳ ಪಾಡೇನು?
ಮೊನ್ನೆ ಯಾರೋ ಸ್ಥಳೀಯರು ತ್ಯಾಜ್ಯ ಹರಿಯುತ್ತಿದ್ದ ಜಾಗಕ್ಕೆ ಫಿನಾಯಿಲ್‌ ಹಾಕಿ ಕೆಟ್ಟ ವಾಸನೆ ತಡೆಯಲು ಪ್ರಯತ್ನಿಸಿದ್ದರು. ಆದರೂ ವಾಸನೆ ನಿಂತಿಲ್ಲ. ಎಷ್ಟು ಕೆಟ್ಟ ವಾಸನೆ ಅಂದರೆ ಮನೆಗೆ ಹೋಗಿ ಅದನ್ನು ನೆನಸಿಕೊಂಡರೆ ಊಟ ಸೇರದಷ್ಟು!
ಮಿಲಿಟರಿ ಕಚೇರಿಯಿಂದ ರಸ್ತೆಯ ಎಡಭಾಗದಲ್ಲಿ ತ್ಯಾಜ್ಯದ ಹರಿವು ಪ್ರಾರಂಭವಾಗಿ ಮೆಯೋ ಹಾಲ್‌ ತಿರುವಿನಲ್ಲಿ ದಿಣ್ಣೆ ಇರುವುದರಿಂದ ಮುಂದೆ ಹರಿಯಲು ಸಾಧ್ಯವಾಗದೆ ಆ ಜಾಗದಲ್ಲಿ ನಿಂತಿದೆ. ಓಡಾಡುವವರು ಯಾತನೆ ಪಟ್ಟುಕೊಳ್ಳುವಷ್ಟು ಅಸಹ್ಯ ವಾಸನೆ ಸೃಷ್ಟಿಯಾಗಿದೆ. ಗ್ರಹಚಾರಕ್ಕೆ ಅಲ್ಲೇ ಟ್ರಾಫಿಕ್‌ ಸಿಗ್ನಲ್‌ ಕೂಡ ಇದೆ. ಮೂರು ನಿಮಿಷ ವಾಸನೆಯೊಳಗೆ ನಿಲ್ಲಬೇಕು. ಅಲ್ಲೇ ದಿನವಿಡೀ ನಿಲ್ಲುವ ಟ್ರಾಫಿಕ್‌ ಪೊಲೀಸ್‌ ಗತಿ ಏನಾಗಿರಬೇಕು ಊಹಿಸಿ.
ಈ ಕುರಿತು ಆತನನ್ನು ಸಾರ್ವಜನಿಕರು ಕೇಳಿದ್ದಕ್ಕೆ, `ಈ ದರಿದ್ರ ವಾಸನೆ ಕುಡಿದು ನನ್ನ ಮೂಗೇ ಹಾಳಾಗಿ ಹೋಗಿದೆ. 20 ದಿನ ಆಯ್ತು. ಮೂಗಿಗೆ ಕ್ಯಾಪ್‌ ಹಾಕಿಕೊಂಡು ಕೆಲಸ ಮಾಡುತ್ತಿದ್ದೇನೆ. ಹಾದು ಹೋಗುವ ಜನರೆಲ್ಲಾ ನನ್ನನ್ನ ಕೇಳ್ತಾರೆ. ಇದರ ಬಗ್ಗೆ ನನಗೇನು ಗೊತ್ತು. ನಾನೇನು ಕಾರ್ಪೊರೇಷನ್‌ನವನಾ' ಎಂದು ಉರಿದು ಬೀಳುತ್ತಾರೆ.
ಟ್ರಾಫಿಕ್‌ನಲ್ಲಿ ನಿಂತವರೆಲ್ಲಾ ಒಂದೊಂದು ಮಾತು. ಪಕ್ಕದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೆಟ್ರೋದಂತಹ ೃಹತ್‌ ಕಾಮಗಾರಿಯ ಮುಂದೆ ಮ್ಯಾನ್‌ಹೋಲ್‌ನಂತಹ ಪುಟ್ಟ ಕಾಮಗಾರಿ ಸಂಬಂಧಪಟ್ಟವರ ಕಣ್ಣಿಗೆ ಕಾಣಿಸುತ್ತಿಲ್ಲವೇನೋ!
ಇಲಾಖೆಯ ಸಹವಾಸವೇ ಅಲ್ಲ:


ನಗರದ ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್‌ ಅವರನ್ನು ಈ ಕುರಿತು ಸಂಪರ್ಕಿಸಿದಾಗ, `ಈವರೆಗೂ ಕಂಪ್ಲೇಂಟ್‌ ಬಂದಿಲ್ಲ. ನಿಮ್ಮ ಕರೆಯನ್ನೇ ದೂರು ಅಂತ ಪರಿಗಣಿಸಿ ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತೇನೆ' ಎಂಬ ಭರವಸೆ ಕೊಟ್ಟು ಜಾರಿಕೊಂಡರು. ಮೆಟ್ರೋ ಕಾಮಗಾರಿಯಿಂದಾಗಿ ಕ್ರಮ ತೆಗೆದುಕೊಳ್ಳಲು ತಡವಾಗುತ್ತಿದೆಯೇ ಎಂದು ಕೇಳಿದ್ದಕ್ಕೆ, ಮೆಟ್ರೋಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಯಾರೂ ದೂರು ಸಲ್ಲಿಸದೇ ಇರುವುದರಿಂದ ಕ್ರಮ ಕೈಗೊಂಡಿಲ್ಲ ಎಂಬುದು ಅವರ ಸಿದ್ಧ ಉತ್ತರ.
ಈ ಅಧಿಕಾರಿಗಳಿಗೆ ಎಂಜಿ ರಸ್ತೆಯ ಈ ಭಾಗ ಯಾವ ಸೇವಾಠಾಣೆಯ ವ್ಯಾಪ್ತಿಗೆ ಬರುತ್ತೆ ಅನ್ನೋದೇ ಗೊತ್ತಿಲ್ಲ. ಅಲ್ಲಿಗೆ ಫೋನ್‌ ಮಾಡಿ, ಇಲ್ಲಿಗೆ ಫೋನ್‌ ಮಾಡಿ ಎನ್ನುತ್ತಾ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ.
ನಗರದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯ 110 ಸೇವಾಠಾಣೆಗಳಿವೆ. ವಿವಿಧ ಬಡಾವಣೆಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಜವಾಬ್ದಾರಿ ನೀಡಲಾಗಿದೆ. ಜೊತೆಗೆ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯೂ ಇದೆ. ಯಾರು ಬೇಕಾದರೂ ಕರೆ ಮಾಡಿ ದೂರು ಸಲ್ಲಿಸಬಹುದು. (Intraviros Response System 155313)
ಎಂ.ಜಿ. ರಸ್ತೆಯಲ್ಲಿ ಮ್ಯಾನ್‌ ಹೋಲ್‌ ಒಡೆದ ಘಟನೆಯ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ. ಇಲ್ಲಿಯವರೆಗೂ ಯಾವ ದೂರು ದಾಖಲಾಗಿಲ್ಲ ಅಥವಾ ಸಲ್ಲಿಸಿದ ದೂರನ್ನು ನಿರ್ಲಕ್ಷಿಸಿರಬಹುದು.
ನಗರದ ಹೃದಯ ಭಾಗದ ಗತಿಯೇ ಹೀಗಾದರೆ ಬೇರೆ ಹೊರ ವಲಯಗಳ ಪಾಡೇನು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಒಟ್ಟಿನಲ್ಲಿ ವಾಸನೆ ಕುಡಿಯುವುದು ಜನರ ನಿತ್ಯ ಕರ್ಮವಾಗಿದೆ! ಸದ್ಯ ಜನರಿಗೆ ಕಾಯುವುದೇ ಕಾಯಕ.








ಊರೆಲ್ಲಾ ಅಗೆತ, ಕೊರೆತ!





ಬೆಂಗಳೂರಿನಲ್ಲಿ ಈಗ ಎಲ್ಲಿ ನೋಡಿದರೂ ಬರೀ ಅಗೆತ. ಕೊರೆತ!
ನೀರಿಗಾಗಿ, ರೋಡಿಗಾಗಿ, ಮನೆ ಮೇಲೆ ಮನೆ ಪೇರಿಸಲು, ಮಹಡಿ, ಮಹಲು, ಮೆಟ್ರೋ, ಅಂಡರ್‌ಗ್ರೌಂಡ್‌, ಕಾರಿಡಾರ್‌, ಅಡೆಗೋಡೆ, ತಡೆಗೋಡೆ, ಪ್ಲಾಂಟೇಷನ್ಸ್‌, ಯೂನಿಟ್ಸ್‌......ಭೂಮಿಯನ್ನು ಅಗೆದು ಕೊರೆದು ಕುಟ್ಟಿ ನೆಲವನ್ನು ಬಿಲ ಮಾಡಿಬಿಟ್ಟಿದ್ದಾರೆ.
ಕಾವೇರಿಯನ್ನು ಮನೆ ಮನೆಗೆ ಕರೆದುಕೊಂಡು ಹೋಗುವುದಕ್ಕೆ ಅಗೆತ. ಮನೆ ಕಟ್ಟುವುದಕ್ಕೆ ಅಗೆತ. ಕೆಡವುದಕ್ಕೂ ಅಗೆತ! ರಸ್ತೆ ಅಗಲೀಕರಣಕ್ಕೆ ಅಗೆತ ಅಗೆತ.... ಹೊಸೂರು ರಸ್ತೆಯಲ್ಲಿ ವರ್ಷಪೂರ್ತಿ ಅಗೆತ ನಡೆಯುತ್ತದೆ. ಮೈಸೂರು ರಸ್ತೆ ಕರ್ಮಕಾಂಡ! ವರ್ಷಗಳಿಂದಲೂ ಅಗಲೀಕರಣ ನಡೆಯುತ್ತಲೇ ಇದೆ. ಬಳ್ಳಾರಿ ರಸ್ತೆಯಲ್ಲಿ ಮರಗಳಿಗೆ ಉಳಿಗಾಲವಿಲ್ಲ. ತುಮಕೂರು ರಸ್ತೆಯಲ್ಲಿ ಪ್ರತಿನಿತ್ಯ ಕಾಮಗಾರಿ. ವಿಜಯ ನಗರ ಅಂಡರ್‌ಪಾಸ್‌ ಕಾಮಗಾರಿ ಕುಂಟುತ್ತಿದೆ. ರಾಜಾಜಿ ನಗರದ ಬೈಪಾಸ್‌ ಮುಗಿದಿಲ್ಲ. ಒಂದಾ ಎರಡಾ.....ಒಟ್ಟಿನಲ್ಲಿ ಭೂ ಮೇಲಿನ ದಾಳಿ ನಿರಾತಂಕವಾಗಿ ನಡೆಯುತ್ತಿದೆ.
ಕಾಮಗಾರಿಗಳನ್ನು ಮುಗಿಸಲು ಇಲಾಖೆಗಳಿಗೆ ಮನಸಿಲ್ಲ. ಡೆಡ್‌ಲೈನ್‌ಗಳು ಮುಂದಕ್ಕೆ ಹೋಗುತ್ತಲೇ ಇವೆ. ತಿಂಗಳು ಅಂದದ್ದು ವರ್ಷ ಆದರೂ ಮುಗಿಯೊಲ್ಲ. ಇತ್ತೀಚೆಗೆ ಬಿಬಿಎಂಪಿ 15 ದಿನಗಳಲ್ಲಿ ಕಾಮಗಾರಿಯೊಂದನ್ನು ಮಗಿಸುವುದಾಗಿ ಹೇಳಿ ತಿಂಗಳುಗಟ್ಟಲೆ ಸಮಯ ತೆಗೆದುಕೊಂಡು ನಗೆಪಾಟಲಿಗೆ ಈಡಾಗಿತ್ತು. ಅಧಿಕಾರಿಗಳಿಗೆ ಡೆಡ್‌ಲೈನ್‌ ಪ್ರಜ್ಞಯೇ ಇಲ್ಲ.
ಅಂತರ್ಜಲ ಬತ್ತುತ್ತಿದೆ:
500 ಅಡಿ ಅಲ್ಲ, 1000 ಅಡಿ ಆದ್ರೂ ನೀರು ಬರೋ ತನಕ ಭೂಮಿ ಕೊರೆಯುವುದನ್ನು ಬಿಡದ ನಮ್ಮ ಸೂಪರ್‌ ಪಾಸ್ಟ್‌ ರಿಗ್‌ಗಳು. ಬುರುಡೇಸರ್‌ಗಳು, ಇಟಾಚಿಗಳನ್ನು ನೋಡಿದರೆ ಹೆದರಿಕೆ ಆಗುತ್ತೆ. ಬಂಡಗಲ್ಲನ್ನು ಉಡಾಸುವ ಡೈನೆಮೆಂಟ್‌ಗಳು ಭೂಮಿಯನ್ನು ಮಾತ್ರವಲ್ಲ. ಜೀವವನ್ನೂ ನಡುಗಿಸುತ್ತವೆ. ಸಣ್ಣ ಪುಟ್ಟ ರಸ್ತೆಮಾಡಲೂ ಕೊರೆತ ಇದ್ದೇ ಇದೆ. ಕೊರೆಯುವಾಗ ಬರುವ ಕಟ ಕಟ ಚಟ ಪಟ ಶಬ್ದ ಒಂದು ಕಿಮಿ ದೂರದ ನಿಶಬ್ದತೆಯನ್ನು ನುಂಗಿ ಹಾಕುತ್ತೆ. ಹೊರಹೊಮ್ಮುವ ಧೂಳು ಅಲರ್ಜಿಯಂತಹ ಖಾಯಿಲೆಗಳನ್ನು ಹೊತ್ತು ತರುತ್ತೆ.
ಈ ಅಗೆತದ ದುಷ್ಟರಿಣಾಮದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಭೂ ಕೊರೆತದಿಂದ ಅಂತರ್ಜಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಭೂಮಿ ಸಡಿಲಗೊಂಡಾಗ ಅಂತರ್ಜಲ ಬತ್ತಿ ಹೋಗುತ್ತದೆ. ಮೊದಲೆಲ್ಲಾ ನೂರರಿಂದ ಇನ್ನೂರು ಅಡಿ ಕೊರೆದರೆ ಅಂತರ್ಜಲ ಸಿಗುತ್ತಿತ್ತು. ಇವತ್ತು ಐನೂರು ಅಡಿ ಕೊರೆದರೂ ನೀರು ಹನಿಯುವುದಿಲ್ಲ. ಅಗೆತದಿಂದ ನೂರಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಸ್ಥಳೀಯರು ಬಹಳ ಕಿರಿಕಿರಿ ಅನುಭವಿಸಬೇಕು. ಕೊರೆದ ಬಾವಿಯನ್ನು ಮುಚ್ಚದಿದ್ದಾಗ ಇನ್ನೊಂದು ಗಂಭೀರ ಸಮಸ್ಯೆ.
ನಗರಾಭಿವೃದ್ಧಿ:

ಪರದೇಸಿಗಳು ಸುಳಿದಾಡುವ ಈ ಇಂಟರ್‌ನ್ಯಾಷನಲ್‌ ಫೇಮಸ್‌ ಊರಿನಲ್ಲಿ ಉದ್ದದ ಅಗಲದ ರಸ್ತೆ ಇಲ್ಲದಿದ್ದರೆ ಹೇಗೆ? ಎತ್ತರದ ಮಹಡಿ ಮಹಲುಗಳಿಲ್ಲದಿದ್ದರೆ ಹೇಗೆ? ನಗರಾಭಿವೃದ್ಧಿಗೆ ಇವೆಲ್ಲಾ ಬೇಡವೇ?
ಇವೆಲ್ಲಾ ಬೇಕು ನಿಜ. ಆದರೆ ಅದರಿಂದಾಗುವ ದುಷ್ಟರಿಣಾಮಗಳ ಬಗ್ಗೆಯೂ ಯೋಚಿಸಬೇಕು.
ಯಾವುದೇ ಅಪಾರ್ಟ್‌ಮೆಂಟ್‌ ನೋಡಿ. ಪಾರ್ಕಿಂಗ್‌ ಜಾಗ ಅಂಡರ್‌ಗ್ರೌಂಡ್‌ನಲ್ಲಿರುತ್ತದೆ. ಮೊದಲೇ ಬಹುಮಹಡಿ ಕಟ್ಟಡ. ಅಡಿಪಾಯಕ್ಕೆಂದೇ ಮೀಟರ್‌ಗಟ್ಟಲೇ ಕೊರೆದಿದ್ದಾಗಿದೆ. ಪಾರ್ಕಿಂರ್ಗ ಜಾಗಕ್ಕೆ ಮತ್ತೂ ಕೊರೆಯುವುದು. ಇದು ದೊಡ್ಡ ಬಿಸಿನೆಸ್‌.
ಭೂಮಿ ಶೋಷಣೆಯ ವಸ್ತು:
ಈ ಊರಲ್ಲಿ ಭೂಮಿ ಬಂಗಾರ ಅಂತ ಎಲ್ಲರಿಗೂ ಗೊತ್ತು. ಅದರ ಜೊತೆಗೆ ಭೂಮಿ ಶೋಷಣೆಯ ವಸ್ತು. ಪರಿಸರ ತಜ್ಞರು ಬೆಂಗಳೂರಿನ ನಗರಾಭಿವೃದ್ಧಿ ಯೋಜನಗಳ ಬಗ್ಗೆ ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ರಸ್ತೆ ಅಗೆತ, ಬಡಾವಣೆ ನಿರ್ಮಾಣ, ಕೈಗಾರಿಕೆ ನಿರ್ಮಾಣದಂತಹ ಕಾರ್ಯಗಳನ್ನು ಜಾರಿಗೊಳಿಸುವಾಗ ಪರಿಸರ ರಕ್ಷಣೆಯ ಕ್ರಮ ಕೈಗೊಳ್ಳುಬೇಕು ಎಂಬುದು ಅವರ ಒತ್ತಾಯ.
ಪರಿಸರ ಕಮಿಟಿ ರಚನೆ:

ಪರಿಸರ ತಜ್ಞರು ಬಹಳ ದಿನಗಳಿಂದ ಸರ್ಕಾರದ ಮುಂದೆ ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಬೆಂಗಳೂರಿನಲ್ಲಿ ಯಾವುದೇ ಒಂದು ಯೋಜನೆಯನ್ನು ಜಾರಿಗೊಳಿಸುವಾಗ ಆ ಯೋಜನೆಯ ಸಾಧಕ ಬಾಧಕಗಳು, ಪರಿಸರದ ಮೇಲೆ ಯೋಜನೆಯ ಪರಿಣಾಮಗಳನ್ನು ನಿರ್ಧರಿಸಲು ಪರಿಸರವಾದಿಗಳ ಕಮಿಟಿ ರಚಿಸಬೇಕು ಎಂಬ ಒತ್ತಾಯ ಇದೆ. ಸರ್ಕಾರದ ಭರವಸೆಯೂ ಇದೆ. ಭರವಸೆ ಈಡೇರಿಲ್ಲ ಅಷ್ಟೆ. ಕೆಲವೊಂದು ಯೋಜನೆಗಳಿಗೆ ಕಮಿಟಿಗಳು ರಚನೆಯಾಗಿದ್ದವು. ಆದರೆ ಈಗ ಆ ಕಮಿಟಿಗಳು ಜೀವಂತವಾಗಿಲ್ಲ.
ಖಾಸಗಿ ಕಾರಿಡಾರ್‌ ಯೋಜನೆಗಳನ್ನು ಜಾರಿಗೊಳಿಸುವಾಗ ಅದರಿಂದಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನವನ್ನು( Environmental Impact Assessment) ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಥವಾ ರಾಜ್ಯ ಪರಸರ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕು. ಆದರೆ ಇದೊಂದು ದೊಡ್ಡ ಮೋಸ. ಅಧ್ಯಯನದಲ್ಲಿ ಒಂದು ಇದ್ದರೆ, ಯೋಜನೆ ಜಾರಿಗೊಂಡಾಗ ಇನ್ನೊಂದು ಇರುತ್ತದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಗೆತಗಳಿಗೆ ಅವೈಜ್ಞಾನಿಕ ಯೋಜನೆಗಳು, ಇಲಾಖೆಗಳ ಅಧಿಕಾರಿಗಳ ಸೋಮಾರಿತನ, ರಾಜಕಾರಣಿಗಳ ಹೊಟ್ಟೆಬಾಕತನವೇ ಕಾರಣ. ಅಧಿಕಾರಿಗಳು ಪರಿಸರ ಕಾರ್ಯಕ್ರಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಮಂಡಳಿಗೆ ವರದಿಗಳನ್ನು ಮಾತ್ರ ರವಾನಿಸುತ್ತಿದೆ. ಮಾಲಿನ್ಯ ಮಾತ್ರ ನಿಯಂತ್ರಣದಲ್ಲಿ ಇಲ್ಲ.
ಸರ್ಕಾರದ ಅಭಿವೃದ್ಧಿ ಮಂತ್ರದಲ್ಲಿ ಪರಿಸರ ಕಾಳಜಿ ಎಳ್ಳಷ್ಟೂ ಇಲ್ಲ. ಹೀಗಾದ್ರೆ ಜೀವ ವೈವಿಧ್ಯವನ್ನು ಕಾಯುವ ಭೂಮಿಯನ್ನು ಕಾಯುವವರು ಯಾರು?